ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗೆ ಟಾಸ್ಕ್ ಫೋರ್ಸ್ ರಚಿಸಿ, ಸೌತ್ ಕೆನರಾ ಬದಲು ಮಂಗಳೂರು ಜಿಲ್ಲೆ ಮಾಡಿ, ಅಡಿಕೆ ಹಳದಿ ರೋಗಕ್ಕೆ ಪ್ಯಾಕೇಜ್ ; ಸಂಪುಟ ಸಭೆಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ

17-09-26 08:48 pm       HK News Staffer   ಕರಾವಳಿ

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ 43 ಗ್ರಾಮಗಳ ರೈತರು ಹಾಗೂ ಜನಸಾಮಾನ್ಯರು ತೀವ್ರ ಅನಿಶ್ಚಿತತೆ ಮತ್ತು ಆತಂಕದಲ್ಲಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರ ತಕ್ಷಣವೇ ಶಾಸಕರು, ಕಂದಾಯ ಮತ್ತು ಅರಣ್ಯ ಅಧಿಕಾರಿಗಳನ್ನೊಳಗೊಂಡ ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

ಮಂಗಳೂರು, ಸೆ.17 : ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ 43 ಗ್ರಾಮಗಳ ರೈತರು ಹಾಗೂ ಜನಸಾಮಾನ್ಯರು ತೀವ್ರ ಅನಿಶ್ಚಿತತೆ ಮತ್ತು ಆತಂಕದಲ್ಲಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರ ತಕ್ಷಣವೇ ಶಾಸಕರು, ಕಂದಾಯ ಮತ್ತು ಅರಣ್ಯ ಅಧಿಕಾರಿಗಳನ್ನೊಳಗೊಂಡ ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಂಗಳೂರಿನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ ಬಗ್ಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಮಧ್ಯೆಯೇ ಸ್ಪಷ್ಟತೆಯ ಕೊರತೆಯಿದೆ. ಅಧಿಕಾರಿಗಳು ತಮ್ಮದೇ ಅಂದಾಜಿನ ಮೇಲೆ ಮಾತನಾಡುತ್ತಿರುವುದರಿಂದ ಮಲೆನಾಡು ಭಾಗದ ರೈತರು ಭಯಗೊಂಡಿದ್ದಾರೆ. ಜಿಲ್ಲೆಯ 43 ಬಾಧಿತ ಗ್ರಾಮಗಳಲ್ಲಿ ತಹಶೀಲ್ದಾರ್, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮ ಸಭೆಗಳನ್ನು ನಡೆಸಬೇಕು. ಜನರಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದರು. ಈ ಹಿಂದೆ ಕೆಡಿಪಿ ಸಭೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ವಿಷಯ ತರಲಾಗಿದೆ. ಸರ್ಕಾರ ಕ್ಯಾಬಿನೆಟ್‌ನಲ್ಲಿ ಕೇವಲ ನಿರ್ಣಯಕ್ಕೆ ಸೀಮಿತವಾಗದೆ, ಜನವಸತಿ ಪ್ರದೇಶಗಳನ್ನು ಸಂಪೂರ್ಣ ಹೊರಗಿಟ್ಟು 'ಜೀರೋ ಬಫರ್ ಝೋನ್' ಕಾಯ್ದಿರಿಸಲು ಕಾರ್ಯಪಡೆ ರಚಿಸಿ ಸ್ಪಷ್ಟ ಹೆಜ್ಜೆ ಇಡಬೇಕು ಎಂದರು.

