ನನ್ನನ್ನು ಸೋಲಿಸಲು ವಾಮಮಾರ್ಗಕ್ಕೆ ಇಳಿದಿದ್ದಾರೆ, ದೇವರ ಫೋಟೊ ಇಟ್ಟು ಪ್ರಮಾಣ ಮಾಡಿಸಿದ್ದಾರೆ, ಇಷ್ಟು ಕೆಳಮಟ್ಟಕ್ಕೆ ಸಂಘದ ಹಿರಿಯರು ಇಳಿಯಬಾರದಿತ್ತು! 

18-05-23 07:14 pm       Mangalore Correspondent   ಕರಾವಳಿ

ವಾಮಮಾರ್ಗದ ಮೂಲಕ ನನ್ನನ್ನು ಸೋಲಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷೇತರ ಬಿಟ್ಟು ಕಾಂಗ್ರೆಸ್ ವ್ಯಕ್ತಿಗೆ ಮತ ಹಾಕಿ ಎಂದು ಕಾರ್ಯಕರ್ತರಿಗೆ ಹೇಳುವಷ್ಟರ ಮಟ್ಟಕ್ಕೆ ಬೆಳವಣಿಗೆ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ.

ಪುತ್ತೂರು, ಮೇ 18 : ವಾಮಮಾರ್ಗದ ಮೂಲಕ ನನ್ನನ್ನು ಸೋಲಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷೇತರ ಬಿಟ್ಟು ಕಾಂಗ್ರೆಸ್ ವ್ಯಕ್ತಿಗೆ ಮತ ಹಾಕಿ ಎಂದು ಕಾರ್ಯಕರ್ತರಿಗೆ ಹೇಳುವಷ್ಟರ ಮಟ್ಟಕ್ಕೆ ಬೆಳವಣಿಗೆ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಇಂಥ ಕೆಲಸ ಆಗಬಾರದಿತ್ತು. ಇದನ್ನೆಲ್ಲ ಕ್ಷೇತ್ರದ ಜನತೆ ಗಮನಿಸಿದ್ದಾರೆ ಎಂದು ಪುತ್ತೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಸಂಚಲನ ಮೂಡಿಸಿರುವ ಅರುಣ್ ಪುತ್ತಿಲ ನೋವು ವ್ಯಕ್ತಪಡಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಆರೆಸ್ಸೆಸ್ ಕೆಲವು ಹಿರಿಯ ಮುಖಂಡರೇ ನನಗೆ ಮತ ಹಾಕದಂತೆ ಕಾರ್ಯಕರ್ತರಿಗೆ ಒತ್ತಡ ಹಾಕಿದ್ದಾರೆ. ಕಾರ್ಯಕರ್ತರ ಮನೆಗೆ ಹೋಗಿ ಅವರ ತಂದೆ ತಾಯಿ ಫೋಟೋ ಹಿಡಿದು ಪ್ರಮಾಣ ಮಾಡಿಸಿದ್ದಾರೆ. ಪ್ರಮಾಣಕ್ಕೆ ವಿರುದ್ಧವಾಗಿ ನನಗೆ ಮತ ಹಾಕಿದರೆ ತಂದೆ-ತಾಯಿ‌ ಸಾಯುತ್ತಾರೆ ಎನ್ನುವ ಬೆದರಿಕೆ ಹಾಕಿದ್ದಾರೆ. 

