ರಸ್ತೆಯಲ್ಲಿ ನಮಾಜ್ ಮಾಡಿದ ಮಾತ್ರಕ್ಕೆ ರಂಪಾಟ ಅಗತ್ಯ ಇರಲಿಲ್ಲ, ಪೊಲೀಸರು ಸುಮೊಟೋ ಕೇಸು ಹಾಕಿದ್ದೂ ಸರಿಯಲ್ಲ ; ರಮಾನಾಥ ರೈ, ಪದ್ಮರಾಜ್ ಸಮರ್ಥನೆ  

31-05-24 05:17 pm       Mangalore Correspondent   ಕರಾವಳಿ

ರಸ್ತೆಯಲ್ಲಿ ನಮಾಜ್ ಮಾಡಿದ ಮಾತ್ರಕ್ಕೆ ರಂಪಾಟ ಮಾಡುವ ಅಗತ್ಯ ಏನಿತ್ತು. ಇಷ್ಟೊಂದು ವಿವಾದ ಎಬ್ಬಿಸಿದ್ದು ಅನಗತ್ಯ ಎನಿಸುತ್ತದೆ. ಪೊಲೀಸರು ಸುಮೊಟೋ ಕೇಸು ಹಾಕಿದ್ದೂ ತಪ್ಪೇ.

ಮಂಗಳೂರು, ಮೇ 31: ರಸ್ತೆಯಲ್ಲಿ ನಮಾಜ್ ಮಾಡಿದ ಮಾತ್ರಕ್ಕೆ ರಂಪಾಟ ಮಾಡುವ ಅಗತ್ಯ ಏನಿತ್ತು. ಇಷ್ಟೊಂದು ವಿವಾದ ಎಬ್ಬಿಸಿದ್ದು ಅನಗತ್ಯ ಎನಿಸುತ್ತದೆ. ಪೊಲೀಸರು ಸುಮೊಟೋ ಕೇಸು ಹಾಕಿದ್ದೂ ತಪ್ಪೇ. ಅಗತ್ಯ ಇಲ್ಲದ ಉಸಾಬರಿಗೆ ಹೋಗಿ ವಿವಾದಕ್ಕೆ ಕಾರಣವಾಗಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ನಮಾಜ್ ವಿಚಾರದಲ್ಲಿ ಸುಮೊಟೋ ಕೇಸು ಹಾಕಿದ್ದ ಪೊಲೀಸ್ ಇನ್ಸ್ ಪೆಕ್ಟರನ್ನು ರಜೆಯಲ್ಲಿ ಕಳುಹಿಸಿದ್ದು ಸರಿಯೇ ಎಂದು ಕೇಳಿದ ಪ್ರಶ್ನೆಗೆ, ಇದೆಲ್ಲ ಅನಗತ್ಯ ವಿಚಾರ. ಎಲ್ಲರಿಗೂ ದೇವರು ಒಬ್ಬನೇ. ನಾವೆಲ್ಲ ಅದೇ ತತ್ವ ಅನುಸರಿಸಿಕೊಂಡು ಬಂದವರು. ಹಿಂದು ಮತ್ತು ಮುಸ್ಲಿಂ ಕೋಮುವಾದ ಎರಡನ್ನೂ ವಿರೋಧಿಸಿದ್ದೇವೆ. ಕೆಲವು ಸಂದರ್ಭದಲ್ಲಿ ನಮಾಜ್ ಮಾಡುತ್ತಾರೆ. ಕೆಲವೆಡೆ ಭಜನೆ, ಇನ್ನಿತರ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆಲ್ಲ ಕೋರ್ಟು, ಕೇಸು ಹಾಕುತ್ತ ಹೋದರೆ ಸಾಮರಸ್ಯಕ್ಕೆ ತೊಂದರೆಯಾಗುತ್ತದೆ. ಪೊಲೀಸರು ಏನೋ ಮಾಡಲು ಹೋಗಿ ತಪ್ಪು ಮಾಡಿದ್ದಾರೆ ಎಂದರು.

ಇದೇ ವಿಚಾರದಲ್ಲಿ ಮಾತನಾಡಿದ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಸಣ್ಣ ವಿಷಯಗಳನ್ನು ರಾಜಕೀಯ ಕಾರಣಕ್ಕೆ ವಿವಾದ ಎಬ್ಬಿಸುವುದು ಸರಿಯಲ್ಲ. ವಿರೋಧ ಪಕ್ಷ ಎಂಬ ಕಾರಣಕ್ಕೆ ಎಲ್ಲವನ್ನೂ ರಾಜಕೀಯ ಮಾಡುವುದೂ ಸರಿಯಲ್ಲ. ನಾವು ಈ ಜಿಲ್ಲೆಯಲ್ಲಿ ಸಾಮರಸ್ಯ ಬೆಳೆಸುವ ಗುರಿ ಇಟ್ಟಿದ್ದೇವೆ. ಮಸೀದಿ ಒಳಗಡೆ ಜಾಗ ಇಲ್ಲವೆಂದು ಹೊರಗಡೆ ನಮಾಜ್ ಮಾಡಿದ ಕಾರಣಕ್ಕೆ ಗೊಂದಲ ಎಬ್ಬಿಸುವುದು, ಪೊಲೀಸರು ಕೇಸು ಹಾಕಿ ತೊಂದರೆ ಕೊಡುವುದು ಸರಿಯಲ್ಲ. ಎಲ್ಲ ಧರ್ಮದವರೂ ಜೊತೆಯಾಗಿ ಬಾಳಬೇಕಾಗುತ್ತದೆ ಎಂದರು. ಅಶ್ರಫ್, ಅಶೋಕ್, ಶಶಿಧರ್ ಹೆಗ್ಡೆ, ಅಪ್ಪಿ ಇದ್ದರು.

Mangalore Namaz in road, congress leader Ramanath rai padmaraj slams police behaviour over sumoto case against guys going namaz. He said this issue should not have been made so big by the police.