Brijesh Chowta, Mangalore Bangalore train: ಭೂಕುಸಿತದಿಂದ ಹೆದ್ದಾರಿ ಸಂಚಾರ ಬಂದ್ ; ತುರ್ತು ರೈಲು ಒದಗಿಸಲು ಸಂಸದ ಬ್ರಿಜೇಶ್ ಚೌಟ ಪತ್ರ, ತಕ್ಷಣ ಸ್ಪಂದಿಸಿದ ರೈಲ್ವೇ ಅಧಿಕಾರಿಗಳು, ಜುಲೈ 19-22ರ ಮಧ್ಯೆ ಮಂಗಳೂರು- ಬೆಂಗಳೂರಿಗೆ ಹೆಚ್ಚುವರಿ ಆರು ರೈಲು

19-07-24 03:37 pm       Mangalore Correspondent   ಕರಾವಳಿ

ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಹೆದ್ದಾರಿಯಲ್ಲಿ ಭೂಕುಸಿತದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

ಮಂಗಳೂರು, ಜುಲೈ.19: ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಹೆದ್ದಾರಿಯಲ್ಲಿ ಭೂಕುಸಿತದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಸಂಚಾರಕ್ಕೆ ಜನಸಾಮಾನ್ಯರಿಗೆ ತೊಂದರೆ ಆಗಿರುವ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆದು ತುರ್ತಾಗಿ ಹೆಚ್ಚುವರಿ ರೈಲು ಒದಗಿಸುವಂತೆ ಮನವಿ ಮಾಡಿದ್ದಾರೆ. ಸಂಸದರ ಪತ್ರಕ್ಕೆ ಸ್ಪಂದಿಸಿರುವ ರೈಲ್ವೇ ಅಧಿಕಾರಿಗಳು ಜುಲೈ 19ರಿಂದಲೇ ನಾಲ್ಕು ದಿನಗಳ ಕಾಲ ಹೆಚ್ಚುವರಿ ಆರು ಟ್ರಿಪ್ ರೈಲುಗಳನ್ನು ಒದಗಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿಯ ಜನರು ಬೆಂಗಳೂರಿಗೆ ತೆರಳುವುದರಿಂದ ಹೆದ್ದಾರಿ ತಡೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಂಸದ ಬ್ರಿಜೇಶ್ ಚೌಟ ಅವರು ಮೈಸೂರು ರೈಲ್ವೇ ವಿಭಾಗದ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದು ಹೆಚ್ಚುವರಿ ರೈಲು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಅಷ್ಟೇ ವೇಗದಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಗಳು ಸ್ಪಂದನೆ ನೀಡಿದ್ದಾರೆ. ಅಲ್ಲದೆ, ಸೌತ್ ವೆಸ್ಟರ್ನ್ ರೈಲ್ವೇ ಇಲಾಖೆಯ ಅಧಿಕಾರಿಗಳು ಜುಲೈ 19ರಂದು ಮತ್ತು 22ರ ಮಧ್ಯೆ ರಾತ್ರಿ ವೇಳೆ ಹೆಚ್ಚುವರಿ ರೈಲನ್ನು ಒದಗಿಸಿದ್ದಾರೆ.

ಟ್ರೈನ್ ನಂಬರ್ 6547 ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಜುಲೈ 19ರಂದು ರಾತ್ರಿ 11 ಗಂಟೆಗೆ ರೈಲು ಹೊರಡಲಿದ್ದು, ಜುಲೈ 20ರ ಬೆಳಗ್ಗೆ 11.40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅದೇ ರೀತಿ ಜುಲೈ 20ರಂದು ಮಧ್ಯಾಹ್ನ 1.40ಕ್ಕೆ ಟ್ರೈನ್ ನಂಬರ್ 06548 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್ನಿಂದ ಹೊರಡಲಿದ್ದು, ರಾತ್ರಿ 11.15ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ಇದೇ ರೀತಿ ಜುಲೈ 21 ಮತ್ತು 22ರಂದು ರೈಲು ಸಂಖ್ಯೆ 06549 ಯಶವಂತಪುರ ನಿಲ್ದಾಣದಿಂದ (ಭಾನುವಾರ- ಆದಿತ್ಯವಾರ) ಮಂಗಳೂರು ಜಂಕ್ಷನ್ ಬರಲಿದೆ. ಜುಲೈ 21ರ ರಾತ್ರಿ ಅಂದರೆ, ಶನಿವಾರ ಮಧ್ಯರಾತ್ರಿ 12.30ಕ್ಕೆ ಯಶವಂತಪುರ ನಿಲ್ದಾಣದಿಂದ ರೈಲು ಹೊರಡಲಿದ್ದು, ಬೆಳಗ್ಗೆ 11.40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಭಾನುವಾರ ರಾತ್ರಿ ಮತ್ತು ಸೋಮವಾರ ರಾತ್ರಿ ಎರಡು ದಿನವೂ ರಾತ್ರಿ ಈ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಬರಲಿದೆ. ಇದೇ ರೀತಿ ಸಂಖ್ಯೆ 06550 ರೈಲು ಮಂಗಳೂರು ಜಂಕ್ಷನ್ನಿಂದ ರಾತ್ರಿ 11.15ಕ್ಕೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 1.40ಕ್ಕೆ ಯಶವಂತಪುರ ತಲುಪಲಿದೆ. ಇದು ಎರಡು ದಿನವೂ ಒಂದೇ ಸಮಯಕ್ಕೆ ಪುನರಾವರ್ತನೆಯಾಗಲಿದೆ.

ನಿನ್ನೆಯಿಂದಲೇ ಹೆದ್ದಾರಿ ಸಂಚಾರಕ್ಕೆ ತೊಂದರೆ ಆಗಿದ್ದರಿಂದ ಸಂಸದ ಬ್ರಿಜೇಶ್ ಚೌಟ ಅವರು ರೈಲ್ವೇ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿದ್ದು, ಹೆಚ್ಚುವರಿ ರೈಲನ್ನ ಒದಗಿಸುವಂತೆ ಮೈಸೂರು ವಿಭಾಗದ ಜನರಲ್ ಮ್ಯಾನೇಜರ್ ಬಳಿ ಕೇಳಿಕೊಂಡಿದ್ದರು. ಸಂಸದರ ಮಾತಿಗೆ ಒಪ್ಪಿದ ರೈಲ್ವೇ ಅಧಿಕಾರಿಗಳು ತುರ್ತಾಗಿ ಸ್ಪಂದನೆ ನೀಡಿದ್ದಾರೆ.

Responding to Dakshina Kannada MP Capt Brijesh Chowta, the South Western Railway has provided an additional train between Mangaluru and Bengaluru. Due to heavy rainfall causing landslides, the primary national highways connecting Mangaluru and Bengaluru have been blocked, cutting off road connectivity.