ದೇವರ ಫೋಟೋ ಮೇಲೆ ಆಣೆ ಮಾಡಿಸಿದ್ದಾರೆ. ಇಂಥ ಕೆಳಮಟ್ಟಕ್ಕೆ ಸಂಘ ಇಳಿಯಬಾರದಿತ್ತು. ಪಕ್ಷೇತರ ವ್ಯಕ್ತಿ ಗೆಲ್ಲಬಾರದು ಎನ್ನುವ ನಿಟ್ಟಿನಲ್ಲಿ ಏನೆಲ್ಲ ಮಾಡಬಾರದಿತ್ತೋ ಅವೆಲ್ಲ ಮಾಡಿದ್ದಾರೆ. ‌ಆರೆಸ್ಸೆಸ್, ಬಿಜೆಪಿ ಸಿದ್ಧಾಂತ ಏನಿದೆ ಅದನ್ನು ಬಲಿ ಕೊಟ್ಟಿದ್ದಾರೆ. ‌ಪಕ್ಷೇತರ ಬದಲು ಕಾಂಗ್ರೆಸಿಗೆ ಮತ ಕೊಡಿ ಎಂದಿರುವುದು ಹಿಂದುತ್ವದ ಆಧಾರದಲ್ಲಿ ಕಣಕ್ಕಿಳಿದಿರುವ ನಮ್ಮ ಸಿದ್ಧಾಂತಕ್ಕೆ ಅಪಚಾರ ಎಸಗಿದಂತೆ. ಕೇವಲ 20 ದಿನಗಳಲ್ಲಿ ಕ್ಷೇತ್ರದಲ್ಲಿ 62 ಸಾವಿರ ಮತದಾರರು ನನ್ನ ಪರವಾಗಿ ನಿಂತಿರುವುದು ಯಾವುದು ಸತ್ಯ, ಯಾವುದು ಮಿಥ್ಯ ಎಂದು ಅರಿತುಕೊಂಡಿದ್ದಾರೆ ಅನ್ಕೊಂಡಿದ್ದೇನೆ. ಅಪಪ್ರಚಾರ, ತೇಜೋವಧೆ ಮಾಡಿದ್ದಾರೆ, ಯಾವುದಕ್ಕೂ ಉತ್ತರ ಕೊಡಲಿಲ್ಲ. ಮಹಾಲಿಂಗೇಶ್ವರನೇ ಉತ್ತರ ಕೊಡಲಿ ಎಂದಿದ್ದೇನೆ ಅಷ್ಟೇ ಎಂದರು. 

ಬಿಜೆಪಿ ಮುಖಂಡರ ಬ್ಯಾನರ್ ಹಾಕಿದ ಹಿಂದು ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಮೊನ್ನೆ ವಿಟ್ಲದಲ್ಲಿ ಹಿಂದು ಯುವತಿಯ ಮೇಲೆ ದೌರ್ಜನ್ಯ ಮಾಡಿದ ಅನ್ಯಮತೀಯನ ಮೇಲೆ ಇಂಥ ಶಿಕ್ಷೆ ವಿಧಿಸುತ್ತಿದ್ದರೆ ಸಮಾಜ ಒಪ್ಪಬಹುದಿತ್ತು. ಬ್ಯಾನರ್ ಹಾಕಿದ್ದಕ್ಕೆ ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಎಂದು ಪ್ರತಿಭಟನೆ ನಡೆಸುತ್ತಾರೆ. ಇವರೇ ದೂರು ಕೊಟ್ಟು ಪೊಲೀಸರ ಮೂಲಕ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಕ್ಷೇತ್ರದ ಬಿಜೆಪಿ ನಾಯಕರು ಇವರ ಬಳಿಗೆ ಬರದೇ ಇರುವುದು ಏನನ್ನು ಸೂಚಿಸುತ್ತದೆ. ದೌರ್ಜನ್ಯಕ್ಕೊಳಗಾದ ಕಾರ್ಯಕರ್ತರನ್ನು ವಿಚಾರಿಸುವ ಸೌಜನ್ಯವನ್ನೂ ಸ್ಥಳೀಯ ಬಿಜೆಪಿ ಮುಖಂಡರು ಮಾಡದೆ ಇರುವುದು ಇಲ್ಲಿ ಕಾರ್ಯಕರ್ತರು ಮತ್ತು ನಾಯಕರ ನಡುವೆ ಕಂದಕ ಏರ್ಪಟ್ಟಿರುವುದನ್ನು ಸೂಚಿಸುತ್ತದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. 

ಚುನಾವಣೆ ಬಳಿಕ ನಿಮ್ಮನ್ನು ರಾಜ್ಯ ನಾಯಕರು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ, ರಾಜ್ಯ ಉಸ್ತುವಾರಿ ವಹಿಸಿದ್ದ ಅಣ್ಣಾಮಲೈ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಜೊತೆಗೆ ಹೋಗಬೇಕು ಎಂಬ ಮಾತು ಹೇಳಿದ್ದಾರೆ. ಇಲ್ಲಿ ಏನು ಲೋಪ ಆಗಿದೆ ಎನ್ನೋದು ಕಾರ್ಯಕರ್ತರಿಗೆ ಗೊತ್ತಿದೆ. ಅದನ್ನು ಸರಿಪಡಿಸುವ ಕೆಲಸಗಳಾದರೆ ನಾವೆಲ್ಲ ಬಿಜೆಪಿಯಲ್ಲೇ ಇರುವವರು ಎಂದಿದ್ದೇನೆ. ಎಲ್ಲವೂ ಸರಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

Puttur Arun Puthila expresses grief says BJP has played inside games that i don't win elections, many RSS leaders involved he added.