Mangalore Rain, School college holiday: ಹವಾಮಾನ ವೈಪರೀತ್ಯ, ಮತ್ತೆ ಮತ್ತೆ ರೆಡ್ ಅಲರ್ಟ್ ; ಕರಾವಳಿ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ವಾರಪೂರ್ತಿ ರಜೆ, ಅರಬ್ಬೀ ಸಮುದ್ರದಲ್ಲಿ ಬಿರುಗಾಳಿ, ಕಡಲ ತೀರದಲ್ಲಿ ಪ್ರವಾಹದ ಎಚ್ಚರಿಕೆ

19-07-24 09:05 pm       Mangalore Correspondent   ಕರಾವಳಿ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಜುಲೈ 20ರ ಶನಿವಾರವೂ ರೆಡ್ ಅಲರ್ಟ್ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ಮಂಗಳೂರು, ಜುಲೈ.19: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಜುಲೈ 20ರ ಶನಿವಾರವೂ ರೆಡ್ ಅಲರ್ಟ್ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಉಳ್ಳಾಲ, ಮೂಡುಬಿದ್ರೆ ಹೊರತುಪಡಿಸಿ ಐದು ಜಿಲ್ಲೆಗಳಿಗೆ ರಜೆ ನೀಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಶನಿವಾರದ ರಜೆಯೊಂದಿಗೆ ಈ ವಾರ ಪೂರ್ತಿ ಶಾಲಾ ಮಕ್ಕಳಿಗೆ ರಜೆ ನೀಡಿದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿಯಾಗಿದೆ. ಪಶ್ಚಿಮ ಘಟ್ಟದ ಸಾಲುಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಸಕಲೇಶಪುರ, ಹಾಸನ, ಕೊಡಗಿನಲ್ಲೂ ಭಾರೀ ಮಳೆಯಿಂದಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

ಕರಾವಳಿಗೆ ಬಿರುಗಾಳಿ ಸಾಧ್ಯತೆ

ಇದೇ ವೇಳೆ, ಇಂಡಿಯನ್ ಕೋಸ್ಟ್ ಗಾರ್ಡ್ ಕಡೆಯಿಂದ ಅರಬ್ಬೀ ಸಮುದ್ರದಲ್ಲಿ ಭಾರೀ ಬಿರುಗಾಳಿ ಏಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಉತ್ತರದ ಗೋವಾ, ಕಾರವಾರ, ಉಡುಪಿಯ ಮಲ್ಪೆ, ಮಂಗಳೂರಿನ ಮೂಲ್ಕಿ, ಪಣಂಬೂರು ಭಾಗದಲ್ಲಿ ಬಿರುಗಾಳಿಯ ಪರಿಣಾಮ ನಾಲ್ಕರಿಂದ 5 ಮೀಟರ್ ಎತ್ತರಕ್ಕೆ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸಲಿದೆ. ಇದಲ್ಲದೆ, ಗಂಟೆಗೆ 55-70 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ತೀರದಲ್ಲಿ ಪ್ರವಾಹ ಸ್ಥಿತಿ ತಲೆದೋರಲಿದೆ. ತೀರದ ನಿವಾಸಿಗಳು ಜಾಗ್ರತೆಯಲ್ಲಿರಬೇಕು ಎಂದು ಸೂಚಿಸಲಾಗಿದೆ.

ಭಾರೀ ಮಳೆಗೆ ನದಿಗಳ ಆಸುಪಾಸಿನಲ್ಲಿ ನೆರೆ

ಶುಕ್ರವಾರ ಇಡೀ ದಿನ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಳೆ ಹೆಚ್ಚಿದ್ದರಿಂದ ನದಿಗಳಲ್ಲಿ ನೀರು ಭೋರ್ಗರೆಯುತ್ತ ಬಂದಿದ್ದು, ಫಲ್ಗುಣಿ, ನೇತ್ರಾವತಿ ನದಿಗಳಲ್ಲಿ ನೆರೆ ಕಾಣಿಸಿಕೊಂಡಿದೆ. ಫಲ್ಗುಣಿ ನದಿಯಲ್ಲಿ ನೆರೆ ಕಾಣಿಸಿಕೊಂಡಿದ್ದರಿಂದ ಅದ್ಯಪಾಡಿ ಪರಿಸರದಲ್ಲಿ ಕೃಷಿ ಭೂಮಿ ಮತ್ತು 35 ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಬಂಟ್ವಾಳ ತಾಲೂಕಿನ ಆಲಡ್ಕ, ಅಜಿಲಮೊಗರು, ನಂದಾವರ ಭಾಗದಲ್ಲಿ ನೆರೆ ನೀರು ನುಗ್ಗಿದ್ದು 12 ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

Mangalore heavy rains, schools and colleges declared holiday on July 20, red alert issued. Due to high rainfall in the twin districts a holiday has been declared in Dakshina Kannada and Udupi districts for schools and pre-university colleges on Saturday, July 20.