Mangalore, Red Alert, Rain: ರೆಡ್ ಅಲರ್ಟ್ ; ಒಂದು ಹನಿಯನ್ನೂ ಸುರಿಸದ ಮಳೆರಾಯ, ಹವಾಮಾನ ಇಲಾಖೆಗೆ ಆಗಿಂದಾಗ್ಗೆ ‘ಅವಮಾನ’ ! ಮಹಾಮಳೆಯೂ ಇಲ್ಲ, ಭೂಕುಸಿತವೂ ಇಲ್ಲ, ಮಾನವ ನಿರ್ಮಿತ ಎಡವಟ್ಟುಗಳಷ್ಟೇ..!

20-07-24 10:58 pm       Mangalore Correspondent   ಕರಾವಳಿ

ಕಳೆದ ಎರಡು ವಾರಗಳಲ್ಲಿ ಕರಾವಳಿಯಾದ್ಯಂತ ಎಡೆಬಿಡದೆ ಮಳೆಯಾಗಿತ್ತು. ಆಗಿಂದಾಗ್ಗೆ ಹವಾಮಾನ ಇಲಾಖೆಯವರು ರೆಡ್ ಅಲರ್ಟ್ ಸೂಚನೆಯನ್ನೂ ನೀಡತೊಡಗಿದ್ದರು.

ಮಂಗಳೂರು, ಜುಲೈ 20: ಕಳೆದ ಎರಡು ವಾರಗಳಲ್ಲಿ ಕರಾವಳಿಯಾದ್ಯಂತ ಎಡೆಬಿಡದೆ ಮಳೆಯಾಗಿತ್ತು. ಆಗಿಂದಾಗ್ಗೆ ಹವಾಮಾನ ಇಲಾಖೆಯವರು ರೆಡ್ ಅಲರ್ಟ್ ಸೂಚನೆಯನ್ನೂ ನೀಡತೊಡಗಿದ್ದರು. ಒಂದು ವಾರ ಇಡೀ ರೆಡ್ ಅಲರ್ಟ್ ನೀಡಿದ್ದೂ ಆಯ್ತು, ಒಂದಷ್ಟು ಮಳೆಯೂ ಆಗಿತ್ತು. ಗುರುವಾರ, ಶುಕ್ರವಾರ ರೆಡ್ ಅಲರ್ಟ್ ನೀಡಿದ್ದರೂ, ಮಂಗಳೂರು, ಮೂಡುಬಿದ್ರೆ ವ್ಯಾಪ್ತಿಗೆ ಶಾಲೆ, ಕಾಲೇಜಿಗೆ ರಜೆ ನೀಡಿರಲಿಲ್ಲ. ಉಳಿದಂತೆ, ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಡೀ ವಾರ ಪೂರ್ತಿ ರಜೆಯೇ ಆಗಿತ್ತು.

ಶನಿವಾರ ಮತ್ತೆ ಭಾರೀ ಮಳೆಯ ರೆಡ್ ಅಲರ್ಟ್ ಸೂಚನೆಯನ್ನು ನೀಡಿದ್ದ ಹವಾಮಾನ ಇಲಾಖೆಯವರು ಅವಮಾನ ಅನುಭವಿಸಿದ್ದಾರೆ. ರೆಡ್ ಅಲರ್ಟ್ ನಂಬಿ ಜಿಲ್ಲಾಡಳಿತಗಳು ಮಾತ್ರ ಪೂರ್ತಿ ರಜೆಯನ್ನೇ ಸಾರಿದ್ದವು. ಆದರೆ ಶನಿವಾರ ದಿನಪೂರ್ತಿ ಮಳೆಯೇ ಆಗಿಲ್ಲ. ಬೆಳಗ್ಗೆ ಒಂದಷ್ಟು ಹೊತ್ತು ಮೋಡ ಕವಿದಿದ್ದರೂ, ವಾರ ಕಾಲ ಸೂರ್ಯನ ರವಿಯನ್ನೇ ಕಾಣದಿದ್ದ ಜನರು ಬಿಸಿಲನ್ನು ಬಯಸಿದ್ದರು. ನಿರೀಕ್ಷೆಯಂತೆ, ಬಿಸಿಲು ಆವರಿಸಿದ್ದಲ್ಲದೆ, ದಿನಪೂರ್ತಿ ಮಳೆಯೇ ಮಾಯವಾಗಿತ್ತು. ಮಂಗಳೂರು, ಉಡುಪಿ, ಕಾಸರಗೋಡಿನಲ್ಲೂ ಕರಾವಳಿ ಭಾಗದಲ್ಲಿ ಒಂದೇ ರೀತಿಯ ಬಿಸಿಲು ಇತ್ತು. ಹಗಲು ಮಾತ್ರವಲ್ಲದೆ, ರಾತ್ರಿಯಾದರೂ ಒಂದು ಹನಿ ಮಳೆ ಬಿದ್ದಿಲ್ಲ. ವಾರ ಕಾಲದಿಂದ ಧೋ ಎಂದು ಸುರಿದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಹಠಾತ್ ಬ್ರೇಕ್ ಕೊಟ್ಟಿದ್ದೂ ಅಚ್ಚರಿ ಅನಿಸುವಷ್ಟರ ಮಟ್ಟಿಗಿನ ಬೆಳವಣಿಗೆ.

