Satish Kumpala, Narayana Guru Circle, Mangalore; ಹಿಂದೂ ಸಮಾಜ, ಬಿಜೆಪಿಯಿಂದ ನಾರಾಯಣ ಗುರು ಸರ್ಕಲ್ ಆಗಿದೆ, ಗುರುಗಳ ವೃತ್ತ ನಾವೇ ಮಾಡಿದ್ದೆಂದು ಕೆಲವರು ಸರ್ಟಿಫಿಕೇಟ್ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ; ಸತೀಶ್ ಕುಂಪಲ 

17-04-24 10:33 pm       Mangalore Correspondent   ಕರಾವಳಿ

ಹಿಂದೂ ಸಮಾಜದ ಹೋರಾಟ, ಬಿಜೆಪಿ ಸರ್ಕಾರದ ಪ್ರಯತ್ನದಿಂದಾಗಿ ಮಂಗಳೂರಿನ ಲೇಡಿಹಿಲ್ ಸರ್ಕಲ್ ಇಂದು ನಾರಾಯಣ ಗುರು ವೃತ್ತವಾಗಿ ಮಾರ್ಪಟ್ಟಿದೆ. ಆದರೆ ಇಂದು ಕೆಲವರು ನಾರಾಯಣ ಗುರುಗಳ ವೃತ್ತವನ್ನು ನಾವೇ ಮಾಡಿದ್ದೆಂದು ಸರ್ಟಿಫಿಕೇಟ್ ಪಡೆಯಲು ಹೊರಟಿದ್ದಾರೆ.

ಉಳ್ಳಾಲ, ಎ.17: ಹಿಂದೂ ಸಮಾಜದ ಹೋರಾಟ, ಬಿಜೆಪಿ ಸರ್ಕಾರದ ಪ್ರಯತ್ನದಿಂದಾಗಿ ಮಂಗಳೂರಿನ ಲೇಡಿಹಿಲ್ ಸರ್ಕಲ್ ಇಂದು ನಾರಾಯಣ ಗುರು ವೃತ್ತವಾಗಿ ಮಾರ್ಪಟ್ಟಿದೆ. ಆದರೆ ಇಂದು ಕೆಲವರು ನಾರಾಯಣ ಗುರುಗಳ ವೃತ್ತವನ್ನು ನಾವೇ ಮಾಡಿದ್ದೆಂದು ಸರ್ಟಿಫಿಕೇಟ್ ಪಡೆಯಲು ಹೊರಟಿದ್ದಾರೆ. ಪ್ರಧಾನಿ ಮೋದಿ ಗುರುಗಳಿಗೆ ಮಾಲಾರ್ಪಣೆ ಮಾಡಿದ ವಿಚಾರದಲ್ಲಿ ರಾಜಕೀಯ ಮಾಡುವವರು ಸಿದ್ಧರಾಮಯ್ಯರನ್ನ ಕರೆಸಿ ಗುರುಗಳಿಗೆ ಮಾಲಾರ್ಪಣೆ ಮಾಡಿಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. 

ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ಬುಧವಾರ ಕೊಲ್ಯದ ನಾರಾಯಣ ಗುರು ಮಂದಿರದಲ್ಲಿ ನಡೆದ ಹಿಂದುಳಿದ ವರ್ಗಗಳ ಸಾಮಾಜಿಕ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಲೇಡಿಹಿಲ್ಲನ್ನು ನಾರಾಯಣ ಗುರು ವೃತ್ತವಾಗಿಸಲು ಸಾರ್ವಜನಿಕವಾಗಿ ಅರ್ಜಿಗಳನ್ನ ಸಲ್ಲಿಸಲಾಗಿತ್ತು. ವಿಶ್ವ ಹಿಂದು ಪರಿಷತ್, ಬಜರಂಗದಳದ ಪ್ರಯತ್ನ, ಹಿಂದೂ ಸಮಾಜದ ಒತ್ತಾಸೆಗೆ ಮಣಿದು ಅಂದಿನ ರಾಜ್ಯ ಬಿಜೆಪಿ ಸರಕಾರ, ಸ್ಥಳೀಯ ಬಿಜೆಪಿ ಸಂಸದರು, ಶಾಸಕರು, ಮೇಯರ್, ಮೂಡಾ ಅಧ್ಯಕ್ಷರ ಪ್ರಯತ್ನದಿಂದ ಗುರುಗಳ ವೃತ್ತ ನಿರ್ಮಾಣ ಮಾಡಲು ಸಾಧ್ಯವಾಗಿದೆ. 

