Fishermen, Brijesh Chowta, BJP Mangalore: ಚುನಾವಣಾ ಕಣಕ್ಕಿಳಿದ ‘ಸೈನಿಕ’ನಿಗೆ ಬಡ ಮಹಿಳೆಯರಿಂದ ಹಾರೈಕೆ ; ನಾಮಪತ್ರದ ಇಡುಗಂಟು ನೀಡಿ ಗೆದ್ದು ಬರಲೆಂದು ಹರಸಿದ ನಾರೀಶಕ್ತಿ

03-04-24 07:04 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಎ.4ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವಾಗಲೇ ಮೀನುಗಾರ ಮಹಿಳೆಯರು, ಹೂವು ಮಾರುವ ಮಹಿಳೆಯರು ಬಿಜೆಪಿ ಕಚೇರಿಗೆ ಬಂದು ವಿಶೇಷ ರೀತಿಯಲ್ಲಿ ಹಾರೈಕೆ ಮಾಡಿದ್ದಾರೆ.

ಮಂಗಳೂರು, ಎ.3: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಎ.4ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವಾಗಲೇ ಮೀನುಗಾರ ಮಹಿಳೆಯರು, ಹೂವು ಮಾರುವ ಮಹಿಳೆಯರು ಬಿಜೆಪಿ ಕಚೇರಿಗೆ ಬಂದು ವಿಶೇಷ ರೀತಿಯಲ್ಲಿ ಹಾರೈಕೆ ಮಾಡಿದ್ದಾರೆ.

ಬಂಟ್ಸ್ ಹಾಸ್ಟೆಲಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬಡ ಮೀನುಗಾರ ಮಹಿಳೆಯರು, ಹೂವು ಮಾರುವ ಮಹಿಳೆಯರು ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡುವ ರಜನಿ ಶೆಟ್ಟಿ ಮತ್ತಿತರರು ಸೇರಿ ಬೃಜೇಶ್ ಚೌಟ ಅವರಿಗೆ ಆರತಿ ಎತ್ತಿ ಹಣೆಗೆ ಕುಂಕುಮ ಇಟ್ಟು ಆಶೀರ್ವಾದ ಮಾಡಿದ್ದಾರೆ. ಅಲ್ಲದೆ, ತಾವೇ ದುಡಿದು ಸಂಗ್ರಹಿಸಿದ ಇಡುಗಂಟನ್ನು ಅಭ್ಯರ್ಥಿಗೆ ನೀಡಿದ್ದು ಇದೇ ಹಣವನ್ನು ನಾಮಪತ್ರ ಸಲ್ಲಿಕೆಗೆ ಬಳಸುವಂತೆ ಹೇಳಿದ್ದಾರೆ. ಹತ್ತು ಮಂದಿ ಬಡ ಮಹಿಳೆಯರು ತಾವು ದುಡಿದಿಟ್ಟ ಹಣವನ್ನು ಚುನಾವಣಾ ಕಣಕ್ಕೆ ಇಳಿದಿರುವ ಮಾಜಿ ಸೈನಿಕನ ಚುನಾವಣಾ ಠೇವಣಿಯೆಂದು ನೀಡಿದ್ದು ವಿಶೇಷ.

ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ.ಬೃಜೇಶ್ ಚೌಟ, ಇಂದು ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿ. ಶಿವಾಜಿ ಮಹಾರಾಜರ ಪ್ರೇರಣೆಯಂತೆ ಹಿಂದುತ್ವದ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರವನ್ನು ಪ್ರತಿನಿಧಿಸಲು ಮಾಜಿ ಸೈನಿಕನಿಗೆ ಅವಕಾಶ ನೀಡಿದ್ದಾರೆ. ನಾರೀಶಕ್ತಿ, ಮಾತೃಶಕ್ತಿಯನ್ನು ಗೌರವಿಸುವ ಬಿಜೆಪಿಗೆ ಇಂದು ಮಾತೆಯರು ಆಶೀರ್ವಾದ ಮಾಡುವ ಮೂಲಕ ನಾರೀ ಶಕ್ತಿಯನ್ನು ಪ್ರಶ್ನಿಸಿದವರಿಗೆ ಸೂಕ್ತ ಉತ್ತರ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಸಮಾಜ ಸೇವಕಿ ರಜನಿ ಶೆಟ್ಟಿ, ಯೋಧನಾಗಿ ದೇಶ ಸೇವೆ ಮಾಡಿದ್ದ ಬೃಜೇಶ್ ಚೌಟರನ್ನು ಭಾರತ ಮಾತೆ ತನ್ನ ಸೇವೆಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಸಂಸದರನ್ನಾಗಿಸಬೇಕು. ಈ ಕಾರಣಕ್ಕೆ ನಾವು ದುಡಿದ ಹಣವನ್ನು ದೇಣಿಗೆಯಾಗಿ ನೀಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಪಕ್ಷದ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಪೂಜಾ ಪೈ, ಪಕ್ಷದ ಕೋಶಾಧಿಕಾರಿ ಸಂಜಯ ಪ್ರಭು, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಹಿರಿಯ ನಾಯಕರಾದ ಜಗದೀಶ ಶೇಣವ ಉಪಸ್ಥಿತರಿದ್ದರು.

ಚೌಟ ದಕ್ಕೆಗೆ ಹೋದ ವಿಡಿಯೋ ವೈರಲ್

ಎರಡು ದಿನಗಳ ಹಿಂದೆ ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ತೆರಳಿದ್ದ ಬೃಜೇಶ್ ಚೌಟ ಅವರು ಮೀನುಗಾರ ಮಹಿಳೆಯರು, ಅಲ್ಲಿನ ಕಾರ್ಮಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮೀನುಗಾರಿಕೆಯಲ್ಲಿ ತೊಡಗಿದ್ದ ಇತರ ಕಾರ್ಮಿಕರನ್ನೂ ಕಂಡು ಮಾತನಾಡಿಸಿದ್ದರು. ಹಲವರು ಚೌಟರ ಜೊತೆಗೆ ನಿಂತು ಸೆಲ್ಫಿ ಫೋಟೊ ಕ್ಲಿಕ್ಕಿಸಿದ್ದರೆ, ಕೆಲವು ಹಿರಿಯ ಮಹಿಳೆಯರು ಆತ್ಮೀಯವಾಗಿ ಅಪ್ಪಿಕೊಂಡು ಹರಸಿದ್ದರು. ಇದರ ವಿಡಿಯೋ ಭಾರೀ ವೈರಲ್ ಆಗಿತ್ತು.

Fishermen women take arati at Brijesh Chowta at BJP office in Mangalore ae he will be filing his nomination on april 4th.