ಬೆಂಗಳೂರು ಬಿಟ್ಟು ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಕರಾವಳಿ ಜಿಲ್ಲೆಗಳ ಬೇಡಿಕೆ ಬಗ್ಗೆ ಚರ್ಚೆ, ನಮ್ಮ ಹೆಸರೇಳಿ ವಸೂಲಿ ಗಮನಕ್ಕೆ ಬಂದಿಲ್ಲ, ಸಚಿವ ಯುಟಿ ಖಾದರ್

01-09-26 01:47 pm       HK News Staffer   ಕರಾವಳಿ

ಬೆಂಗಳೂರಿನಿಂದ ಹೊರಗೆ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಸೆ.18ರಂದು ಕರಾವಳಿಯ ಮಂಗಳೂರಿನಲ್ಲಿ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳ ಬೆಳವಣಿಗೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಸಿದ್ಧತೆ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಮಂಗಳೂರು,  ಸೆ.1: ಬೆಂಗಳೂರಿನಿಂದ ಹೊರಗೆ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಸೆ.18ರಂದು ಕರಾವಳಿಯ ಮಂಗಳೂರಿನಲ್ಲಿ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳ ಬೆಳವಣಿಗೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಸಿದ್ಧತೆ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. 

ವಾಲ್ಮೀಕಿ ಹಗರಣದ ನೆಪದಲ್ಲಿ ಬಿಜೆಪಿ ಪಾದಯಾತ್ರೆ ಕೈಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅಧಿವೇಶನವನ್ನು ರಾಜಕೀಯ ಪಕ್ಷದ ಪ್ರತಿಭಟನೆಗೆ ವೇದಿಕೆ ಮಾಡಬಾರದು. ಹೊರಗೆ ಎಷ್ಟು ಬೇಕಾದರೂ ಮಾಡಲಿ, ನಾವು ಏನೂ ಹೇಳಲ್ಲ. ಅಧಿವೇಶನ ಜನರ ಸಮಸ್ಯೆಗಳನ್ನು ಚರ್ಚೆ ಮಾಡಿ ಪರಿಹಾರ ಕೊಡುವ ವೇದಿಕೆಯಾಗಿದೆ. ಆದರೆ ಅಧಿವೇಶನವನ್ನೇ ಮಾಡಲು ಬಿಡದೆ ಬಿಜೆಪಿ ರಾಜ್ಯದ ಜನರಿಗೆ ವಂಚನೆ ಮಾಡಿದೆ. ನಾಗೇಂದ್ರ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. 99% ಹಣವನ್ನೂ ರಿಕವರಿ ಮಾಡಲಾಗಿದೆ. ಸರ್ಕಾರದ ಹಣ ರಿಟರ್ನ್ ಬಂದಿರೋದು ಇದೇ ಮೊದಲು. 

ಅಕ್ರಮ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗಿದೆ. ಅಲ್ಲದೆ, ನಾಗೇಂದ್ರ ಅವರಿಗೆ ತನಿಖಾ ಸಂಸ್ಥೆ ಕ್ಲೀನ್ ಚಿಟ್ ಕೊಟ್ಟಿದೆ. ಮಂತ್ರಿಯಾದ ಬಳಿಕ ಈ ಘಟನೆ ಆದ ಕಾರಣ ನೈತಿಕತೆಯ ಬದ್ದತೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಈ ಪ್ರಕರಣದಲ್ಲೂ ಬಿಜೆಪಿಯ ಬಹಳಷ್ಟು ಮುಖಂಡರಿಗೆ ವಿಚಾರಣೆಗೆ ನೊಟೀಸ್ ಕೊಟ್ಟಿದ್ದಾರೆ. ಬಿಜೆಪಿಯವರು ರಾಜೀನಾಮೆ ಕೊಟ್ಟು ನೈತಿಕ ಬದ್ಧತೆ ತೋರಿಸಲಿ ಎಂದು ಹೇಳಿದರು. 

ಪುತ್ತೂರು ಶಾಸಕ ಅಶೋಕ್ ರೈ ಅವರು ಕೆಆರ್ ಐಡಿಎಲ್ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ ಪ್ರಶ್ನೆಗೆ, ನಮ್ಮ‌ ಹೆಸರು ಹೇಳಿ ಹಣ ವಸೂಲಿ ಮಾಡಿರೋದು ಗಮನಕ್ಕೆ ಬಂದಿಲ್ಲ. ಹಾಗಿದ್ದಲ್ಲಿ ನಾನೇ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕ್ಷೇತ್ರದ ಇಂಜಿನಿಯರ್ ಗಳು ಆ ವಿಚಾರದಲ್ಲಿ ಇಲ್ಲ.‌ ನಮ್ಮ‌ ಜಿಲ್ಲೆಯ ಇತಿಹಾಸದಲ್ಲಿ ಆ ರೀತಿಯ ಘಟನೆ ಆಗಿಲ್ಲ. ಇಂಜಿನಿಯರ್ ಗಳು ಬರುವ ಸಂಧರ್ಭದಲ್ಲೇ ಹದ್ದುಬಸ್ತುನಲ್ಲಿ ಇಟ್ಟುಕೊಳ್ಳುತ್ತೇವೆ. ಅಶೋಕ್ ರೈ ಜೊತೆ ಬೇರೆ ವಿಷಯಕ್ಕೆ ಫೋನ್ ನಲ್ಲಿ ಮಾತನಾಡಿದ್ದೇನೆ. ಈ ಆರೋಪದ ಬಗ್ಗೆ ನನ್ನ ಗಮನಕ್ಕೆ ಇಲ್ಲ. ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.