ಜೂನ್ ಕೊನೆ ಮತ್ತು ಜುಲೈ ಆರಂಭದಲ್ಲಿಯೂ ಹವಾಮಾನ ಇಲಾಖೆಯಿಂದ ಹಲವು ಬಾರಿ ರೆಡ್ ಅಲರ್ಟ್ ಕೊಟ್ಟಿದ್ದೂ ಆಗಿತ್ತು. ಆಗಲೂ ಮಳೆ ಸುಳಿಯದೇ ಇದ್ದ ದಿನಗಳಿದ್ದವು. ರಜೆ ಕೊಟ್ಟ ದಿನವಂತೂ ಭಾರೀ ಮಳೆಯ ಸೂಚನೆ ಇದ್ದರೂ, ಒಂದೆರಡು ಸಾಧಾರಣ ಮಳೆ ಸುರಿದು ಮಳೆ ಮಾಯವಾಗಿದ್ದೂ ಇದೆ. ಆದರೆ ಜುಲೈ 7ರಿಂದ ತೊಡಗಿ ಬಹುತೇಕ ಕಳೆದ ಎರಡು ವಾರಗಳಲ್ಲಿ ಒಂದಷ್ಟು ಮಳೆಯಾಗಿದ್ದು ಸತ್ಯ. ಇದೇ ಕಾರಣಕ್ಕೆ ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಮೈನರೆದ ರೀತಿ ನಳನಳಿಸಿ ಹರಿದಿದ್ದೂ ಸತ್ಯ. ಕನ್ನಡದ ಟೀವಿಗಳು ಉಸುರಿದ ರೀತಿ ಮಹಾಮಳೆಯಂತೂ ಕರಾವಳಿಯಲ್ಲಿ ಆಗಿಲ್ಲ. ಜುಲೈ ತಿಂಗಳಲ್ಲಿ ಸಾಧಾರಣ ರೀತಿ ಸುರಿವ ಮಳೆಯಷ್ಟೇ ಈ ಬಾರಿಯೂ ಆಗಿದೆ.

