Mangalore Ganeshotsava: ಸರ್ಕಾರಿ ಶಾಲೆ ಮೈದಾನದಲ್ಲಿ ಧಾರ್ಮಿಕ ಚಟುವಟಿಕೆಗೆ ಬ್ರೇಕ್ ; ತಮ್ಮದೇ ಸರಕಾರದ ಹಳೆ ಸುತ್ತೋಲೆ ಬಿಜೆಪಿಗೆ ಬಿಸಿತುಪ್ಪ, ಯುವಮೋರ್ಚಾ ಪ್ರತಿಭಟನೆಯಿಂದ ವಿವಾದಕ್ಕೆ ರೆಕ್ಕೆ ಪುಕ್ಕ, ಗಣೇಶೋತ್ಸವ, ಶಾರದೋತ್ಸವಕ್ಕೆ ಸಿಗುತ್ತಾ ಅವಕಾಶ ?   

24-07-24 10:11 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಸರಕಾರಿ ಶಾಲೆಯ ಕಟ್ಟಡ ಅಥವಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಇತ್ತೀಚೆಗೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದ್ದು ಬಿಜೆಪಿ ಪಾಲಿಗೆ ಪ್ರತಿಭಟನೆಯ ಅಸ್ತ್ರವಾಗಿತ್ತು.

ಮಂಗಳೂರು, ಜುಲೈ 24: ರಾಜ್ಯದಲ್ಲಿ ಸರಕಾರಿ ಶಾಲೆಯ ಕಟ್ಟಡ ಅಥವಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಇತ್ತೀಚೆಗೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದ್ದು ಬಿಜೆಪಿ ಪಾಲಿಗೆ ಪ್ರತಿಭಟನೆಯ ಅಸ್ತ್ರವಾಗಿತ್ತು. ಗಣೇಶೋತ್ಸವ, ಕೃಷ್ಣಾಷ್ಟಮಿ ಹತ್ತಿರ ಬರುತ್ತಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಈ ರೀತಿಯ ಆದೇಶ ಹೊರಡಿಸಿ ಹಿಂದು ವಿರೋಧಿ ನೀತಿ ಅನುಸರಿಸಿದ್ದಾರೆಂದು ಆರೋಪಿಸಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಂತೂ ಈ ಸುತ್ತೋಲೆಯ ನೆಪದಲ್ಲಿ ಉಪ್ಪು ಖಾರ ಹಾಕಿ ರಾಜಕೀಯ ಲಾಭದ ಲೆಕ್ಕ ಹಾಕಿದ್ದರು.

ಆದರೆ, ಈ ರೀತಿಯ ಸುತ್ತೋಲೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಹೊರಡಿಸಿದ್ದೇ ಬಿಜೆಪಿ ಸರಕಾರ ಇದ್ದಾಗ ಎನ್ನುವ ವಿಚಾರ ತಿಳಿದುಬಂದಿದೆ. 2013ರ ಫೆಬ್ರವರಿ 7ರಂದು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈ ರೀತಿಯ ಸುತ್ತೋಲೆಯನ್ನು ಮೊದಲಿಗೆ ಹೊರಡಿಸಲಾಗಿತ್ತು. ಆನಂತರ, 2023ರ ಡಿ.1ರಂದು ಸಿದ್ದರಾಮಯ್ಯ ಸರಕಾರದಲ್ಲಿ ಅದೇ ಸುತ್ತೋಲೆಯನ್ನು ಮತ್ತೊಮ್ಮೆ ರಾಜ್ಯದಾದ್ಯಂತ ಶಾಲಾಡಳಿತ ಮಂಡಳಿಗಳಿಗೆ ರವಾನಿಸಲಾಗಿತ್ತು. ಹಾಗಂತ, ಸರಕಾರಿ ಶಾಲೆಗಳ ಮೈದಾನಗಳಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಇನ್ನಿತರ ಕಾರ್ಯಕ್ರಮಗಳಿಗೇನು ಬ್ರೇಕ್ ಬಿದ್ದಿರಲಿಲ್ಲ.

ಇತ್ತೀಚೆಗೆ ಸುಳ್ಯದಲ್ಲಿ ಸರಕಾರಿ ಶಾಲೆಯೊಂದರಲ್ಲಿ ಆರೆಸ್ಸೆಸ್ ಪ್ರೇರಿತ ಗುರುಪೂಜನ ಕಾರ್ಯಕ್ರಮ ನಡೆದಿದ್ದು ಮತ್ತು ಅದರ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್ ಸರಕಾರ ಇದ್ದಾಗಲೇ ಇದಕ್ಕೆಲ್ಲ ಅವಕಾಶ ಕೊಟ್ಟಿದ್ದು ಹೇಗೆ ಎಂಬ ಪ್ರಶ್ನೆ ಬಂದಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡುರಾವ್ ಅವರಿಗೂ ದೂರು ಹೋಗಿತ್ತು. ಆರೆಸ್ಸೆಸ್ ಕಾರ್ಯಕ್ರಮದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಪ ನಿರ್ದೇಶಕ ವೆಂಕಟೇಶ್ ಪಟಗಾರ ಅವರನ್ನು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದರಲ್ಲದೆ, ಶಿಸ್ತು ಕ್ರಮಕ್ಕೆ ಆಗ್ರಹ ಮಾಡಿದ್ದರು. ಇದರ ಬೆನ್ನಲ್ಲೇ ಹಿಂದೆ ಇದ್ದ ಸುತ್ತೋಲೆಯನ್ನು ಮತ್ತೊಮ್ಮೆ ಜ್ಞಾಪನಾ ಪತ್ರದ ನೆಲೆಯಲ್ಲಿ ಎಲ್ಲ ಶಾಲೆಗಳಿಗೂ ಶಿಕ್ಷಣಾಧಿಕಾರಿ ರವಾನೆ ಮಾಡಿದ್ದರು.

