Parmeshwar Gundkal: 5 ಕೋಟಿ ಜನರ ಮೇಲೆ ಸೀರಿಯಲ್ ಬೀರುವ ಪರಿಣಾಮಗಳ ಬಗ್ಗೆ ಚಾನೆಲ್ ಚಿಂತೆ ಮಾಡಲ್ಲ ; ಸೀರಿಯಲ್ ಮಾಡೋದು ಕಾದಂಬರಿ ಬರೆದಂತಲ್ಲ ; ಪರಮೇಶ್ವರ ಗುಂಡ್ಕಲ್

22-01-24 12:08 pm       Mangalore Correspondent   ಕರಾವಳಿ

5 ಕೋಟಿ ಕನ್ನಡಿಗರನ್ನು ಪ್ರಭಾವಿಸುವ ಎಂಟರ್ಟೈನ್ಮೆಂಟ್ ವಾಹಿನಿಗಳಲ್ಲಿ ಪ್ರಸಾರವಾಗುವ ಸೀರಿಯಲ್ ಜನರ ಮೇಲೆ ಬೀರುವ ಪರಿಣಾಮಗಳೇನು ಎನ್ನುವ ಬಗ್ಗೆ ಚಿಂತಿಸುವವರು ಯಾರೂ ಇಲ್ಲ.

ಮಂಗಳೂರು, ಜ.22: 5 ಕೋಟಿ ಕನ್ನಡಿಗರನ್ನು ಪ್ರಭಾವಿಸುವ ಎಂಟರ್ಟೈನ್ಮೆಂಟ್ ವಾಹಿನಿಗಳಲ್ಲಿ ಪ್ರಸಾರವಾಗುವ ಸೀರಿಯಲ್ ಜನರ ಮೇಲೆ ಬೀರುವ ಪರಿಣಾಮಗಳೇನು ಎನ್ನುವ ಬಗ್ಗೆ ಚಿಂತಿಸುವವರು ಯಾರೂ ಇಲ್ಲ. ಚಾನೆಲ್ ಹೆಡ್ ಆಗಲೀ, ಸೀರಿಯಲ್ ತಂಡವಾಗಲೀ ಆ ಬಗ್ಗೆ ಚಿಂತನೆ ಮಾಡುವುದಿಲ್ಲ ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ.

ಲಿಟ್ ಫೆಸ್ಟ್ ಆರನೇ ಆವೃತ್ತಿಯ ಕೊನೆಯಲ್ಲಿ ದೃಶ್ಯ ಮಾಧ್ಯಮದ ಸವಾಲುಗಳು ಕುರಿತಾಗಿ ಹೆಸರಾಂತ ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತು ಪರಮೇಶ್ವರ ಗುಂಡ್ಕಲ್ ಜೊತೆಗೆ ಸಂವಾದ ನಡೆಯಿತು. ಟಿಆರ್ ಪಿ ರೇಟ್ ನಲ್ಲಿ ನಮ್ಮ ಚಾನೆಲನ್ನು ವಾರದಲ್ಲಿ ಒಟ್ಟು ಆರು ಕೋಟಿ ಜನರ ಪೈಕಿ ಐದು ಕೋಟಿ ಜನ ಕನಿಷ್ಠ ಒಂದು ನಿಮಿಷದಷ್ಟು ನೋಡುತ್ತಾನೆ ಎಂಬ ಡಾಟಾ ಇದೆ. ಇದೊಂದು ಅಗಾಧ ಗಾತ್ರ. ಒಂದು ಚಾನೆಲ್ ಅಷ್ಟು ಮಂದಿಯನ್ನು ಪ್ರಭಾವಿಸುತ್ತೆ ಅಂದರೆ ಮಾಸ್ ಮೀಡಿಯಾದ ತಾಕತ್ತು ಅದು. ಅಂಥದ್ರಲ್ಲಿ ನಮಗೆ ಸೀರಿಯಲ್ ಮಾಡುವಾಗಲೂ ತುಂಬ ನಿರೀಕ್ಷೆ ಇರುತ್ತದೆ. ಆದರೂ ನಾವೀಗ ಹತ್ತು ಸೀರಿಯಲ್ ಮಾಡಬೇಕೆಂದರೆ ಅದನ್ನು ಬರೆಯುವವರ ಕೊರತೆ ಇದೆ. 

