Mcc commissioner C L Anand: ಪಾಲಿಕೆ ಆಯುಕ್ತರ ವಿರುದ್ಧ ಪ್ರಭಾವಿಗಳದ್ದೇ ಚಿತಾವಣೆ ; ಲೋಕಾಯುಕ್ತ ಮಹಜರು ವರದಿಯಲ್ಲೇ ಇಲ್ಲ ಅಕ್ರಮ ಆಸ್ತಿಯ ಉಲ್ಲೇಖ, ಆದ್ರೂ ಮಾಡಿದ್ರು ಪ್ರತಿಭಟನೆಯ ನಾಟಕ !!

23-07-24 10:22 pm       Mangalore Correspondent   ಕರಾವಳಿ

ಇತ್ತೀಚೆಗೆ ತನ್ನ ವರ್ಗಾವಣೆಗೆ ತಡೆ ತಂದು ಮಂಗಳೂರು ಮಹಾನಗರ ಪಾಲಿಕೆಯಲ್ಲೇ ಉಳಿದುಕೊಂಡಿರುವ ಆಯುಕ್ತ ಆನಂದ್ ಸಿ.ಎಲ್. ಅವರ ವಿರುದ್ಧ ಪ್ರಭಾವಿಗಳೇ ಸೇರಿಕೊಂಡು ಚಿತಾವಣೆ ಮಾಡುತ್ತಿರುವಂತೆ ಕಂಡುಬರುತ್ತಿದೆ.