ಮಾನವ ನಿರ್ಮಿತ ಎಡವಟ್ಟು, ಅವೈಜ್ಞಾನಿಕ ಅಣೆಕಟ್ಟಿನ ಕಾರಣದಿಂದ ತಗ್ಗಿನ ಪ್ರದೇಶಗಳಿಗೆ ನೆರೆ ನೀರು ನುಗ್ಗಿತ್ತು. ಇದು ಬಿಟ್ಟರೆ, ಊರು ಮುಳುಗುವಷ್ಟು ಮಳೆಯಾಗಿಲ್ಲ. ಮಳೆಯಿಂದಾಗಿ ಭೂಕುಸಿತವೂ ಆಗಿಲ್ಲ. ಅಂಕೋಲಾದಲ್ಲಿ ಹೆದ್ದಾರಿ ಸಹಿತ ಗುಡ್ಡ ಕುಸಿದಿದ್ದಕ್ಕೆ ಅಲ್ಲಿ ಗುಡ್ಡವನ್ನೇ ಅವೈಜ್ಞಾನಿಕ ರೀತಿ ಅಗೆದಿಟ್ಟು ರಸ್ತೆ ನಿರ್ಮಿಸಿದ್ದು ಕಾರಣ. ಶಿರಾಡಿ ಘಾಟ್ ಆಸುಪಾಸಿನಲ್ಲಿ ಗುಡ್ಡ ಕುಸಿದಿದ್ದರೆ, ಮಾರನಹಳ್ಳಿ, ಎತ್ತಿನಹಳ್ಳದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಎತ್ತಿನಹೊಳೆ ಯೋಜನೆ ಕಾರಣಕ್ಕೆ ಬೆಟ್ಟದ ತುದಿಯನ್ನು ಅಗೆದಿದ್ದೇ ಕಾರಣ. ನಾಲ್ಕು ವರ್ಷಗಳ ಹಿಂದೆ ಭಾರೀ ಮಳೆಗೆ ಮಡಿಕೇರಿ ಆಸುಪಾಸಿನಲ್ಲಿ ಊರಿಗೆ ಊರೇ ಎನ್ನುವ ರೀತಿ ಕುಸಿತಗಳಾಗಿದ್ದವು. ಅದಕ್ಕೂ ಸಕಲೇಶಪುರ ಆಸುಪಾಸಿನಲ್ಲಿ ಎತ್ತಿನಹೊಳೆ ಕಾರಣಕ್ಕೆ ಅಗೆದು ಹಾಕಿದ್ದು, ಆಮೂಲಕ ಬೆಟ್ಟದ ತುದಿಯ ಮೂಲಕ ಇಳಿದಿದ್ದು ಮಳೆನೀರು ಹೊರಬರಲಾಗದೆ ಬೆಟ್ಟಗಳ ಸಂದಿನ ಮೂಲಕ ಟಿಸಿಲೊಡೆದು ಬಂದಿದ್ದೇ ಕೊಡಗಿನ ಕುಸಿತಗಳಾಗಿದ್ದವು. ಇದ್ಯಾವುದನ್ನೂ ಇಂದಿಗೂ ಅರ್ಥ ಮಾಡಿಕೊಳ್ಳದ ಆಳುವವರು ಮತ್ತೆ ಮತ್ತೆ ರೆಡ್ ಅಲರ್ಟ್ ಕೊಡುತ್ತಲೇ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ.

ಈ ರೀತಿಯ ಮಳೆ ಹಿಂದಿನಿಂದಲೂ ಬರುತ್ತಿತ್ತು. ಹಾಗೆ ನೋಡಿದರೆ, ಹಿಂದಿನ ಕಾಲದ ಮಳೆಯೇ ಈಗ ಇಲ್ಲ. ವಾರ ಪೂರ್ತಿ ಬಿಸಿಲನ್ನೇ ಕಾಣದೆ, ಹನಿಯೇ ನಿಲ್ಲದೆ ಸುರಿಯುತ್ತಿದ್ದ ಮಳೆ ಮಾರುತಗಳಿದ್ದವು. ಹಾಗೆ ಸುರಿದಾಗಲೂ, ಯಾವುದೇ ಗುಡ್ಡ ಜರಿದು ಹೋಗಿದ್ದೂ ಇಲ್ಲ. ಹೆದ್ದಾರಿ ಕುಸಿದು ಹೋಗಿದ್ದೂ ಇಲ್ಲ. ಇತ್ತೀಚೆಗೆ ನಾಲ್ಕಾರು ವರ್ಷಗಳಿಂದ ಹಠಾತ್ ಕುಸಿತದ ವಿದ್ಯಮಾನ ಆಗುತ್ತಿರುವುದಕ್ಕೆ ಮಾನವ ನಿರ್ಮಿತ ಎಡವಟ್ಟುಗಳೇ ಕಾರಣ. ಆದರೂ, ಆಧುನಿಕ ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದಿದ್ದರೂ ಹವಾಮಾನ ಇಲಾಖೆಯವರು ಮಾತ್ರ ಆಗಿಂದಾಗ್ಗೆ ನಮ್ಮನ್ನು ಅವಮಾನ ಮಾಡುತ್ತಲೇ ಇದ್ದಾರೆ.

Red Alert, Meteorological dept humiliated after no heavy rains, no landslides, Mangalore rain.