Mangalore Namaz in road, Mla Bharath shetty: ಪ್ರಶ್ನೆ ಮಾಡಿದ್ದಕ್ಕೆ ಶರಣ್ ಪಂಪ್ವೆಲ್ ಮೇಲೆ ಕೇಸ್ ಹಾಕ್ತಾರೆ, ಶಾಸಕರ ಮೇಲೆ ಕೇಸ್ ಹಾಕಿದ್ದಾರೆ, ನಾವು ಬಾಯಿ ಮುಚ್ಚಿ ಕುಳಿತುಕೊಳ್ಳಬೇಕಾ? ಕಾಂಗ್ರೆಸಿಗರು ಸಮಾಜದಲ್ಲಿ ವಿಷ ಬೀಜ ಹಾಕಿದ್ದಾರೆ ; ಶಾಸಕ ಭರತ್ ಶೆಟ್ಟಿ ಕಿಡಿ 

31-05-24 01:55 pm       Mangalore Correspondent   ಕರಾವಳಿ

ಜನನಿಬಿಡ, ವಾಹನ ದಟ್ಟಣೆ ಇರುವ ಸ್ಥಳದಲ್ಲಿ ನಮಾಜ್ ಮಾಡುವುದು ಸರಿಯಾ? ಎಂದು ಪ್ರಶ್ನಿಸಿದರೆ, ಯಕ್ಷಗಾನ, ಬೇರೆ ಕಾರ್ಯಕ್ರಮ ಮಾಡುತ್ತೀರಿ ಎನ್ನುತ್ತಾರೆ. ಅದಕ್ಕೆಲ್ಲ ಪರ್ಮಿಷನ್ ತೆಗೆದುಕೊಂಡು ಮಾಡಲಾಗುತ್ತದೆ. ವರ್ಷಕ್ಕೊಮ್ಮೆ ಪ್ರತಿ ಹಬ್ಬ ಬಂದಾಗಲೂ ಪರವಾನಿಗೆ ಪಡೆದು ಮಾಡಲಾಗುತ್ತದೆ. ಏಕಾಏಕಿ ರಸ್ತೆಗೆ ಬಂದು ನಮಾಜ್ ಮಾಡಿದ್ದು ಸರಿಯೇ,

ಮಂಗಳೂರು, ಮೇ 31: ರಸ್ತೆಯಲ್ಲೇ ನಮಾಜ್ ಮಾಡಿದವರಿಗೆ ಕಾಂಗ್ರೆಸ್ ನಾಯಕರು ಬೆಂಬಲ ನೀಡಿದ್ದು ಪೊಲೀಸರು ದಾಖಲಿಸಿದ್ದ ಸುಮೊಟೋ ಪ್ರಕರಣಕ್ಕೆ ತರಾತುರಿಯಲ್ಲಿ ಬಿ ರಿಪೋರ್ಟ್ ಹಾಕಿಸಿದ್ದಾರೆ. ಆಮೂಲಕ ಸಮಾಜದ ಸಾಮರಸ್ಯ ಕೆಡಿಸಲು ವಿಷ ಬೀಜ ಹಾಕಿದೆ. ಹೀಗಾದರೆ ಮುಂದೆ ರಸ್ತೆಯಲ್ಲಿಯೇ ನಮಾಜ್ ಮಾಡುವುದಕ್ಕೆ ಬೆಂಬಲ ನೀಡಿದಂತಾಗಿದೆ. ಇತರರು ಕೂಡ ಪರವಾನಿಗೆ ಪಡೆಯದೆ ರಸ್ತೆಯಲ್ಲಿಯೇ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮ ನಡೆಸಲು ಪ್ರೇರಣೆ ನೀಡಿದೆ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನಿಬಿಡ, ವಾಹನ ದಟ್ಟಣೆ ಇರುವ ಸ್ಥಳದಲ್ಲಿ ನಮಾಜ್ ಮಾಡುವುದು ಸರಿಯಾ? ಎಂದು ಪ್ರಶ್ನಿಸಿದರೆ, ಯಕ್ಷಗಾನ, ಬೇರೆ ಕಾರ್ಯಕ್ರಮ ಮಾಡುತ್ತೀರಿ ಎನ್ನುತ್ತಾರೆ. ಅದಕ್ಕೆಲ್ಲ ಪರ್ಮಿಷನ್ ತೆಗೆದುಕೊಂಡು ಮಾಡಲಾಗುತ್ತದೆ. ವರ್ಷಕ್ಕೊಮ್ಮೆ ಪ್ರತಿ ಹಬ್ಬ ಬಂದಾಗಲೂ ಪರವಾನಿಗೆ ಪಡೆದು ಮಾಡಲಾಗುತ್ತದೆ. ಏಕಾಏಕಿ ರಸ್ತೆಗೆ ಬಂದು ನಮಾಜ್ ಮಾಡಿದ್ದು ಸರಿಯೇ, ಸುಮೊಟೊ ಕೇಸ್ ವಾಪಸ್ ತೆಗೆದು ಕೇಸ್ ಹಾಕಿದ ಅಧಿಕಾರಿಯನ್ನು ರಜೆಯ ಮೇಲೆ ಕಳಿಸಿದ್ದು ಸರಿಯಾ, ತನಿಖೆಯನ್ನೇ ನಡೆಸದ ಬಿ ರಿಪೋರ್ಟ್ ಹಾಕಿರುವುದು ಸರಿಯಾ. ಇದನ್ನು ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಮಾಡಿದ್ದಾರೆ ಎಂದರು.

