ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಸರ್ಕಾರಿ ಉದ್ಯೋಗ ನಿಮ್ಮನ್ನು ಹುಡುಕಿ ಬರುತ್ತದೆ, ನನಗೀಗ ಪತಿಯೇ ದೊಡ್ಡ ಶಕ್ತಿ ; ಅನುಭವ ಹೇಳಿಕೊಂಡ ಒಲಿಂಪಿಕ್ಸ್ ಸಾಧಕಿ ಎಂ.ಆರ್. ಪೂವಮ್ಮ

25-08-24 12:05 pm       Mangalore Correspondent   ಕರಾವಳಿ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ, ಉದ್ಯೋಗ ನಿಮ್ಮನ್ನು ಹುಡುಕಿ ಬರುತ್ತದೆ. ನೀವೊಮ್ಮೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದರೆ ಕೇಂದ್ರ ಸರಕಾರದ ಉದ್ಯೋಗ ಖಚಿತವಾಗಿ ಸಿಗುತ್ತದೆ.

ಮಂಗಳೂರು, ಆಗಸ್ಟ್.25: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ, ಉದ್ಯೋಗ ನಿಮ್ಮನ್ನು ಹುಡುಕಿ ಬರುತ್ತದೆ. ನೀವೊಮ್ಮೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದರೆ ಕೇಂದ್ರ ಸರಕಾರದ ಉದ್ಯೋಗ ಖಚಿತವಾಗಿ ಸಿಗುತ್ತದೆ. ರೈಲ್ವೇ, ಐಟಿ, ಬ್ಯಾಂಕ್ ನಂತಹ ಪ್ರತಿಷ್ಠಿತ ಕ್ಷೇತ್ರದಲ್ಲಿ ಅಧಿಕಾರಿಯಾಗುವ ಅವಕಾಶ ನಿಮ್ಮದಾಗುತ್ತದೆ. ಹೀಗೆಂದು ಉತ್ತೇಜನಕಾರಿ ಮಾತು ಹೇಳಿದವರು ಮಂಗಳೂರು ಮೂಲದ ಖ್ಯಾತ ಅತ್ಲೀಟ್ ಎಂ.ಆರ್. ಪೂವಮ್ಮ.

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡ ಸಾಧಕಿ ಪೂವಮ್ಮ ಮತ್ತು ಅವರ ಪತಿ ಅತ್ಲೀಟ್ ಜಿತಿನ್ ಪೌಲ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತನ್ನ ಅನುಭವ ಮತ್ತು ಕ್ರೀಡಾ ಕ್ಷೇತ್ರದ ಪ್ರತಿಭೆಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ನಾನು ಆರನೇ ಕ್ಲಾಸಿನಲ್ಲೇ ಕ್ರೀಡಾ ಕ್ಷೇತ್ರಕ್ಕಿಳಿದೆ. ಮೊದಲಿಗೆ ಕಬಡ್ಡಿ, ಓಟ, ಶಟ್ಲ್ ಎಲ್ಲದರಲ್ಲಿಯೂ ಪಾಲ್ಗೊಳ್ಳುತ್ತಿದ್ದೆ. ತಂದೆ ಮಂಗಳೂರು ಏರ್ಪೋರ್ಟ್ ಉದ್ಯೋಗಿಯಾಗಿದ್ದರಿಂದ ಬಜ್ಪೆಯಲ್ಲಿ ಮನೆ ಇತ್ತು. ಅಲ್ಲಿ ಸರಿಯಾದ ಮೈದಾನ ಇಲ್ಲವೆಂದು ಉರ್ವಾದಲ್ಲಿ ಮನೆ ಮಾಡಿ, ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ತರಬೇತಿಗೆ ಅವಕಾಶ ನೀಡಿದರು. ಅಲ್ಲಿ ಟ್ರ್ಯಾಕ್ ಸಿಕ್ಕಿದ್ದರಿಂದ ನನ್ನ ಸಾಧನೆಗೆ ನೆರವಾಯಿತು.

