Mangalore Ullal Police, Inspector Balakrishna: ಕೋಟೆಕಾರು ಬ್ಯಾಂಕ್ ದರೋಡೆ ಕೇಸಿನ ಕ್ರೆಡಿಟ್ಟು ; ಸಿಎಂ ಮೆಡಲಿಗೆ ದುಂಬಾಲು ಬಿದ್ದು ತನ್ನ ಬುಡಕ್ಕೇ ತಂದುಕೊಂಡ ಇನ್ಸ್ ಪೆಕ್ಟರ್ ! ಮರಳು ದಂಧೆ, ರೌಡಿ ಲಿಸ್ಟಲ್ಲೂ ಬಿಲ್ಗಾರಿಕೆ ! ಭಾನಗಡಿ ದಾಟಿದ ಉಳ್ಳಾಲದ ನುಂಗಣ್ಣ ಬಾಲಕೃಷ್ಣ ಎತ್ತಂಗಡಿ ?!

13-02-25 09:17 pm       Mangalore Correspondent   ಕರಾವಳಿ

ಉಳ್ಳಾಲ ಇನ್ಸ್ ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ದರೋಡೆ ಪ್ರಕರಣ ಭೇದಿಸಿದ ಕ್ರೆಡಿಟ್ಟನ್ನು ತನ್ನ ಕೊರಳಿಗೇ ಕಟ್ಟಿಕೊಳ್ಳಲು ಯತ್ನಿಸಿ ಮುಖ್ಯಮಂತ್ರಿ ಪದಕಕ್ಕೆ ದುಂಬಾಲು ಬಿದ್ದು ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.  

ಮಂಗಳೂರು, ಫೆ.13 : ಇತ್ತೀಚೆಗೆ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿದ್ದಕ್ಕೆ ಸಾರ್ವಜನಿಕರ ಕಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಮಂಗಳೂರು ಪೊಲೀಸರ ತಂಡ ಪ್ರಯತ್ನದಿಂದ ದರೋಡೆ ಪ್ರಕರಣವನ್ನು ಅತ್ಯಲ್ಪ ಅವಧಿಯಲ್ಲಿ ಭೇದಿಸಲಾಗಿತ್ತು. ಆದರೆ ಉಳ್ಳಾಲ ಇನ್ಸ್ ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ದರೋಡೆ ಪ್ರಕರಣ ಭೇದಿಸಿದ ಕ್ರೆಡಿಟ್ಟನ್ನು ತನ್ನ ಕೊರಳಿಗೇ ಕಟ್ಟಿಕೊಳ್ಳಲು ಯತ್ನಿಸಿ ಮುಖ್ಯಮಂತ್ರಿ ಪದಕಕ್ಕೆ ದುಂಬಾಲು ಬಿದ್ದು ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.  

ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ದಿಢೀರ್ ಆಗಿ ಒಂದು ತಿಂಗಳ ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದು, ಬಹುತೇಕ ಅವರನ್ನು ಮಂಗಳೂರಿನಿಂದ ಎತ್ತಂಗಡಿ ಮಾಡಿದಂತಾಗಿದೆ. ರಜೆಯಲ್ಲಿ ಕಳುಹಿಸಿದ್ದಕ್ಕೆ ನಾನಾ ರೀತಿಯ ಕಾರಣಗಳನ್ನು ಹೇಳಲಾಗುತ್ತಿದೆ. ಆದರೆ ಪೊಲೀಸ್ ಕಮಿಷನರ್ ಇಂಥದ್ದೇ ಕಾರಣ ಎಂದು ದೃಢಪಡಿಸಿಲ್ಲ. ಇತ್ತೀಚೆಗಷ್ಟೇ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿ ಮುರುಗನ್ ಡಿ ದೇವರ್ ಮೇಲೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಗುಂಡು ಹಾರಿಸಿದ್ದು ಭಾರೀ ಸುದ್ದಿಯಾಗಿತ್ತು. ಕಸ್ಟಡಿಯಲ್ಲಿದ್ದ ಆರೋಪಿಯನ್ನು ಕೇರಳ ಗಡಿಭಾಗದ ಅಜ್ಜಿನಡ್ಕ ಪ್ರದೇಶಕ್ಕೆ ಕರೆದೊಯ್ದು ಗುಂಡು ಹಾರಿಸಲಾಗಿತ್ತು. ಇದೇ ಪ್ರಕರಣದಲ್ಲಿ ಮೊದಲಿಗೆ ಕಣ್ಣನ್ ಮಣಿಗೆ ಶೂಟ್ ಮಾಡಿದ್ದಾಗ ಸ್ವತಃ ಇನ್ಸ್ ಪೆಕ್ಟರ್ ಆಗಿದ್ದ ಬಾಲಕೃಷ್ಣ ಅವರೇ ತನ್ನ ಮೇಲೆ ಆರೋಪಿ ಕೈಮಾಡಿದ್ದಾನೆಂದು ಆಸ್ಪತ್ರೆಯಲ್ಲಿ ಮಲಗಿದ್ದು ಮುಜುಗರಕ್ಕೀಡು ಮಾಡಿತ್ತು. ಪ್ರತಿಯಾಗಿ ಕಸ್ಟಡಿಯಲ್ಲಿದ್ದ ಆರೋಪಿ ಮೇಲೆ ತಾನೇ ಶೂಟ್ ಮಾಡಿ ಹೋದ ಮಾನ ತಂದುಕೊಂಡ ರೀತಿ ಬೀಗಿದ್ದರು. 