ಎಫ್ಐಆರ್ ದಾಖಲಿಸಿದ ಪೊಲೀಸರು ಯಾವುದೇ ತನಿಖೆ ನಡೆಸಲ್ಲ , ಮಹಜರು ಮಾಡಿಲ್ಲ, ವಿಡಿಯೋ ಬಗ್ಗೆ ಫೋರೆನ್ಸಿಕ್ ತನಿಖೆಯನ್ನೂ ಮಾಡಿಲ್ಲ. ಕಾಂಗ್ರೆಸ್ ತನ್ನ ತುಷ್ಟೀಕರಣಕ್ಕಾಗಿ ಪೊಲೀಸ್ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ‌. ಇದನ್ನೆಲ್ಲ ಮಾಡಿದರೆ ನಮಾಜ್ ಮಾಡಿದವರ ಓಟು ಬೀಳುತ್ತದೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಇದನ್ಹು ಪ್ರಶ್ನೆ ಮಾಡಿದ್ದಕ್ಕೆ ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ಮೇಲೆ ಕೇಸ್ ಹಾಕಿದ್ದಾರೆ. ಹಾಗಾದರೆ ಇದನ್ನೆಲ್ಲ ಬಾಯಿ ಮುಚ್ಚಿ ನೋಡುತ್ತಿರಬೇಕಾ ಎಂದು ಪ್ರಶ್ನಿಸಿದರು.

ನಾಳೆ ಬೇರೆ ಯಾರಾದರೂ ರಸ್ತೆಗೆ ಬಂದು ಪ್ರಾರ್ಥನೆ ಮಾಡುತ್ತಾರೆ. ಈ ರೀತಿಯ ವ್ಯವಸ್ಥೆಗೆ ಅವಕಾಶ ಯಾಕೆ ಕೊಡಬೇಕು. ಪೊಲೀಸರ ಈ ನಡೆಯಿಂದ ಬೇರೆಯವರಿಗೂ ಆಸ್ಪದ ನೀಡಿದಂತಾಗಿದೆ. ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆಯಬೇಕಾಗಿಲ್ಲ ಎಂಬ ಮನಸ್ಥಿತಿ ಬರುತ್ತದೆ. ಎಲ್ಲರಿಗೂ ಬಿಟ್ಟು ಬಿಡಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಕುಸಿದು ಹೋಗಿದ್ದು ಆಡಳಿತ ಮಾಡುವಲ್ಲಿ ವೈಫಲ್ಯ ಆಗಿದ್ದಾರೆ. 

ಯಾರೂ ಪ್ರಶ್ನೆ ಮಾಡಬಾರದು ಎಂಬ ಮನಸ್ಥಿತಿ ಸರಕಾರದ್ದು. ಪೊಲೀಸರಿಗೆ ಪ್ರಶ್ನೆ ಮಾಡಿದ ಶಾಸಕರ ಮೇಲೆ ಕೇಸ್ ಹಾಕಿದ್ದಾರೆ. ಶರಣ್ ಪಂಪ್‌ವೆಲ್ ಹಾಕಿದ ಫೇಸ್ಬುಕ್ ಪೋಸ್ಟನ್ನು ಮತ್ತೆ ಪೋಸ್ಟ್ ಮಾಡಲಿ.. ನಾನು ಸಪೋರ್ಟ್ ಮಾಡ್ತೀನಿ. ಅದಕ್ಕೆ ಮೊದಲು ಸಿಎಂ, ಗೃಹ ಸಚಿವರು ಉತ್ತರ ಕೊಡಲಿ. ಅಧಿಕಾರಿಗಳು ಇವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ, ನಿಯಮದಂತೆ ಕೆಲಸ ಮಾಡುತ್ತಿಲ್ಲ. ಎಲ್ಲ ಕಡೆ ಫಿಕ್ಸಿಂಗ್ ಎನ್ನುವಂತಾಗಿದೆ ಎಂದು ಭರತ್ ಶೆಟ್ಟಿ ಹೇಳಿದರು.

Mangalore Namaz in road, Mla Bharath shetty slams Congress government over disturbing religious harmony. VHP Sharan Pumpwell who questioned the act has got police case.