ಕಡೆಗೂ ಮಳೆ ಬಿರುಸು ; ತೊಕ್ಕೊಟ್ಟಿನ‌ಲ್ಲಿ ಮನೆ ಮೇಲೆರಗಿದ ಖಾಸಗಿ ಎಸ್ಟೇಟ್ ಆವರಣದ ಗೋಡೆ, ಕೆಲ ದಿನಗಳ ಹಿಂದಷ್ಟೆ ಬೇರೆಡೆ ತೆರಳಿದ್ದರಿಂದ ಐವರಿದ್ದ ಕುಟುಂಬ ಬಚಾವ್, ನಗರಸಭೆ ನಿರ್ಲಕ್ಷ್ಯಕ್ಕೆ ಪರಿಸರದಲ್ಲಿ ಅಪಾಯದ ಭೀತಿ!

01-07-26 11:46 am       HK News Staffer   ಕರಾವಳಿ

ಕರಾವಳಿಯಲ್ಲಿ ಕಡೆಗೂ ಮಳೆ ಆವರಿಸಿದ್ದು ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಖಾಸಗಿ ಎಸ್ಟೇಟ್ ಒಂದರ ಎತ್ತರದ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಒಂಟಿ ಮನೆ ಸಂಪೂರ್ಣ ನೆಲಸಮಗೊಂಡಿದೆ. ಅಪಾಯದ ಮುನ್ಸೂಚನೆ ಅರಿತಿದ್ದ ಕುಟುಂಬದ ಐವರು ಸದಸ್ಯರು ಎರಡು ವಾರಗಳ ಹಿಂದಷ್ಟೆ ಮನೆಯಿಂದ ಸ್ಥಳಾಂತರಗೊಂಡಿದ್ದರಿಂದ ಘೋರ ಅನಾಹುತ ತಪ್ಪಿದೆ.

ಉಳ್ಳಾಲ, ಜುಲೈ 1: ಕರಾವಳಿಯಲ್ಲಿ ಕಡೆಗೂ ಮಳೆ ಆವರಿಸಿದ್ದು ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಖಾಸಗಿ ಎಸ್ಟೇಟ್ ಒಂದರ ಎತ್ತರದ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಒಂಟಿ ಮನೆ ಸಂಪೂರ್ಣ ನೆಲಸಮಗೊಂಡಿದೆ. ಅಪಾಯದ ಮುನ್ಸೂಚನೆ ಅರಿತಿದ್ದ ಕುಟುಂಬದ ಐವರು ಸದಸ್ಯರು ಎರಡು ವಾರಗಳ ಹಿಂದಷ್ಟೆ ಮನೆಯಿಂದ ಸ್ಥಳಾಂತರಗೊಂಡಿದ್ದರಿಂದ ಘೋರ ಅನಾಹುತ ತಪ್ಪಿದೆ.

ಖಾಸಗಿ ಎಸ್ಟೇಟಿನ ಬೃಹತ್ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ‌ ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಎಂಬವರ ಮನೆ ಸಂಪೂರ್ಣ ನೆಲಸಮಗೊಂಡಿದೆ. ಕೆರೆಬೈಲ್ ನ ಗುಡ್ಡ ಪ್ರದೇಶದ ತುದಿಯಲ್ಲಿ ಡೆಲ್ಟಾ ಇನ್ಫ್ರಾಲೋಜಿಸ್ಟಿಕ್ಸ್ ವರ್ಲ್ಡ್ ವೈಡ್ ಲಿ. ಕಂಪನಿ ಮಾಲಕರಾದ ಅಹಮ್ಮದ್ ಮೊಯ್ದಿನ್ ಎಂಬವರು ಕೆಲವು ವರುಷಗಳ ಹಿಂದೆ ಬೃಹತ್ ಐಷಾರಾಮಿ ಎಸ್ಟೇಟ್ ಒಂದನ್ನ ನಿರ್ಮಿಸಿದ್ದರು. ಬೃಹತ್ ವಿಸ್ತೀರ್ಣವುಳ್ಳ ಎಸ್ಟೇಟ್ ಸುತ್ತಲೂ ಎತ್ತರದ ಆವರಣದ ಗೋಡೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಗೆ ಎಸ್ಟೇಟ್ ನ ಆವರಣ ಗೋಡೆ ಕುಸಿದು ನೆರೆಯ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು. 

