Mangalore Rain, Airport, MLA Bharath Shetty: ಕೆಂಜಾರು, ಕರಂಬಾರಿನ ಮನೆಗಳಿಗೆ ಮಳೆನೀರು ನುಗ್ಗಿ ಅವಾಂತರ ; ಅಧಿಕಾರಿಗಳ ನಿರ್ಲಕ್ಷ್ಯ, ಏರ್ಪೋರ್ಟ್ ರಸ್ತೆಯನ್ನೇ ಮುಚ್ಚಿ ಗ್ರಾಮಸ್ಥರ ಆಕ್ರೋಶ 

01-07-24 09:17 pm       Mangalore Correspondent   ಕರಾವಳಿ

ಕಳೆದ ವಾರ ಸುರಿದ ಮಳೆಗೆ ಬಜ್ಪೆ ಏರ್ಪೋರ್ಟ್‌ ಕಡೆಯಿಂದ ಹರಿದ ಮಳೆನೀರು ಕರಂಬಾರು, ಕೆಂಜಾರಿನ ಎಂಟು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಖಾಸಗಿ ವ್ಯಕ್ತಿಗಳು ಸೇರಿ ನೀರು ಹರಿಯುವ ಕಾಲುವೆಯನ್ನೇ ಮುಚ್ಚಿದ್ದು ಇದಕ್ಕೆ ಕಾರಣವಾಗಿತ್ತು. ಸ್ಥಳೀಯ ಆಡಳಿತ ಮತ್ತು ಏರ್ಪೋರ್ಟ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ಸೋಮವಾರ ವಿಮಾನ ನಿಲ್ದಾಣದ ರಸ್ತೆಯನ್ನೇ ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. 

ಮಂಗಳೂರು, ಜುಲೈ.1: ಕಳೆದ ವಾರ ಸುರಿದ ಮಳೆಗೆ ಬಜ್ಪೆ ಏರ್ಪೋರ್ಟ್‌ ಕಡೆಯಿಂದ ಹರಿದ ಮಳೆನೀರು ಕರಂಬಾರು, ಕೆಂಜಾರಿನ ಎಂಟು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಖಾಸಗಿ ವ್ಯಕ್ತಿಗಳು ಸೇರಿ ನೀರು ಹರಿಯುವ ಕಾಲುವೆಯನ್ನೇ ಮುಚ್ಚಿದ್ದು ಇದಕ್ಕೆ ಕಾರಣವಾಗಿತ್ತು. ಸ್ಥಳೀಯ ಆಡಳಿತ ಮತ್ತು ಏರ್ಪೋರ್ಟ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ಸೋಮವಾರ ವಿಮಾನ ನಿಲ್ದಾಣದ ರಸ್ತೆಯನ್ನೇ ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. 
 
ಜೂನ್ 25ರ ನಸುಕಿನಲ್ಲಿ ಕರಂಬಾರು ಆಸುಪಾಸಿನ ಏಳೆಂಟು ಮನೆಗಳಿಗೆ ಮೊಣಕಾಲು ಮುಳುಗುವವಷ್ಟು ನೀರು ನುಗ್ಗಿತ್ತು. ದಿಢೀರ್ ಮನೆಯೊಳಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ತೊಂದರೆಗೆ ಒಳಗಾಗಿದ್ದರು. ನೀರು ಒಮ್ಮೆಲೇ ನುಗ್ಗಿದ್ದರಿಂದ ದಿನಸಿ ಸಾಮಗ್ರಿ ಸೇರಿದಂತೆ ಫ್ರಿಡ್ಜ್, ಗ್ರೈಂಡರ್ ನೀರಿನಲ್ಲಿ ಅರ್ಧಕ್ಕೆ ಮುಳುಗಿತ್ತು. ಮನೆಯ ಒಳಗಡೆ ಕೆಸರು ನೀರು ನುಗ್ಗಿದ್ದರಿಂದ ಅದನ್ನು ಕ್ಲೀನ್ ಮಾಡುವುದೇ ಸವಾಲಾಗಿತ್ತು.‌ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿ ಕಲಾವತಿ, ನಾವು ಕಳೆದ ನಾಲ್ಕೈದು ದಿನಗಳಿಂದ ಕಾದೆವು. ತಹಸೀಲ್ದಾರ್ ಸೇರಿ ಎಲ್ಲ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಈಗ ಪ್ರತಿಭಟನೆ ಮಾತ್ರ ನಮಗೆ ದಾರಿ ಎಂದು ಅಲವತ್ತುಕೊಂಡರು. 