ಕ್ರೆಡಿಟ್ ಪಡೆಯಲು ಹೋಗಿ ಗುನ್ನಾ 

ಮೂಲಗಳ ಪ್ರಕಾರ, ದರೋಡೆ ಪ್ರಕರಣದ ಕ್ರೆಡಿಟನ್ನು ತಾನೇ ಪಡೆದುಕೊಳ್ಳಲು ಇನ್ಸ್ ಪೆಕ್ಟರ್ ಬಾಲಕೃಷ್ಣ ಉಳ್ಳಾಲದ ಕಾಂಗ್ರೆಸ್ ನಾಯಕರ ಮೂಲಕ ಸ್ಪೀಕರ್ ಯುಟಿ ಖಾದರ್ ಗೆ ಅಹವಾಲು ಇಟ್ಟಿದ್ದರು ಎನ್ನಲಾಗುತ್ತಿದೆ. ಇದಲ್ಲದೆ, ಕೋಟೆಕಾರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಮತ್ತು ಕೆಲವು ಪ್ರಮುಖರಲ್ಲಿ ತನಗೆ ದೊಡ್ಡ ಇನಾಮು ಕೊಡಬೇಕೆಂದೂ ಡಿಮ್ಯಾಂಡ್ ಇಟ್ಟಿದ್ದರು ಎನ್ನುವ ಮಾಹಿತಿಯೂ ಇದೆ. ಈ ಬಗ್ಗೆ ಕೃಷ್ಣ ಶೆಟ್ಟಿಯವರು ಇತ್ತೀಚೆಗೆ ಉಚ್ಚಿಲದ ಕಿಯಾಂಝ ಸಭಾಂಗಣದಲ್ಲಿ ನಡೆದಿದ್ದ ಸಮಾರಂಭದಲ್ಲಿ ಸ್ವತಃ ಯುಟಿ ಖಾದರ್ ಗಮನಕ್ಕೂ ತಂದಿದ್ದರು. ದರೋಡೆ ಪ್ರಕರಣ ಭೇದಿಸಿದ್ದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಪದಕ ಅಥವಾ ಬ್ಯಾಂಕಿನಿಂದ ಗಿಫ್ಟ್ ಪಡೆದುಕೊಳ್ಳುವುದಕ್ಕೆ ಒಳಗಿಂದೊಳಗೆ ಬಾಲಕೃಷ್ಣ ಪ್ರಯತ್ನ ನಡೆಸಿದ್ದು ಮೇಲಧಿಕಾರಿಗಳ ಕಿವಿಗೂ ತಲುಪಿತ್ತು. ಇದರ ಬೆನ್ನಲ್ಲೇ ಮೇಲಧಿಕಾರಿಗಳು ಕಡ್ಡಾಯ ರಜೆಯಲ್ಲಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.   

