Mangalore News, Traffic police video: ಪೊಲೀಸ್ ವಾಹನಕ್ಕೇ ಇನ್ಶೂರೆನ್ಸ್ ಇಲ್ವಾ? ವಿಡಿಯೋ ವೈರಲ್ ಆಗುತ್ತಲೇ ಕಮಿಷನರ್ ಸ್ಪಷ್ಟನೆ, ಎಡವಟ್ಟಿಗೆ ಕಾರಣವಾಯ್ತು ಕೆಜಿಐಡಿ ಇನ್ಶೂರೆನ್ಸ್ ! ವಿಡಿಯೋ ಮಾಡಿದ ವ್ಯಕ್ತಿ ಮೇಲೆ ಕೇಸು

17-05-24 09:17 pm       Mangalore Correspondent   ಕರಾವಳಿ

ಟ್ರಾಫಿಕ್ ಪೊಲೀಸರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವುದು, ಫೈನ್ ಹಾಕುವುದು ಸಾಮಾನ್ಯ. ಇದೇ ರೀತಿ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಹೈವೇ ಪೆಟ್ರೋಲಿಂಗ್ ವಾಹನವನ್ನು ರಸ್ತೆ ಬದಿ ನಿಲ್ಲಿಸಿ, ಸಾರ್ವಜನಿಕರ ವಾಹನ ತಪಾಸಣೆ ನಡೆಸುತ್ತಿದ್ದಾಗ, ಇನ್ಶೂರೆನ್ಸ್ ವಿಚಾರದಲ್ಲಿ ಅಧಿಕಾರಿಯನ್ನೇ ಪ್ರಶ್ನಿಸಿದ ವಿಡಿಯೋ ವೈರಲ್ ಆಗಿದೆ.

ಮಂಗಳೂರು, ಮೇ 17: ಟ್ರಾಫಿಕ್ ಪೊಲೀಸರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವುದು, ಫೈನ್ ಹಾಕುವುದು ಸಾಮಾನ್ಯ. ಇದೇ ರೀತಿ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಹೈವೇ ಪೆಟ್ರೋಲಿಂಗ್ ವಾಹನವನ್ನು ರಸ್ತೆ ಬದಿ ನಿಲ್ಲಿಸಿ, ಸಾರ್ವಜನಿಕರ ವಾಹನ ತಪಾಸಣೆ ನಡೆಸುತ್ತಿದ್ದಾಗ, ಇನ್ಶೂರೆನ್ಸ್ ವಿಚಾರದಲ್ಲಿ ಅಧಿಕಾರಿಯನ್ನೇ ಪ್ರಶ್ನಿಸಿದ ವಿಡಿಯೋ ವೈರಲ್ ಆಗಿದೆ. ಪೊಲೀಸರ ವಾಹನಕ್ಕೇ ಇನ್ಶೂರೆನ್ಸ್ ಇಲ್ಲ, ನೀವು ನಮ್ಮಲ್ಲಿ ಏನು ಕೇಳೋದು ಅಂತ ವ್ಯಕ್ತಿಯೊಬ್ಬರು ವಿಡಿಯೋ ಮಾಡಿರುವುದು ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.

