ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕನಾಡಿ ಠಾಣೆಯ ಪೇದೆ ಆಸ್ಪತ್ರೆಯಲ್ಲಿ ಸಾವು, ಮದುವೆ ನಿಶ್ಚಿತಾರ್ಥ ಮುಗಿಸಿದ್ದಾಗಲೇ ದುರ್ವಿಧಿ ! 

09-02-25 10:31 pm       Mangalore Correspondent   ಕರಾವಳಿ

ರಜೆಯಲ್ಲಿ ಊರಿಗೆ ಹೋಗಿ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ಸುಳ್ಯದಲ್ಲಿ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡಿದ್ದ ಕಂಕನಾಡಿ ನಗರ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಹರೀಶ್ ಅವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮಂಗಳೂರು, ಫೆ.9: ರಜೆಯಲ್ಲಿ ಊರಿಗೆ ಹೋಗಿ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ಸುಳ್ಯದಲ್ಲಿ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡಿದ್ದ ಕಂಕನಾಡಿ ನಗರ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಹರೀಶ್ ಅವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ರಜೆ ಮುಗಿಸಿಕೊಂಡು ಫೆ.5ರಂದು ಮಡಿಕೇರಿ ಮೂಲಕ ಸುಳ್ಯದಿಂದ ಬರುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಯಾವುದಾದರೂ ವಾಹನ ಡಿಕ್ಕಿ ಹೊಡೆದು ಅಪಘಾತ ಆಗಿದ್ದೇ ಎನ್ನುವ ಬಗ್ಗೆ ಪೊಲೀಸರಿಗೂ ಮಾಹಿತಿ ಇಲ್ಲ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅದೇ ದಿನ ಮಂಗಳೂರಿನ ಆಸ್ಪತ್ರೆಗೆ ಕರೆತರಲಾಗಿತ್ತು. ನಾಲ್ಕು ದಿನಗಳ ಬಳಿಕ ಭಾನುವಾರ ಮಧ್ಯಾಹ್ನ ಹರೀಶ್ ಮೃತಪಟ್ಟಿದ್ದಾರೆ.

ಹರೀಶ್ ಅವರು ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಗಾಯನಹಳ್ಳಿ ನಿವಾಸಿಯಾಗಿದ್ದು, ಮದುವೆಯಾಗಲು ಹೆಣ್ಣು ನೋಡಿ ನಿಶ್ಚಯವೂ ಆಗಿತ್ತು. ಅಷ್ಟರಲ್ಲಿಯೇ ದುರ್ವಿಧಿಗೆ ಬಲಿಯಾಗಿದ್ದು, ಇಹಲೋಕ ತ್ಯಜಿಸಿದ್ದಾರೆ. ಏಳು ವರ್ಷದ ಹಿಂದೆ ಪೊಲೀಸ್ ಇಲಾಖೆ ಸೇರಿದ್ದ ಅವರು, ಮಂಗಳೂರಿನಲ್ಲಿ ಪಾಂಡೇಶ್ವರ, ಆಬಳಿಕ ಕಂಕನಾಡಿ ಠಾಣೆಯಲ್ಲಿ ಒಂದು ವರ್ಷದಿಂದ ಕರ್ತವ್ಯದಲ್ಲಿದ್ದರು.

Mangalore Bike accident, Kankandy town police constable Harish no more. Harish was a native of Mysore and met with bike accident at sullia and breathed his last today at a private hospital in Mangalore