ನಾಲ್ವರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ; ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕುಟುಂಬಕ್ಕೆ ಯಾಕೆ ತಾರತಮ್ಯ? ಬಿಜೆಪಿ- ಕಾಂಗ್ರೆಸ್ ಚಿಕ್ಕಾಸಿನ ಪರಿಹಾರ ನೀಡಿಲ್ಲ ಯಾಕೆ ?

17-06-23 03:47 pm       Mangalore Correspondent   ಕರಾವಳಿ

ಕರಾವಳಿ ಭಾಗದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಯುವಕರು ಕೋಮು ದ್ವೇಷಕ್ಕೆ ಬಲಿಯಾಗಿದ್ದಾರೆ.

ಮಂಗಳೂರು, ಜೂನ್ 17: ಕರಾವಳಿ ಭಾಗದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಯುವಕರು ಕೋಮು ದ್ವೇಷಕ್ಕೆ ಬಲಿಯಾಗಿದ್ದಾರೆ. ಕಳೆದ ಬಾರಿ ಬಿಜೆಪಿ ಸರಕಾರ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ನೀಡಿದ್ದರಿಂದ ಇತರರಿಗೂ ಅದೇ ರೀತಿಯ ಪರಿಹಾರ ನೀಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮುಸ್ಲಿಂ ನಾಯಕರು ಬಲಿಯಾದ ಮುಸ್ಲಿಂ ಕುಟುಂಬಗಳಿಗೆ ಪರಿಹಾರಕ್ಕೆ ಒತ್ತಾಯ ಮಾಡಿದ್ದರು.

ಇದೀಗ ರಾಜ್ಯದ ಕಾಂಗ್ರೆಸ್ ಸರಕಾರ ನಾಲ್ಕು ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡೋದಾಗಿ ಘೋಷಣೆ ಮಾಡಿದೆ. ಅಲ್ಲದೆ, ಜೂನ್ 19ರಂದು ಆಶ್ರಯಿತರು ಖುದ್ದಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹ ಕಚೇರಿಗೆ ಬಂದು ಚೆಕ್ ಸ್ವೀಕರಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕಳೆದೊಂದು ವರ್ಷದಲ್ಲಿ ಬಲಿಯಾಗಿದ್ದ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಜಿಲ್, ಕಾಟಿಪಳ್ಳ ನಿವಾಸಿ ಜಲೀಲ್ ಮತ್ತು ಸುಳ್ಯದ ಬೆಳ್ಳಾರೆಯಲ್ಲಿ ಕೊಲೆಯಾಗಿದ್ದ ಮಸೂದ್ ಕುಟುಂಬಕ್ಕೆ ಪರಿಹಾರ ನೀಡಿದೆ. ಇದರ ಜೊತೆಗೆ 2018ರಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕುಟುಂಬಕ್ಕೂ 25 ಲಕ್ಷ ಪರಿಹಾರ ಘೋಷಿಸಿದೆ. ಆಮೂಲಕ ಕೋಮು ಸಾಮರಸ್ಯದ ಸಂದೇಶ ನೀಡುವ ಪ್ರಯತ್ನ ಮಾಡಿದೆ.

ಇದೇ ವೇಳೆ, 2017ರಲ್ಲಿ ಕೊಲೆಯಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕುಟುಂಬಕ್ಕೆ ಪರಿಹಾರ ಯಾಕಿಲ್ಲ ಎಂಬ ಅಸಮಾಧಾನದ ಪ್ರಶ್ನೆ ಎದ್ದಿದೆ. ಜುಲೈ 4ರಂದು ತನ್ನ ಪಾಡಿಗೆ ಬಿಸಿ ರೋಡಿನ ಲಾಂಡ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶರತ್ ಮಡಿವಾಳ ಎಂಬ ಅಮಾಯಕ ಯುವಕನನ್ನು ದುಷ್ಕರ್ಮಿಗಳು ಕತ್ತಿಯಿಂದ ಇರಿದು ಹತ್ಯೆ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಶರತ್ ಎರಡು ದಿನಗಳ ಬಳಿಕ ಸಾವಿಗೀಡಾಗಿದ್ದ. ಭಾರೀ ಪ್ರತಿಭಟನೆ, ಅದರ ತರುವಾಯ ಎರಡು ತಿಂಗಳ ಕಾಲ ಬಂಟ್ವಾಳದಲ್ಲಿ ಸೆಕ್ಷನ್, ಕರ್ಫ್ಯೂ ಹಾಕಿದ್ದೂ ನಡೆದಿತ್ತು. ಪ್ರಕರಣದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರನ್ನು ಆರೋಪಿಗಳೆಂದು ಗುರುತಿಸಿ ಪೊಲೀಸರು ಬಂಧಿಸಿದ್ದರು.