ಮಂಗಳೂರು, ಜುಲೈ 23: ಇತ್ತೀಚೆಗೆ ತನ್ನ ವರ್ಗಾವಣೆಗೆ ತಡೆ ತಂದು ಮಂಗಳೂರು ಮಹಾನಗರ ಪಾಲಿಕೆಯಲ್ಲೇ ಉಳಿದುಕೊಂಡಿರುವ ಆಯುಕ್ತ ಆನಂದ್ ಸಿ.ಎಲ್. ಅವರ ವಿರುದ್ಧ ಪ್ರಭಾವಿಗಳೇ ಸೇರಿಕೊಂಡು ಚಿತಾವಣೆ ಮಾಡುತ್ತಿರುವಂತೆ ಕಂಡುಬರುತ್ತಿದೆ. ಎರಡು ದಿನಗಳ ಹಿಂದೆ ಬೆಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಕಚೇರಿ, ಮನೆಗಳಿಗೆ ದಾಳಿ ನಡೆಸಿ ಹೋಗಿದ್ದರು. ಇದೀಗ ಡಿವೈಎಫ್ಐ ಮತ್ತು ಕಮ್ಯುನಿಸ್ಟ್ ಸಂಘಟನೆಗಳು ಪಾಲಿಕೆಯ ಕಮಿಷನರ್ ಭ್ರಷ್ಟ ಎಂದು ಆರೋಪಿಸಿ ಪಾಲಿಕೆಯ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಜುಲೈ 19ರಂದು ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಕಚೇರಿ ಮತ್ತು ಮಣ್ಣಗುಡ್ಡೆಯಲ್ಲಿರುವ ಆಯುಕ್ತರ ಬಂಗಲೆಗೆ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಳಗ್ಗೆ 6 ಗಂಟೆಗೆ ಎಂಟ್ರಿಯಾಗಿದ್ದ ಹತ್ತಕ್ಕೂ ಹೆಚ್ಚಿದ್ದ ಪೊಲೀಸರ ತಂಡ ಮಧ್ಯಾಹ್ನದ ವರೆಗೆ ಕಚೇರಿ ಮತ್ತು ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಆದರೆ, ಮನೆಯಾಗಲೀ, ಕಚೇರಿಯಲ್ಲಾಗಲೀ ಒಂದೂ ಬೆಲೆಬಾಳುವ ವಸ್ತು ಸಿಕ್ಕಿಲ್ಲ. ಅಕ್ರಮ ಆಸ್ತಿ ಮಾಡಿದ್ದಾರೆ ಎಂಬುದನ್ನು ನಿರೂಪಿಸುವ ಯಾವುದೇ ಸಾಮಗ್ರಿಯೂ ಸಿಕ್ಕಿಲ್ಲ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳೂರಿನಲ್ಲಿ ಮಹಜರು ನಡೆಸಿರುವ ವರದಿ ‘’ಹೆಡ್ ಲೈನ್ ಕರ್ನಾಟಕ’’ಕ್ಕೆ ಲಭ್ಯವಾಗಿದ್ದು ಅದರಲ್ಲಿ ಯಾವುದೇ ವಸ್ತುವನ್ನೂ ವಶಕ್ಕೆ ಪಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಜುಲೈ 19ರಂದು ಅಧಿಕಾರಿಗಳು ಮಣ್ಣಗುಡ್ಡೆಯ ವೇರ್ ಹೌಸ್ ಬಳಿಯಿರುವ ಬಂಗಲೆಗೆ ಎಂಟ್ರಿ ಕೊಟ್ಟಾಗ ಅಡುಗೆ ಕೆಲಸದಾಳು ಮತ್ತು ಸೆಕ್ಯುರಿಡಿ ಗಾರ್ಡ್ ಮಾತ್ರ ಇದ್ದರು. ಮನೆಯಲ್ಲಿದ್ದ ಆನಂದ್ ಸಿ.ಎಲ್. ಲೋಕಾಯುಕ್ತ ತನಿಖೆಗೆ ಸಹಕರಿಸಿದ್ದು, ಎಲ್ಲ ಕಡೆಯೂ ಪರಿಶೀಲನೆ ನಡೆಸಲು ಸಹಕಾರ ನೀಡಿದ್ದಾರೆ. ಅದರಂತೆ, ಅಧಿಕಾರಿಗಳು ಅಲ್ಲಿರುವ ಪ್ರತಿ ವಸ್ತುವನ್ನೂ ಮಹಜರಿಗೆ ಒಳಪಡಿಸಿ ಲೆಕ್ಕ ಹಾಕಿದ್ದು, ಸರಕಾರದ್ದೇ ಆಗಿರುವ ಪಿಠೋಪಕರಣ ಹೊರತುಪಡಿಸಿ ಪ್ಲೇಟ್, ಬಟ್ಟಲು, ಕಪಾಟಿನಲ್ಲಿದ್ದ ಖಾಲಿ ಮದ್ಯ, ನೀರಿನ ಬಾಟಲು, ಮತ್ತೊಂದು ಅರ್ಧಕ್ಕಿದ್ದ ಬಾಟಲಿ ಸೇರಿದಂತೆ ಎಲ್ಲವನ್ನೂ ಮಹಜರು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಮೈಕ್ರೋವೇವ್ ಓವನ್ ಸೇರಿದಂತೆ ಕೆಲವು ಸಣ್ಣಪುಟ್ಟ ಉಪಕರಣಗಳ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಯಾವುದೇ ಬೆಲೆಬಾಳುವ ವಸ್ತು ಸಿಗದಿರುವುದನ್ನೂ ಉಲ್ಲೇಖಿಸಿದ್ದಾರೆ.

