Vedavyas Kamath, fuel price hike in Karnataka: ನನ್ನ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನವೂ ಬಂದಿಲ್ಲ, ಸ್ಪೀಕರ್ ಕ್ಷೇತ್ರಕ್ಕೆ ಬಂದಿದ್ದರೆ ದಾಖಲೆ ತೋರಿಸಲಿ, ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ; ಶಾಸಕ ವೇದವ್ಯಾಸ ಕಾಮತ್

19-06-24 07:11 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು 13 ತಿಂಗಳಾಗುತ್ತ ಬಂದಿದ್ದು ಒಂದು ರೂಪಾಯಿ ಹಣವನ್ನೂ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಬಿಡುಗಡೆ ಮಾಡಿಲ್ಲ.

ಮಂಗಳೂರು, ಜೂನ್.19: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು 13 ತಿಂಗಳಾಗುತ್ತ ಬಂದಿದ್ದು ಒಂದು ರೂಪಾಯಿ ಹಣವನ್ನೂ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಬಿಡುಗಡೆ ಮಾಡಿಲ್ಲ. ಹಿಂದೆ ಬೊಮ್ಮಾಯಿ ಸರ್ಕಾರದಲ್ಲಿ ಅನುಮೋದನೆಗೊಂಡ ಅರ್ಧ ಕಾಮಗಾರಿ ಆಗಿರುವ ಯೋಜನೆಗಳಿಗೂ ಹಣ ನೀಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಳಿಗೆ ಕೇಳಲು ಹೋಗಿದ್ದರೂ, ಯಾವುದೇ ಸ್ಪಂದನೆ ನೀಡಿಲ್ಲ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿರುವ ಬಗ್ಗೆ ಅನುಮಾನ ಇದೆ. ಇದೇ ಸರ್ಕಾರದಲ್ಲಿ ಅನುದಾನ ಬಂದಿದ್ದರೆ, ಆದೇಶ ಪತ್ರ ತೋರಿಸಲಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ತೈಲ ಬೆಲೆಯೇರಿಕೆ ವಿರೋಧಿಸಿ ಸುದ್ದಿಗೋಷ್ಟಿ ನಡೆಸಿದ ಸಂದರ್ಭದಲ್ಲಿ ಪಕ್ಕದ ಉಳ್ಳಾಲ ಕ್ಷೇತ್ರದ ಶಾಸಕ ಯುಟಿ ಖಾದರ್ 380 ಕೋಟಿ ಅನುದಾನ ತಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಕಾಮತ್, ಖಾದರ್ ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ವೆನ್ಲಾಕ್ ಆಸ್ಪತ್ರೆಗೆ ಎಷ್ಟು ಅನುದಾನ ತರಿಸಿದ್ದಾರೆ ಅಂತ ಗೊತ್ತಿದೆ. ಕೊರೊನಾ ಸಂದರ್ಭದಲ್ಲಿ ನಮ್ಮ ಸರಕಾರ ಇದ್ದಾಗಲೇ ವೆಂಟಿಲೇಟರ್, ಆಕ್ಸಿಜನ್ ಪ್ಲಾಂಟ್ ಎಲ್ಲ ಹಾಕಿಸಿದ್ದು. ವೆನ್ಲಾಕ್, ಲೇಡಿಗೋಶನ್, ಉಳ್ಳಾಲದ ಆಸ್ಪತ್ರೆಯನ್ನೂ ಅಭಿವೃದ್ಧಿ ಮಾಡಿದ್ದೆವು. ಈಗಿನ ಸರಕಾರದಲ್ಲಿ ಅನುದಾನ ತಂದಿದ್ದಾರೋ ಗೊತ್ತಿಲ್ಲ. ಹಾಗೇನಾದರೂ ಅನುದಾನ ತಂದಿದ್ದರೆ, ದಾಖಲೆ ತೋರಿಸಲಿ ಎಂದರು. ಸ್ಪೀಕರ್ ಬಳಿ ನೀವೇನೂ ಅನುದಾನ ಕೊಡದೇ ಇರುವ ಬಗ್ಗೆ ದೂರು ಕೊಟ್ಟಿಲ್ವಂತೆ ಎಂದು ಕೇಳಿದ್ದಕ್ಕೆ, ಸಿಎಂ ಬಳಿಯೂ ಆಗದೇ ಇರುವುದು ಸ್ಪೀಕರ್ ಮೂಲಕ ಆಗೋದಿದ್ದರೆ ಪ್ರಯತ್ನ ಪಡುತ್ತೇನೆ ಎಂದು ಹೇಳಿದರು.

ರಾಜ್ಯ ಸರಕಾರಕ್ಕೆ ಗ್ಯಾರಂಟಿ ಯೋಜನೆ ಕೊಡುವುದಕ್ಕೇ ಹಣ ಸಾಲುತ್ತಿಲ್ಲ. ಆರ್ಥಿಕ ಸ್ಥಿತಿ ಸರಿದೂಗಿಸಲು ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೊರಿಸಿ ಜನರಿಗೆ ಮತ್ತೆ ಹೊರೆ ಹಾಕಿದ್ದಾರೆ. ರಾಜ್ಯದ ಬೊಕ್ಕಸ ದಿವಾಳಿ ಆಗುವ ಹಂತಕ್ಕೆ ಬಂದಿದೆ. ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಿಗೆ ನೀರಾವರಿ ಇಲಾಖೆಯಾಗಲೀ, ಇತರ ಯಾವುದೇ ಇಲಾಖೆಗೂ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಹಿಂದಿನ ಸರಕಾರದಲ್ಲಿ ಅನುಮೋದನೆ ಆಗಿರುವ ಯೋಜನೆಗಳಿಗೆ ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತೈಲ ಬೆಲೆಯನ್ನು ವಿರೋಧಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸೂಚನೆಯಂತೆ ನಾವು ನಿರಂತರ ಹೋರಾಟ ನಡೆಸಲಿದ್ದೇವೆ. ಜೂನ್ 20ರಂದು ಬೆಳಗ್ಗೆ 10.30ಕ್ಕೆ ಪಿವಿಎಸ್ ವೃತ್ತದ ಬಳಿ ಮಂಗಳೂರು ದಕ್ಷಿಣ ವತಿಯಿಂದ ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಲಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ರಮೇಶ್ ಕಂಡೆಟ್ಟು, ಪೂರ್ಣಿಮಾ, ದಿವಾಕರ ಪಾಂಡೇಶ್ವರ ಮತ್ತಿತರರು ಇದ್ದರು.

Vedavyas Kamath, MLA for Mangaluru South, criticized the state government for the recent increase in petrol and diesel prices. He stated, "Under Siddaramaiah's rule, there is high inflation in transportation, housing, registration, stamp duty, milk, and electricity."