ಸ್ಪಷ್ಟನೆ ಹಾಕಿದ ಪೊಲೀಸ್ ಕಮಿಷನರ್

ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮ ಮತ್ತು ಪೊಲೀಸರ ಗ್ರೂಪಿನಲ್ಲಿ ಪೊಲೀಸ್ ಕಮಿಷನರ್ ಸ್ಪಷ್ಟನೆಯನ್ನೂ ಹಾಕಿದರು. ಹೈವೇ ಪೆಟ್ರೋಲಿಂಗ್ ನಡೆಸುತ್ತಿದ್ದ ಕೆಎ 19 ಜಿ 1023 ಸಂಖ್ಯೆಯ ವಾಹನಕ್ಕೆ ಇನ್ಶೂರೆನ್ಸ್ ಇದೆ. ಪೊಲೀಸ್ ಇಲಾಖೆಯ ಎಲ್ಲ ವಾಹನಗಳೂ ಕರ್ನಾಟಕ ಗವರ್ನಮೆಂಟ್ ಇನ್ಶೂರೆನ್ಸ್ ಡಿಪಾರ್ಟ್ಮೆಂಟ್ (ಕೆಜಿಐಡಿ) ವಿಮೆಯನ್ನು ಕಡ್ಡಾಯ ಹೊಂದಿರುತ್ತದೆ. ಕಾಲ ಕಾಲಕ್ಕೆ ವಿಮೆ ನವೀಕರಿಸಲಾಗುತ್ತದೆ. ವಿಮೆ ನವೀಕರಣಗೊಳ್ಳದ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತೋರಿಸಲಾದ ಇಲಾಖೆಯ ಹೆದ್ದಾರಿ ಗಸ್ತು ವಾಹನದಲ್ಲಿ 13-10-2025ರ ವರೆಗೆ ವಿಮಾ ಅವಧಿ ಮತ್ತು 08-01-2025ರ ವರೆಗೆ ಮಾಲಿನ್ಯ ತಪಾಸಣಾ ಅವಧಿ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ವಾಹನ ವಿಮೆ ಮತ್ತು ಮಾಲಿನ್ಯ ತಪಾಸಣೆ ಕುರಿತ ದಾಖಲೆಯನ್ನೂ ಹಾಕಿದ್ದಾರೆ. ವಿಡಿಯೋ ಮಾಡಿರುವ ವ್ಯಕ್ತಿಯ ದ್ವಿಚಕ್ರ ವಾಹನದಲ್ಲಿ ವಾಯು ಮಾಲಿನ್ಯದ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ 500 ರೂ. ದಂಡ ವಿಧಿಸಲಾಗಿದೆ ಎಂದಿದ್ದಾರೆ.

ಇನ್ಶೂರೆನ್ಸ್ ಬಗ್ಗೆ ಎಡವಟ್ಟು ಆಗಿದ್ದೇಕೆ ?

ಸಾಮಾನ್ಯವಾಗಿ ಪೊಲೀಸರು ಸಾರ್ವಜನಿಕರ ವಾಹನಗಳಿಗೆ ಇನ್ಶೂರೆನ್ಸ್ ಇದೆಯೇ, ಮಾಲಿನ್ಯ ತಪಾಸಣೆ ಇದೆಯೇ ಎಂದು ಪರಿಶೀಲನೆ ಮಾಡುವುದಕ್ಕೆ ಸಾರಿಗೆ ಇಲಾಖೆಯ ಪರಿವಾಹನ್ ಏಪ್ ಬಳಕೆ ಮಾಡುತ್ತಾರೆ. ಮೊಬೈಲಿನಲ್ಲೇ ವಾಹನದ ಜಾತಕ ಬರುವುದರಿಂದ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ, ಸವಾರರನ್ನು ದಂಡ ಕಟ್ಟುವಂತೆ ಪೀಡಿಸುತ್ತಾರೆ. ಇದೇ ರೀತಿ ಕಾವೂರಿನಲ್ಲಿ ತನ್ನನ್ನು ಅಡ್ಡಗಟ್ಟಿದ ಪಶ್ಚಿಮ ಸಂಚಾರಿ ಠಾಣೆಯ ಎಎಸ್ಐ ಸೂರಜ್ ಶೆಟ್ಟಿ ಅವರನ್ನು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ತನ್ನ ಮೊಬೈಲಿನಲ್ಲೇ ಅಲ್ಲಿ ನಿಲ್ಲಿಸಿದ್ದ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲಿಂಗ್ ವಾಹನದ ಬಗ್ಗೆ ಚೆಕ್ ಮಾಡಿ, ನಿಮ್ಮ ವಾಹನಕ್ಕೇ ಇನ್ಶೂರೆನ್ಸ್ ಇಲ್ಲ. ಎಕ್ಸ್ ಪೈರ್ ತೋರಿಸ್ತಾ ಇದೆಯೆಂದು ಹೇಳಿ ಪ್ರಶ್ನಿಸಿ, ವಿಡಿಯೋ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಚಲಿತರಾದ ಎಎಸ್ಐ, ಸರಕಾರಿ ವಾಹನಗಳಿಗೆ ಕರ್ನಾಟಕ ಸರಕಾರ ವಿಮೆ ಕಟ್ಟುವುದು, ನಾವಲ್ಲ ಎಂದು ಹೇಳಿ ಏನೋ ಎಡವಟ್ಟು ಆಗಿದೆಯೆಂದ್ಕೊಂಡು ಹಿಂದೆ ಸರಿಯುತ್ತಾರೆ.

ಕೆಜಿಐಡಿ ಇನ್ಶೂರೆನ್ಸ್ ವಾಹನ್ ಏಪ್ ನಲ್ಲಿರಲ್ಲ !