ದಾಳಿಯಾದ ದಿವಸ ಜುಲೈ 19ರಂದೇ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಒಟ್ಟು ಕಾರ್ಯಾಚರಣೆ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದರು. ಅದರಲ್ಲಿ ಮಂಗಳೂರಿನ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಅವರ ಆಸ್ತಿಯನ್ನು 2.77 ಕೋಟಿ ಎಂದು ಉಲ್ಲೇಖ ಮಾಡಿದ್ದರು. ಬೆಂಗಳೂರು ಮತ್ತು ಮೈಸೂರಿನಲ್ಲಿ ಎರಡು ಮನೆ, ಮಂಡ್ಯದಲ್ಲಿ ಇವರ ಹೆಸರಲ್ಲಿದ್ದ ಪಿತ್ರಾರ್ಜಿತವಾಗಿ ಬಂದ 4.27 ಎಕ್ರೆ ಜಮೀನು, 15 ಲಕ್ಷದ ಕಾರು, 19 ಲಕ್ಷದ ಚಿನ್ನಾಭರಣ, 16 ಲಕ್ಷ ಬ್ಯಾಂಕ್ ಖಾತೆಯಲ್ಲಿರುವ ಹಣ ಹೀಗೆ ಎಲ್ಲವೂ ಒಟ್ಟು ಮೌಲ್ಯದಲ್ಲಿ ಸೇರಿತ್ತು. 15 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿದ್ದ ಆನಂದ್ ಸಿ.ಎಲ್. ಬಳಿಕ ಸೇವಾ ನಿವೃತ್ತಿ ಪಡೆದು ಕರ್ನಾಟಕದಲ್ಲಿ ಕೆಎಎಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಅಧಿಕಾರಿ ಸೇವೆಗೆ ಬಂದಿದ್ದರು. 2015ರಿಂದ ಹಾಸನ, ಮೈಸೂರು, ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಮೊನ್ನೆ ಲೋಕಾಯುಕ್ತ ದಾಳಿಯ ದಿನ ಅತಿ ಕಡಿಮೆ ಆಸ್ತಿ ಸಿಕ್ಕಿರುವುದೇ ಇವರದ್ದು.  

2023ರ ಜೂನ್ ತಿಂಗಳಲ್ಲಿ ಮಂಗಳೂರಿಗೆ ಆಯುಕ್ತರಾಗಿ ಬಂದಿದ್ದ ಆನಂದ್ ಅವರು ಪೌರ ಕಾರ್ಮಿಕರ ಗುತ್ತಿಗೆ ಸಮಸ್ಯೆಯ ಬಗ್ಗೆ ಮೊದಲಾಗಿ ಗಮನ ಹರಿಸಿದ್ದರು. ದೀರ್ಘ ಕಾಲದಿಂದ ಗುತ್ತಿಗೆ ಕಾರ್ಮಿಕರಾಗಿದ್ದವರಿಗೆ ಖಾಯಮಾತಿ ಕೊಟ್ಟಿದ್ದರು. ಇದಲ್ಲದೆ, ಗುತ್ತಿಗೆಯಲ್ಲಿದ್ದ ಇತರೇ ಕಾರ್ಮಿಕರಿಗೆ ನೇರ ಪಾವತಿ ವ್ಯವಸ್ಥೆಯನ್ನೂ ಮಾಡಿದ್ದರು. ಈ ಹಿಂದೆ ಗುತ್ತಿಗೆ ವಹಿಸಿಕೊಂಡಿದ್ದ ಸಂಸ್ಥೆಯವರಿಗೆ ಪಾವತಿಯಾಗಿ ಕಾರ್ಮಿಕನಿಗೆ ಹಣ ತಲುಪುವಾಗ ವಿಳಂಬ ಆಗುತ್ತಿತ್ತು. ಆಯುಕ್ತರಾಗಿ ಸೇವೆಗೆ ಸೇರಿದ ಆರಂಭದಲ್ಲಿಯೇ ಮಾನವೀಯ ನೆಲೆಯಲ್ಲಿ ಕೆಲಸ ಮಾಡಿದ್ದು ಕಾರ್ಮಿಕರ ದೀರ್ಘಾವಧಿಯ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿದಿತ್ತು. ಅದೇ ಕಾರಣಕ್ಕೆ ಮೊನ್ನೆ ವರ್ಗಾವಣೆ ಆದೇಶ ಬಂದ ಕೂಡಲೇ ಪೌರ ಕಾರ್ಮಿಕರು ಕೆಲಸ ನಿಲ್ಲಿಸಿ ಪ್ರತಿಭಟನೆಗೂ ಮುಂದಾಗಿದ್ದರು.

