ಪುತ್ತೂರಿನಲ್ಲಿಂದು ಅರುಣ್ ಪುತ್ತಿಲ ಕೃತಜ್ಞತಾ ಸಭೆ ;  ಅನುರಣಿಸಲಿದೆ ‘ನಾಯಕತ್ವ’ ವಿರೋಧಿ ಶಕ್ತಿಪ್ರದರ್ಶನ 

21-05-23 12:53 pm       Mangalore Correspondent   ಕರಾವಳಿ

ಬಿಜೆಪಿ ವಿರುದ್ಧ ಬಂಡಾಯ ಎದ್ದು ಪಕ್ಷೇತರ ಕಣಕ್ಕಿಳಿದು ಇಡೀ ಜಿಲ್ಲೆಯಲ್ಲಿ ಭರವಸೆ ಮೂಡಿಸಿರುವ ಅರುಣ್ ಪುತ್ತಿಲ ಮತ್ತು ಬೆಂಬಲಿಗರು ಪುತ್ತೂರಿನಲ್ಲಿ ಇಂದು ಸಂಜೆ ಕೃತಜ್ಞತಾ ಸಭೆ ನಡೆಸಲಿದ್ದಾರೆ.

ಪುತ್ತೂರು, ಮೇ 21: ಬಿಜೆಪಿ ವಿರುದ್ಧ ಬಂಡಾಯ ಎದ್ದು ಪಕ್ಷೇತರ ಕಣಕ್ಕಿಳಿದು ಇಡೀ ಜಿಲ್ಲೆಯಲ್ಲಿ ಭರವಸೆ ಮೂಡಿಸಿರುವ ಅರುಣ್ ಪುತ್ತಿಲ ಮತ್ತು ಬೆಂಬಲಿಗರು ಪುತ್ತೂರಿನಲ್ಲಿ ಇಂದು ಸಂಜೆ ಕೃತಜ್ಞತಾ ಸಭೆ ನಡೆಸಲಿದ್ದಾರೆ. ನಮ್ಮ ನಡೆ ಮಹಾಲಿಂಗೇಶ್ವರನ ಕಡೆಗೆ ಎನ್ನುವ ಹೆಸರಲ್ಲಿ ಕಾರ್ಯಕ್ರಮ ನಡೆಯಲಿದ್ದು, ಭಕ್ತಿ ಭಾವದ ರೂಪದಲ್ಲಿ ನಡೆಯುವ ಸಭೆಯಲ್ಲಿ ಸಾವಿರಾರು ಮಂದಿ ಸಾಕ್ಷಿಯಾಗಲಿದ್ದಾರೆ.

ಸಂಜೆ 4.30ಕ್ಕೆ ದರ್ಬೆಯಿಂದ ಮೆರವಣಿಗೆ ಹೊರಡಲಿದ್ದು, ಕಾಲ್ನಡಿಗೆ ಯಾತ್ರೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ನಡೆದು ಬರಲಿದ್ದಾರೆ. ದೇವಸ್ಥಾನದ ಮುಂದೆ ಸಾರ್ವಜನಿಕ ಸಭೆ ನಡೆಯಲಿದ್ದು, ಅದರಲ್ಲಿ ಅರುಣ್ ಪುತ್ತಿಲ ತಮ್ಮ ಮುಂದಿನ ನಡೆಯನ್ನು ವಿವರಿಸಲಿದ್ದಾರೆ. ಈಗಾಗಲೇ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ, ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಅರುಣ್ ಪುತ್ತಿಲ ಅಭಿಮಾನಿಗಳು ಹೆಸರಲ್ಲಿ ಗೆದ್ದ ಶಾಸಕರಿಗೆ ಅಭಿನಂದನೆ ಕೋರಿ ಫ್ಲೆಕ್ಸ್ ಹಾಕಲಾಗಿದೆ. ನೂರಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಗಳನ್ನು ರಚಿಸಲಾಗಿದ್ದು, ಪುತ್ತಿಲ ಪರವಾಗಿ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅರುಣ್ ಪುತ್ತಿಲ ಅಭಿಮಾನಿಗಳ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರು ಸಿಡಿದು ನಿಲ್ಲಲಿದ್ದಾರೆಯೇ ಎನ್ನುವ ಕುತೂಹಲ ಉಂಟಾಗಿದೆ. ಬಿಜೆಪಿ ನಾಯಕರು ಎಂದು ಎನಿಸಿಕೊಂಡವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ, ಅರುಣ್ ಪುತ್ತಿಲರನ್ನು ತುಳಿಯಲು ನೋಡುತ್ತಿದ್ದಾರೆ ಎನ್ನುವ ನೋವಿನಲ್ಲಿ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಪ್ರಧಾನಿಗೆ ಪತ್ರ ಬರೆಯಲಾಗಿದೆ ಎನ್ನಲಾಗುತ್ತಿದ್ದು, ಪುತ್ತೂರಿನ ವರ್ತಮಾನ ಕೇಂದ್ರ ಹೈಕಮಾಂಡ್ ಮಟ್ಟಕ್ಕೆ ತಲುಪಿದೆ ಎನ್ನುವ ಸುದ್ದಿಗಳಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಅವರ ಕ್ಷೇತ್ರದಲ್ಲಿಯೇ ಎದ್ದಿರುವ ಕಾರ್ಯಕರ್ತರ ಧ್ವನಿ ಮೊನ್ನೆಯ ಚುನಾವಣೆಯಲ್ಲಿ ಬಿಂಬಿತವಾಗಿತ್ತು. ಬಿಜೆಪಿ ಅಧಿಕೃತ ಅಭ್ಯರ್ಥಿಯನ್ನು ಹಿಂದಿಕ್ಕಿದ್ದಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷೇತರ ವ್ಯಕ್ತಿಯೇ ಪೈಪೋಟಿ ನೀಡಿರುವುದು ಸಂಚಲನ ಎಬ್ಬಿಸಿದೆ.