ಸಣ್ಣಂದಿನಿಂದ ಈವರೆಗೂ ನನ್ನ ಸಾಧನೆಗೆ ಕುಟುಂಬವೇ ಕಾರಣ. ಈಗ ನನ್ನ ಪತಿಯೇ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದಾರೆ. ಒಲಿಂಪಿಕ್ಸ್ ಹೋಗುವುದು, ಅರ್ಹತಾ ಸುತ್ತು ಪಾಸ್ ಮಾಡುವುದು ಸುಲಭ ಇಲ್ಲ. ನಾವು ಏಷ್ಯನ್, ವರ್ಲ್ಡ್ ಚಾಂಪ್ಯನ್ ಆದರಷ್ಟೇ ಓಲಿಂಪಿಕ್ಸ್ ಅರ್ಹತೆ ಪಡೆಯಬಹುದು. 400 ಮೀಟರ್ ಹರ್ಡಲ್ಸ್ ನಲ್ಲಿ 57 ಸೆಕೆಂಡ್ ನಲ್ಲಿ ಓಡಬೇಕಿತ್ತು. ಇದಕ್ಕಾಗಿ ನಿರಂತರ ಸಾಧನೆ ಮಾಡಬೇಕಾಗಿತ್ತು. ಬೆಳಗ್ಗಿನ ಉಪಾಹಾರ, ಊಟ ಎಲ್ಲವನ್ನೂ ನನ್ನ ಪತಿಯೇ ಮಾಡಿಕೊಡುತ್ತಿದ್ದರು. ನನಗೀಗ 34 ವರ್ಷ, ಇನ್ನೂ ಸಾಧನೆ ಮಾಡಬೇಕೆಂದಿದ್ದೇನೆ. ಮದುವೆಯಾಗಿ ಎರಡು ವರ್ಷ ಆಗಿದೆ. ಆದರೆ ನನ್ನ ಪಾಲಿಗೆ ಈಗ ಪತಿಯೇ ಬಲಗೈಯಾಗಿ ನಿಂತಿದ್ದಾರೆ ಎಂದು ಸ್ಮರಿಸಿದರು.

ನನ್ನ ಪತಿಯೂ ಅತ್ಲೀಟ್. ಕ್ರೀಡಾ ಕೋಟಾದಡಿ ಐಟಿ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದೆ. ಪುಣೆಯಲ್ಲಿ ಐಟಿ ಇನ್ಸ್ ಪೆಕ್ಟರ್ ಆಗಿದ್ದಾರೆ. ಜೊತೆಗೆ, ನನಗೂ ಸಪೋರ್ಟ್ ಮಾಡುತ್ತಿದ್ದಾರೆ. ನನಗೆ ಫಾರಿನ್ ಕೋಚ್ ಇದ್ದು ಅವರು ವಿದೇಶದಿಂದಲೇ ಆನ್ಲೈನ್ ಮೂಲಕ ತರಬೇತಿ ನೀಡುತ್ತಾರೆ. ದಿನಾ ಬೆಳಗ್ಗೆ, ಸಂಜೆ ಟ್ರೈನಿಂಗ್ ಮಾಡಬೇಕು. ನಿರಂತರ ಶ್ರಮದಿಂದಲೇ ಸಾಧನೆ ಮಾಡಬೇಕು ವಿನಾ ಒಮ್ಮೆ ಸೋತೆನೆಂದು ಕುಳಿತುಬಿಟ್ಟರೆ ಸಾಧನೆ ಮಾಡಲಾಗದು. ಗೆಲ್ಲುವ ಛಲ, ಬದ್ಧತೆ ಇದ್ದರೆ ಸಾಧನೆ ಮಾಡಲು ಸಾಧ್ಯ ಎಂದು ಪೂವಮ್ಮ ತನ್ನ ಅನುಭವ ಹೇಳಿಕೊಂಡರು.

