Ayodhya Temple inauguration, police security Mangalore: ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ; ಮಂಗಳೂರಿನಲ್ಲಿ 196 ಕಡೆ ಧಾರ್ಮಿಕ ಕಾರ್ಯಕ್ರಮ, ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ 

21-01-24 11:45 am       Mangalore Correspondent   ಕರಾವಳಿ

ಅಯೋಧ್ಯೆ ಶ್ರೀರಾಮ ಮಂದಿರದ ನೂತನ ಕಟ್ಟಡದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಪ್ರಯುಕ್ತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ.

ಮಂಗಳೂರು, ಜ.21: ಅಯೋಧ್ಯೆ ಶ್ರೀರಾಮ ಮಂದಿರದ ನೂತನ ಕಟ್ಟಡದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಪ್ರಯುಕ್ತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  

ಮಂಗಳೂರು ನಗರದಲ್ಲಿ ದೇವಸ್ಥಾನ ಮತ್ತು ಮಂದಿರಗಳಲ್ಲಿ ಒಟ್ಟು 196 ಕಡೆಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಗುರುತಿಸಲಾಗಿದೆ. 

    131 ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಪಿಕೆಟಿಂಗ್ ನೇಮಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 

    ನಗರದಾದ್ಯಂತ 57 ಸೆಕ್ಟರ್ ಮೊಬೈಲ್ಗಳನ್ನು 24 ಗಂಟೆ ಹಗಲು ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆಯನ್ನು ಮಾಡಲಾಗಿದೆ. 

    14 ಸ್ಥಳಗಳಲ್ಲಿ ಚೆಕ್ ಪಾಯಿಂಟ್ಗಳನ್ನು ನಿಯೋಜಿಸಲಾಗಿದೆ. 

    9 ಸಿ.ಎ.ಆರ್ ಮತ್ತು 3 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. 

    ತಡರಾತ್ರಿ ಮತ್ತು ಮುಂಜಾನೆ ವಿಶೇಷ ಗಸ್ತುಗಳನ್ನು ಆಯೋಜಿಸಲಾಗಿದೆ. 

    ಮಂಗಳೂರು ನಗರದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವಿಧ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ. 

    ರಾಜ್ಯದಲ್ಲಿ ಅಳವಡಿಸಲಾದ ಕ್ರಮದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಮೆರವಣಿಗೆ, ರ್ಯಾಲಿಗಳಿಗೆ ಅನುಮತಿ ನೀಡಿರುವುದಿಲ್ಲ. 

    ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯಾ ಭಾಗದ ಎ.ಸಿ.ಪಿ ಮಾರ್ಗದರ್ಶನದಲ್ಲಿ ಈಗಾಗಲೇ ಶಾಂತಿ ಸಭೆಗಳನ್ನು ಆಯೋಜಿಸಲಾಗಿದೆ. 

    ಪ್ರತೀ ಪೊಲೀಸ್ ಠಾಣಾ ಮಟ್ಟದಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ಏರಿಯಾ ಡಾಮಿನೇಷನ್ ಮತ್ತು‌ ರೂಟ್ ಮಾರ್ಚ್ ಕೈಗೊಳ್ಳಲಾಗಿದೆ.

    ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಕೆಗಳ ಮೇಲೆ ನಿಗಾ ಇರಿಸಲಾಗಿದೆ. ಆಯೋಜಕರಿಗೆ ಅವುಗಳ ಭದ್ರತೆಯನ್ನು ಖಚಿತಪಡಿಸಲು ಸೂಚಿಸಲಾಗಿದೆ. 

    ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜ. 21ರ ಮಧ್ಯರಾತ್ರಿಯಿಂದ 23ರ ಮುಂಜಾನೆಯ ವರೆಗೆ ಎಲ್ಲಾ ರೀತಿಯ ಬಾರ್ ಮತ್ತು ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

    ಮಂಗಳೂರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 3-ಡಿಸಿಪಿ, ೦6-ಎಸಿಪಿ, 11-ಪಿ.ಐ ಮತ್ತು 37-ಪಿ.ಎಸ್.ಐ ದರ್ಜೆಯ ಅಧಿಕಾರಿಗಳನ್ನು ಹಾಗೂ 781 ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.

In observance of the historic day of the consecration ceremony at the Ayodhya Sri Ram Temple on January 22 police security all over has been set up to avoid communial disputes.