ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳದಲ್ಲಿ ಗುಟ್ಟಾಗಿ ಮದುವೆ ; ಮೂರೇ ತಿಂಗಳಲ್ಲಿ ವಿಷ ಕುಡಿದು ನವವಿವಾಹಿತೆ ಆತ್ಮಹತ್ಯೆ

13-07-26 02:54 pm       HK News Staffer   ಕ್ರೈಂ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿ, ಧರ್ಮಸ್ಥಳದಲ್ಲಿ ಗುಟ್ಟಾಗಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬರು ಮದುವೆಯಾದ ಕೇವಲ ಮೂರು ತಿಂಗಳಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ , ಜುಲೈ 13: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿ, ಧರ್ಮಸ್ಥಳದಲ್ಲಿ ಗುಟ್ಟಾಗಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬರು ಮದುವೆಯಾದ ಕೇವಲ ಮೂರು ತಿಂಗಳಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಮೃತರನ್ನು ಗೌರಿಬಿದನೂರು ತಾಲೂಕಿನ ಬೀರಮ್ಮನಹಳ್ಳಿ ನಿವಾಸಿ ತನುಜಾ ಎಂದು ಗುರುತಿಸಲಾಗಿದೆ. ಮೃತ ತನುಜಾ ಯಲಹಂಕದ ಮಾಯಸಂದ್ರ ನಿವಾಸಿ ರವೀಂದ್ರ ಅವರನ್ನು ಕೆಲ ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.

ಮದುವೆಯ ವಿಚಾರ ರವೀಂದ್ರ ಕುಟುಂಬಕ್ಕೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಬಳಿಕ ಮನೆಯವರೊಂದಿಗೆ ಮಾತನಾಡುವುದಾಗಿ ಹೇಳಿದ್ದ ರವೀಂದ್ರ, ಆರಂಭದಲ್ಲಿ ತನುಜಾರನ್ನು ಪಿಜಿಯಲ್ಲಿ ಇರಿಸಿ, ಬಳಿಕ ಯಲಹಂಕದ ಸಿಂಗಾಪುರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದನು.

ಶನಿವಾರ ರಾತ್ರಿ ತನುಜಾ ರವೀಂದ್ರಗೆ ಕರೆ ಮಾಡಿ ಮನೆಗೆ ಬರುವಂತೆ ಕೋರಿದ್ದರು. ಆದರೆ ತಕ್ಷಣ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದು ರವೀಂದ್ರ ಹೇಳಿದ್ದಾನೆ. ಇದರಿಂದ ಮನನೊಂದ ತನುಜಾ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು.

10 ಗಂಟೆ ವೇಳೆಗೆ ತನುಜಾ ರವೀಂದ್ರಗೆ "ವಿಷ ಕುಡಿದಿದ್ದೇನೆ" ಎಂದು ಸಂದೇಶ ಕಳುಹಿಸಿದ್ದು, ತಾವು ನೆಲಮಂಗಲದ ಬಸವನಹಳ್ಳಿ ಬಳಿ ಇರುವುದಾಗಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ರವೀಂದ್ರ, ತನುಜಾವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳು ಹಾಗೂ ಘಟನೆಯ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.