ದೇಶದ ಭದ್ರತೆಯಲ್ಲಿ ರಾಜಿಯಿಲ್ಲ, ಕಾಶ್ಮೀರ ಗಲಭೆ ಮುಕ್ತ ಮಾಡಿದ್ದೇವೆ, ಆತಂಕ ಎಬ್ಬಿಸಿದ್ದ ಪಿಎಫ್ಐ ನಿಷೇಧಿಸಿದ್ದೇವೆ ; ಕ್ಯಾಂಪ್ಕೋ ಸಮಾವೇಶದಲ್ಲಿ ಅಮಿತ್ ಷಾ ಚುನಾವಣೆ ರಣಕಹಳೆ

11-02-23 07:15 pm       Mangalore Correspondent   ಕರಾವಳಿ

ಕ್ಯಾಂಪ್ಕೋ ಸುವರ್ಣ ಸಂಭ್ರಮದ ನೆಪದಲ್ಲಿ ಪುತ್ತೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಚಲನ ಮೂಡಿಸಿದ್ದಾರೆ. ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲ್ಲ.

ಪುತ್ತೂರು, ಫೆ.11: ಕ್ಯಾಂಪ್ಕೋ ಸುವರ್ಣ ಸಂಭ್ರಮದ ನೆಪದಲ್ಲಿ ಪುತ್ತೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಚಲನ ಮೂಡಿಸಿದ್ದಾರೆ. ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲ್ಲ. ನಾವು ಸದ್ದಿಲ್ಲದೆ ಕಾಶ್ಮೀರದ ವಿವಾದವನ್ನು ಬಗೆಹರಿಸಿದ್ದೇವೆ. 370ನೇ ವಿಧಿ ರದ್ದು ಮಾಡುವಾಗ ಕಾಂಗ್ರೆಸ್ ನವರು ರಕ್ತಪಾತ ಆಗಬಹುದು ಎಂದಿದ್ದರು. ಆದರೆ, ಯಾವುದೇ ರಕ್ತ ಹರಿಸದೆ ವಿವಾದ ನೀಗಿಸಿದ್ದೇವೆ. ಅದೇ ರೀತಿ ದೇಶದ ಭದ್ರತೆಗೆ ಆತಂಕ ತಂದೊಡ್ಡಿದ್ದ ಪಿಎಫ್ಐಯನ್ನು ನಿಷೇಧಿಸಿದ್ದೇವೆ. ದೇಶದ ಭದ್ರತೆಗಾಗಿ, ಜನರ ಅಭಿವೃದ್ಧಿಗಾಗಿ ನೀವು ಮೋದಿ ನೇತೃತ್ವಕ್ಕಾಗಿ ಮತ್ತೆ ಮತ ನೀಡಬೇಕು ಎಂದು ಕರೆ ನೀಡಿದ್ದಾರೆ.

ನಿಮ್ಮ ಅಡಿಕೆಯನ್ನು ನಾವು ಸುಪಾರಿ ಮಾಡ್ತೀವಿ

ಪುತ್ತೂರಿನ ತೆಂಕಿಲದ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆದ ಕ್ಯಾಂಪ್ಕೋ ಸಮಾವೇಶದಲ್ಲಿ ಅಮಿತ್ ಷಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಮೊದಲಿಗೆ ಕರಾವಳಿಯ ಅಡಿಕೆ ಬೆಳೆಯನ್ನು ಪ್ರಸ್ತಾಪಿಸಿದ ಅಮಿತ್ ಷಾ, ನೀವು ಬೆವರು ಹರಿಸಿದ ಬೆಳೆಯನ್ನು ಗುಜರಾತಿಗರು ಒಯ್ದು ಸುಪಾರಿ ಮಾಡುತ್ತಾರೆ. ನಾವು ಸುಪಾರಿ ಜಗಿದು ಬೆವರು ನೀಗಿಸಿಕೊಳ್ಳುತ್ತೇವೆ. ಅಡಿಕೆ ಮಾರುಕಟ್ಟೆಯ ಕ್ಯಾಂಪ್ಕೋ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಮಲ್ಟಿ ಸ್ಟೇಟ್ ಕಂಪನಿಯಾಗಿ ಬೆಳೆಸಲು ಬಿಜೆಪಿ ಸರಕಾರ ಸಹಕಾರ ನೀಡುತ್ತದೆ ಎಂದರು.

