ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ ಶಾಲೆಗಳ ಸ್ಥಾಪನೆ, ವಂದೇ ಮಾತರಂ ಪಾಲಿಸದ ಶಾಲೆಗಳಿಗೆ ಅನುದಾನ ಕಡಿತ ; ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ

04-09-26 08:14 pm       HK News Staffer   ದೇಶ - ವಿದೇಶ

ಪಶ್ಚಿಮ ಬಂಗಾಳದಲ್ಲಿ ಮುಂದಿನ ಒಂದು ವರ್ಷದಲ್ಲಿ ಆರೆಸ್ಸೆಸ್ ಅಂಗಸಂಸ್ಥೆಯ ವಿದ್ಯಾಭಾರತಿ ಮೂಲಕ ಒಂದು ಸಾವಿರ ಶಾಲೆಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.

ಕೊಲ್ಕತ್ತಾ, ಸೆ.4: ಪಶ್ಚಿಮ ಬಂಗಾಳದಲ್ಲಿ ಮುಂದಿನ ಒಂದು ವರ್ಷದಲ್ಲಿ ಆರೆಸ್ಸೆಸ್ ಅಂಗಸಂಸ್ಥೆಯ ವಿದ್ಯಾಭಾರತಿ ಮೂಲಕ ಒಂದು ಸಾವಿರ ಶಾಲೆಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.

ಪ್ರತಿ ಜಿಲ್ಲೆ, ನಗರಸಭೆ ಮತ್ತು ಪಂಚಾಯತ್ ಮಟ್ಟದಲ್ಲಿ ಹೊಸತಾಗಿ ಭಾರತೀಯ ಸಂಸ್ಕೃತಿ ಪ್ರಚುರಪಡಿಸುವ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಇದಲ್ಲದೆ, ಪ್ರತಿ ಶಾಲೆಯಲ್ಲೂ ವಂದೇ ಮಾತರಂ ಹಾಡು ಪೂರ್ತಿಯಾಗಿ ಹಾಡುವುದು ಕಡ್ಡಾಯ ಮಾಡಲಾಗಿದೆ. ಇದನ್ನು ಪಾಲಿಸದ ಶಾಲೆಗಳಿಗೆ ಸರ್ಕಾರದ ಅನುದಾನ, ಇನ್ನಿತರ ಸೌಲಭ್ಯಗಳನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದಲ್ಲದೆ, ರಾಜ್ಯದಲ್ಲಿ ನಾಲ್ಕು ಪ್ರತ್ಯೇಕ ಇಲಾಖೆಗಳಾಗಿರುವ ಶಿಕ್ಷಣ ಇಲಾಖೆಯನ್ನು ಒಂದೇ ಖಾತೆಯನ್ನಾಗಿ ಮಾಡಲಾಗುವುದು. ಮದ್ರಸಾ ಶಿಕ್ಷಣವನ್ನು ಆಡಳಿತದ ಭಾಗವಾಗಿಸಿದ್ದನ್ನು ತೆರವು ಮಾಡಲಾಗುವುದು ಎಂದು ಸಿಎಂ ಅಧಿಕಾರಿ ಹೇಳಿದ್ದಾರೆ. ವಿದ್ಯಾಭಾರತಿ ಸಂಸ್ಥೆಯ 74ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಈ ಮಾತುಗಳನ್ನಾಡಿದ್ದಾರೆ. ಆರೆಸ್ಸೆಸ್ ಅಂಗಸಂಸ್ಥೆಗಳ ಮೂಲಕ ದೇಶಾದ್ಯಂತ 12 ಸಾವಿರ ಶಾಲೆಗಳಿದ್ದು, ಹತ್ತು ಸಾವಿರ ಬಾಲ ಸಂಸ್ಕಾರ ಕೇಂದ್ರಗಳಿವೆ. ಪಶ್ಚಿಮ ಬಂಗಾಳದಲ್ಲಿ 313 ಶಾಲೆಗಳನ್ನು ವಿದ್ಯಾಭಾರತಿ ನಡೆಸುತ್ತಿದೆ.

ವಂದೇ ಮಾತರಂ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು, ಇದನ್ನು ರಾಜ್ಯಾದ್ಯಂತ ಕಡ್ಡಾಯ ಪಾಲನೆಗೆ ಸೂಚಿಸಲಾಗಿದೆ. ಇದನ್ನು ಪಾಲಿಸದ ಶಾಲೆಗಳ ಸರ್ಕಾರಿ ಅನುದಾನ ಇನ್ನಿತರ ಸೌಲಭ್ಯಗಳನ್ನು ಕಡಿತ ಮಾಡಲಾಗುವುದು ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಹಾಲಿ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಶಾಲೆಗಳ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯ, ರಾಷ್ಟ್ರೀಯ ಮೌಲ್ಯಗಳನ್ನು ಜಾರಿಗೆ ತರಲು ಶ್ರಮಿಸುತ್ತಿದೆ ಎಂದವರು ಹೇಳಿದ್ದಾರೆ.