Mangalore, Rabies, Someshwara: ಗೋವಿಗೆ ರೇಬೀಸ್ ಸೋಂಕು ಶಂಕೆ ! ಹುಚ್ಚೆದ್ದು ಮನೆ ಆವರಣಕ್ಕೆ ನುಗ್ಗಿ ದಾಂಧಲೆ, ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರ ಮೇಲೆ ದಾಳಿ, ಹರಸಾಹಸ ಪಟ್ಟು ಹಸುವನ್ನ ಹಿಡಿದ ಸ್ಥಳೀಯರು, ಕೆಲಕ್ಷಣದಲ್ಲೇ ಸಾವು ! 

11-09-24 12:56 pm       Mangalore Correspondent   ಕರಾವಳಿ

ಭಾರಿ ಗಾತ್ರದ ಹಸುವೊಂದು ಏಕಾಏಕಿ ಹುಚ್ಚೆದ್ದು ಮನೆಯೊಂದರ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದಲ್ಲದೆ, ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರಿಗೆ ತಿವಿದು ಗಾಯಗೊಳಿಸಿರುವ ಘಟನೆ ಸೋಮೇಶ್ವರ ಬಳಿ ನಡೆದಿದೆ‌.

ಉಳ್ಳಾಲ, ಸೆ. 11: ಭಾರಿ ಗಾತ್ರದ ಹಸುವೊಂದು ಏಕಾಏಕಿ ಹುಚ್ಚೆದ್ದು ಮನೆಯೊಂದರ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದಲ್ಲದೆ, ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರಿಗೆ ತಿವಿದು ಗಾಯಗೊಳಿಸಿರುವ ಘಟನೆ ಸೋಮೇಶ್ವರ ಬಳಿ ನಡೆದಿದೆ‌. ಸ್ಥಳೀಯರು ಬಳಿಕ ಹರಸಾಹಸ ಪಟ್ಟು ಹಸುವನ್ನ ಹಿಡಿದಿದ್ದು, ಪಶು ವೈದ್ಯರು ಅರಿವಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಹಸು ಮೃತಪಟ್ಟಿದ್ದರಿಂದ ರೇಬೀಸ್ ಸೋಂಕಿನ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸೋಮೇಶ್ವರ ದ್ವಾರದ ಬಳಿಯ ನಿವಾಸಿಯೋರ್ವರಿಗೆ ಸೇರಿದ ಹಸು ಏಕಾಏಕಿ ಹುಚ್ಚೆದ್ದ ರೀತಿ ವರ್ತಿಸಿದ್ದು ಸ್ಥಳೀಯರನ್ನು ಭಯಭೀತಗೊಳಿಸಿದೆ. ಮೇಯಲು ಬಿಟ್ಟಿದ್ದ ಹಸು ನಿನ್ನೆ ಸಂಜೆ ಏಕಾಏಕಿ ಹುಚ್ಚೆದ್ದು ಮಹಿಳೆಯೋರ್ವರಿಗೆ ತಿವಿದಿದೆ. ಅಲ್ಲಿಂದ ಮುಂದಕ್ಕೆ ಓಡಿದ ಹಸುವು ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಬಳಿಗೆ ಸಾಗಿ ಸ್ಕೂಟರ್ ಒಂದಕ್ಕೆ ತಿವಿದಿದ್ದು , ಸಿಕ್ಕ, ಸಿಕ್ಕವರ ಮೇಲೆ ದಾಳಿ ನಡೆಸಿದೆ. ಅಲ್ಲಿದ್ದ ಮನೆಯ ಆವರಣ ಗೋಡೆಯೊಳಕ್ಕೆ ನುಗ್ಗಿ ಧಾಂದಲೆ ನಡೆಸಿದೆ. 

ಭಯಗೊಂಡ ಸ್ಥಳೀಯರು ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಅವರಲ್ಲಿ ವಿಚಾರ ತಿಳಿಸಿದ್ದಾರೆ. ರವಿಶಂಕರ್ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಬರಲು ತಿಳಿಸಿದ್ದು ಅಧಿಕಾರಿಗಳು ಅದು ನಮ್ಮ ಕೆಲಸವಲ್ಲ ಅಂತ ಹೇಳಿ ಜಾರಿಕೊಂಡಿದ್ದಾರೆ. ವಿಧಿಯಿಲ್ಲದೆ ರವಿಶಂಕರ್ ಅವರೇ ಸ್ಥಳೀಯರ ಜತೆ ಸೇರಿ ಬಹಳ ಹರಸಾಹಸ ಪಟ್ಟು ಹಗ್ಗದಿಂದ ಧಾಂದಲೆ ನಡೆಸುತ್ತಿದ್ದ ಹಸುವನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಸುವಿನ ವಿಚಾರ ಸ್ಥಳೀಯ ಶಾಸಕ ಯು.ಟಿ.ಖಾದರ್ ಗಮನಕ್ಕೂ ಬಂದಿದ್ದು ಕೂಡಲೇ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ತಂಡವನ್ನ ರವಾನಿಸಿದ್ದಾರೆ. ಸ್ಥಳೀಯರು ಹಿಡಿದ ಹಸುವಿಗೆ ಪಶು ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದ್ದು ಕೆಲ ಹೊತ್ತಲ್ಲೇ ಹಸು ಸಾವನ್ನಪ್ಪಿದೆ.

ಬಹುತೇಕ ರೇಬೀಸ್ ಕಾಯಿಲೆಯಿಂದಲೇ ಹುಚ್ಚೆದ್ದು ಧಾಂದಲೆ ನಡೆಸಿರುವುದಾಗಿ ಕೋಟೆಕಾರು ಸರಕಾರಿ ಪಶು ಆಸ್ಪತ್ರೆಯ ಪಶು ವೈಧ್ಯಾಧಿಕಾರಿ ಡಾ.ಗಜೇಂದ್ರ ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಧೃಢೀಕರಿಸಲು ದನದ ಮೆದುಳನ್ನ ಪ್ರಯೋಗಾಲಯಕ್ಕೆ ಕಳುಹಿಸ ಬೇಕಾಗುತ್ತದೆ. ಆದರೆ ಅದಕ್ಕೆ ಹಸುವಿನ ಮಾಲಕರು ಒಪ್ಪಿಗೆ ನೀಡಬೇಕು. ಹುಚ್ಚು ನಾಯಿಯ ಕಡಿತದಿಂದ‌ ರೇಬೀಸ್ ಆವರಿಸಿರಬಹುದು. ರೇಬೀಸ್ ಆವರಿಸಿದರೆ ಹಸು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಹಸುವಿನಿಂದ ನೇರವಾಗಿ ರೇಬಿಸ್ ಹರಡುವುದು ಕಡಿಮೆ. ಆದರೆ, ಅದರ ಜೊಲ್ಲು ತೆರೆದ ಗಾಯಕ್ಕೆ ತಗುಲಿದರೆ ಮಾತ್ರ ರೇಬೀಸ್ ಹರಡಲು ಸಾಧ್ಯವಿದೆ ಎಂದು ಗಜೇಂದ್ರ ಕುಮಾರ್ ಹೇಳಿದ್ದಾರೆ.

Mangalore Rabies attack on cow, attacks residents in Someshwara, forest officals trap cow after long rescue operation but the cow was later found dead.