ಗುತ್ತಿಗೆದಾರರು ಮಾತ್ರ ಅಲ್ಲ, ಖಾಸಗಿ ಶಾಲೆಗಳ ಒಕ್ಕೂಟದಿಂದಲೂ ಕಮಿಷನ್ ದಂಧೆ ಬಗ್ಗೆ ದೂರು ಹೇಳಿದ್ದರು, ಮೋದಿ ಯಾಕೆ ಮಾತನಾಡಿಲ್ಲ ; ಸುರ್ಜೇವಾಲಾ ಕಿಡಿ

02-03-23 08:40 pm       Mangalore Correspondent   ಕರಾವಳಿ

ನಾ ಖಾವೂಂಗಾ, ನಾ ಖಾನೇ ದೂಂಗಾ ಎನ್ನುತ್ತಿದ್ದ ಪ್ರಧಾನಿ ಮೋದಿ, ಈಗ ಯಾಕೆ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಕಮಿಷನ್ ದಂಧೆ ಬಗ್ಗೆ ಕೇವಲ ಗುತ್ತಿಗೆದಾರರು ಮಾತ್ರ ದೂರು ಕೊಟ್ಟಿದ್ದಲ್ಲ. ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾದಿಂದಲೂ ಪ್ರಧಾನಿಗೆ ದೂರು ನೀಡಲಾಗಿತ್ತು.

ಮಂಗಳೂರು, ಮಾ.2: ನಾ ಖಾವೂಂಗಾ, ನಾ ಖಾನೇ ದೂಂಗಾ ಎನ್ನುತ್ತಿದ್ದ ಪ್ರಧಾನಿ ಮೋದಿ, ಈಗ ಯಾಕೆ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಕಮಿಷನ್ ದಂಧೆ ಬಗ್ಗೆ ಕೇವಲ ಗುತ್ತಿಗೆದಾರರು ಮಾತ್ರ ದೂರು ಕೊಟ್ಟಿದ್ದಲ್ಲ. ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾದಿಂದಲೂ ಪ್ರಧಾನಿಗೆ ದೂರು ನೀಡಲಾಗಿತ್ತು. ಎಂಟು ಬಾರಿ ರಾಜ್ಯಕ್ಕೆ ಬಂದ ಮೋದಿಯವರು ಯಾಕೆ ಈ ಬಗ್ಗೆ ಉತ್ತರ ಕೊಟ್ಟಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ತ್ರಿವಳಿ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ ಸುರ್ಜೇವಾಲಾ, ರಾಜ್ಯದ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ಎಲ್ಲಿ ಹೋದರೂ, ಅಲ್ಲಿ ಪೇ ಸಿಎಂ ಪೋಸ್ಟರ್ ಎದುರುಗೊಳ್ಳುತ್ತಿವೆ. ಹೊರ ರಾಜ್ಯದ ನಗರಗಳಲ್ಲೂ ಪೇಸಿಎಂ ಪೋಸ್ಟರ್ ಕಾಣಿಸಿಕೊಳ್ಳುತ್ತಿದೆ. ಇದು ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ಅಳೆಯುತ್ತಿರುವುದರ ಸಂಕೇತ ಎಂದು ಹೇಳಿದ ಸುರ್ಜೇವಾಲಾ, ಹಿಂದೆ ಮೋದಿಯವರು ನಾನು ಯಾರನ್ನೂ ತಿನ್ನಲು ಬಿಡಲ್ಲ ಎನ್ನುತ್ತಿದ್ದರು. ಈಗ ಹೋದಲ್ಲಿ ಬಂದಲ್ಲಿ ತಿನ್ನಿ ತಿನ್ನಿ ಎನ್ನುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರ ಸಾವಿಗೆ ಬೆಲೆ ಇಲ್ಲವೇ ?

