ಬಿಲ್ಲವರ ಬೇಡಿಕೆಗಳನ್ನು ಒಪ್ಪಿದ್ದಾರೆ, ಹೋರಾಟಕ್ಕೆ ಒಂದಷ್ಟು ಯಶಸ್ಸು ಸಿಕ್ಕಿದೆ, ಬಿಲ್ಲವರಿಗೆ ಟಿಕೆಟ್ ಕೊಟ್ಟಲ್ಲಿ ಪಕ್ಷಭೇದ ಇಲ್ಲದೆ ಗೆಲ್ಲಿಸುತ್ತೇವೆ  

16-02-23 01:40 pm       Mangalore Correspondent   ಕರಾವಳಿ

ಬಿಲ್ಲವ, ಈಡಿಗ, ನಾಮಧಾರಿ ಸೇರಿ 26 ಜಾತಿಗಳ ಪರವಾಗಿ ನಡೆಸಿದ್ದ ಬೆಂಗಳೂರು ಚಲೋ ಪಾದಯಾತ್ರೆಗೆ ಒಂದು ಹಂತದ ಯಶಸ್ಸು ಸಿಕ್ಕಿದೆ. ಫೆ.14ರಂದು ಫ್ರೀಡಂ ಪಾರ್ಕ್ ನಲ್ಲಿ ಸಭೆ ನಡೆಸಿದ್ದು, ಅಲ್ಲಿಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂದು ಎಲ್ಲ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.

ಮಂಗಳೂರು, ಫೆ.16: ಬಿಲ್ಲವ, ಈಡಿಗ, ನಾಮಧಾರಿ ಸೇರಿ 26 ಜಾತಿಗಳ ಪರವಾಗಿ ನಡೆಸಿದ್ದ ಬೆಂಗಳೂರು ಚಲೋ ಪಾದಯಾತ್ರೆಗೆ ಒಂದು ಹಂತದ ಯಶಸ್ಸು ಸಿಕ್ಕಿದೆ. ಫೆ.14ರಂದು ಫ್ರೀಡಂ ಪಾರ್ಕ್ ನಲ್ಲಿ ಸಭೆ ನಡೆಸಿದ್ದು, ಅಲ್ಲಿಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂದು ಎಲ್ಲ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ. ಮಾರ್ಚ್ 3ರಂದು ಈ ಬಗ್ಗೆ ಸರಕಾರದ ಹಂತದಲ್ಲಿ ಸಭೆ ನಡೆಸಿ ಬೇಡಿಕೆ ಬಗ್ಗೆ ನಿರ್ಣಯ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಉಪವಾಸ ಸತ್ಯಾಗ್ರಹ ಕೈಬಿಟ್ಟಿರುವುದಾಗಿ ಬಿಲ್ಲವರನ್ನು ಒಟ್ಟುಗೂಡಿಸಿ ಪಾದಯಾತ್ರೆ ನಡೆಸಿದ್ದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸ್ವಾಮೀಜಿ, ನಮ್ಮ ಸಮುದಾಯಗಳು ರಾಜ್ಯದಾದ್ಯಂತ ಹಂಚಿ ಹೋಗಿದ್ದವು. ಈ ಪಾದಯಾತ್ರೆಯಿಂದ ಒಂದಷ್ಟು ಮಟ್ಟಿಗೆ ಒಟ್ಟಿಗೆ ಸೇರಿಸಿದ್ದೇವೆ. ಮೊನ್ನೆ ಸಚಿವ ಕೋಟ ಅವರು ಬಂದು ಕುಲಶಾಸ್ತ್ರ ಅಧ್ಯಯನಕ್ಕೆ 25 ಲಕ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ನಮ್ಮ ಬಿಲ್ಲವ ಉಪ ಪಂಗಡಗಳು 2ಎ ಮೀಸಲಾತಿಯಲ್ಲಿದ್ದು, ನಾವು ಉದ್ಯೋಗ ಸೇರಿ ವಿವಿಧ ಸವಲತ್ತುಗಳಿಗಾಗಿ ಎಸ್ಸಿ ಮೀಸಲು ಕೇಳುತ್ತೇವೆ. ನಮ್ಮ ಜನಾಂಗದ 90 ಶೇಕಡಾ ಜನರು ತೀರಾ ಹಿಂದುಳಿದ ಸ್ಥಿತಿಯಲ್ಲಿದ್ದಾರೆ. 75 ಲಕ್ಷದಷ್ಟು ಜನಸಂಖ್ಯೆ ಇದ್ದರೂ, ಸರಕಾರಿ ಉದ್ಯೋಗದಲ್ಲಿ ಒಂದೂವರೆ ಸಾವಿರ ಜನರೂ ಇಲ್ಲ. ಹತ್ತು ಶೇಕಡಾ ಜನರೂ ಸ್ಥಿತಿವಂತರಿಲ್ಲ ಎಂದರು.

