ಎಡಕುಮೇರಿ ಬಳಿ ರೈಲು ಹಳಿಗೆ ಭೂಕುಸಿತ ; ಮಂಗಳೂರು- ಬೆಂಗಳೂರು ರೈಲು ವಿಳಂಬ, ಕೇರಳ, ತಮಿಳುನಾಡು ಮೂಲಕ ಸಂಚರಿಸಲು ವ್ಯವಸ್ಥೆ, ಏಳು ರೈಲುಗಳಿಗೆ ಡೈವರ್ಶನ್, ರಾತ್ರಿ ರೈಲಿಗೆ ಕಾದು ಸುಸ್ತಾದ ಪ್ರಯಾಣಿಕರು   

26-07-24 10:24 pm       Mangalore Correspondent   ಕರಾವಳಿ

ಸಕಲೇಶಪುರ ಬಳಿಯ ಎಡಕುಮೇರಿ – ಕಡಗರವಳ್ಳಿ ನಡುವೆ ರೈಲ್ವೇ ಹಳಿಯ ಮೇಲೆ ಗುಡ್ಡಕುಸಿತ ಉಂಟಾಗಿದ್ದು, ಹಾಸನ- ಮಂಗಳೂರು ನಡುವೆ ಸಂಚರಿಸುವ ರೈಲುಗಳಿಗೆ ಕೇರಳ- ತಮಿಳುನಾಡು ಮೂಲಕ ಸಂಚಾರಕ್ಕೆ ಕಲ್ಪಿಸಲಾಗಿದೆ.

ಮಂಗಳೂರು, ಜುಲೈ 26: ಸಕಲೇಶಪುರ ಬಳಿಯ ಎಡಕುಮೇರಿ – ಕಡಗರವಳ್ಳಿ ನಡುವೆ ರೈಲ್ವೇ ಹಳಿಯ ಮೇಲೆ ಗುಡ್ಡಕುಸಿತ ಉಂಟಾಗಿದ್ದು, ಹಾಸನ- ಮಂಗಳೂರು ನಡುವೆ ಸಂಚರಿಸುವ ರೈಲುಗಳಿಗೆ ಕೇರಳ- ತಮಿಳುನಾಡು ಮೂಲಕ ಸಂಚಾರಕ್ಕೆ ಕಲ್ಪಿಸಲಾಗಿದೆ. ಶುಕ್ರವಾರ ಸಂಜೆ ಕಾರವಾರ – ಬೆಂಗಳೂರು ರೈಲು ಮತ್ತು ಕೇರಳದ ಕಣ್ಣೂರಿನಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಸಾಗುವ ರೈಲಿನ ಸಂಚಾರ ವಿಳಂಬವಾಗಿದ್ದು, ತಮಿಳುನಾಡು ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಾತ್ರಿ 8 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಕಣ್ಣೂರು –ಬೆಂಗಳೂರು ರೈಲು ಶುಕ್ರವಾರ ರಾತ್ರಿ 9.30 ಆದರೂ ಹೊರಟಿರಲಿಲ್ಲ. ರೈಲು ಟಿಕೆಟ್ ಪಡೆದು ಕಾದು ಕುಳಿತಿದ್ದ ಪ್ರಯಾಣಿಕರು ಬೇಸತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಆನಂತರ, ರೈಲು ಸಾಗುವ ಹಾದಿಯಲ್ಲಿ ಭೂಕುಸಿತ ಆಗಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕೆಲವು ಪ್ರಯಾಣಿಕರು ಬೆಂಗಳೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ತೆರಳಿದ್ದಾರೆ. 9.45ರ ಸುಮಾರಿಗೆ ಸದ್ರಿ ರೈಲು ಮರಳಿ ಕೇರಳದತ್ತ ಸಂಚರಿಸಿದ್ದು, ಕಣ್ಣೂರು, ಸೇಲಂ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದೆ.

