Mangalore Namaz, Sharan Pumpwell, Kadri police: ರಸ್ತೆ ಮಧ್ಯೆ ನಮಾಜ್ ಹೆಸರಲ್ಲಿ ಎಫ್ಐಆರ್ ; ಮುಸ್ಲಿಂ ನಾಯಕರ ಒತ್ತಡ ಬೆನ್ನಲ್ಲೇ ಬಿ ರಿಪೋರ್ಟ್, ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ಮೇಲೆ ಮತ್ತೊಂದು ಕೇಸು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ !

30-05-24 10:32 pm       Mangalore Correspondent   ಕರಾವಳಿ

ಮಸೀದಿ ಆವರಣದ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಪ್ರತಿಯಾಗಿ ಸುಮೊಟೋ ಕೇಸು ದಾಖಲಿಸಿದ ಪೊಲೀಸರು ಕಾಂಗ್ರೆಸಿನ ಮುಸ್ಲಿಂ ಮುಖಂಡರು ಮತ್ತು ಎಸ್ಡಿಪಿಐ ಆಕ್ರೋಶದ ಬೆನ್ನಲ್ಲೇ ಅದನ್ನು ಬಿ ರಿಪೋರ್ಟ್ ಹಾಕಿದ್ದಾಗಿ ಹೇಳಿ, ಪರೋಕ್ಷವಾಗಿ ಪ್ರಕರಣವನ್ನೇ ಹಿಂಪಡೆದಿದ್ದಾರೆ.

ಮಂಗಳೂರು, ಮೇ 30: ಮಸೀದಿ ಆವರಣದ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಪ್ರತಿಯಾಗಿ ಸುಮೊಟೋ ಕೇಸು ದಾಖಲಿಸಿದ ಪೊಲೀಸರು ಕಾಂಗ್ರೆಸಿನ ಮುಸ್ಲಿಂ ಮುಖಂಡರು ಮತ್ತು ಎಸ್ಡಿಪಿಐ ಆಕ್ರೋಶದ ಬೆನ್ನಲ್ಲೇ ಅದನ್ನು ಬಿ ರಿಪೋರ್ಟ್ ಹಾಕಿದ್ದಾಗಿ ಹೇಳಿ, ಪರೋಕ್ಷವಾಗಿ ಪ್ರಕರಣವನ್ನೇ ಹಿಂಪಡೆದಿದ್ದಾರೆ. ಇದೇ ವೇಳೆ, ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮೇಲೆ ಕೋಮು ದ್ವೇಷ ಹರಡಿದ್ದಾರೆಂದು ಹೇಳಿ ಮತ್ತೊಂದು ಕೇಸು ಹಾಕಿದ್ದಾರೆ.

ತಾಂತ್ರಿಕವಾಗಿ ನೋಡಿದರೆ, ಒಂದು ಎಫ್ಐಆರ್ ದಾಖಲಿಸಿದ ನಂತರ ಅದನ್ನು ರದ್ದುಪಡಿಸಲು ಆಗುವುದಿಲ್ಲ. ಪ್ರಕರಣದಲ್ಲಿ ಸಾಕ್ಷ್ಯ ಸಿಗದೇ ಇದ್ದರೆ ಬಿ ರಿಪೋರ್ಟ್ ಹಾಕಿ, ಪ್ರಕರಣ ಕೊನೆಗೊಳಿಸಬಹುದು. ಅದು ಬಿಟ್ಟರೆ ಹೈಕೋರ್ಟ್ ಮೆಟ್ಟಿಲೇರಿ ಪ್ರಕರಣ ರದ್ದುಗೊಳಿಸಲು ಸಾಧ್ಯವಿದೆ. ಆದರೆ, ಪೊಲೀಸರು ಇಲ್ಲಿ ಸುಮೊಟೋ ಕೇಸು ಹಾಕಿ, ಅದನ್ನು ಅರ್ಧಕ್ಕೆ ಕೊನೆಗೊಳಿಸಿ ಹಿಂದು – ಮುಸ್ಲಿಮರ ಮಧ್ಯೆ ತಗಾದೆ ತಂದಿಟ್ಟಿದ್ದಾರೆ. ಕಳೆದ ಶುಕ್ರವಾರ ಅಂದರೆ, ಮೇ 24ರಂದು ಮಧ್ಯಾಹ್ನ ಕಂಕನಾಡಿ ಮಸೀದಿ ಆವರಣದ ಹೊರಭಾಗದ ರಸ್ತೆಯಲ್ಲಿ ಕೆಲವು ಯುವಕರು ನಮಾಜ್ ಮಾಡಿದ್ದರ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದು ಸಂಘಟನೆಗಳ ಯುವಕರು ಜಾಲತಾಣದಲ್ಲಿ ಆಗ್ರಹ ಮಾಡಿದ್ದರು.