ರೈಲ್ವೆ ವಿಭಾಗ ಹಾಗೂ ಮೂಲಸೌಕರ್ಯ ಅಭಿವೃದ್ಧಿ 

ಸದರ್ನ್ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು, ಮಂಗಳೂರು ಜಂಕ್ಷನ್ ಮತ್ತು ತೋಕೂರು ಭಾಗವನ್ನು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆ (SWR) ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಆಡಳಿತಾತ್ಮಕವಾಗಿ ಏಕರೂಪತೆ ತರಲು ಇದು ಸಹಕಾರಿಯಾಗಿದ್ದು, ಮುಂದಿನ ಹಂತದಲ್ಲಿ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗವಾಗಲು ಬುನಾದಿಯಾಗಲಿದೆ. ಆದರೆ ಈ ಹಿಂದೆ ಕೇರಳ ನಾಯಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಈ ಪ್ರಕ್ರಿಯೆಯಲ್ಲಿ ಮೌನ ವಹಿಸಿದ್ದು ಸರಿಯಲ್ಲ ಎಂದರು. ಕೊಂಕಣ್ ರೈಲ್ವೆಯನ್ನು ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕರ್ನಾಟಕ ಸರ್ಕಾರವೂ ತನ್ನ ಪಾಲಿನ ಷೇರುಗಳನ್ನು ಬಿಟ್ಟುಕೊಟ್ಟು ನೇತೃತ್ವ ವಹಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಮಂಗಳೂರು–ಬೆಂಗಳೂರು ಡಬಲ್ ಲೈನ್, ವಿದ್ಯುದ್ದೀಕರಣ 

ಮಂಗಳೂರು– ಬೆಂಗಳೂರು ನಡುವೆ ಈಗಾಗಲೇ ಸಂಪೂರ್ಣ ವಿದ್ಯುದ್ದೀಕರಣ  ಪೂರ್ಣಗೊಂಡಿದೆ. ಜೋಡಿ ಹಳಿ ನಿರ್ಮಾಣಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆ ಆರಂಭವಾಗಿದ್ದು, ಶೀಘ್ರ ಡಿಪಿಆರ್ ಸಿದ್ಧವಾಗಲಿದೆ. ಇದಕ್ಕೆ ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿ ಭೂಸ್ವಾಧೀನ ಸೇರಿದಂತೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಮಂಗಳೂರು–ಬೆಂಗಳೂರು ನಡುವೆ ಶೀಘ್ರವೇ ವಂದೇ ಭಾರತ್ ರೈಲು ಓಡಾಟ ಆರಂಭವಾಗುವ ವಿಶ್ವಾಸವಿದ್ದು, ಇದು ಜಂಕ್ಷನ್ ಬದಲು ಮಂಗಳೂರು ಸೆಂಟ್ರಲ್‌ನಿಂದಲೇ ಹೊರಡಬೇಕೆಂಬುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದರು.

ಸಂಪುಟ ಸಭೆಯ ಮುಂದೆ ಸಂಸದರ ಪ್ರಮುಖ ಬೇಡಿಕೆಗಳು 

1. ಅಡಿಕೆ ಬೆಳೆಗಾರರಿಗೆ ಒನ್ ಟೈಮ್ ಪರಿಹಾರ ಪ್ಯಾಕೇಜ್: ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಕರಾವಳಿ ಹಾಗೂ ಮಲೆನಾಡಿನ ಅಡಿಕೆ ಕೃಷಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ನಾಳಿನ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ನೆರವಿಗೆ ವಿಶೇಷ ‘ಒನ್-ಟೈಮ್ ರಿಲೀಫ್ ಪ್ಯಾಕೇಜ್’ ಘೋಷಿಸಬೇಕು.

2. ರಸ್ತೆಗಳ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ ರೂ 300 ಕೋಟಿ ವಿಶೇಷ ಪ್ಯಾಕೇಜ್: ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳ ಜಾಲ ವಿಸ್ತಾರವಾಗಿದೆ. ಮಳೆಗಾಲದ ಬಳಿಕ ರಸ್ತೆಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಲೋಕೋಪಯೋಗಿ  ಇಲಾಖೆಯಿಂದ ರೂ. 200 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ  ಇಲಾಖೆಯಿಂದ ರೂ 100 ಕೋಟಿ ಸೇರಿ ಒಟ್ಟು ರೂ 300 ಕೋಟಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕು.

3. ದಕ್ಷಿಣ ಕನ್ನಡ ಜಿಲ್ಲೆಗೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ: ಬ್ರಿಟಿಷರ ಕಾಲದ ‘ಸೌತ್ ಕೆನರಾ’ ಹೆಸರಿನ ಬದಲು ಮಂಗಳಾದೇವಿಯ ಪವಿತ್ರ ನೆಲೆಯಾದ ಈ ಜಿಲ್ಲೆಗೆ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ‘ಮಂಗಳೂರು ಜಿಲ್ಲೆ’ ಎಂದು ಅಧಿಕೃತವಾಗಿ ನಾಮಕರಣ ಮಾಡಬೇಕು. ಈ ಕುರಿತು ದಿಶಾ ಸಭೆಯಲ್ಲೂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿದೆ.