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಕೇಳಿದಾಗ, ಕರ್ನಾಟಕದ ಎಲ್ಲ ಸರಕಾರಿ ನೌಕರರಿಗೂ ಕೆಜಿಐಡಿ ಇನ್ಶೂರೆನ್ಸ್ ಮಾಡಲಾಗುತ್ತದೆ. ವೈಯಕ್ತಿಕ ಮತ್ತು ಸರಕಾರಿ ವಾಹನಗಳಿಗೂ ಅದೇ ಇನ್ಶೂರೆನ್ಸ್. ಕಾಲ ಕಾಲಕ್ಕೆ ಮೆಸೇಜ್ ಬಂದ ಕೂಡಲೇ ನಾವದನ್ನು ರಿನೀವಲ್ ಮಾಡಬೇಕು. ಕೆಜಿಐಡಿ ಇನ್ಶೂರೆನ್ಸ್ ಮಾಹಿತಿಯನ್ನು ಸಾರಿಗೆ ಇಲಾಖೆಯ ಪರಿವಾಹನ್ ಏಪ್ಸ್ ನಲ್ಲಿ ನಮೂದು ಮಾಡುವುದಿಲ್ಲ. ಸಾರಿಗೆ ಇಲಾಖೆಯ ವಾಹನಗಳನ್ನು ಚೆಕ್ ಮಾಡಿದರೂ, ವಾಹನ್ ಏಪ್ಸ್ ನಲ್ಲಿ ಅದರ ಮಾಹಿತಿ ಇರುವುದಿಲ್ಲ. ಇತರೇ ಸಾರ್ವಜನಿಕರು ಜನರಲ್ ಇನ್ಶೂರೆನ್ಸ್ ಅಥವಾ ಇನ್ನಾವುದೇ ಖಾಸಗಿ ಇನ್ಶೂರೆನ್ಸ್ ಕಂಪನಿಗಳಲ್ಲಿ ವಿಮೆ ಮಾಡಿಸುತ್ತಾರೆ. ಅದು ಮಾತ್ರ ವಾಹನ್ ಏಪ್ ನಲ್ಲಿ ನಮೂದು ಆಗುವುದರಿಂದ ಜನರು ಸರಕಾರಿ ವಾಹನಕ್ಕೆ ಹೋಲಿಸಿ ನೋಡಿ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ.

ವಿಡಿಯೋ ವೈರಲ್ ಮಾಡಿದ್ದಕ್ಕೆ ಕೇಸು

ಇದೇ ವೇಳೆ, ಸರಕಾರಿ ಕರ್ತವ್ಯದಲ್ಲಿದ್ದ ತನ್ನ ಮತ್ತು ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಬರುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆಂದು ಎಎಸ್ಐ ಸೂರಜ್ ಶೆಟ್ಟಿ ಕಾವೂರು ಠಾಣೆಗೆ ದೂರು ನೀಡಿದ್ದಾರೆ. ಕಾವೂರು ಠಾಣೆಯಲ್ಲಿ ಐಟಿ ಏಕ್ಟ್ ನಡಿ ಶಶಾಂಕ್ ಎನ್ನುವ ಯುವಕನ ವಿರುದ್ಧ ಕೇಸು ದಾಖಲಿಸಿದ್ದಾರೆ. ಮೇ 16ರಂದು ಕಾವೂರು ಬಳಿ ಘಟನೆ ನಡೆದಿದ್ದು, ಮೇ 17ರಂದು ವಿಡಿಯೋ ವೈರಲ್ ಆಗಿತ್ತು. ರಸ್ತೆ ಬದಿ ವಾಹನ ನಿಲ್ಲಿಸಿ, ದಂಡ ಪೀಕಿಸುವ ಟ್ರಾಫಿಕ್ ಪೊಲೀಸರಿಗೆ ವಿಡಿಯೋ ಮಂಗಳಾರತಿ ಮಾಡಿಸಿದಂತಿತ್ತು. ಆದರೆ, ಅಸಲಿ ವಿಚಾರ ತಿಳಿಯುತ್ತಲೇ ಇಂಗು ತಿಂದ ಮಂಗನಂತಾಗುವ ಸ್ಥಿತಿಯಾಗಿದೆ.

Mangalore Traffic police video goes viral over insurance expiry, case filed against rider for shooting video. A biker made a video of a highway patrol car and stated that the car insurance has been expired checking on the VAAHAN app. But the police commissioner has stated that the police car insurance will be done by KJID.