ಬಹುಕಾಲದ ಬಳಿಕ ಜನರ ಸಮಸ್ಯೆ ಆಲಿಸಿದ ಪೊಲೀಸ್ ಕಮಿಷನರ್ ; ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ, ಟ್ರಾಫಿಕ್, ಫುಟ್ ಪಾತ್ ಅತಿಕ್ರಮಣ ಬಗ್ಗೆ ದೂರು

03-06-23 09:21 pm       Mangalore Correspondent   ಕರಾವಳಿ

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಕಮಿಷನರ್ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದಾರೆ.

ಮಂಗಳೂರು, ಜೂನ್ 3: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಕಮಿಷನರ್ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಜನರ ಸಮಸ್ಯೆಗಳನ್ನು ಆಲಿಸಿ, ಕೆಲವು ಪ್ರಕರಣಗಳಲ್ಲಿ ತಕ್ಷಣವೇ ಪರಿಹಾರದ ಸೂಚನೆಗಳನ್ನು ಪ್ರಕಟಿಸಿದ್ದಾರೆ.

ಹಿಂದೆ 2016ರಲ್ಲಿ ಎಸ್. ಚಂದ್ರಶೇಖರ್ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದಾಗ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಫೋನ್ ಇನ್ ಕಾರ್ಯಕ್ರಮ ಆರಂಭಿಸಿದ್ದರು. ಆನಂತರ, ಸಂದೀಪ್ ಪಾಟೀಲ್, ಸುರೇಶ್ ಕಮಿಷನರ್ ಆಗಿದ್ದಾಗ ಫೋನ್ ಇನ್ ಕಾರ್ಯಕ್ರಮ ನಡೆದಿತ್ತು. ಆನಂತರ, ಬಂದಿದ್ದ ಪೊಲೀಸ್ ಕಮಿಷನರ್ ಗಳು ಸಾರ್ವಜನಿಕರ ಸಮಸ್ಯೆ ತಿಳಿಯುವ ಬದಲು ಬೇರೆಯದ್ದೇ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ಅದರ ಹಿನ್ನೆಲೆಯಲ್ಲಿ ಈ ಬಾರಿ ಜನಸ್ನೇಹಿ ವ್ಯಕ್ತಿಯೊಬ್ಬರು ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೇರಿದ್ದಾರೆ ಎನ್ನಬೇಕು.

ಮೂಡುಬಿದ್ರೆಯ ಬಾಲಕೃಷ್ಣ ನಾಯಕ್ ಎಂಬವರು ಫೋನ್ ಮಾಡಿ, ಮೂಡುಬಿದ್ರೆಯಲ್ಲಿ ಆಟೋ ರಿಕ್ಷಾಗಳಲ್ಲಿ ಮೀಟರ್ ಹಾಕದೆ ಚಾಲಕರು ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದಾರೆ. ಇದಕ್ಕಾಗಿ ಆರ್ ಟಿಓ ಮತ್ತು ಪೊಲೀಸರು ಜೊತೆಗೂಡಿ ಸಾರ್ವಜನಿಕ ಪ್ರದೇಶದಲ್ಲಿ ದರ ನಿಗದಿ ಪಟ್ಟಿ ಹಾಕಬೇಕು ಎಂದಿದ್ದಾರೆ. ಈ ಬಗ್ಗೆ ಉತ್ತರಿಸಿದ ಕಮಿಷನರ್, ಆ ಬಗ್ಗೆ ಗಮನ ಹರಿಸುತ್ತೇವೆ, ಆರ್ಟಿಓ ಜೊತೆಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಸುಬ್ರಹ್ಮಣ್ಯ ನಾಯಕ್ ಫೋನ್ ಮಾಡಿ, ನಗರದ ಬೆಂದೂರುವೆಲ್ ಭಾಗದಲ್ಲಿ ರಸ್ತೆಯಲ್ಲೇ ಪೈಪ್ ಗಳನ್ನು ಹಾಕಲಾಗಿದೆ. ಇದರಿಂದ ಆಟೋ ರಿಕ್ಷಾ, ಬಸ್ ಗಳು ರಸ್ತೆ ಮಧ್ಯೆ ನಿಲ್ಲುವಂತಾಗಿದ್ದು ಜನರಿಗೆ ನಡೆದು ಹೋಗುವುದಕ್ಕೂ ಸಮಸ್ಯೆ ಆಗಿದೆ ಎಂದರು. ಅಲ್ಲಿ ನಾವು ಸಿಬಂದಿ ಹಾಕಿದ್ದೇವೆ. ಸಿಬಂದಿ ಇದ್ದಾಗ ಜನರು ನಿಮಯ ಫಾಲೋ ಮಾಡುತ್ತಾರೆ. ಪೊಲೀಸರು ಇಲ್ಲ ಎಂದ ಕೂಡಲೇ ನಿಯಮ ಮುರಿಯುತ್ತಾರೆ. ಈ ರೀತಿ ಆಗಬಾರದು, ನಾವು ನಿಯಮಗಳನ್ನು ಪಾಲಿಸಿದರೆ ಇಂಥ ಸ್ಥಿತಿ ಬರೋದಿಲ್ಲ ಎಂದರು.