ಮೊನ್ನೆ ಬೆಳಗಾವಿಗೆ ಬಂದಿದ್ದ ಮೋದಿ ಯಾಕೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಹೋಗಿಲ್ಲ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾಗಿದ್ದ. ವರ್ಷಪೂರ್ತಿ ಪಕ್ಷಕ್ಕಾಗಿ ದುಡಿಯುತ್ತಿದ್ದ ಎಂದು ಆತನ ಕುಟುಂಬಸ್ಥರು ಹೇಳುತ್ತಾರೆ. ಬಿಜೆಪಿ ನಾಯಕರ ಕಮಿಷನ್ ದಂಧೆಗೆ ಸಂತೋಷ್ ಪಾಟೀಲ್ ಬಲಿಯಾಗಿದ್ದಾನೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಆತನ ಮನೆಯವರಿಗೆ ಮೋದಿ ಸಾಂತ್ವನ ಹೇಳಬೇಕಿತ್ತಲ್ಲ.. ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಜೇಂದ್ರ, ಮೈಸೂರಿನಲ್ಲಿ ತಲೆಗೆ ಗುಂಡಿಟ್ಟು ಸಾವಿಗೆ ಶರಣಾದ ಟಿಎನ್ ಪ್ರಸಾದ್ ಮನೆಗೂ ತೆರಳಿ ಬಿಜೆಪಿ ನಾಯಕರು ಸಾಂತ್ವನ ಹೇಳಿಲ್ಲ. ಪ್ರಸಾದ್ ಅವರ 14 ವರ್ಷದ ಮಗಳು, 70 ವರ್ಷದ ತಂದೆಯ ಬಾಯಲ್ಲಿ ಮಾತು ಹೊರಡುತ್ತಿಲ್ಲ. ನಳಿನ್ ಕಟೀಲ್, ಬೊಮ್ಮಾಯಿ ಅವರೇ ನಿಮಗೆ ಹಣ ಬೇಕಿದ್ದರೆ ನಮ್ಮಲ್ಲಿ ಕೇಳಿ, ನಾವು ಜನರಲ್ಲಿ ಭಿಕ್ಷೆ ಎತ್ತಿಯಾದರೂ ನಿಮಗೆ ಬೇಕಾದಷ್ಟು ಹಣ ಕೊಡುತ್ತೇವೆ. ಗುತ್ತಿಗೆದಾರರು ಸಾವನ್ನಪ್ಪುವ ಸ್ಥಿತಿ ತರಬೇಡಿ ಎಂದು ವ್ಯಂಗ್ಯವಾಗಿ ಚುಚ್ಚಿದರು.

ಮಠಗಳ ಅನುದಾನಕ್ಕೂ ಕಮಿಷನ್ ಹಾಕಿದ್ದೀರಲ್ಲಾ

ಗದಗದ ದಿಂಗಾಲೇಶ್ವರ ಸ್ವಾಮೀಜಿ ಮಠಗಳಿಗೆ ಅನುದಾನ ಬರಬೇಕಿದ್ದರೂ, 40 ಪರ್ಸೆಂಟ್ ಕಮಿಷನ್ ಕೊಡಬೇಕೆಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರಲ್ಲಾ.. ಇದನ್ನು ನೀವು ಡಬಲ್ ಇಂಜಿನ್ ಅಂತೀರಾ, ಡಬಲ್ ಕರಪ್ಶನ್ ಅಂತೀರಾ ಎಂದು ಕೇಳಿದ ಸುರ್ಜೇವಾಲಾ, ಬಿಜೆಪಿ ಶಾಸಕ ಯತ್ನಾಳ್ ಸಿಎಂ ಹುದ್ದೆ 2500 ಕೋಟಿಗೆ ಮಾರಾಟಕ್ಕಿದೆ ಎಂದಿದ್ದಾರೆ, ನೀವು ಅವರು ಸುಳ್ಳು ಹೇಳಿದ್ದರೆ ಕ್ರಮ ಕೈಗೊಂಡಿದ್ದೀರಾ ಎಂದು ಕೇಳಿದರು. ಅಧಿಕಾರಿಗಳು ಕೂಡ ಭ್ರಷ್ಟಾಚಾರದ ಹಣವನ್ನು ಕೇಂದ್ರಕ್ಕೆ ವಂತಿಕೆ ನೀಡಬೇಕಾದ ಸ್ಥಿತಿಯಿದೆ. ಈ ರೀತಿಯ ಕಮಿಷನ್ ದಂಧೆ ಬಿಟ್ಟು ಬಿಡಿ, ಈಗ ನಿಮ್ಮ ಮಕ್ಕಳ ಭವಿಷ್ಯವನ್ನೇ ಕರಾಳತೆಗೆ ನೂಕುತ್ತಿದ್ದಾರೆ.

