Mangalore, Manjeshwar Vitla news: ಪತ್ನಿ ಮನೆಯಲ್ಲಿ ಅನುಮಾನಾಸ್ಪದ ಸಾವು ; 15 ದಿನಗಳ ಬಳಿಕ ಕನ್ಯಾನ ಮಸೀದಿ ದಫನ ಸ್ಥಳದಿಂದ ಕಳೇಬರ ಮೇಲಕ್ಕೆತ್ತಿದ ಪೊಲೀಸರು, ಸೋದರನ ದೂರಿಗೆ ಸ್ಪಂದಿಸಿದ ಕೋರ್ಟ್

24-05-24 02:34 pm       Mangalore Correspondent   ಕರಾವಳಿ

ಇತ್ತೀಚೆಗೆ ಮಂಜೇಶ್ವರದ ಸುಂಕದಕಟ್ಟೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಸಾವಿನಲ್ಲಿ ಅನುಮಾನ ವ್ಯಕ್ತಗೊಂಡ ಕಾರಣ ನ್ಯಾಯಾಲಯದ ಆದೇಶದಂತೆ ಮಂಜೇಶ್ವರ-ವಿಟ್ಲ ಪೊಲೀಸರು ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೃತದೇಹ ಮೇಲಕ್ಕೆತ್ತಿ ತನಿಖೆಗೆ ಮುಂದಾಗಿದ್ದಾರೆ.

ಮಂಗಳೂರು, ಮೇ.24: ಇತ್ತೀಚೆಗೆ ಮಂಜೇಶ್ವರದ ಸುಂಕದಕಟ್ಟೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಸಾವಿನಲ್ಲಿ ಅನುಮಾನ ವ್ಯಕ್ತಗೊಂಡ ಕಾರಣ ನ್ಯಾಯಾಲಯದ ಆದೇಶದಂತೆ ಮಂಜೇಶ್ವರ-ವಿಟ್ಲ ಪೊಲೀಸರು ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೃತದೇಹ ಮೇಲಕ್ಕೆತ್ತಿ ತನಿಖೆಗೆ ಮುಂದಾಗಿದ್ದಾರೆ. ಶವ ಮೇಲಕ್ಕೆತ್ತಿ ಮರುತನಿಖೆ ನಡೆಸುತ್ತಿರುವ ಅಪರೂಪದ ಪ್ರಕರಣ ಇದಾಗಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ನಿವಾಸಿ ಅಶ್ರಫ್ (44), ಪಕ್ಕದ ಕಾಸರಗೋಡು ಜಿಲ್ಲೆಯ  ಮಂಜೇಶ್ವರ ಠಾಣೆ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಪತ್ನಿಯ ಜೊತೆ ವಾಸವಿದ್ದು ಗೂಡಂಗಡಿ ವ್ಯವಹಾರ ನಡೆಸುತ್ತಿದ್ದರು. ಮೇ 5ರಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದ ಅಶ್ರಫ್ ಅವರು ಮರುದಿನ ಮೇ 6ರ ಬೆಳಗ್ಗೆ ಮೃತಪಟ್ಟಿದ್ದರು. 

ಆದರೆ ತರಾತುರಿಯಲ್ಲಿ ಪತ್ನಿ ಕಡೆಯವರು ಅಶ್ರಫ್ ಮೃತದೇಹವನ್ನು ಕನ್ಯಾನದ ಜುಮ್ಮಾ ಮಸೀದಿ ಆವರಣದ ದಫನ ಭೂಮಿಗೆ ತಂದು ಅಂತ್ಯಕ್ರಿಯೆ ನಡೆಸಿದ್ದರು. ಇದಕ್ಕೆ ಪತಿಯ ಸಂಬಂಧಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು ಸಾವಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ‌

ಈ ಬಗ್ಗೆ ಮೃತ ವ್ಯಕ್ತಿಯ ಅಣ್ಣ ಮಹಾರಾಷ್ಟ್ರದ ಪೂನಾದಲ್ಲಿ ನೆಲೆಸಿರುವ ಇಬ್ರಾಹಿಂ ಅವರು, ತಮ್ಮನ ಸಾವು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿ ಮಂಜೇಶ್ವರ ಪೊಲೀಸರಿಗೆ ಮರು ತನಿಖೆ ಮಾಡುವಂತೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿ ನ್ಯಾಯಾಲಯದ ಆದೇಶ ಪಡೆದ ಮಂಜೇಶ್ವರ ಪೊಲೀಸರು ಮಂಗಳೂರು ಯೇನಪೋಯ ಆಸ್ಪತ್ರೆಯ ಫಾರೆನ್ಸಿಕ್ ತಜ್ಞರು, ಬಂಟ್ವಾಳ ತಹಶೀಲ್ದಾರ್ ಮತ್ತು ವಿಟ್ಲ ಪೊಲೀಸರ ಸಹಕಾರದಲ್ಲಿ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದಿಂದ ಅಶ್ರಫ್ ಅವರ ಕಳೇಬರವನ್ನು 15 ದಿನಗಳ ನಂತರ ಮೇಲಕ್ಕೆತ್ತಿದ್ದಾರೆ. ಸುದ್ಧಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಕುತೂಹಲಗೊಂಡಿದ್ದಾರೆ. ಅಶ್ರಫ್ ಸಾವಿನ ಸತ್ಯಾಂಶ ತನಿಖೆಯಲ್ಲಿ ಬಯಲಾಗಬೇಕಿದೆ.

Manjeshwar and Vitla police exhumed a body buried 18 days ago, as the relatives of the deceased had lodged a complaint expressing suspicions about his death, at Bandithadaka near Kanyana. The deceased person is identified as Ashraf (44), a resident of Marjipalla in Sunkadakatte which falls under the Manjeshwara Police limits.