ಬಿಜೈನಿಂದ ಕೆಆರ್ ಪ್ರಭು ಕರೆ ಮಾಡಿ, ಖಾಸಗಿ ಬಸ್ ಗಳು ಯರ್ರಾಬಿರ್ರಿ ಚಲಿಸುತ್ತವೆ. ಕೆಲವು ಕಡೆ ಪಾರ್ಕಿಂಗ್ ಏರಿಯಾಗಳನ್ನು ಅಪಾರ್ಟ್ಮೆಂಟ್ ಗಳು ಆಕ್ರಮಿಸಿಕೊಂಡಿದ್ದು ಬಸ್ಸಿಗೆ ನಿಲ್ಲುವುದಕ್ಕೂ ಆಗದ ಸ್ಥಿತಿಯಿದೆ. ಪಾರ್ಕಿಂಗ್, ಫುಟ್ ಪಾತ್ ಜಾಗಗಳನ್ನು ಖಾಸಗಿಯವರು ಆಕ್ರಮಿಸಿದ್ದಾರೆ ಎಂದು ಹೇಳಿದರು. ಇದಕ್ಕುತ್ತರಿಸಿದ ಕಮಿಷನರ್, ಇದನ್ನು ಮಹಾನಗರ ಪಾಲಿಕೆಯವರೇ ತೆರವು ಮಾಡಬೇಕು. ಈ ಬಗ್ಗೆ ನಾವು ಮತ್ತೆ ಪಾಲಿಕೆಗೆ ಪತ್ರ ಬರೆಯುತ್ತೇವೆ ಎಂದರು. ಪ್ರಕಾಶ್ ಪಡಿಯಾರ್ ಫೋನ್ ಮಾಡಿ, ನೆಹರು ಮೈದಾನ ಆಸುಪಾಸಿನಲ್ಲಿ ಕುಡುಕರು, ಭಿಕ್ಷುಕರು, ಅಲೆಮಾರಿಗಳು ಬಿದ್ದುಕೊಂಡಿರುತ್ತಾರೆ, ಇದರಿಂದ ನಗರದ ಹೆಸರಿಗೆ ಕಳಂಕ ಬರುತ್ತದೆ ಎಂದಾಗ, ಆ ಬಗ್ಗೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು ಕಮಿಷನರ್. ಉಮರ್ ಫಾರೂಕ್ ಎಂಬವರು ತನ್ನ ಐಫೋನ್ ಕಳಕೊಂಡ ಬಗ್ಗೆ ಮೇ 6ರಂದು ದೂರು ಕೊಟ್ಟಿದ್ದೇನೆ, ಸಿಕ್ಕಿಲ್ಲ ಎಂದರು. ಕೂಡಲೇ ಪೊಲೀಸರಿಗೆ ಫೋನ್ ಟ್ರೇಸ್ ಮಾಡಲು ಸೂಚನೆ ನೀಡಿದರು. ಹೆಚ್ಚಿನ ಫೋನ್ ಕರೆಗಳು ಫುಟ್ ಪಾತ್ ಆಕ್ರಮಣ, ವಾಹನಗಳ ಪಾರ್ಕಿಂಗ್ ವಿಚಾರದಲ್ಲಿದ್ದವು. ಮಂಗಳಾದೇವಿ ಭಾಗದಲ್ಲಿ ಪಾರ್ಕಿಂಗ್ ಇಲ್ಲದೆ ವಾಹನಗಳು ರಸ್ತೆಯಲ್ಲಿ ನಿಂತು ಸಮಸ್ಯೆಯಾಗಿದೆ ಎಂದು ಗಮನ ಸೆಳೆದರು.

ದೂರಿಗೆ ತುರ್ತು ಸ್ಪಂದಿಸಿದ ಪೊಲೀಸರು

ಸುರತ್ಕಲ್ ನಲ್ಲಿ ಬಾರ್ ಒಂದರ ಒಳಗಡೆಯೇ ಮಟ್ಕಾ, ಇನ್ನಿತರ ಗ್ಯಾಂಬ್ಲಿಂಗ್ ನಡೆಯುತ್ತೆ ಎಂಬ ದೂರಿನಂತೆ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಯಾವುದೇ ಆ ರೀತಿಯ ಚಿತ್ರಣ ಕಂಡುಬಂದಿಲ್ಲ ಎಂದಿದ್ದಾರೆ. ಕುಳೂರು ವಿಆರ್ ಎಲ್ ಕಚೇರಿ ಎದುರುಗಡೆ ಗ್ಯಾರೇಜ್ ನಲ್ಲಿ ವಾಹನಗಳನ್ನು ರಸ್ತೆಯಲ್ಲಿಟ್ಟು ಸಮಸ್ಯೆಯಾಗುತ್ತೆ ಎಂಬ ದೂರಿನ ಬಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳನ್ನು ರಸ್ತೆಗೆ ತರದಂತೆ ಸೂಚನೆ ನೀಡಿದ್ದಾರೆ. ಬೆಂದೂರುವೆಲ್, ಸೈಂಟ್ ಆಗ್ನೆಸ್, ತೆರೆಸಾ ಸ್ಕೂಲ್ ಬಳಿ ಟ್ರಾಫಿಕ್ ಸಮಸ್ಯೆ ದೂರಿನಂತೆ ಸಂಜೆ ಹೊತ್ತಿಗೆ ಸಿಬಂದಿಗಳನ್ನು ನಿಯೋಜಿಸಿದ್ದಾರೆ. ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ದಿನೇಶ್ ಕುಮಾರ್, ಅಂಶು ಕುಮಾರ್ ಇದ್ದರು.

Mangalore police commissioner Kukdeep Kumar Jain gets huge responce via phone in program, orders for immediate action. Problems faced by the public due to haphazard parking on footpaths and roads, traffic congestion, and reckless driving of private buses dominated the grievances made to police commissioner Kuldeep Kumar R Jain during the phone-in programme which was held at police commissioner's office here on Saturday June 3.