Mangalore News: ದಕ್ಷಿಣ ಕನ್ನಡ ಜಿಲ್ಲೆಯ 100 ದೇವಸ್ಥಾನಗಳಲ್ಲಿ ಫೆಬ್ರವರಿಯಿಂದಲೇ ವಸ್ತ್ರಸಂಹಿತೆ, ವಾರಕ್ಕೊಮ್ಮೆ ಮಕ್ಕಳಿಗೆ ಹಿಂದು ಧಾರ್ಮಿಕ ಶಿಕ್ಷಣ ; ದೇವಸ್ಥಾನಗಳ ಪರಿಷತ್ತು ಅಸ್ತಿತ್ವಕ್ಕೆ

27-01-24 01:41 pm       Mangalore Correspondent   ಕರಾವಳಿ

ಹಿಂದು ಧರ್ಮ ಜಾಗೃತಿ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚು ದೇವಸ್ಥಾನಗಳ ಪ್ರಮುಖರು ಮಂಗಳೂರಿನಲ್ಲಿ ಸಭೆ ಸೇರಿದ್ದು, ವಸ್ತ್ರ ಸಂಹಿತೆ ಪಾಲನೆ, ಹಿಂದು ಧಾರ್ಮಿಕ ಶಿಕ್ಷಣ ನೀಡುವ ಕುರಿತಾಗಿ ನಿರ್ಣಯ ತೆಗೆದುಕೊಂಡಿದ್ದಾರೆ.

ಮಂಗಳೂರು, ಜ.27: ಹಿಂದು ಧರ್ಮ ಜಾಗೃತಿ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚು ದೇವಸ್ಥಾನಗಳ ಪ್ರಮುಖರು ಮಂಗಳೂರಿನಲ್ಲಿ ಸಭೆ ಸೇರಿದ್ದು, ವಸ್ತ್ರ ಸಂಹಿತೆ ಪಾಲನೆ, ಹಿಂದು ಧಾರ್ಮಿಕ ಶಿಕ್ಷಣ ನೀಡುವ ಕುರಿತಾಗಿ ನಿರ್ಣಯ ತೆಗೆದುಕೊಂಡಿದ್ದಾರೆ.

ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಇದರ ರಾಜ್ಯ ಸಂಯೋಜಕ ಮೋಹನ್ ಗೌಡ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ ಅಸ್ತಿತ್ವಕ್ಕೆ ಬಂದಿದೆ. ಹಿಂದು ಧರ್ಮ, ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕು ಮತ್ತು ಅದನ್ನು ಇಂದಿನ ಮಕ್ಕಳಿಗೆ ಹೇಳಿಕೊಡುವ ಕೆಲಸ ಆಗಬೇಕಾಗಿದೆ ಎಂಬ ಗುರಿಯನ್ನಿಟ್ಟು ಪರಿಷತ್ ಸ್ಥಾಪನೆ ಮಾಡಲಾಗಿದೆ.

ದೇವಸ್ಥಾನಗಳ ಪಾವಿತ್ರ್ಯತೆ, ವಸ್ತ್ರ ಸಂಹಿತೆ, ದೇವಾಲಯಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿದೆ. ಪ್ರತೀ ದೇವಾಲಯಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು, ಧಾರ್ಮಿಕ ಪಾಠದ ಮೂರು ತಿಂಗಳ ಕೋರ್ಸ್ ಸಿದ್ಧಪಡಿಸಲಾಗಿದ್ದು, ಹಿಂದೂ‌ ಧರ್ಮ, ದೇವರುಗಳ, ಆಚಾರ ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳಿಕೊಡಲು ಸಿದ್ಧತೆ ನಡೆದಿದೆ. ವಾರಕ್ಕೆ ಒಂದು ದಿನ ಪ್ರತಿ ದೇವಾಲಯಗಳಲ್ಲಿ ಧಾರ್ಮಿಕ ಪಾಠ ಮಾಡಿಸಲು ನಿರ್ಣಯ ಮಾಡಲಾಗಿದೆ.

ಮಸೀದಿಗಳಲ್ಲಿ ಮದ್ರಸ, ಚರ್ಚ್ ಗಳಲ್ಲಿ ಧರ್ಮ ಬೋಧನೆ ಇರುವಂತೆ ದೇವಸ್ಥಾನಗಳಲ್ಲಿ ಹಿಂದು ಧರ್ಮದ ಮೌಲ್ಯಗಳನ್ನು ಹೇಳಿಕೊಡುವುದಕ್ಕಾಗಿ ದೇವಸ್ಥಾನದ ಪ್ರಮುಖರು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚು ದೇವಾಲಯ, ದೈವಸ್ಥಾನಗಳ ವಿಶ್ವಸ್ಥರು ಭಾಗವಹಿಸಿದ್ದರು. ಇದಲ್ಲದೆ, ಎಲ್ಲ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾಗಿ ವಸ್ತ್ರ ಸಂಹಿತೆ ಜಾರಿಗೆ ತರಲು ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿದೆ. ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 100 ದೇವಾಲಯಗಳಲ್ಲಿ ಇದೇ ಫೆಬ್ರವರಿ ತಿಂಗಳ ಬಳಿಕ ಸಾಂಪ್ರದಾಯಿಕ ವಸ್ತ್ರಗಳನ್ನು ಮಾತ್ರ ಉಟ್ಟು ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ವಸ್ತ್ರ ಸಂಹಿತೆಯನ್ನು ಕಡ್ಡಾಯ ಮಾಡಲು ದೇವಸ್ಥಾನಗಳ ವಿಶ್ವಸ್ಥರು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ. ಆರಂಭಿಕ ಹಂತದಲ್ಲಿ ವಸ್ತ್ರಸಂಹಿತೆಯ ಫಲಕವನ್ನು ದೇವಸ್ಥಾನಗಳಲ್ಲಿ ಅಳವಡಿಸುವುದು, ಭಕ್ತಾದಿಗಳಿಗೆ ವಸ್ತ್ರಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು, ಅಸಭ್ಯ ಉಡುಪು ಧರಿಸಿ ಬಂದರೆ ಪರ್ಯಾಯ ಸಾತ್ವಿಕ ಉಡುಪು ನೀಡಲು ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡುವುದು, ಆರತಿ ಸಮಯದಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ಪ್ರಮುಖರು ಅಭಿಪ್ರಾಯ ನೀಡಿದ್ದಾರೆ. ಸಭೆಯಲ್ಲಿ ಕಟೀಲು ದೇಗುಲದ ಶ್ರೀಹರಿ ನಾರಾಯಣ ಆಸ್ರಣ್ಣ, ಮಂಗಳೂರಿನ ರಾಮಕೃಷ್ಣ ಮಠದ ಜಿತಕಾಮನಂದಜಿ, ಮೋಹನ್ ಗೌಡ, ರಾಜಶೇಖರ ಹೆಬ್ಬಾರ, ರಮಾನಂದ ಗೌಡ, ಚಂದ್ರ ಮೊಗೇರ ಮತ್ತಿತರರು ಇದ್ದರು.

Mangalore Weekly once religious classes to be taken to children in the temple says matt and religious institutions.