ಕಾಂತಾರ ಸಿನಿಮಾ ಪ್ರಸ್ತಾಪಿಸಿದ ಷಾ

ಭಾಷಣದ ಆರಂಭದಲ್ಲಿ ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿ ಕರಾವಳಿಯ ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಂಡಿದ್ದೇನೆ, ಇದೊಂದು ಪವಿತ್ರ ಭೂಮಿಯೆಂದು ಹೊಗಳಿದರು. ಗಾಂಧಿ ಕುಟುಂಬ ಮತ್ತು ಕುಟುಂಬವನ್ನೇ ಬೆಳೆಸುತ್ತಿರುವ ಜೆಡಿಎಸ್ ಕರ್ನಾಟಕ ರಾಜ್ಯವನ್ನು ತಮ್ಮ ಎಟಿಎಂ ಆಗಿ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ ಈ ರಾಜ್ಯದ ಜನ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಶಿರಾಡಿ ಘಾಟ್ ಸುರಂಗ ಮಾಡ್ತೀವಿ

ಮಂಗಳೂರಿನ ಬಂದರು ಮೇಲ್ದರ್ಜೆಗೇರಿಸಿದ್ದು ಮತ್ತು ಎಂಆರ್ ಪಿಎಲ್ ವಿಸ್ತರಣೆ ಮಾಡುತ್ತಿರುವುದು ಬಿಜೆಪಿ ಸರಕಾರದ ಸಾಧನೆಯೆಂದ ಅಮಿತ್ ಷಾ, ಶಿರಾಡಿ ಘಾಟ್ ಸುರಂಗ ಮಾರ್ಗವನ್ನು ಮಾಡುತ್ತೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮಂಗಳೂರು ನಗರ ಸ್ಟಾರ್ಟ್ ಅಪ್ ಹಬ್ ಆಗಿ ಬೆಳೆಯುತ್ತಿದೆ. 104 ಎಕರೆ ಜಾಗದಲ್ಲಿ ಪ್ಲಾಸ್ಟಿಕ್ ಪಾರ್ಕ್ ಮಾಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಅವರ ಹಳೇ ಜಪವನ್ನು ಜಪಿಸಿದ್ದಾರೆ. ನಾರಾಯಣ ಗುರು ವಸತಿ ಶಾಲೆಯನ್ನು ನಿರ್ಮಿಸುತ್ತಿದ್ದೇವೆ. ಬೊಮ್ಮಾಯಿ ಸರಕಾರ ಸರ್ವ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಮತ್ತೊಮ್ಮೆ ಬೊಮ್ಮಾಯಿ ಸರಕಾರ ಮತ್ತು ಮೋದಿ ನೇತೃತ್ವಕ್ಕಾಗಿ ಜನರು ಮತ ನೀಡಬೇಕಾಗಿದೆ ಎಂದರು.

ಇದೇ ವೇಳೆ, ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಡಿಕೆ ಬೆಳೆಯ ರಕ್ಷಣೆಗಾಗಿ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಭಾಗದ ಕೃಷಿ ಬೆಳೆಗಳ ರಕ್ಷಣೆಗೆ ಬದ್ಧರಿದ್ದೇವೆ ಎಂದು ಹೇಳಿದರು. ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವರಾದ ಅಂಗಾರ, ಸೋಮಶೇಖರ್, ಸಂಸದ ನಳಿನ್ ಕುಮಾರ್ ಸೇರಿ ಈ ಭಾಗದ ಶಾಸಕರು ಉಪಸ್ಥಿತರಿದ್ದರು. ಸಮಾವೇಶಕ್ಕೂ ಮೊದಲು ಕೇರಳದ ಕಣ್ಣೂರು ವಿಮಾನ ನಿಲ್ದಾಣದಿಂದ ಬಿಎಸ್ಎಫ್ ಹೆಲಿಕಾಪ್ಟರ್ ನಲ್ಲಿ ಸುಳ್ಯದ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್ ಷಾ, ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಆನಂತರ, ಅಲ್ಲಿಯೇ ನಿರ್ಮಾಣಗೊಂಡ ಭಾರತ್ ಮಾತಾ ಮಂದಿರವನ್ನು ಲೋಕಾರ್ಪಣೆ ಮಾಡಿದರು.

Union Minister Amit Shah says he watched the Kantara movie and learnt the culture of Dakshina Kannada.  The Union Minister for Home and Cooperation was in Puttur to celebrate the golden jubilee celebration of the Central Arecanut and Cocoa Marketing and Processing Co-operative Limited (CAMPCO) at Puttur in Dakshina Kannada district.