ಸೀರಿಯಲ್ ಮಾಡೋದಂದ್ರೆ ಒಂದು ಕಾದಂಬರಿ ಬರೆದ ಹಾಗಲ್ಲ. ಕತೆ, ಕಾದಂಬರಿಯನ್ನು ಒಬ್ಬನೇ ಬರೆಯಬಹುದು. ಸೀರಿಯಲ್ ಮಾಡಬೇಕಿದ್ದರೆ, ನಾಲ್ಕು ಜನ ರೈಟರ್ಸ್ ಸೇರಿ ಕನಿಷ್ಠ 60 ಜನ ಬೇಕು. ಹಾಗಾಗಿ ಬೇಂದ್ರೆ ಕತೆಯೋ, ಮತ್ತೊಬ್ಬ ಖ್ಯಾತನಾಮರದ್ದೋ ಕತೆಗಳನ್ನು ಸೀರಿಯಲ್ ಮಾಡುವುದಕ್ಕೆ ಆಗಲ್ಲ. ಅದಕ್ಕೆ ಅದರದ್ದೇ ಆದ ಅಗತ್ಯಗಳಿರುತ್ತವೆ. ಕ್ಯಾಮರಾ ವರ್ಕ್ ನಿಂದ ಸೇರಿ ಎಲ್ಲವುಗಳೂ ಆಗಬೇಕಾಗುತ್ತದೆ. ಎಲ್ಲ ಕತೆಗಳನ್ನೂ ಸೀರಿಯಲ್ಲೋ, ಸಿನಿಮಾನೋ ಮಾಡಕ್ಕೆ ಆಗಲ್ಲ ಅನ್ನೋದು ಇದಕ್ಕೆ. ಕೆಲವೊಬ್ಬರು ಕನ್ನಡ ಸೀರಿಯಲ್ ಬಗ್ಗೆ ಬೈಯೋದು ಕೇಳಿದ್ದೇನೆ. ಹಾಗಂತ, ನಾವು ಅದಕ್ಕೆ ಹೊಂದಿಕೊಂಡೇ ಮಾಡಬೇಕಾಗುತ್ತದೆ. ಇಷ್ಟೊಂದು ಒತ್ತಡಗಳಿರುವಾಗ ಅದು ಬೀರಬಲ್ಲ ಪರಿಣಾಮಗಳ ಬಗ್ಗೆ ಯಾರೂ ಕೂಡ ಚಿಂತೆ ಮಾಡೋದಿಲ್ಲ. ಕನ್ನಡದಲ್ಲಿ ದಿನಕ್ಕೆ 50 ಸೀರಿಯಲ್ ರನ್ ಆಗತ್ತೆ. ಆದರೆ ಕನ್ನಡದಲ್ಲಿ ಈವತ್ತಿಗೂ ಮೆಚ್ಯುರಿಟಿ ಇರುವ ಟೀಮ್ ಇಲ್ಲ. ಹಾಗಂತ, ಸುದ್ದಿ ವಾಹಿನಿಗಳ ಬಗ್ಗೆ ನಾನು ಕಮೆಂಟ್ ಮಾಡೋದಿಲ್ಲ ಎಂದು ಫ್ರಾಂಕ್ ಆಗಿಯೇ ಹೇಳಿಬಿಟ್ಟರು ಗುಂಡ್ಕಲ್.

