BJP protest, Mangalore: ಶಾಲಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ನಿರಾಕರಣೆ ; ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿಯೆಂದ ಸತೀಶ್ ಕುಂಪಲ, ಬಿಜೆಪಿಯಿಂದ ಭಜನೆ ಹಾಡಿ ಪ್ರತಿಭಟನೆ

22-07-24 05:30 pm       Mangalore Correspondent   ಕರಾವಳಿ

ಸರಕಾರಿ ಶಾಲೆಗಳ ಆವರಣದಲ್ಲಿ ಅಥವಾ ಶಾಲಾ ಮೈದಾನದಲ್ಲಿ ಗಣೇಶೋತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸುತ್ತೋಲೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಹೊರಡಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ತುಷ್ಟೀಕರಣ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಮಂಗಳೂರು, ಜುಲೈ.22: ಸರಕಾರಿ ಶಾಲೆಗಳ ಆವರಣದಲ್ಲಿ ಅಥವಾ ಶಾಲಾ ಮೈದಾನದಲ್ಲಿ ಗಣೇಶೋತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸುತ್ತೋಲೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಹೊರಡಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ತುಷ್ಟೀಕರಣ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ನಗರದ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನಸೌಧ ಎದುರಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಗಣೇಶನ ವಿಗ್ರಹ ಮುಂದಿಟ್ಟು ಒಂದು ಗಂಟೆ ಕಾಲ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸತೀಶ್ ಕುಂಪಲ, ಕಾಂಗ್ರೆಸಿನಲ್ಲಿರುವ ಹಿಂದುಗಳು ಕೂಡ ಶಾಲೆಯ ಆವರಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಸುತ್ತಿದ್ದರು. ಶಾಲಾ ಮೈದಾನದಲ್ಲಿ ಎಲ್ಲ ಮಕ್ಕಳೂ ಜೊತೆಯಾಗಿ ಉತ್ಸವದಲ್ಲಿ ಕಳೆಯುತ್ತಿದ್ದರು. ಆದರೆ, ಕಾಂಗ್ರೆಸಿನ ಹಿಂದುಗಳು ಸರಕಾರದ ನೀತಿಯನ್ನು ಖಂಡಿಸಲಾಗದ ಸ್ಥಿತಿಯಲ್ಲಿದ್ದಾರೆ. ಹಿಂದುಗಳು ಜಾಗೃತರಾಗಬಾರದು, ಜೊತೆಗೂಡಬಾರದು ಎನ್ನುವ ಹುನ್ನಾರದಿಂದ ಈ ರೀತಿಯ ಕೆಲಸ ಮಾಡಿದ್ದಾರೆ.

ಸ್ವಾತಂತ್ರ್ಯ ಕಾಲದಲ್ಲಿ ಜನರನ್ನು ಒಗ್ಗೂಡಿಸುವುದಕ್ಕಾಗಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಣೆಗೆ ತಂದಿದ್ದರು. ಪ್ರತಿ ವರ್ಷ ಕರಾವಳಿ ಸೇರಿದಂತೆ ನಾಡಿನೆಲ್ಲೆಡೆ ಗಣೇಶೋತ್ಸವ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹಳಷ್ಟು ಕಡೆ ಶಾಲಾ ಮೈದಾನದಲ್ಲಿ ಹಬ್ಬ ನಡೆಸಲಾಗುತ್ತದೆ. ಆದರೆ, ಈ ಬಾರಿ ಜಿಲ್ಲಾ ಶಿಕ್ಷಣಾಧಿಕಾರಿಗಳು ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಶಿಕ್ಷಣೇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸೂಚಿಸಿದ್ದಾರೆ. ಆಮೂಲಕ ಹಿಂದುಗಳ ಹಬ್ಬ ಗಣೇಶೋತ್ಸವ ಇನ್ನಿತರ ಉತ್ಸವಗಳಿಗೆ ಆಸ್ಪದ ಸಿಗದಂತೆ ಮಾಡಿದ್ದಾರೆ. ಇದರ ಹಿಂದೆ ಸರ್ಕಾರದ ಹಿಂದು ವಿರೋಧಿ ನೀತಿ ಇದೆಯೆಂದು ಸತೀಶ್ ಕುಂಪಲ ಆರೋಪಿಸಿದರು.

ಪ್ರತಿಭಟನೆಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮೇಯರ್ ಸುಧೀರ್ ಶೆಟ್ಟಿ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಮಾತನಾಡಿದರು. ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ರವಿಶಂಕರ ಮಿಜಾರ್, ಕಿಶೋರ್ ಕುಮಾರ್, ಮಹಿಳಾ ಮೋರ್ಚಾ ಪ್ರಮುಖರು ಮತ್ತಿತರರಿದ್ದರು.

Denial of Ganeshotsava in school grounds by Congress government, BJP protest by Satish Kumpala in Mangalore.