ರಾಜ್ಯಾದ್ಯಂತ ಮಾನವ ಸರಪಳಿ ; ಕೈ-ಕೈ ಜೋಡಿಸಿ ಪ್ರಜಾಪ್ರಭುತ್ವ ದಿನದ ಸ್ಮರಣೆ, ಸಾವಿರಾರು ಶಾಲಾ ಮಕ್ಕಳು, ಶಿಕ್ಷಕರು, ಸರ್ಕಾರಿ ನೌಕರರು ಭಾಗಿ, ಏಕಕಾಲದಲ್ಲಿ ಒಂದು ಗಂಟೆ ಹೆದ್ದಾರಿ ಸಂಚಾರ ಸ್ಥಗಿತ, ವಾಹನ ಸವಾರರು ಪರದಾಟ

15-09-24 09:44 pm       Mangalore Correspondent   ಕರಾವಳಿ

ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15ರ ಭಾನುವಾರ ರಾಜ್ಯಾದ್ಯಂತ ಅತಿದೊಡ್ಡ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ 9.30ರಿಂದ 10 ಗಂಟೆಯ ವರೆಗಿನ ಅರ್ಧ ಗಂಟೆ ಅವಧಿಯಲ್ಲಿ ಚಾಮರಾಜನಗರದಿಂದ ಬೀದರ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಡೆಸಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಮಂಗಳೂರು, ಸೆ.15: ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15ರ ಭಾನುವಾರ ರಾಜ್ಯಾದ್ಯಂತ ಅತಿದೊಡ್ಡ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ 9.30ರಿಂದ 10 ಗಂಟೆಯ ವರೆಗಿನ ಅರ್ಧ ಗಂಟೆ ಅವಧಿಯಲ್ಲಿ ಚಾಮರಾಜನಗರದಿಂದ ಬೀದರ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಡೆಸಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಇದರಂಗವಾಗಿ ಮಂಗಳೂರಿನಲ್ಲಿ ನಂತೂರು, ಕೆಪಿಟಿ, ಕುಂಟಿಕಾನ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಮಾನವ ಸರಪಳಿ ನಡೆಸಲಾಗಿದ್ದು, ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಮಂಗಳೂರಿನ ಕದ್ರಿ ಪಾರ್ಕ್ ಬಳಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆದಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ, ಶಾಸಕ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮವೂ ನಡೆಯಿತು. ಕದ್ರಿ ಪಾರ್ಕ್ ನಲ್ಲಿ ಸಂಸದರು ಸಸಿ ನೆಟ್ಟರು.

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಒಂದು ಬದಿಯಲ್ಲಿ ವಾಹನಗಳನ್ನು ತಡೆದು ಏಕಮುಖದ ರಸ್ತೆಯಲ್ಲೇ ವಾಹನಗಳನ್ನು ಹೋಗಲು ಬಿಡಲಾಗಿತ್ತು. ಕೆಪಿಟಿ, ಕೊಟ್ಟಾರ, ಸುರತ್ಕಲ್, ಕುಳೂರು, ನಂತೂರು ಹೀಗೆ ಪ್ರಮುಖ ಜಂಕ್ಷನ್ ಗಳಲ್ಲಿ ಇತರ ಕಡೆಯಿಂದ ಬರುವ ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಬೆಳಗ್ಗೆ 9 ಗಂಟೆಗೆ ಮೊದಲೇ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು. ಮಾನವ ಸರಪಳಿ ವಿಷಯ ತಿಳಿಯದವರು ರಸ್ತೆ ಬಂದ್ ಮಾಡಿದ್ದಕ್ಕೆ ಹಿಡಿಶಾಪ ಹಾಕಿದರು. ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದು ಏಕೆಂದು ಪೊಲೀಸರಲ್ಲಿ ಪ್ರಶ್ನೆ ಮಾಡುತ್ತಿದ್ದರು. ಹತ್ತು ಗಂಟೆಯ ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬಿಟ್ಟುಕೊಡಲಾಯಿತು. ಆಯಾ ಭಾಗದಲ್ಲಿ ಒಂದೊಂದು ಇಲಾಖೆಯವರಿಗೆ ಮಾನವ ಸರಪಳಿಯ ನೇತೃತ್ವ ನೀಡಲಾಗಿತ್ತು.

ವಾರ್ತಾ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರು ತಾಲೂಕಿನಲ್ಲಿ 35 ಸಾವಿರ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ 18200, ಸುಳ್ಯದಲ್ಲಿ ಹತ್ತು ಸಾವಿರ, ಪುತ್ತೂರಿನಲ್ಲಿ 21 ಸಾವಿರ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 84,200 ಮಂದಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂದಾಜಿನ ಮಾಹಿತಿಯನ್ನು ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಬೀದರಿನಿಂದ ಚಾಮರಾಜನಗರದ ವರೆಗೆ ಎಲ್ಲ ಜಿಲ್ಲೆಗಳನ್ನು ಒಳಗೊಂಡಂತೆ ಹೆದ್ದಾರಿಯುದ್ದಕ್ಕೂ ಮಾನವ ಸರಪಳಿ ರಚಿಸುವುದಕ್ಕೆ ಮೊದಲೇ ರಸ್ತೆ ಗೊತ್ತುಪಡಿಸಲಾಗಿತ್ತು. ಇದರಂತೆ, ರಾಜ್ಯ ಸರಕಾರ ಒಟ್ಟು 2500 ಕಿಮೀ ಉದ್ದಕ್ಕೆ ಮಾನವ ಸರಪಳಿ ರಚಿಸುವುದಕ್ಕೆ ಸಿದ್ಧತೆ ನಡೆಸಿತ್ತು.

Human chain formed on International Day of Democracy in Mangalore, major highways blocked causing huge problem to public on road. As a part of the International Day of Democracy celebrations, a 130-km human chain was formed in Dakshina Kannada from Hejamady to Sampaje Gate on Sunday.