Mangalore rain, water falls, trekking: ಭಾರೀ ಮಳೆ ಹಿನ್ನೆಲೆ ; ಜಲಪಾತ, ಟ್ರಕ್ಕಿಂಗ್ ಪಾಯಿಂಟ್ ವೀಕ್ಷಣೆಗೆ ಅರಣ್ಯ ಇಲಾಖೆಯ ನಿರ್ಬಂಧ 

04-07-24 03:05 pm       Mangalore Correspondent   ಕರಾವಳಿ

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಪಾತಗಳು ಮತ್ತೆ ಮೈದುಂಬಿಕೊಂಡು ಹರಿಯುತ್ತಿವೆ.

ಮಂಗಳೂರು, ಜುಲೈ 4: ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಪಾತಗಳು ಮತ್ತೆ ಮೈದುಂಬಿಕೊಂಡು ಹರಿಯುತ್ತಿವೆ. ಆದರೆ ಭೋರ್ಗರವೆ ನೀರಿನಲ್ಲಿ ಅಪಾಯ ಇರುವುದರಿಂದ ಪಶ್ಚಿಮ ಘಟ್ಟಗಳ ಜಲಪಾತ, ಟ್ರಕ್ಕಿಂಗ್ ಪಾಯಿಂಟ್ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. 

ಮಳೆಗಾಲ ಸಮಯದಲ್ಲಿ ಜಲಪಾತ, ಟ್ರಕ್ಕಿಂಗ್ ಹೋಗುವುದಕ್ಕೆ ಬೆಂಗಳೂರಿನ ಜನ ಇಷ್ಟ ಪಡುತ್ತಾರೆ. ಆದರೆ ಮಳೆ ಹೆಚ್ಚಿರುವುದರಿಂದ ಟ್ರೆಕ್ಕಿಂಗ್‌, ಜಲಪಾತ ಹೋಗುವವರಿಗೆಲ್ಲ ಮುಂದಿನ ಸೂಚನೆ ವರೆಗೂ ಬ್ರೇಕ್ ಹಾಕಲಾಗಿದೆ.

ಕರಾವಳಿ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಕಾಡಿನ ಮಧ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಮಂಗಳೂರು ಅರಣ್ಯ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಕಾಡುಗಳು, ಬೆಟ್ಟಗಳು- ಜಲಪಾತಗಳಿಗೆ ಜನಸಾಮಾನ್ಯರ ಭೇಟಿಯನ್ನು ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನರಸಿಂಹಗಡ (ಗಡಾಯಿಕಲ್ಲು) ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತಗಳತ್ತ ತೆರಳದಂತೆ ನಿರ್ಬಂಧಿಸಲು ಬೆಳ್ತಂಗಡಿ ಆರ್‌ಎಫ್‌ಓಗೆ ಕುದುರೆಮುಖ ಸಿಎಫ್ ಆದೇಶ ನೀಡಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯಲ್ಲೂ ಫಾಲ್ಸ್ ನಿರ್ಬಂಧ 

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ ನದಿ ಭೋರ್ಗರೆಯುತ್ತಿದ್ದು ನೀರಿನ ಹೆಚ್ಚಳದಿಂದ ಕಾರವಾರ ತಾಲೂಕಿನ ಫಾಲ್ಸ್‌ಗಳಿಗೆ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದೆ. ಯಲ್ಲಾಪುರದ ಶಿರಲೆ ಫಾಲ್ಸ್, ಕಾನೂರು ಫಾಲ್ಸ್, ಕುಳಿ ಮಾಗೋಡು ಜಲಪಾತಗಳ ಭೇಟಿಗೆ ಅರಣ್ಯ ಇಲಾಖೆಯಿಂದ ಪ್ರವೇಶ ನಿಷೇಧ ಮಾಡಲಾಗಿದೆ. ಕಾರವಾರ ತಾಲೂಕಿನ ಪಣಸಗುಳಿ ಸೇತುವೆ ಮುಳುಗಡೆ ಹಾಗೂ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನಲೆ ಸಂಚಾರ ನಿರ್ಬಂಧಿಸಲಾಗಿದೆ.

Entry for water falls and sightseeing in Mangalore Udupi and uttar karnataka restricted due to heavy rains. People from various districts come to visit water falls and do trekking for which the adminstration has put a full stop for safety purpose.