ಐದಾರು ವರ್ಷಗಳಿಂದ ಇಂತಹ ಸ್ಥಿತಿಯಾಗಿದ್ದು ಮಳೆ ನೀರು ಏರ್ಪೋರ್ಟ್‌ ಕಡೆಯಿಂದ ಬಂದು ಇಲ್ಲಿನ ಮನೆಗಳಿಗೆ ನುಗ್ಗುತ್ತಿದೆ. ಏರ್ಪೋರ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕಾಟಾಚಾರಕ್ಕೆ ಅತ್ತ ಸುಳಿದು ಹೋದ ಅಧಿಕಾರಿಗಳು ಬಳಿಕ ನಾಪತ್ತೆಯಾಗಿದ್ದಾರೆ. ಎಷ್ಟು ಕರೆ ಮಾಡಿದರೂ, ಫೋನ್ ಎತ್ತುವವರಿಲ್ಲ. ಕರೆ ಸ್ವೀಕರಿಸಿದರೂ ಇಂದು ಸರಿ ಮಾಡ್ತೇವೆ, ನಾಳೆ ಮಾಡ್ತೇವೆ ಎಂದು ಐದು ದಿನ ಸತಾಯಿಸಿದ್ದಾರೆ. ಆದ್ದರಿಂದ ನಾವು ಏರ್ಪೋರ್ಟ್ ದಾರಿಯನ್ನೇ ಮುಚ್ಚಿ ಪ್ರತಿಭಟನೆ ಮಾಡಿದ್ದೇವೆಂದು ಗ್ರಾಮಸ್ಥರು ಹೇಳಿದ್ದಾರೆ.

ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆ ಏರ್ಪೋರ್ಟ್ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರ್, ಮಂಗಳೂರು ಎಸಿ, ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಪ್ರತೀ ಮನೆಗಳಿಗೆ 1ಲಕ್ಷ, 2 ಲಕ್ಷದಷ್ಟು ನಷ್ಟವಾಗಿದೆ. ಅದನ್ನು ಭರಿಸದಿದ್ದಲ್ಲಿ ಮತ್ತೆ ಏರ್ಪೋರ್ಟ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಆಗಮಿಸಿದ್ದು ಏರ್ಪೋರ್ಟ್ ಅಧಿಕಾರಿಗಳು ಜನರ ಸಮಸ್ಯೆ ನಿವಾರಿಸಬೇಕು. ನಷ್ಟದ ಬಗ್ಗೆ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ‌ಕೊನೆಗೆ, ಏರ್ಪೋರ್ಟ್ ಅಧಿಕಾರಿಗಳು ಸಂತ್ರಸ್ತ ಮನೆಗಳ ನಿವಾಸಿಗಳಿಗೆ ನಷ್ಟ ಪರಿಹಾರ ನೀಡುವುದಾಗಿ ಹೇಳಿದ್ದು ಅದರಂತೆ ಪ್ರತಿಭಟನೆ ಕೈಬಿಡಲಾಗಿದೆ.

Mangalore rain, people near by airport close road after water enters into houses, residents slam MLA Bharath Sheety. Locals from Karambar staged a protest at the entrance of Mangaluru International Airport on Monday July 1, after runoff from the airport's runway damaged seven houses due to heavy rain. Despite repeated requests, the airport authorities and district administration have failed to address the residents' concerns about waterlogging at their homes caused by the overflow from the runway.