ಆದರೆ ಇಂದು ಕೆಲವರು ಗುರುಗಳ ವೃತ್ತ ನಾವೇ ಮಾಡಿದ್ದೆಂದು ಹೇಳಿ ಸರ್ಟಿಫಿಕೇಟ್ ಪಡೆಯಲು ಹಪ ಹಪಿಸುತ್ತಿದ್ದಾರೆ. ಬಿಜೆಪಿ ಮತ್ತು ಪಕ್ಷದ ನೇತೃತ್ವ ವಹಿಸಿದ ನಾಯಕರಿಗೆ ಇದನ್ನೆಲ್ಲ ಎದುರಿಸುವ ಶಕ್ತಿ ಇದೆ. ಕಳೆದ ಹಲವಾರು ವರ್ಷಗಳಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವಾಗಲೇ ಇಂತಹ ಸಾವಿರಾರು ಸವಾಲು, ನೋವು, ಬೇಸರಗಳನ್ನ ಎದುರಿಸಿದ್ದೇನೆ. ಜನತೆ ಜಾತಿ ನೋಡದೆ ಒಗ್ಗಟ್ಟಾಗಿ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಗೆಲ್ಲಿಸಬೇಕೆಂದು ಕರೆ ನೀಡಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಹಿಂದುಳಿದ ವರ್ಗದವರು ಯಾವ ಮಟ್ಟಿಗೆ ಬೆಳೆಯಬಹುದೆಂಬುದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯೇ ನಿದರ್ಶನ. ಮೋದಿ ಪ್ರಧಾನಿಯಾದರೆ ಗೋಧ್ರಾ ಹೊತ್ತಿ ಉರಿಯುತ್ತೆ, ಮುಸಲ್ಮಾನರು, ಕ್ರೈಸ್ತರು ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದ ಸಿದ್ದರಾಮಯ್ಯ ಅವರು ತಮ್ಮ ಮಾತು ಉಳಿಸಲು ಅವರೇ ದೇಶ ಬಿಟ್ಟು ಹೋಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಥ ನಾಯಕನನ್ನ ಲೋಕಸಭೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ನಮ್ಮ ಅಭ್ಯರ್ಥಿ ಬ್ರಿಜೇಶ್ ಚೌಟರು ಮೂರೂವರೆ ಲಕ್ಷ ಅಂತರದಿಂದ ಗೆಲುವನ್ನ ಸಾಧಿಸಲಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಮಂಗಳೂರು ಮಂಡಲ ಅಧ್ಯಕ್ಷ ಗಣೇಶ್ ಸುವರ್ಣ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ಶಶಿಧರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ, ಮಂಗಳೂರು ಮಂಡಲ ಉಸ್ತುವಾರಿ ದಿನೇಶ್ ಅಮ್ಟೂರು, ರಾಜ್ಯ ಮೀನುಗಾರರ ಪ್ರಕೋಷ್ಠ ಸಹ ಸಂಚಾಲಕ ಯಶವಂತ್ ಅಮೀನ್, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿ ರವಿ ಸೋವೂರು, ಬಿಜೆಪಿ‌ ಮಂಡಲ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಪ್ರಮುಖರಾದ ಗಣೇಶ್ ಕಾಪಿಕಾಡು ಉಪಸ್ಥಿತರಿದ್ದರು.

Narayan guru circle happened becuase of BJP, some organisations have posing saying the circle happened because of them said Satish Kumpala in Mangalore BJP program held at Ullal.