ಇದೇ ವೇಳೆ, ಬಜರಂಗದಳ ಮುಖಂಡರು, ಮುಂದೆಯೂ ಇಂಥದ್ದೇ ಘಟನೆ ಮರುಕಳಿಸಿದರೆ ನೇರ ಕಾರ್ಯಾಚರಣೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಕದ್ರಿ ಠಾಣೆಗೆ ತೆರಳಿ ಮನವಿ ಕೊಟ್ಟು, ನಡುರಸ್ತೆಯಲ್ಲಿ ನಮಾಜ್ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹ ಮಾಡಿದ್ದರು. ನಾಲ್ಕು ದಿನಗಳ ನಂತರ, ಕದ್ರಿ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಲಾಗಿತ್ತು. ಇಷ್ಟಾಗುತ್ತಿದ್ದಂತೆ ಎಸ್ಡಿಪಿಐ ನಾಯಕರು, ಪೊಲೀಸರು ಮತ್ತು ಬಜರಂಗದಳ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ಕೇಸು ಹಿಂಪಡೆಯುವಂತೆ ಒತ್ತಾಯ ಮಾಡಿದ್ದರು.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ

ಇದೀಗ, ಪೊಲೀಸ್ ಕಮಿಷನರ್ ಪತ್ರಿಕಾ ಹೇಳಿಕೆ ನೀಡಿದ್ದು, ನಮಾಜ್ ಮಾಡಿದರೆ ನೇರ ಕಾರ್ಯಾಚರಣೆ ನಡೆಸುತ್ತೇವೆಂದು ಪೋಸ್ಟ್ ಹಾಕಿದ್ದ ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಕೋಮು ದ್ವೇಷಕ್ಕೆ ಕಾರಣವಾಗಿದ್ದಾರೆಂದು ಆರೋಪಿಸಿ ಪೊಲೀಸರು ಸುಮೊಟೋ ಕೇಸು ದಾಖಲಿಸಿದ್ದಾರೆ. ಸೆಕ್ಷನ್ 506 ಮತ್ತು 156 ಎ ಪ್ರಕಾರ ಕೇಸು ದಾಖಲಾಗಿದೆ. ಅಲ್ಲದೆ, ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಚಾರಕ್ಕೆ ಅಡೆತಡೆ ಉಂಟು ಮಾಡುವ ಉದ್ದೇಶ ಇಲ್ಲದೇ ಇರುವುದರಿಂದ ಸದ್ರಿ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಸುಮೊಟೋ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸ್ ನಿರೀಕ್ಷಕರನ್ನು ರಜೆಯಲ್ಲಿ ಕಳುಹಿಸಲಾಗಿದೆ. ಮತ್ತು ಈ ಬಗ್ಗೆ ವಿಚಾರಣೆಗೆ ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ.

ಇಷ್ಟಕ್ಕೂ ಪೊಲೀಸರು ಸುಮೊಟೋ ಕೇಸು ಹಾಕಿದ್ದು ಯಾಕೆ, ಅದನ್ನು ಅರ್ಧಕ್ಕೆ ಹಿಂಪಡೆದಿದ್ದು ಯಾಕೆ ಎನ್ನುವುದು ಅರ್ಥವಾಗದ ಸಂಗತಿ. ಯಾರೋ ಹೇಳಿದರೆಂದು, ಮತ್ತೊಬ್ಬರು ಒತ್ತಾಯ ಮಾಡುತ್ತಾರೆಂದು ಕೇಸನ್ನು ಹಾಕುವುದು, ಹಿಂಪಡೆಯುವುದು ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಕುಂದುವುದಕ್ಕೆ ಕಾರಣವಾಗುತ್ತದೆ. ಇದರ ನೆಪದಲ್ಲಿ ಅಮಾಯಕ ಪೊಲೀಸ್ ಇನ್ಸ್ ಪೆಕ್ಟರನ್ನು ರಜೆಯಲ್ಲಿ ಕಳುಹಿಸಿ ಇಲಾಖೆಯ ಮೇಲಧಿಕಾರಿಗಳು ಸಮಾಜದ ದೃಷ್ಟಿಯಲ್ಲಿ ಆಗಿರುವ ಎಡವಟ್ಟಿಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಇಂಥದ್ದೇ ಎಡವಟ್ಟು ಆಗೋದು ಅನ್ನುವುದು ಇಲ್ಲಿ ಮೇಲ್ನೋಟಕ್ಕೆ ದೃಢವಾಗುತ್ತದೆ.

Mangalore Namaz in middle of road, case against VHP leader Sharan Pumpwell over provoking post. The Mangaluru city police have withdrawn the suo-moto case filed in connection with a viral video showing individuals offering Namaz on a road near Kankanady Masjid on May 24. The Kadri police initially lodged the case after the video circulated on social media, leading to widespread outrage within the coastal Muslim community.