ಈ ಹಿಂದೆ ಮೈಸೂರು ಜಿಲ್ಲೆಯ ವಿಜಯನಗರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಬಾಲಕೃಷ್ಣ ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ್ದಾರೆಂದು ಎಸಿಬಿ ಅಧಿಕಾರಿಗಳು 2022ರ ಮಾರ್ಚ್ 16ರಂದು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಮೈಸೂರಿನ ಆಗಿನ ಪೊಲೀಸ್ ಕಮಿಷನರ್ ಚಂದ್ರಗುಪ್ತ, ಬಾಲಕೃಷ್ಣ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಮಾಡಿದ್ದರು. ಆನಂತರ, ಹಾಸನದಲ್ಲಿ ಕೆಲಕಾಲ ಪೋಸ್ಟಿಂಗ್ ಮಾಡಿಕೊಂಡಿದ್ದ ಬಾಲಕೃಷ್ಣ, 2023ರ ಸೆಪ್ಟಂಬರ್ ತಿಂಗಳಲ್ಲಿ ತನ್ನ ಸಂಬಂಧಿಕ ಕಾಂಗ್ರೆಸ್ ನಾಯಕರ ಮೂಲಕ ಉಳ್ಳಾಲ ಠಾಣೆಗೆ ವಕ್ಕರಿಸಿದ್ದರು. ಉಳ್ಳಾಲದಲ್ಲಿ ಕರ್ತವ್ಯಕ್ಕೆ ಬಂದ ದಿನದಿಂದಲೂ ದಾಖಲಾದ ಕೇಸುಗಳಿಗಿಂತ ಇವರು ತನ್ನ ವೈಯಕ್ತಿಕ ಲಾಭದ ಲೆಕ್ಕ ಹಾಕಿದ್ದೇ ಹೆಚ್ಚು.

ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ! 

ಕೊಲ್ಯದ ಒಂಟಿ ಮನೆಯೊಂದರಲ್ಲಿ ನೂರು ಗ್ರಾಮ್ ಗೂ ಅಧಿಕ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿತ್ತು. ಮನೆಯವರು ಕದ್ದೊಯ್ದ ಚಿನ್ನದ ಬಗ್ಗೆ ಸರಿಯಾದ ಲೆಕ್ಕ ಹೇಳಿದ್ದರೂ, ಇನ್ಸ್ ಪೆಕ್ಟರ್ ಬಾಲಕೃಷ್ಣ ಮಾತ್ರ 30 ಗ್ರಾಮಿಗೂ ಹೆಚ್ಚು ಕಳ್ಳತನವೆಂದು ಹೇಳಿ ಎಫ್ಐಆರ್ ಮಾಡಿಕೊಂಡು ಕದ್ದ ಮಾಲನ್ನೂ ಜೇಬು ಸೇರಿಸುವ ಹುನ್ನಾರ ನಡೆಸಿದ್ದರು. ಈ ಬಗ್ಗೆ ಇನ್ಸ್ ಪೆಕ್ಟರನ ಕಳ್ಳ ಲೆಕ್ಕಾಚಾರದ ಬಗ್ಗೆ ಮನೆಯವರ ಹೇಳಿಕೆ ಆಧರಿಸಿ ಹೆಡ್ ಲೈನ್ ಕರ್ನಾಟಕ ವರದಿ ಪ್ರಕಟಿಸುತ್ತಲೇ ಮಧ್ಯರಾತ್ರಿಯೇ ಸದ್ರಿ ಮನೆಗೆ ಓಡಿ ಬಂದಿದ್ದ ಬಾಲಕೃಷ್ಣ ಎಫ್ಐಆರ್ ನಲ್ಲಿ ನಮೂದಿಸಿದ್ದ ಚಿನ್ನದ ಲೆಕ್ಕವನ್ನು ಸರಿಪಡಿಸಿದ್ದರು. ಉಳ್ಳಾಲಬೈಲಿನ ಕಳವು ಪ್ರಕರಣದಲ್ಲಿ ಮನೆಯ ಅಪ್ರಾಪ್ತ ಮಗನೇ ಐಫೋನ್ ಖರೀದಿಸಲು ಸ್ನೇಹಿತರ ಜೊತೆಗೂಡಿ ಕಪಾಟಿನಲ್ಲಿದ್ದ ಚಿನ್ನವನ್ನು ಎಗರಿಸಿ ಸಿಕ್ಕಿಬಿದ್ದಿದ್ದ. ಆನಂತರ, ಮನೆ ಮಗನ ಮೇಲೆ ಕೇಸು ದಾಖಲಾಗುವುದನ್ನು ತಪ್ಪಿಸಲು ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರೇ ಪೋಷಕರ ಜೊತೆಗೆ ಡೀಲ್ ಕುದುರಿಸಿದ್ದ ವಿಚಾರವೂ ಉಳ್ಳಾಲದ ಜನರ ಬಾಯಲ್ಲಿ ಹರಿದಾಡಿತ್ತು.

