ಜನರನ್ನು ಭಜನೆ ಮಾಡಲಷ್ಟೇ ಪ್ರೋತ್ಸಾಹಿಸುತ್ತಿದ್ದಾರೆ, ದೇಶದ ಸಮಸ್ಯೆ ಹೇಳಿದರೆ ದೇಶದ್ರೋಹಿಗಳು, ಹತ್ತು ವರ್ಷದಲ್ಲಿ ನೂರು ಲಕ್ಷ ಕೋಟಿ ವಿದೇಶಿ ಸಾಲದಿಂದ ಆರ್ಥಿಕ ಬಿಕ್ಕಟ್ಟು ; ರಾಜಕೀಯ ವಿಶ್ಲೇಷಕ ಡಾ.ಪರಕಾಲ ಪ್ರಭಾಕರ್

26-01-24 10:21 pm       Mangaluru Correspondent   ಕರಾವಳಿ

ಮತೀಯವಾದಕ್ಕೆ ಪ್ರತಿರೋಧ ತಗ್ಗಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಅಪಾಯಕ್ಕೆ ಗುರಿಯಾಗುತ್ತದೆ. ಪ್ರಸಕ್ತ ನಾವು ದೇಶದಲ್ಲಿ ಸದ್ಯ ಅಂತಹ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಹೆಸರಾಂತ ಚಿಂತಕ, ರಾಜಕೀಯ ವಿಶ್ಲೇಷಕ ಡಾ.ಪರಕಾಲ ಪ್ರಭಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಜ.26: ಮತೀಯವಾದಕ್ಕೆ ಪ್ರತಿರೋಧ ತಗ್ಗಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಅಪಾಯಕ್ಕೆ ಗುರಿಯಾಗುತ್ತದೆ. ಪ್ರಸಕ್ತ ನಾವು ದೇಶದಲ್ಲಿ ಸದ್ಯ ಅಂತಹ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಹೆಸರಾಂತ ಚಿಂತಕ, ರಾಜಕೀಯ ವಿಶ್ಲೇಷಕ ಡಾ.ಪರಕಾಲ ಪ್ರಭಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
 
ನಗರದ ಟಾಗೋರ್‌ ಪಾರ್ಕ್ ಆವರಣದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಬಿಕ್ಕಟ್ಟಿನಲ್ಲಿದೆ ಪ್ರಜಾಪ್ರಭುತ್ವ ಎಂಬ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಜಾತ್ಯತೀತ ದೇಶದಲ್ಲಿ ಒಂದು ಧರ್ಮವನ್ನೇ ಶ್ರೇಷ್ಠ ಎಂದು ಬಿಂಬಿಸಲಾಗುತ್ತಿದೆ. ದೇವರನ್ನು ನಂಬದವರನ್ನು ದೇಶದ್ರೋಹಿಗಳು ಎಂದು ಜನಪ್ರತಿನಿಧಿಗಳಿಂದಲೇ ಹೇಳಿಸುತ್ತಿದ್ದಾರೆ. ಇವರನ್ನು ನಂಬದವರನ್ನು ಖಾಲಿಸ್ತಾನಿಗಳು, ನಕ್ಸಲರು, ದೇಶದ್ರೋಹಿಗಳು  ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಮತೀಯವಾದ ಹರಡುವವರಿಗೆ ಅವರದೇ ಆದ ಸೈನ್ಯವಿದೆ. ಜಾತ್ಯತೀತರಿಗೆ ಅಂತಹ ಸೈನ್ಯದ ಬಲವಿಲ್ಲ. ಪ್ರಜಾಪ್ರಭುತ್ವದ ಜತೆಗೆ ಸಂಕಷ್ಟದಲ್ಲಿ ಸಿಲುಕಿರುವ ಇಂತಹ ಜನರನ್ನು ರಕ್ಷಿಸಬೇಕಾಗಿದೆ ಎಂದು ಪರಕಾಲ ಪ್ರಭಾಕರ್ ಹೇಳಿದರು.
 
ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆದು ಜನರನ್ನು ಭಜನೆ ಮಾಡಲು, ಘೋಷಣೆ ಕೂಗಲು ಪ್ರೋತ್ಸಾಹಿಸುತ್ತಿದ್ದಾರೆ. ಉದ್ಯಮಿಗಳು ಹಠಾತ್ತಾಗಿ ಭಜನೆ ಮಾಡಲು ಆರಂಭಿಸಿದ್ದಾರೆ. ಎಂದೂ ದೇವಾಲಯಗಳಿಗೆ ಹೋಗದವರು ಇಂದು ದೇಗುಲಗಳತ್ತ ಮುಖ ಮಾಡಿದ್ದಾರೆ. ದೇಶದ ಆರ್ಥಿಕತೆ ನೆಲಕಚ್ಚಿದ್ದರೆ, ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಬಾಂಗ್ಲಾದೇಶಕ್ಕಿಂತ ಹೆಚ್ಚು ನಿರುದ್ಯೋಗ ನಮ್ಮ ದೇಶವನ್ನು ಕಾಡುತ್ತಿದೆ. ಬಾಂಗ್ಲಾದಲ್ಲಿ 24 ಶೇ. ನಿರುದ್ಯೋಗ ಸಮಸ್ಯೆಯಿದ್ದರೆ, ಭಾರತದಲ್ಲಿ 24 ಶೇ. ಇದೆ. ರೈತರು, ಕಾರ್ಮಿಕರು ಚಳುವಳಿ ನಡೆಸಿದರೆ ದೇಶದ್ರೋಹಿಗಳಾಗುತ್ತಾರೆ. ದೇಶದ ಜನ ಪ್ರಶ್ನೆ ಮಾಡುವ ಅಧಿಕಾರವನ್ನೇ ಕಳೆದುಕೊಂಡಿದ್ದಾರೆ.
 