4. ತುಳು ಭಾಷೆಗೆ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ: ತುಳುನಾಡಿನ ಅಸ್ಮಿತೆಯಾಗಿರುವ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಸಂಪುಟ ಸಭೆಯಲ್ಲಿ ಘೋಷಿಸಬೇಕು. ಇದಕ್ಕೆ ಪೂರಕವಾದ ಮೋಹನ ಆಳ್ವ ವರದಿ ಈಗಾಗಲೇ ಸರ್ಕಾರದ ಮುಂದಿದೆ.

5. ಮಂಗಳೂರು ಮೀನುಗಾರಿಕಾ ಕಾಲೇಜಿಗೆ ಪ್ರತ್ಯೇಕ ಸ್ಥಾನಮಾನ: ಬೀದರ್ ಪಶು ವಿವಿಗೆ ಒಳಪಟ್ಟಿರುವ ಮಂಗಳೂರಿನ ಪ್ರತಿಷ್ಠಿತ ಮೀನುಗಾರಿಕಾ ಕಾಲೇಜನ್ನು ಅದರಿಂದ ಡಿ-ಲಿಂಕ್ ಮಾಡಿ, ಸ್ವತಂತ್ರ ಕಾಲೇಜನ್ನಾಗಿ ಘೋಷಿಸಬೇಕು. ಸೀಟುಗಳ ಸಂಖ್ಯೆ ಹೆಚ್ಚಿಸಿ ಮೆರೈನ್ ಸೈನ್ಸ್, ಲಾಜಿಸ್ಟಿಕ್ಸ್ ಹಾಗೂ ಬ್ಲೂ ಎಕಾನಮಿ ಕೋರ್ಸ್‌ಗಳನ್ನು ಆರಂಭಿಸಬೇಕು. ಮುಂದಿನ ದಿನಗಳಲ್ಲಿ ಇದನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಪ್ರತ್ಯೇಕ ‘ಮೆರಿಟೈಮ್ ಸೆಂಟ್ರಲ್ ಯೂನಿವರ್ಸಿಟಿ’ಯಾಗಿ ಮೇಲ್ದರ್ಜೆಗೇರಿಸಲು ಜಂಟಿ ಪ್ರಯತ್ನ ನಡೆಸಬೇಕು.

6. ಕರಾವಳಿ ಪ್ರವಾಸೋದ್ಯಮ ಪ್ರಾಧಿಕಾರ ಮತ್ತು ಫೆರ್ರಿ ಸರ್ವಿಸ್: ಕರ್ನಾಟಕ ರಾಜ್ಯ ಕಡಲ ಮಂಡಳಿ  ಮತ್ತು ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಾಯಂ ಸದಸ್ಯರನ್ನಾಗಿ ನೇಮಿಸಬೇಕು. ಮಂಗಳೂರಿನಿಂದ ಕಾರವಾರದವರೆಗೆ ಕರಾವಳಿ ತೀರದಲ್ಲಿ ಜಲ ಸಾರಿಗೆಗೆ ‘ಫೆರ್ರಿ ಸರ್ವಿಸ್’ ಹಾಗೂ ಮೆಟ್ರೋ ಸಾಧ್ಯತೆಗಳ ಬಗ್ಗೆ ಡಿಪಿಆರ್ ರೂಪಿಸಬೇಕು.

7. ಐಟಿ ಮತ್ತು ಇನ್ನೋವೇಶನ್ – ಸಿಲಿಕಾನ್ ಬೀಚ್ ಉತ್ತೇಜನ: ಮಂಗಳೂರು –ಉಡುಪಿ ಭಾಗವನ್ನು ‘ಸಿಲಿಕಾನ್ ಬೀಚ್’ ಆಗಿ ರೂಪಿಸಲು ಕೇವಲ ಯೋಜನೆ ಘೋಷಿಸಿದರೆ ಸಾಲದು. ಜಾಗತಿಕ ಸಾಮರ್ಥ್ಯ ಕೇಂದ್ರಗಳು  ಹಾಗೂ ರಿಸರ್ಚ್ ಸೆಂಟರ್‌ಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಜಮೀನು ಮತ್ತು ಆರ್ಥಿಕ ಪ್ರೋತ್ಸಾಹಧನ ನೀಡುವ ಸ್ಪಷ್ಟ ನೀತಿ ರೂಪಿಸಬೇಕು ಎಂದರು.