ರೌಡಿ ಲಿಸ್ಟಲ್ಲಿ ತಾರತಮ್ಯ, ಮರಳು ಬಿಲ್ಗಾರಿಕೆ 

ಇದಲ್ಲದೆ, ಬಾಲಕೃಷ್ಣ ಠಾಣೆಗೆ ಬಂದ ಬಳಿಕ ಉಳ್ಳಾಲ ಠಾಣೆ ವ್ಯಾಪ್ತಿಯ ಅಕ್ರಮ ದೋ ನಂಬರ್ ದಂಧೆಗಳಿಗೆ ಲಗಾಮಿಲ್ಲದ ಸ್ಥಿತಿಯಾಗಿತ್ತು. ತಾನೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದರೂ ಮರಳು ದಂಧೆಕೋರರ ವಾಹನದಲ್ಲೇ ಕುಳಿತು ಅವರ ಜೊತೆಗೆ ಸವಾರಿ ಹೋಗುತ್ತಿದ್ದುದನ್ನು ನೋಡಿದ್ದವರು ಇನ್ಸ್ ಪೆಕ್ಟರ್ ಬಗ್ಗೆ ಉಗಿದು ಹಾಕಿದ್ದರು. ಇತ್ತೀಚೆಗೆ ತಲಪಾಡಿಯ ಬಿಜೆಪಿ ಪರವಾಗಿದ್ದ ರೌಡಿಯೊಬ್ಬನನ್ನು ಉಳ್ಳಾಲ ಠಾಣೆಯ ರೌಡಿ ಲಿಸ್ಟ್ ನಿಂದ ತೆರವು ಮಾಡಿದ್ದು ಕಾಂಗ್ರೆಸ್ ನಾಯಕರ ಒಳಗಡೆ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಪರವಾಗಿದ್ದ ರೌಡಿಯನ್ನು ಲಿಸ್ಟ್ ನಿಂದ ತೆರವು ಮಾಡಲು ಕೋರಿಕೆ ಇದ್ದರೂ, ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾಗಿ ಸ್ಪೀಕರ್ ಸಾಹೇಬ್ರಿಗೆ ದೂರು ಹೋಗಿತ್ತು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸಿಗರು ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕೆಂದು ಹೇಳಿದ್ದರೂ, ಬಾಲಕೃಷ್ಣ ಪರವಾಗಿದ್ದ ಹಿರಿಯಧಿಕಾರಿಯೊಬ್ಬರು ಕಡ್ಡಾಯ ರಜೆಯಲ್ಲಿ ಕಳಿಸಿಕೊಟ್ಟು ಮಾನ ಕಾಪಾಡಿದ್ದಾರೆನ್ನುವ ಮಾತೂ ಕೇಳಿಬರುತ್ತಿದೆ.

ಇಡೀ ರಾಜ್ಯದಲ್ಲೇ ಅತಿಸೂಕ್ಷ್ಮ ಎಂದೆನಿಸಿರುವ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅದೆಷ್ಟೋ ಮಹಾನುಭಾವರು ಠಾಣಾಧಿಕಾರಿಯಾಗಿ ಬಂದು ಹೋಗಿದ್ದಾರೆ. ಆದರೆ ಠಾಣೆಗೆ ಬಂದ ಅಲ್ಪ ಅವಧಿಯಲ್ಲೇ ಜನರಿಗೆ ಭಾರವಾಗಿದ್ದಲ್ಲದೆ, ರಾಜಕೀಯ ಗಣ್ಯರಿಂದಲೇ ಉಗಿಯಲ್ಪಟ್ಟು ಭ್ರಷ್ಟ ಹಣೆಪಟ್ಟಿಯೊಂದಿಗೆ ಬಾಲಕೃಷ್ಣ ಉಳ್ಳಾಲದಿಂದ ಹೊರ ನೂಕಲ್ಪಟ್ಟಿದ್ದಾರೆ. ಇದೇ ವೇಳೆ, ಹೊಸ ಇನ್ಸ್ ಪೆಕ್ಟರನ್ನು ಉಳ್ಳಾಲಕ್ಕೆ ಕರೆತರಲು ತೆರೆಮರೆಯ ಪ್ರಯತ್ನವೂ ನಡೆದಿದೆ ಎಂಬ ಮಾಹಿತಿ ಇದೆ.

In a turn of events, the Ullal police inspector, Balakrishna, has been sent on long leave after list of allegations of corruption, cronyism, and protection of the lucrative sand mining business. According to sources close to the investigation, Inspector Balakrishna was allegedly demanding the Chief Minister's Medal for solving the high-profile Kotekar bank robbery case.