ಉಳ್ಳಾಲ ಕಡಲತೀರದಲ್ಲಿ ಮರಳು ದಂಧೆ, ನಸುಕಿನ ಅಕ್ರಮಕ್ಕೆ ಪೊಲೀಸರ ಅಭಯ ?

12-08-20 06:24 am       Mangalore Reporter   ಕರಾವಳಿ

ಉಳ್ಳಾಲ ಕೋಟೆಪುರದ ಕಡಲತೀರದಲ್ಲಿ ರಾತ್ರೋರಾತ್ರಿ ಮರಳು ಕಳ್ಳತನ ನಡೆಯುತ್ತಿದ್ದು ಪೊಲೀಸರ ಬೆಂಬಲದಿಂದಲೇ ಕೃತ್ಯ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಪ್ರತಿ ದಿನ ನಸುಕಿನ ವೇಳೆಯಲ್ಲಿ ಸಮುದ್ರ ತೀರದ ಮರಳನ್ನು ಎತ್ತಲಾಗುತ್ತಿದ್ದು ಅಕ್ರಮ ದಂಧೆ ರಾಜಾರೋಷವಾಗಿ ಒಂದು ತಿಂಗಳಿನಿಂದಲೂ ನಡೀತಿದೆ.

ಮಂಗಳೂರು, ಆಗಸ್ಟ್ 12: ಉಳ್ಳಾಲ ಕೋಟೆಪುರದ ಕಡಲತೀರದಲ್ಲಿ ರಾತ್ರೋರಾತ್ರಿ ಮರಳು ಕಳ್ಳತನ ನಡೆಯುತ್ತಿದ್ದು ಪೊಲೀಸರ ಬೆಂಬಲದಿಂದಲೇ ಕೃತ್ಯ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ‌

ಪ್ರತಿ ದಿನ ರಾತ್ರಿ ಈ ಕೃತ್ಯ ನಡೆಯುತ್ತಿದ್ದು ಜೆಸಿಬಿಯಲ್ಲಿ ಮರಳನ್ನು ಎತ್ತಿ ಟಿಪ್ಪರ್, ಪಿಕ್ ಅಪ್ ವಾಹನಗಳಿಗೆ ತುಂಬಿಸಿ ಸಾಗಿಸಲಾಗುತ್ತಿದೆ. ಇಂದು ಮುಂಜಾನೆ ಹೀಗೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ಉಳ್ಳಾಲ ಶಾರದಾ ನಿಕೇತನ ಬಳಿ ಪಲ್ಟಿಯಾಗಿದೆ. ಆದರೆ, ಪಲ್ಟಿ ಹೊಡೆದಿದ್ದ ಪಿಕಪ್ ವಾಹನವನ್ನು ಮರಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗುವಂತೆ ಪೊಲೀಸರೇ ಸಹಕರಿಸಿದ್ದಾರೆ. ಮಾಧ್ಯಮದ ವ್ಯಕ್ತಿಯೊಬ್ವರು ಅಲ್ಲಿಗೆ ತೆರಳಿದಾಗ, ಪಿಸಿಆರ್ ವಾಹನ ಅಲ್ಲಿಯೇ ಇತ್ತಾದರೂ, ಕ್ರಮಕ್ಕೆ ಮುಂದಾಗಿಲ್ಲ. 

ಪ್ರತಿ ದಿನ ನಸುಕಿನ ವೇಳೆಯಲ್ಲಿ ಉಳ್ಳಾಲ ಕೋಟೆಪುರ, ಕೋಡಿ ಸಮುದ್ರ ತೀರದ ಮರಳನ್ನು ಎತ್ತಲಾಗುತ್ತಿದ್ದು ಅಕ್ರಮ ದಂಧೆ ರಾಜಾರೋಷವಾಗಿ ಒಂದು ತಿಂಗಳಿನಿಂದಲೂ ನಡೀತಿದೆ. ಕೋಟೆಪುರದ ವ್ಯಕ್ತಿಯೋರ್ವ ಈ ಮರಳು ಧಂದೆಯ ಕಿಂಗ್ ಪಿನ್ ಆಗಿದ್ದು, ಅಕ್ರಮ ಮರಳು ಸಾಗುವ ರಸ್ತೆಯುದ್ಧಕ್ಕೂ ಎಸ್ಕಾರ್ಟ್ ಮಾಡಲು ಅನೇಕ ಯುವಕರನ್ನು ನೇಮಿಸಿದ್ದಾನೆ. 

ಠಾಣೆಯ ಹಳೆಬೇರುಗಳು ಧಂದೆಯಲ್ಲಿ ಭಾಗಿ ! 

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಳೆದ ಏಳೆಂಟು  ವರ್ಷಗಳಿಂದ ಬೇರೂರಿರುವ ದ.ಕ .ಜಿಲ್ಲೆಯ ಮೂಲದ ಪೊಲೀಸರೇ ಈ ಅಕ್ರಮ ಮರಳು ಧಂದೆಗೆ ಬೆಂಬಲವಾಗಿ ನಿಂತಿದ್ದಾರೆಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಅಕ್ರಮ ಮರಳು ಸಾಗಾಟದ ವಾಹನಗಳು ಪೊಲೀಸ್ ಠಾಣೆಯ ದಾರಿ ತಪ್ಪಿಸಿ ಕೋಟೆಪುರ -ಲಕ್ಷ್ಮೀ ನರಸಿಂಹ ದೇವಸ್ಥಾನ- ಬಸ್ತಿಪಡ್ಪು-ಮೇಲಂಗಡಿ, ದರ್ಗಾ ಮಾರ್ಗವಾಗಿ ಮಾಸ್ತಿಕಟ್ಟೆಗೆ ತಲುಪುತ್ತಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಸಿ.ಸಿ. ಕ್ಯಾಮೆರಾ ಪರಿಶೀಲಿಸಿ ಸಮರ್ಪಕ ತನಿಖೆ ನಡೆಸಿದ್ದಲ್ಲಿ ಅಕ್ರಮ ಬಯಲಿಗೆ ಬರಬಹುದು. ಜೊತೆಗೆ ದಂಧೆಕೋರರಿಗೆ ಕುಮ್ಮಕ್ಕು ನೀಡುತ್ತಿರುವ ಉಳ್ಳಾಲ ಠಾಣೆಯ ಹಳೆಬೇರುಗಳ ಬಂಡವಾಳವೂ ಬಯಲಾಗಬಹುದು. ಸಿಆರ್ ಝಡ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮರಳು ತೆಗೆಯುವಂತಿಲ್ಲ ಎಂಬ ನಿಯಮವನ್ನು ಪೊಲೀಸರ ಬೆಂಬಲದಲ್ಲಿಯೇ ಗಾಳಿಗೆ ತೂರುತ್ತಿರುವುದು ಸ್ಥಳೀಯ ಶಾಸಕರಿಗೆ ಮತ್ತು ಗಣಿ ಇಲಾಖೆಗೂ ಗೊತ್ತಿಲ್ಲದ ವಿಷಯವೇನಲ್ಲ. ಆದರೆ, ಅಕ್ರಮ ದಂಧೆ ಎನ್ನುವುದು ಎಲ್ಲವನ್ನೂ ಒಳಗೊಂಡೇ ನಡೀತಿದ್ಯಾ ಅನ್ನೋ ಸಂಶಯ ಜನರದ್ದು.