ಸುತ್ತೋಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಮೈದಾನ ಅಥವಾ ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸಬಾರದು ಮತ್ತು ಅನುಮತಿ ನೀಡಬಾರದಾಗಿ ಸೂಚಿಸಲಾಗಿರುತ್ತದೆ. ಅದರಂತೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಮೈದಾನ, ಆವರಣವನ್ನು ಬಳಸಲು ಅನುಮತಿಗಾಗಿ ಈ ಕಚೇರಿಗೆ ಪ್ರಸ್ತಾವನೆ ಸಲ್ಲಿಸದಂತೆಯೂ ಸೂಚಿಸಿದೆ. ಅಲ್ಲದೆ, ಶಾಲಾ ಹಂತದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಬೇರಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ತಿಳಿಸಿದೆ. ಆದೇಶವನ್ನು ಉಲ್ಲಂಘಿಸಿದಲ್ಲಿ ಶಾಲೆಯ ಮುಖ್ಯಸ್ಥರೇ ಹೊಣೆಯಾಗುತ್ತಾರೆಂದೂ ತಿಳಿಸಿದೆ ಎಂದು ಶಿಕ್ಷಣ ಇಲಾಖೆಯಿಂದ ಫರ್ಮಾನು ಹೊರಡಿಸಲಾಗಿತ್ತು.

ಈ ರೀತಿಯ ಸುತ್ತೋಲೆ ಹೊರಡಿಸಿರುವುದು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚತ್ತುಕೊಂಡ ಬಿಜೆಪಿ ಯುವಮೋರ್ಚಾ ನಾಯಕರು, ಇದೇ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಇದಕ್ಕೆ ಕಾರಣರು ಎಂದು ಆರೋಪಿಸಿದ್ದರು. ಆದರೆ, ಈ ರೀತಿಯ ಆದೇಶವನ್ನು 11 ವರ್ಷಗಳ ಹಿಂದೆ ಬಿಜೆಪಿ ಸರಕಾರ ಇದ್ದಾಗಲೇ ಹೊರಡಿಸಿದ್ದರೂ ಯಥಾವತ್ ಜಾರಿಗೆ ತಂದಿರಲಿಲ್ಲ. ಇದೀಗ ಬಿಜೆಪಿಯವರೇ ಇದನ್ನು ವಿವಾದ ಮಾಡಿದ್ದು, ಶಿಕ್ಷಣ ಇಲಾಖೆಯ ಹಳೆ ಸುತ್ತೋಲೆಯೇ ಬಿಸಿತುಪ್ಪವಾಗಿ ಪರಿಣಮಿಸಿದೆ. ಜಿಲ್ಲೆಯ ಹಲವಾರು ಕಡೆಗಳಲ್ಲಿ ಬಿಜೆಪಿ, ಹಿಂದು ಸಂಘಟನೆಯವರು, ಕಾಂಗ್ರೆಸಿಗರು ಪ್ರತ್ಯೇಕವಾಗಿ ಗಣೇಶೋತ್ಸವ, ಕೃಷ್ಣಾಷ್ಟಮಿ ರೀತಿಯ ಉತ್ಸವಗಳನ್ನು ಶಾಲೆಗಳ ಮೈದಾನದಲ್ಲಿ ನಡೆಸಿಕೊಂಡು ಬಂದಿದ್ದಾರೆ. ಇದಲ್ಲದೆ, ಶಾಲೆಯ ವತಿಯಿಂದಲೂ ಶಾರದೋತ್ಸವ ಇನ್ನಿತರ ಕಾರ್ಯಕ್ರಮಗಳು ನಡೆದು ಬಂದಿದ್ದವು. ಈ ಸುತ್ತೋಲೆಯ ಕಾರಣಕ್ಕೆ ಇಂತಹ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳುತ್ತಾ ಅನ್ನುವ ಕುತೂಹಲ ಮೂಡಿದೆ.

ಗಣೇಶೋತ್ಸವ, ಕೃಷ್ಣಾಷ್ಟಮಿ ಹತ್ತಿರ ಬರುತ್ತಿರುವುದರಿಂದ ಸಂಘಟಕರು ಕೂಡ ಈ ಬಗ್ಗೆ ಗೊಂದಲದಲ್ಲಿದ್ದಾರೆ. ಮಂಗಳೂರು ನಗರದ ಆಸುಪಾಸಿನಲ್ಲಿ ಹಲವು ಕಡೆ ಉತ್ಸವಕ್ಕೆ ಶಾಲಾ ಮೈದಾನಗಳ ಬಳಕೆಯಾಗುತ್ತದೆ. ಬಿಜೆಪಿಯವರು ನಾವು ಎಂದಿನಂತೆ ಕಾರ್ಯಕ್ರಮ ನಡೆಸಿಯೇ ತೀರುತ್ತೇವೆ ಎಂದಿದ್ದಾರೆ. ಅವಕಾಶ ನೀಡದೇ ಇದ್ದರೆ ಸರಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದೂ ಹೇಳಿದ್ದಾರೆ. ಈಗ ಕಾಂಗ್ರೆಸಿಗರಿಗೆ ಹಳೆ ಸುತ್ತೋಲೆಯನ್ನು ಯಥಾವತ್ ಜಾರಿಗೆ ತರುವುದೋ, ಸಡಿಲಿಕೆ ಮಾಡುವುದೋ ಎನ್ನುವ ಜಿಜ್ಞಾಸೆಗೆ ಒಳಗಾಗುವಂತಾಗಿದೆ.

Break for religious activities in government school grounds, will Ganeshotsava be celebrated in Mangalore even after protest by Yuva morcha ?