ಇಷ್ಟಕ್ಕೂ ಆನಂದ್ ಸಿ.ಎಲ್. ಅವರು ಮೈಸೂರಿನವರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೇ ಕುರುಬ ಜನಾಂಗದ ವ್ಯಕ್ತಿ.  ಇತ್ತೀಚೆಗೆ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಮಣ್ಣು ಕುಸಿದು ಬಿದ್ದ ಘಟನೆಯಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಈ ವೇಳೆ, ಕಾರ್ಮಿಕರ ಜೊತೆಗೆ ಮಣ್ಣಿನ ಹೊಂಡಕ್ಕಿಳಿದು ರಕ್ಷಣಾ ಕಾರ್ಯದಲ್ಲೂ ಆನಂದ್ ನಿರತರಾಗಿದ್ದರು. ಘಟನೆಯ ಬಳಿಕ ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ ಎಂಬ ಪಾಲಿಕೆಯ ಸೂಚನೆಯನ್ನು ಧಿಕ್ಕರಿಸಿದ ಸದ್ರಿ ಕಟ್ಟಡದ ಬಿಲ್ಡರಿಗೆ ಮುಂದಿನ ಆದೇಶದ ವರೆಗೆ ಕಾಮಗಾರಿ ನಡೆಸಕೂಡದು ಎಂದು ಆದೇಶ ಮಾಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಆನಂದ್ ಅವರಿಗೆ ವರ್ಗಾವಣೆ ಆದೇಶ ಬಂದಿತ್ತು. ಆ ಕಟ್ಟಡದಲ್ಲಿ ಕೆಲಸ ಮಾತ್ರ ನಿಂತಿಲ್ಲ!

ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ ಪಾಲಿಕೆಯ ಸೂಚನೆಯನ್ನು ಲೆಕ್ಕಿಸದೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಹಲವು ಬಿಲ್ಡರುಗಳಿಗೆ ಆಯುಕ್ತರು ನೋಟೀಸ್ ಜಾರಿ ಮಾಡಿದ್ದರಂತೆ. ಇದಲ್ಲದೆ, ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಕಾರಣಕ್ಕೆ ಮುಖ್ಯ ಆರ್ಕಿಟೆಕ್ಟ್ ಧರ್ಮರಾಜ್ ಅವರಿಗೂ ನೋಟೀಸ್ ಮಾಡಿದ್ದರಂತೆ. ಇವೆಲ್ಲ ಒತ್ತಡಗಳು ಆಯುಕ್ತ ಆನಂದ್ ಸಿ.ಎಲ್ ವರ್ಗಾವಣೆ ಹಿಂದೆ ಕೆಲಸ ಮಾಡಿದ್ದವು. ಆದರೆ, ವರ್ಗಾವಣೆ ಆದೇಶಕ್ಕೆ ಟ್ರಿಬ್ಯುನಲ್ ಮೂಲಕ ಆನಂದ್ ತಡೆ ತಂದಿದ್ದಲ್ಲದೆ, ಅದೇ ಹುದ್ದೆಯಲ್ಲಿ ಉಳಿದುಬಿಟ್ಟದ್ದು ಬಿಲ್ಡರುಗಳ ಆಟಕ್ಕೆ ಹುಳಿ ಹಿಂಡಿದಂತಾಗಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಲೋಕಾಯುಕ್ತದ ಕಡೆಯಿಂದ ದಾಳಿ ಮಾಡಿಸಲಾಗಿತ್ತು. ಎರಡು ವರ್ಷದ ಹಿಂದೆ ಆನಂದ್ ಬಿಡಿಎ ಅಧಿಕಾರಿಯಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದಾರೆಂಬ ದೂರಿನಂತೆ ದಾಳಿ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ, ಯಾವುದೇ ಅಧಿಕಾರಿಯ ಬಗ್ಗೆ ದಾಳಿ ಮಾಡುವುದಿದ್ದರೂ ಎಷ್ಟು ಆಸ್ತಿ ಮಾಡಿಟ್ಟಿದ್ದಾನೆಂದು ಮೇಲ್ನೋಟಕ್ಕೆ ಪರಿಶೀಲನೆ ಮಾಡಿದ ಬಳಿಕವೇ ಲೋಕಾಯುಕ್ತ ಕಾರ್ಯಾಚರಣೆ ನಡೆಸುತ್ತೆ. ಇಲ್ಲಿ ಆ ಕೆಲಸ ನಡೆದಿದೆಯೋ ಎನ್ನುವ ಅನುಮಾನ ಇದೆ. ಆದರೆ ಮಂಗಳೂರಿನಲ್ಲಿ ದಾಳಿ ನಡೆಸುವುದಕ್ಕೂ ಕೆಲವರ ಚಿತಾವಣೆ ಇತ್ತು ಎನ್ನುವ ಮಾಹಿತಿ ಇದೆ.