ಇದರ ಬೆನ್ನಲ್ಲೇ, ನಳಿನ್ ಕುಮಾರ್ ಮತ್ತು ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಬ್ಯಾನರ್, ಅದರ ನೆಪದಲ್ಲಿ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಹೊಡೆಸಿದ್ದು ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶದ ಅಲೆ ಹೆಚ್ಚುವಂತೆ ಮಾಡಿದೆ. ಬ್ಯಾನರ್ ವಿರುದ್ಧ ಪ್ರತಿಭಟಿಸುವ ನೆಪದಲ್ಲಿ ಮಾಜಿ ಶಾಸಕ ಮಠಂದೂರು ಸೇರಿ ಬಿಜೆಪಿ ನಾಯಕರು ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಕೂಗಿರುವುದು ಸಂಘ ಪರಿವಾರದ ಒಳಗಡೆ ಬಿರುಕು ಹೆಚ್ಚುವಂತೆ ಮಾಡಿತ್ತು. ಇದರ ಮಧ್ಯೆ ಕಲ್ಲಡ್ಕ ಭಟ್ಟರು, ಹಲ್ಲೆ ಕೃತ್ಯಕ್ಕೆ ಕಾಂಗ್ರೆಸ್ ಕಾರಣ ಎಂದು ತಿಪ್ಪೆ ಸಾರಿಸುವ ಹೇಳಿಕೆ ನೀಡಿ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದರು. ಇವೆಲ್ಲ ಪ್ರತಿಫಲನಗಳು ಅರುಣ್ ಪುತ್ತಿಲ ಕೃತಜ್ಞತಾ ಸಭೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಸಭೆಯಲ್ಲಿ ಎಷ್ಟು ಜನ ಸೇರಲಿದ್ದಾರೆ ಮತ್ತು ಅರುಣ್ ಪುತ್ತಿಲ ಯಾವ ರೀತಿಯ ನಿರ್ಧಾರ ಪ್ರಕಟಿಸುತ್ತಾರೆ ಎನ್ನುವುದು ಪುತ್ತೂರಿನ ಬಿಜೆಪಿ ಮಟ್ಟಿಗೆ ಪ್ರಮುಖವಾಗಲಿದೆ. ಮೊನ್ನೆಯಷ್ಟೇ ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಬಂದು ವಸ್ತುಸ್ಥಿತಿ ತಿಳಿದು ಹೋಗಿದ್ದು, ಕೆಲವೇ ದಿನಗಳಲ್ಲಿ ನಿಮ್ಮ ನಿರೀಕ್ಷೆಯ ಸುದ್ದಿ ಹೈಕಮಾಂಡ್ ಕಡೆಯಿಂದ ಹೊರಬೀಳಲಿದೆ ಎಂದಿದ್ದರು. ಅಲ್ಲದೆ, ಪುತ್ತೂರಿನ ಚಿತ್ರಣದ ಬಗ್ಗೆ ದೆಹಲಿ ಮಟ್ಟಕ್ಕೆ ಮಾಹಿತಿ ನೀಡುತ್ತೇನೆ ಎಂದೂ ಹೇಳಿಕೆ ನೀಡಿದ್ದರು.

ಇಂದಿನ ಕೃತಜ್ಞತಾ ಸಭೆಯಲ್ಲಿ ಯಾವುದೇ ವಿರೋಧಿ ಘೋಷಣೆ ಕೂಗಬಾರದು. ದೇವರ ಭಜನೆ, ಮಹಾಲಿಂಗೇಶ್ವರನಿಗೆ ಜೈಕಾರ ಬಿಟ್ಟರೆ ರಾಜಕೀಯ ವಿಚಾರಗಳನ್ನು ತರಬಾರದು. ಭಕ್ತಿ ಭಾವದ ದೃಷ್ಟಿಯಿಂದ ಚಪ್ಪಲಿ ಹಾಕದೆ, ಶಿಸ್ತನ್ನು ಅನುಸರಿಸುವಂತೆ ಅರುಣ್ ಪುತ್ತಿಲ ಕಡೆಯವರು ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಹೀಗಾಗಿ ಒಟ್ಟು ಸಮಾವೇಶ ರಾಜಕೀಯ ಬದಿಗಿಟ್ಟು ಚುನಾವಣೆಗಾಗಿ ಶ್ರಮಿಸಿದ ಕಾರ್ಯಕರ್ತರು, ಪ್ರಮುಖರೆಲ್ಲ ಸೇರುವುದಕ್ಕೆ ಸಾಕ್ಷಿಯಾಗಲಿದೆ.

Puttur Arun Puthila and members to organize Thanksgiving meeting on May 21st evening under the banner Kalnadigey Jata.