ನಿರ್ದೇಶಕ ಪ್ರಕಾಶ್ ಬೆಳವಾಡಿ, ಎಐ ಟೆಕ್ನಾಲಜಿ ಬಗ್ಗೆ ಹೇಳುತ್ತಾ ಭವಿಷ್ಯದಲ್ಲಿ ಎಐ ಟೆಕ್ನಾಲಜಿಯೇ ಎಲ್ಲವನ್ನೂ ಮಾಡುತ್ತದೆ. ಈಗಾಗಲೇ ಒಂದು ಕಾದಂಬರಿ ಬರೆದುಕೊಡು ಎಂದು ಕೇಳಿದರೆ ಮನುಷ್ಯನಿಗಿಂತ ಫಾಸ್ಟ್ ಮತ್ತು ಒಳ್ಳೆದಾಗಿ ಬರೆದುಕೊಡುತ್ತದೆ. ಹಾಗಾದಲ್ಲಿ ಬರೆಯುವವರ ಜಾಗವನ್ನು ಅದು ತುಂಬಿದಂತಾಗುತ್ತದೆ. ಆದರೆ, ಅಲ್ಲಿ ನೆಗೆಟಿವ್ ಏನಂದ್ರೆ ಅದು ಚಿಂತನೆ ಮಾಡೋದಿಲ್ಲ. ಪಿಎಚ್ ಡಿ ಥಿಸೀಸ್ ಹೇಗೆಂದು ಹೇಳಿಕೊಡುತ್ತೆ. ಅರಣ್ಯದ ಬಗ್ಗೆ ಥಿಸೀಸ್ ಆಗಬೇಕಂದ್ರೆ, ಏನೆಲ್ಲ ಬೇಕೆಂದು ಹೇಳುತ್ತದೆ. ಆದರೆ ಅದನ್ನು ನಾವು ಜಡ್ಜ್ ಮಾಡಬೇಕಾಗುತ್ತದೆ ಎಂದರು.

ನಯನತಾರಾ ಅವರ ಸಿನಿಮಾ ಇತ್ತೀಚೆಗೆ ವಿವಾದಕ್ಕೆ ತುತ್ತಾದ ಬಗ್ಗೆ ಕೇಳಿದ ಬಗ್ಗೆ ಪ್ರೇಕ್ಷಕರೊಬ್ಬರು ಪ್ರಶ್ನೆ ಮುಂದಿಟ್ಟರು. ಇಂಥದ್ದನ್ನು ಶೂಟಿಂಗ್ ಮಾಡೋವಾಗಲೇ ನಿರ್ದೇಶಕ ಮತ್ತು ನಟರಿಗೆ ಅದರ ಪರಿಣಾಮಗಳ ಬಗ್ಗೆ ತಿಳಿಯುತ್ತದಲ್ಲವೇ. ಮತ್ತೆ ಯಾಕೆ ಅದನ್ನು ಶೂಟ್ ಮಾಡುತ್ತಾರೆ, ಇತ್ತೀಚೆಗೆ ಆ ಸಿನಿಮಾವನ್ನು ಓಟಿಟಿಯಿಂದ ತೆಗೆದುಹಾಕಬೇಕಾಯಿತಲ್ಲ ಎಂದು ಕೇಳಿದ್ದಕ್ಕೆ, ಪರಮೇಶ್ವರ ಗುಂಡ್ಕಲ್ ಉತ್ತರಿಸಲು ನಿರಾಕರಿಸಿದರು. ಒಂದನೇದಾಗಿ ಅದು ನಮ್ಮ ಎದುರಾಳಿ ತಂಡದಿಂದ ರೂಪಿಸಲ್ಪಟ್ಟ ಸಿನಿಮಾ. ಹಾಗಾಗಿ ಟೀಕೆ ಮಾಡಲ್ಲ ಎಂದರು. ಪ್ರಕಾಶ್ ಬೆಳವಾಡಿ ಪ್ರತಿಕ್ರಿಯಿಸಿ, ಅದು ಅಸಭ್ಯ ಅನ್ನುವುದು ನಿರ್ದೇಶಕ ಮತ್ತು ನಟನಿಗೆ ಗೊತ್ತಿರುತ್ತದೆ. ಅದು ಬೀರುವ ಪರಿಣಾಮವೂ ಗೊತ್ತಿರುತ್ತೆ. ಹಾಗಿರುವಾಗ ಶೂಟಿಂಗ್ ಮಾಡೋದೇ ಅಸಭ್ಯ. ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ಯಾಕೆ ತೋರಿಸಬೇಕು ಎಂದು ಪ್ರಶ್ನೆ ಮಾಡಿದರು. ದಿವ್ಯಾ ಕಾರಂತ್ ನಿರ್ವಹಣೆ ಮಾಡಿದರು.

 

There is no one who cares about the impact of serials on entertainment channels that affect 5 crore Kannadigas on people. Neither the channel head nor the serial team is thinking about it," said Parameshwar Gundkal, from. Jio Cinema