ಇಷ್ಟೆಲ್ಲ ಆದರೂ ಅಲ್ಲಾಡಿಸಲು ಆಗಿಲ್ಲ ಎಂದು ಇದೀಗ ಕೆಲವರಿಂದ ಪ್ರತಿಭಟನೆಯ ನಾಟಕ ಮಾಡಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಲೋಕಾಯುಕ್ತ ದಾಳಿಯ ಕಾರಣಕ್ಕೆ ವಜಾ ಮಾಡಬೇಕೆಂದು ಪ್ರತಿಭಟನೆ ಮಾಡುವುದಿದ್ದರೆ, ವಾರಕ್ಕೊಮ್ಮೆ ಪ್ರತಿಭಟನೆ ಮಾಡಬೇಕಾದೀತು. ಮೊನ್ನೆ ಕೆಎಸ್ಆರ್ ಪಿ ಇನ್ಸ್ ಪೆಕ್ಟರ್ ಹಾರೀಸ್ ಎಂಬಾತ ತನ್ನ ಕೈಕೆಳಗಿನ ಪೇದೆಯಿಂದಲೇ ಹಣಕ್ಕಾಗಿ ಪೀಡಿಸುತ್ತಿದ್ದ ಎಂಬ ವಿಚಾರದಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದ. ಆತನ ವಿರುದ್ಧ ಹಿಂದಿನಿಂದಲೂ ಈ ರೀತಿಯ ಆರೋಪಗಳಿದ್ದವು. ಎರಡು ತಿಂಗಳ ಹಿಂದೆ ಮೂಡಾ ಕಮಿಷನರ್ ಭ್ರಷ್ಟಾಚಾರದಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಇಂಥ ಪ್ರಕರಣ ಪ್ರತಿ ವಾರ ನಡೆಯುತ್ತಲೇ ಇರುತ್ತವೆ. ಎಲ್ಲಿಯೂ ಆಗಿರದ ಪ್ರತಿಭಟನೆ ದಿಢೀರ್ ಎನ್ನುವಂತೆ ಪಾಲಿಕೆಯ ಮುಂದೆ ಆಗಿರುವುದು ಏನೋ ಅನುಮಾನ ಮೂಡಿಸುವಂತಿದೆ. ಈ ಬಗ್ಗೆ ಅಧಿಕಾರಿಯಲ್ಲೇ ಕೇಳೋಣ ಅಂದ್ರೆ, ಕರೆಯನ್ನೇ ಸ್ವೀಕರಿಸಲಿಲ್ಲ. ಹಾಗೆಂದು, ಇವರ ಪರವಾಗಿ ನಾವು ಸುದ್ದಿ ಮಾಡಿದ್ದಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಚಾಟಿ ಬೀಸುವ ಅಧಿಕಾರಿಗಳನ್ನು ಹೆಚ್ಚು ಕಾಲ ಉಳಿಯಲು ಬಿಡಲ್ಲ ಅನ್ನುವುದಷ್ಟೇ ಕಾಳಜಿ.

Commissioner of Mangalore City Corporation C. L. Anand found himself trapped in Lokayukta by unknown forces. He obtained a transfer order shortly after the order against the private builder to terminate the building license, and Anand later filed a stay against it. Later, Lokayukta agents searched his home and workplace, but they discovered no illicit property. DYFI, however, organized a protest against him, claiming that he is a corrupt officer, even after Lokayukta discovered no cash or illicit assets.