ಸರಕಾರಿ ಹುದ್ದೆಗಳನ್ನು ಮಾರಾಟಕ್ಕಿಟ್ಟಿದ್ದು ಹೌದಲ್ಲವೇ

ಪಿಎಸ್ಐ ಹುದ್ದೆಯನ್ನು 80 ಲಕ್ಷಕ್ಕೆ ಮಾರಾಟ ಇಟ್ಟಿದ್ದು ಹೌದೋ ಅಲ್ಲವೋ? ಈ ಪ್ರಕರಣದಲ್ಲಿ ದುಡ್ಡನ್ನು ಕೇವಲ ಎಡಿಜಿಪಿಗೆ ಮಾತ್ರ ಸಂದಾಯ ಆಗಿದ್ದೇ, ಆಗಿನ ಗೃಹ ಸಚಿವರಿಗೆ ಕೊಟ್ಟಿಲ್ಲವೇ ? ಆಗ ಗೃಹ ಸಚಿವರಾಗಿದ್ದವರು ಈಗ ಸಿಎಂ ಆಗಿದ್ದಾರಲ್ಲಾ.. ಯಾರು ಇದರ ಬಗ್ಗೆ ತನಿಖೆ ನಡೆಸಿದ್ದಾರೆ. ಎಇ, ಜೂನಿಯರ್ ಇಂಜಿನಿಯರ್ ಹುದ್ದೆ ಮಾರಾಟಕ್ಕೆ ಇಟ್ಟಿದ್ದು ಹೌದಲ್ಲವೇ, ಡಿಸಿಸಿ ಬ್ಯಾಂಕ್ ಗಳಲ್ಲಿ ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದು ಹೌದಲ್ಲವೇ? ಪೌರ ಕಾರ್ಮಿಕರ ಹುದ್ದೆಯಲ್ಲೂ ಭ್ರಷ್ಟಾಚಾರ ಹೊರಗೆ ಬಂದಿಲ್ಲವೇ? ಕೆಎಂಎಫ್ ಹುದ್ದೆಯಲ್ಲೂ 60 ಲಕ್ಷ ಲಂಚ ಕೇಳಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಹೌದಲ್ಲವೇ.. ? ರಾಜ್ಯದ ಸ್ಥಿತಿ ಹೀಗಾದರೆ ಕಲಿಯುವ ಮಕ್ಕಳಿಗೆ ಮುಂದೆ ಉದ್ಯೋಗ ಸಿಗಲು ಸಾಧ್ಯವೇ ? ಇಡೀ ಕರ್ನಾಟಕವನ್ನು ಬಿಜೆಪಿ ಸರ್ಕಾರ ಮಾರಾಟಕ್ಕೆ ಇಟ್ಟಿದ್ದು ಹೌದಲ್ಲವೇ ಎಂದು ಪ್ರಶ್ನೆ ಮಾಡಿದರು.  

