Mangalore suicide, College student: ಬಿಇ ಇಂಜಿನಿಯರಿಂಗ್ ಓದುತ್ತಿದ್ದ ಉಡುಪಿ ಮೂಲದ ವಿದ್ಯಾರ್ಥಿ ಮಂಗಳೂರಿನಲ್ಲಿ ಆತ್ಮಹತ್ಯೆ

08-05-24 08:11 pm       Mangalore Correspondent   ಕರಾವಳಿ

ನಗರದ ಎಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ಬೀಬಿ ಅಲಾಬಿ ರಸ್ತೆಯ ಸರಕಾರಿ ಹಿಂದುಳಿದ ವರ್ಗದ ಹಾಸ್ಟೆಲ್ ನಲ್ಲಿ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಗಳೂರು, ಮೇ.8: ನಗರದ ಎಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ಬೀಬಿ ಅಲಾಬಿ ರಸ್ತೆಯ ಸರಕಾರಿ ಹಿಂದುಳಿದ ವರ್ಗದ ಹಾಸ್ಟೆಲ್ ನಲ್ಲಿ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉಡುಪಿ ಜಿಲ್ಲೆಯ ಉಪ್ಪೂರು ಮೂಲದ ನಿತೇಶ್ ರಾವ್ (20) ಮೃತ ಯುವಕ. ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ನಿತೇಶ್, ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದ. ಇದರಿಂದ ಸ್ವಲ್ಪ ಖಿನ್ನನಾಗಿದ್ದು ಹಾಸ್ಟೆಲ್ ನಲ್ಲಿ ಇತರರೊಂದಿಗೆ ಬೆರೆಯದೇ ಒಬ್ಬಂಟಿಯಾಗಿರುತ್ತಿದ್ದ. ಇಂದು ಬೆಳಗ್ಗೆ 10.30ರ ವೇಳೆಗೆ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡದ ಕೆಳಗಡೆ ಇದ್ದಾಗ ಈತ ಮೇಲ್ಭಾಗದ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷಗಳಿಂದ ಮಂಗಳೂರಿನಲ್ಲಿದ್ದು ಕಲಿಯುತ್ತಿದ್ದ ನಿತೇಶ್ ತಂದೆ ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ. ಆತ್ಮಹತ್ಯೆಗೆ ಬೇರಾವುದೇ ಕಾರಣ ಇದೆಯೇ ಎನ್ನುವ ಬಗ್ಗೆ ಆತನ ಮೊಬೈಲನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾಯಿ ನೀಡಿದ ದೂರಿನಂತೆ ಬಂದರು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

20 year old student of AJ engineering College comet suicide at hostel in Mangalore. The diseased as been identified as Nitish Rao. It is said that he had failed in two subjects recently and was in depression.