Rain in Mangalore, Udupi: ದಕ್ಷಿಣ ಕನ್ನಡ ಜಿಲ್ಲೆಗೆ ಕಡೆಗೂ ದಯೆ ತೋರಿದ ವರುಣ ; ಬೆಳ್ತಂಗಡಿ, ಮಂಗಳೂರಿನಲ್ಲಿ ಸಿಡಿಲು ಮಳೆ, ಬಿಸಿಲ ಧಗೆಯಿಂದ ಬಳಲಿದ್ದ ಇಳೆಗೆ ತಂಪೆರೆದ ಮಳೆರಾಯ  

20-04-24 12:12 pm       Mangalore Correspondent   ಕರಾವಳಿ

ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕಡೆ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಮಂಗಳೂರು ನಗರ ಭಾಗದಲ್ಲಿ  ನಸುಕಿನ ನಾಲ್ಕರಿಂದ 5 ಗಂಟೆ ವೇಳೆಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದೆ.

ಮಂಗಳೂರು, ಎ.20: ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕಡೆ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಮಂಗಳೂರು ನಗರ ಭಾಗದಲ್ಲಿ  ನಸುಕಿನ ನಾಲ್ಕರಿಂದ 5 ಗಂಟೆ ವೇಳೆಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದೆ. ಭಾರೀ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆ ಏಕಾಏಕಿ ಸುರಿದ ಮಳೆಯಿಂದ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. 

ಸಿಡಿಲಿನ ಅಬ್ಬರಕ್ಕೆ ಮಂಗಳೂರಿನಲ್ಲಿ ವಿದ್ಯುತ್‌ ಕಡಿತಗೊಂಡಿತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಮುಂದಿನ ಮೂರು ದಿನ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಸುಳ್ಯ ಕಲ್ಮಡ್ಕ ಗ್ರಾಮದ ಮುಚ್ಚಿಲ ಕಜೆ ಅಬ್ಬಾಸ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಹಟ್ಟಿಯಲ್ಲಿದ್ದ ಕರು ಬಲಿಯಾಗಿದೆ. ಮನೆಯ ವಯರಿಂಗ್, ಸ್ವಿಚ್ ಬೋರ್ಡ್ ಗಳು ಸಂಪೂರ್ಣ ಸುಟ್ಟು ಹೋಗಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. 

ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರಿನ ಬಹುತೇಕ ಭಾಗದಲ್ಲಿ ಸಿಡಿಲು ಸಹಿತ ಉತ್ತಮ ಮಳೆಯಾಗಿತ್ತು. ಬೆಳ್ತಂಗಡಿಯ ಸೋಮಂತಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ರ‌ಸ್ತೆಯನ್ನು ಸಂಪೂರ್ಣ ಅಗೆದು ಹಾಕಲಾಗಿದ್ದು, ಮಳೆಯಿಂದಾಗಿ ಕೆಸರು ರಸ್ತೆಯಲ್ಲೇ ಜನ ಪರದಾಡುವ ಸ್ಥಿತಿಯಾಗಿದೆ. 

ಮಂಗಳೂರಿನಲ್ಲಿ ಹಂಪನಕಟ್ಟೆ ಬಳಿ ಭಾರಿ ಗಾತ್ರದ ಮರ ನೆಲಕ್ಕೆ ಉರುಳಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಜಖಂಗೊಂಡಿವೆ. ವಾಹನದಲ್ಲಿ ಯಾರೂ ಇಲ್ಲದೇ ಇರೋದರಿಂದ ಜನಸಾಮಾನ್ಯರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ.

Various parts of Mangalore, Udupi receive first summer showers and heavy lightening. Residents of Dakshina Kannada and Udupi districts breathed a sigh of relief as substantial rainfall graced the region in the early hours of Saturday, April 20.