ಸಕಲೇಶಪುರ ಭೂಕುಸಿತದ ಕಾರಣ ಏಳು ರೈಲುಗಳ ಸಂಚಾರವನ್ನ ಮಾರ್ಗ ಬದಲಾವಣೆ ಮಾಡಲಾಗಿದೆ. ಶುಕ್ರವಾರ ಮಂಗಳೂರು ಸೆಂಟ್ರಲ್ ನಿಂದ ಹೊರಟ 07378 ಸಂಖ್ಯೆಯ ವಿಜಯಪುರ ಎಕ್ಸ್ ಪ್ರೆಸ್ ರೈಲು ಸಕಲೇಶಪುರ ಮಾರ್ಗದ ಬದಲು ಕಾರವಾರ, ಮಡಗಾಂವ್, ಕ್ಯಾಲರ್ ರಾಕ್, ಲೋಂಡಾ ಜಂಕ್ಷನ್, ಹುಬ್ಬಳ್ಳಿ ಮೂಲಕ ವಿಜಯಪುರ ತೆರಳಿದೆ. ಬೆಂಗಳೂರು ನಿಲ್ದಾಣದಿಂದ ಎಂಟು ಗಂಟೆಗೆ ಕಾರವಾರಕ್ಕೆ ಹೊರಟ 16596 ಸಂಖ್ಯೆಯ ರೈಲು ಯಶವಂತಪುರ ನಿಲ್ದಾಣದಿಂದ ಡೈವರ್ಟ್ ಆಗಿದ್ದು, ಬಾಣಸವಾಡಿ, ಸೇಲಂ ಜಂಕ್ಷನ್, ಪೋದನೂರು ಜಂಕ್ಷನ್, ಶೋರನೂರು ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ.

ಶುಕ್ರವಾರ ಮಧ್ಯಾಹ್ನ ಮುರುಡೇಶ್ವರದಿಂದ ಬೆಂಗಳೂರು ಹೊರಟ 16586 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್ ಮೂಲಕ ಡೈವರ್ಟ್ ಆಗಿದ್ದು, ಶೋರ್ನೂರು, ಸೇಲಂ ಮೂಲಕ ಬೆಂಗಳೂರು ತಲುಪಲಿದೆ. ಶುಕ್ರವಾರ ಸಂಜೆಯ ವೇಳೆಗೆ ಕೇರಳದ ಕಣ್ಣೂರಿನಿಂದ ಬೆಂಗಳೂರು ಹೊರಟ 16512 ಸಂಖ್ಯೆಯ ರೈಲು ಮಂಗಳೂರು ಸೆಂಟ್ರಲ್ ಗೆ ಬಂದು ವಿಳಂಬಗೊಂಡಿದ್ದು, ಶೋರನೂರು, ಸೇಲಂ ಜಂಕ್ಷನ್ ಮೂಲಕ ಬೆಂಗಳೂರು ತಲುಪಲಿದೆ.

ಕಾರವಾರದಿಂದ ಬೆಂಗಳೂರಿಗೆ ತೆರಳುವ 16596 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್ನಲ್ಲಿ ಡೈವರ್ಟ್ ಆಗಲಿದ್ದು ಶೋರನೂರು, ಸೇಲಂ ಜಂಕ್ಷನ್ ಮೂಲಕ ತೆರಳಲಿದೆ. ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಬರುವ 16511 ಸಂಖ್ಯೆಯ ರೈಲು ಸೇಲಂ ಜಂಕ್ಷನ್, ಶೋರನೂರು ಮೂಲಕ ಮಂಗಳೂರು ಜಂಕ್ಷನ್ ಬರಲಿದೆ. ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬರುವ 16585 ಸಂಖ್ಯೆಯ ಎಕ್ಸ್ ಪ್ರೆಸ್ ರೈಲು ತಮಿಳುನಾಡಿನ ಸೇಲಂ ಮೂಲಕ ಶೋರನೂರು ಆಗಿ ಮಂಗಳೂರು ಜಂಕ್ಷನ್ ಮುಖೇನ ತೆರಳಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟಣೆ ತಿಳಿಸಿದೆ. ಒಟ್ಟಿನಲ್ಲಿ ಮಂಗಳೂರು- ಬೆಂಗಳೂರು ಸಾಗುವ ಶಿರಾಡಿ ಘಾಟ್ ಹಾದಿಯ ಹಳಿಯಲ್ಲಿ ಭೂಕುಸಿತ ಆಗಿರುವುದರಿಂದ ಎಲ್ಲ ರೈಲುಗಳು ಸುತ್ತು ಬಳಸಿ ಸಂಚರಿಸುವಂತಾಗಿದೆ.

Heavy rain in Mangalore, landslide at yadakumari and kadagaravalli in South Western railway, seven trains diverted along with kannur Bangalore train.