ಇಷ್ಟೆಲ್ಲ ಆಗಿದ್ದರೂ, ಶರತ್ ಮಡಿವಾಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಚಿಕ್ಕಾಸು ಪರಿಹಾರ ಸಿಕ್ಕಿಲ್ಲ. ಬಿಜೆಪಿ ಪಕ್ಷದ ವತಿಯಿಂದಲೂ ದೇಣಿಗೆ ಲಭಿಸಿಲ್ಲ. ಶರತ್ ತಂದೆ 74ರ ವಯಸ್ಸಿನ ತನಿಯಪ್ಪ ಮಡಿವಾಳ ತಾನೇನು ತಪ್ಪು ಮಾಡಿದ್ದೇನೆ, ನನ್ನ ಮಗ ಯಾವ ತಪ್ಪು ಮಾಡಿದ್ದ. ನಮಗೆ ಯಾಕೆ ಪರಿಹಾರ ಲಭಿಸಿಲ್ಲ. ಯಾಕೆ ತಾರತಮ್ಯ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿ ಕಣ್ಣೀರು ಹಾಕಿದ್ದಾರೆ. ವಯಸ್ಸು ಮೀರಿದರೂ, ಇಂದಿಗೂ ಬಿಸಿ ರೋಡಿನ ಲಾಂಡ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ತನಿಯಪ್ಪ ಮಡಿವಾಳ, ನನ್ನ ಮಗನ ಕೊಲೆ ಬಗ್ಗೆ ಎನ್ಐಎ ಅಥವಾ ಸಿಬಿಐ ತನಿಖೆಯಾಗಬೇಕು. ಜೊತೆಗೆ ರಾಜ್ಯ ಸರಕಾರದಿಂದ ಪರಿಹಾರವನ್ನೂ ನೀಡಬೇಕು ಎಂದು ಹೇಳಿದ್ದಾರೆ.  

ಇದೇ ವೇಳೆ, ರಾಜ್ಯ ಸರಕಾರ ಮುಸ್ಲಿಂ ತುಷ್ಟೀಕರಣಕ್ಕಾಗಿ ಮೂರು ಕುಟುಂಬಗಳಿಗೆ ಪರಿಹಾರ ಕೊಟ್ಟಿದೆ. ಅದರಲ್ಲಿ ಫಾಜಿಲ್ ಬಿಟ್ಟರೆ, ಜಲೀಲ್ ಮತ್ತು ಮಸೂದ್ ವೈಯಕ್ತಿಕ ದ್ವೇಷದಲ್ಲಿ ಹತ್ಯೆಯಾಗಿರುವುದು. ಕೋಮು ದ್ವೇಷದಲ್ಲಿ ಕೊಲೆಯಾಗಿದ್ದಾಗಿ ಬಿಂಬಿಸಿ ಕಾಂಗ್ರೆಸ್ ಸರಕಾರ ಪರಿಹಾರ ಕೊಟ್ಟಿದೆ. ಮೂವರೂ ಮುಸ್ಲಿಂ ಆಗುತ್ತೆ ಅನ್ನುವ ಕಾರಣಕ್ಕೆ ಸುರತ್ಕಲ್ ನಲ್ಲಿ ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತ ದೀಪಕ್ ಕುಟುಂಬಕ್ಕೂ ಪರಿಹಾರ ಕೊಟ್ಟಿದೆ. ಇದರ ಹಿಂದಿರೋದು ಸಿದ್ದರಾಮಯ್ಯರ ಮುಸ್ಲಿಂ ತುಷ್ಟೀಕರಣ ಮಾತ್ರ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

Mangalore RSS activist Sharath Madiwala murder, family gets no compensation, father questions for inequality as Karnataka Government sanctions 25 lakh compensation to family of 4 victims of communal murders in Dakshina Kannada.  Families of Deepak Rao, Masood, Mohammed Fazil, and Abdul Jaleel to receive the compensation in Bengaluru on June 19.