ಈ ಬಗ್ಗೆ ಕಿಶೋರ್ ಸ್ಥಳೀಯ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಮುಂಜಾಗೃತಾ ಕ್ರಮವಾಗಿ ನಗರಸಭೆ ಅಧಿಕಾರಿಗಳು ಕಿಶೋರ್ ಕುಟುಂಬ ಸೇರಿದಂತೆ ಎಸ್ಟೇಟ್ ಆವರಣ ಕುಸಿತದ ಭೀತಿಯಲ್ಲಿದ್ದ ನೆರೆಯ ಹತ್ತು ಮನೆಗಳ ಕುಟುಂಬಸ್ಥರನ್ನ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು.
ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎಸ್ಟೇಟ್ ಆವರಣ ಗೋಡೆ ಕುಸಿದಿದ್ದು ಕಿಶೋರ್ ಅವರ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಘಟನೆಗೆ ಉಳ್ಳಾಲ ನಗರಸಭೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಯಪ್ರಜ್ಞೆ ತೋರಿದ್ದಕ್ಕೆ ಬಚಾವ್ ! 

ವಾಲಿ ನಿಂತಿದ್ದ ಎಸ್ಟೇಟ್ ಆವರಣ ಗೋಡೆ ಕುಸಿದು ಬೀಳುವ ಬಗ್ಗೆ ನಿರೀಕ್ಷಿಸಿದ್ದ ಕಿಶೋರ್ ಅವರು ಅಮ್ಮ ಶಕುಂತಳಾ, ಪತ್ನಿ ಭಾರತಿ ಹಾಗೂ ಇಬ್ಬರು ಮಕ್ಕಳು ಸಮೇತ ಎರಡು ವಾರಗಳ ಹಿಂದಷ್ಟೆ ಮಂಗಳೂರಿನ ಕಾವೂರಿನ ಪತ್ನಿ ಮನೆಗೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭವನೀಯ ಘೋರ ಅನಾಹುತ ತಪ್ಪಿದಂತಾಗಿದೆ.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ 

ಕಳೆದ ವರ್ಷವೇ ಎಸ್ಟೇಟ್ ಆವರಣ ಗೋಡೆ ಕುಸಿದು ವಾಲಿ ನಿಂತಿದ್ದರೂ ಇದನ್ನ ಸರಿಪಡಿಸಲು ಉಳ್ಳಾಲ ನಗರಸಭೆ ಆಯುಕ್ತರು ಕ್ರಮ ಕೈಗೊಂಡಿರಲಿಲ್ಲ. ಈಗ ಅಪಾಯ ಅರಿತು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಹತ್ತು ಮನೆಗಳ ನಿವಾಸಿಗಳನ್ನ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು. ಸಂತ್ರಸ್ತರಿಗೆ ಮನೆ ಬಾಡಿಗೆಯನ್ನ ನೀಡುವ ಭರವಸೆ ನೀಡಿದ್ದ ಅಧಿಕಾರಿಗಳು ಕೇವಲ ಎರಡು ಕುಟುಂಬಗಳಿಗೆ ಮಾತ್ರ ಒಂದು ತಿಂಗಳ ಮನೆ ಬಾಡಿಗೆಯನ್ನು ನೀಡಿ ವಂಚಿಸಿದ್ದರೆಂದು ಸ್ಥಳೀಯ ಮುಖಂಡರಾದ ಪ್ರಕಾಶ್ ಪಿಂಟೋ ಆರೋಪಿಸಿದ್ದಾರೆ‌. 

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಿಶೋರ್ ಅವರು ಮನೆಯನ್ನ ಕಳಕೊಂಡಿದ್ದು, ಅದೃಷ್ಟವಶಾತ್ ಕುಟುಂಬ ಬೇರೆಡೆ ತೆರಳಿದ್ದರಿಂದ ಬದುಕುಳಿದಿದೆ. ಎಸ್ಟೇಟ್ ಆವರಣ ಗೋಡೆ ಮತ್ತೆ ಕುಸಿಯುವ ಸ್ಥಿತಿಯಲ್ಲಿದ್ದು ನೆರೆಯ ಕಾಶಿನಾಥ್, ಮಣಿ, ರಝಾಕ್, ನಝೀರ್, ಅನ್ನು, ರಾಜ ಕೊಟ್ಟಾರಿ, ಸತ್ಯ ಅವರ ಮನೆಗಳೂ ಅಪಾಯದಲ್ಲಿವೆ. ನಗರಸಭೆ ಅಧಿಕಾರಿಗಳು ತಕ್ಷಣವೇ ಮನೆ ಮಂದಿಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಪ್ರಕಾಶ್ ಪಿಂಟೊ ಆಗ್ರಹಿಸಿದ್ದಾರೆ.