ಸೋಲಿನ ಭಯದಿಂದ ಕೊಲ್ಲಲು ಹೊರಟಿದ್ದೀರಿ

ಸಚಿವ ಅಶ್ವತ್ಥ ನಾರಾಯಣ, ಸಿದ್ದರಾಮಯ್ಯರನ್ನು ಕೊಲ್ಲಬೇಕೆಂದು ಹೇಳುತ್ತಾರೆ. ಮೋದಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಅವಮಾನ ಮಾಡಿದ್ದಾರೆ. ಬಿಜೆಪಿ, ಅಶ್ವತ್ಥ ನಾರಾಯಣ ಅವರ ಸಂಸ್ಕೃತಿ ಗಾಂಧಿಯನ್ನು ಗೋಡ್ಸೆ ಕೊಂದಿದ್ದನ್ನು ಬಿಂಬಿಸುತ್ತದೆ. ಮಧ್ಯಪ್ರದೇಶ, ಛತ್ತೀಸ್ ಗಢ ಸಿಎಂ ಗುಂಡೇಟು ಬಿದ್ದು ಸತ್ತರೂ ಅಲ್ಲಿನ ರಾಜ್ಯಗಳು ಗಟ್ಟಿಯಾಗಿ ಉಳಿದುಕೊಂಡಿವೆ. ಬಿಜೆಪಿಯ ಒಬ್ಬನೇ ಒಬ್ಬ ಸದಸ್ಯ ದೇಶಕ್ಕಾಗಿ ಜೀವ ಕೊಟ್ಟ ಇತಿಹಾಸ ಇದೆಯಾ ಎಂದು ಕೇಳಿದರು. ಸೋಲಿನ ಭಯದಿಂದಾಗಿ ಕಾಂಗ್ರೆಸ್ ನಾಯಕರನ್ನು ಕೊಲ್ಲುವುದಕ್ಕೆ, ಅವಮಾನಿಸಲು ಹೊರಟಿದ್ದಾರೆ. ಜನರು ತಿರಸ್ಕರಿಸುತ್ತಿದ್ದಾರೆಂದು ಇವರಿಗೆ ಗೊತ್ತಾಗಿದೆ. ಮೋದಿ, ಬೊಮ್ಮಾಯಿ ಮುಖದಲ್ಲಿ ಸೋಲಿನ ಛಾಯೆ ಕಾಣುತ್ತಿದೆ ಎಂದು ಸುರ್ಜೇವಾಲಾ ಹೇಳಿದರು.

ಟೈಮ್ ಫಿಕ್ಸ್ ಮಾಡಿ ಕೊಲ್ಲಲು ಕರೆತರುತ್ತೇನೆ

ಬೊಮ್ಮಾಯಿ, ನಳಿನ್ ಕಟೀಲ್ ಗೆ ಸವಾಲು ಹಾಕುತ್ತಿದ್ದೇನೆ, ನಿಮ್ಮ ಸಮಯ ಫಿಕ್ಸ್ ಮಾಡಿ, ಸಿದ್ದರಾಮಯ್ಯರನ್ನು ನೀವಿದ್ದಲ್ಲಿಗೆ ಕರೆತರುತ್ತೇನೆ, ಕೊಂದು ಬಿಡಿ, ನಮ್ಮೆಲ್ಲರನ್ನೂ ಕೊಂದುಬಿಡಿ, ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ ಅವರು, ತ್ರಿವಳಿ ಭಾಗ್ಯ ಕೊಡಲು ಹಣ ಎಲ್ಲಿಂದ ಎಂದು ಪತ್ರಕರ್ತರು ಕೇಳುತ್ತಿದ್ದಾರೆ, ಕರ್ನಾಟಕ ಬಜೆಟ್ 3.90 ಲಕ್ಷ ಬಜೆಟ್ ಇದೆ. ಇದರ ನಲ್ವತ್ತು ಪರ್ಸೆಂಟ್ 1.20 ಲಕ್ಷ ರೂಪಾಯಿ ಆಗತ್ತೆ. ಈ ಎಲ್ಲಾ ಸ್ಕೀಮ್ ಕೊಟ್ಟರೂ 30 ಸಾವಿರ ಕೋಟಿ ಆಗೋದು. ಇನ್ನೂ 90 ಸಾವಿರ ಕೋಟಿ ಉಳಿಯುತ್ತದೆ. ನಮ್ಮ ಯಾವುದೇ ವ್ಯಕ್ತಿ ಭ್ರಷ್ಟಾಚಾರ ಮಾಡಿದರೂ ಪಕ್ಷದಿಂದ ತೆಗೆದು ಹಾಕುತ್ತೇವೆ, ಇದು ನಮ್ಮ ಶಪಥ ಎಂದು ಸುರ್ಜೇವಾಲಾ ಹೇಳಿದರು.

ಕಾರ್ಯಕ್ರಮದಲ್ಲಿ ಬಿಕೆ ಹರಿಪ್ರಸಾದ್, ಮಧು ಬಂಗಾರಪ್ಪ, ಧ್ರುವ ನಾರಾಯಣ, ರಮಾನಾಥ ರೈ, ಯುಟಿ ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸೇರಿದ್ದರು.

Mangalore Congress Randeep Surjewala slams BJP govt over commission, says private schools are forced to give commission just like contractors. Meanwhile Congress releases the Guarantee card of benefits.