ನನಗೀಗ ರೈಲ್ವೇ, ಐಟಿ, ಬೇರೆ ಬೇರೆ ಇಲಾಖೆಗಳಿಂದ ದೊಡ್ಡ ಉದ್ಯೋಗದ ಆಫರ್ ಸಿಕ್ಕಿದೆ. ಸದ್ಯಕ್ಕೆ ಓಎನ್ ಜಿಸಿ ಕಂಪನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿದ್ದೇನೆ. ಹೆಸರಿಗಷ್ಟೇ ಉದ್ಯೋಗ. ಕೆಲಸಕ್ಕೆ ಹೋಗಬೇಕಂತಿಲ್ಲ. ಸಂಬಳ ಬರುತ್ತದೆ, ನಮಗೆ ಕ್ರೀಡೆಯಲ್ಲಿ ಮುಂದುವರಿಯುವುದಕ್ಕೆ ಅವಕಾಶ ಇದೆ. ದೇಶಕ್ಕಾಗಿ ನಾವು ಆಡುತ್ತೇವೆಂದು ಉದ್ಯೋಗ ಕೊಟ್ಟ ಕಂಪನಿಗಳು ನಮಗೆ ಸಪೋರ್ಟ್ ಮಾಡುತ್ತವೆ. ಈಗ ಯುನಿವರ್ಸಿಟಿ ಲೆವಲಲ್ಲಿ ಸಾಧನೆ ಮಾಡಿದರೂ ರೈಲ್ವೇಯಲ್ಲಿ ಉದ್ಯೋಗದಲ್ಲಿ ಅವಕಾಶ ಇದೆ. ಹಿಂದೆಲ್ಲಾ ಈಗಿನಷ್ಟು ಸೌಲಭ್ಯ ಇರಲಿಲ್ಲ. ಸರಕಾರದ ಕಡೆಯಿಂದ ಪ್ರೋತ್ಸಾಹ ಇರಲಿಲ್ಲ. ಈಗ ಎಲ್ಲವೂ ಇದೆ, ಯುವಜನಾಂಗ ಕ್ರೀಡೆಯಲ್ಲಿ ಸಾಧನೆ ಮಾಡುವತ್ತ ಮುನ್ನುಗ್ಗಬೇಕು ಎಂದು ಹೇಳಿದರು ಪೂವಮ್ಮ.

ಕೊಡಗಿನ ಮೂಲದ ಎಂ.ಆರ್ ಪೂವಮ್ಮ ಬೆಳೆದಿದ್ದು ಮಂಗಳೂರಿನಲ್ಲಿ. ಮಂಗಳೂರಿನ ಮಂಗಳಾ ಸ್ಟೇಡಿಯಂ ಅಂಗಣದಲ್ಲಿಯೇ ತರಬೇತಿ ಪಡೆದು ಸತತ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ. ಏಶ್ಯನ್ ಗೇಮ್ಸ್ ನಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಸದ್ಯಕ್ಕೆ ನಿವೃತ್ತಿಯ ಬಗ್ಗೆ ಚಿಂತನೆ ಮಾಡಿಲ್ಲ. ಆರೋಗ್ಯ ಇರುವಷ್ಟು ಕಾಲ ಸಾಧನೆ ಮಾಡಬೇಕು ಎಂಬ ಛಲ ಇದೆ. ನಿವೃತ್ತಿಯ ಬಳಿಕ ಅತ್ಲೀಟ್ ಗಳಿಗೆ ಸಪೋರ್ಟ್ ಮಾಡಲು ಟ್ರೈನಿಂಗ್ ಸೆಂಟರ್ ಮಾಡಬೇಕೆಂಬ ಕನಸಿದೆ ಎನ್ನುತ್ತಾರೆ, ಪೂವಮ್ಮ.

Budding sportspersons can excel by performing confidently without being deterred by losing competitions, Olympian and Arjuna awardee M.R. Poovamma said in Mangalore on Saturday, August 24.