Mangaluru: Demanding corporation Pranavananda Swamiji plans padayatra from  city to Bengaluru - Daijiworld.com

ಬಿಲ್ಲವರನ್ನು ಗೆಲ್ಲಿಸುತ್ತೇವೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತಲಾ ಮೂರು ಕ್ಷೇತ್ರಗಳನ್ನು ಬಿಲ್ಲವರಿಗೆ ಕೊಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿಗೆ ಮನವಿ ಮಾಡಿದ್ದೇವೆ. ನಮ್ಮ ಜನಾಂಗದ ಅಭ್ಯರ್ಥಿಗಳನ್ನು ಗೆಲ್ಲಿಸಲು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ವತಿಯಿಂದ ಕೈಮೀರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಈ ಭಾಗದಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದಾರೆ, ಅವರನ್ನು ಬದಲಾಯಿಸಬೇಕೆಂದು ಹೇಳುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದು ನಮ್ಮ ಒತ್ತಾಯ. ಯಾವುದೇ ಕ್ಷೇತ್ರ ಒಬ್ಬನ ಸೊತ್ತಲ್ಲ. ಎರಡು ಬಾರಿ ಗೆದ್ದವರನ್ನು ಬದಲಿಸಿ ಬೇರೆಯವರಿಗೆ ಅವಕಾಶ ಕೊಡಲಿ ಎಂದರು.

ನಮ್ಮ ಸಮುದಾಯವನ್ನು ಹತ್ಯೆ ರಾಜಕೀಯದಿಂದ ಮುಕ್ತಗೊಳಿಸಬೇಕು. ಈಡಿಗ, ಬಿಲ್ಲವ ಸಮುದಾಯದಲ್ಲಿ ಮನೆ ರಹಿತರಿಗೆ ವಸತಿ ಸೌಲಭ್ಯ ಒದಗಿಸಬೇಕು. ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸಮುದಾಯದ ಸಂಖ್ಯೆ ಕಡಿಮೆ ಇರುವಲ್ಲಿ ಕಡಿಮೆ ಜನರು ಇದ್ದಿರಬಹುದು. ಶಿರಸಿ, ಸಿದ್ದಾಪುರದಲ್ಲಿ ನಾಲ್ಕೈದು ಸಾವಿರ ಜನ ಸೇರಿದ್ದಾರೆ. ನಾವು ಪ್ರಚಾರಕ್ಕಾಗಿ ಪೋಸ್ಟರ್ ಹಾಕಿಲ್ಲ. ಕಾಸು ಕೊಟ್ಟು ಜನರನ್ನು ತಂದಿಲ್ಲ. ಸ್ವಯಂಪ್ರೇರಿತವಾಗಿ ಜನರು ಸೇರಿದ್ದಾರೆ. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಮೂಲಕ ಬೆಂಗಳೂರು ತಲುಪಿದ್ದೇವೆ. ಈ ಜಿಲ್ಲೆಗಳಲ್ಲದೆ ಬಾಗಲಕೋಟ, ಗುಲ್ಬರ್ಗ, ಬೀದರಿನಲ್ಲೂ ನಮ್ಮ ಜನರಿದ್ದಾರೆ. ಎಲ್ಲರ ಪರವಾಗಿ ನಾವು ದನಿ ಎತ್ತಿದ್ದೇವೆ ಎಂದರು.

ಮಾರ್ಚ್ 3ರಂದು ಸರಕಾರ ನಿರ್ಣಯ ಹೇಳುವುದಾಗಿ ತಿಳಿಸಿದ್ದಾರೆ. ನಾವು ಮಾರ್ಚ್ 12ರಂದು ಮಂಗಳೂರಿನಲ್ಲಿ ಎರಡು ಜಿಲ್ಲೆಗಳ ಬಿಲ್ಲವ ಮುಖಂಡರು, ಗರೋಡಿ ಪ್ರಮುಖರ ಸಭೆ ನಡೆಸುತ್ತೇವೆ. ಮುಂದಿನ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿ ಜೊತೆಗೆ ಮಂಗಳೂರಿನ ಬಿಲ್ಲವ ಸಂಘಟನೆಯ ಪ್ರಮುಖರು ಇದ್ದರು.

Pranavananda Swamiji in Mangalore, Billawas and Ediga communities get little success after hunger strike.