ನಕಲಿ ಸೆಕ್ಯುಲರ್ ಗಳೇ ದೇಶಕ್ಕೆ ಅಪಾಯಕಾರಿ;

ದೇಶದ ಪ್ರಜಾಪ್ರಭುತ್ವಕ್ಕೆ ಎರಡು ರೀತಿಯ ಜನರಿಂದ ಹೆಚ್ಚು ಅಪಾಯ ಇದೆ. ಈ ದೇಶ ಹಿಂದುಗಳಿಗೆ ಸೇರಿದ್ದು ಅನ್ನೋರು ಅಪಾಯಕಾರಿಗಳು. ಜಾತ್ಯತೀತರೆಂದು ಕರೆಸಿಕೊಂಡವರು ಹಠಾತ್ತನೆ ಭಕ್ತರಾಗಿ ಬದಲಾಗುವವರು ಅದಕ್ಕಿಂತಲೂ ಅಪಾಯಕಾರಿ ವರ್ಗದವರು. ಇಷ್ಟು ವರ್ಷ ಸೆಕ್ಯುಲರ್ ಗಳಾಗಿದ್ದವರು ಅಚಾನಕ್ಕಾಗಿ ಅಯೋಧ್ಯೆಯಲ್ಲಿ  ಭೂಮಿ ಖರೀದಿಸುತ್ತಾರೆ. ಭವಿಷ್ಯದಲ್ಲಿ ದೇಶದಲ್ಲಿ ಮತ್ತೆ ಪಲ್ಲಟಗಳಾದಲ್ಲಿ ಇವರು ಮತ್ತೆ ಸೆಕ್ಯುಲರ್ ಗಳಾಗುತ್ತಾರೆ ಎಂದು ಅಮಿತಾಬ್ ಬಚ್ಚನ್, ಸಚಿನ್ ತೆಂಡುಲ್ಕರ್ ಹೆಸರೆತ್ತದೆ ಪರೋಕ್ಷವಾಗಿ ಟಾಂಗ್ ನೀಡಿದರು.
 
ದೇಶದ ಆರ್ಥಿಕತೆ ಹದಗೆಡುತ್ತಿದ್ದರೂ, ಪರೋಕ್ಷ ತೆರಿಗೆಯಾದ ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಿದೆ ಎಂದು ತೋರಿಸಲಾಗುತ್ತಿದೆ. ಜಿಎಸ್‌ಟಿ ಸಂಗ್ರಹದಿಂದ ತಳ ಮಟ್ಟದ ಆದಾಯ ಗುಂಪುಗಳ ಮೇಲೆ ಭಾರೀ ಹೊಡೆತವನ್ನು ನೀಡುತ್ತಿರುವುದನ್ನು ಮರೆ ಮಾಚುತ್ತಿದ್ದಾರೆ. ದೇಶೀಯ ಕೈಗಾರಿಕೆಗಳು ಹಿಂದೆ ಕಂಡಿರದಷ್ಟು ತಳಮಟ್ಟಕ್ಕೆ ಕುಸಿದಿವೆ. ದೇಶದ ಸಾಲ ಪ್ರಸಕ್ತ 150 ಲಕ್ಷ ಕೋಟಿ ರೂ.ಗಳಾಗಿದ್ದರೆ, ಇದರಲ್ಲಿ ಕಳೆದ 10 ವರ್ಷಗಳಲ್ಲಿನ ಮಾಡಿದ ಸಾಲವೇ ನೂರು ಲಕ್ಷ ಕೋಟಿ ರೂ. ಇದೇ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೂ ಆಗಿರುವ ಆಂಧ್ರಪ್ರದೇಶ ಮೂಲದ ಪ್ರಭಾಕರ ಪರಕಾಲ ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಲೇರಿಯನ್ ಅವರು ಡಾ. ಪರಕಾಲ ಪ್ರಭಾಕರ್ ಅವರ `ದಿ ಕ್ರುಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ' ಪುಸ್ತಕ ಬಿಡುಗಡೆಗೊಳಿಸಿದರು. ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾರ್ಪೊರೇಟರ್ ವಿನಯರಾಜ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪದ್ಮರಾಜ್ ರಾಮಯ್ಯ, ಪ್ರತಿಷ್ಠಾನದ ಉಪಾಧ್ಯಕ್ಷರಾದ ಬಿ. ಪ್ರಭಾಕರ ಶ್ರೀಯಾನ್, ಹಾಜಿ ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು.

Political analyst Dr Parakala Prabhakar talks about economic crisis in Mangalore. Political parties are only encouraging people to do bhajan, people are traitors if they say the country's problem, economic crisis due to foreign debt of one hundred lakh crores in has happened in the last ten years says Political analyst Dr. Parakala Prabhakar