ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ ; ಭದ್ರತೆಗಾಗಿ ವ್ಯಾಪಾರ ಬಂದ್ ಮಾಡಿಸಿದ್ದ ಪೊಲೀಸರು, ಡಿಕೆಶಿ ತೀವ್ರ ಗರಂ, ಯಾರ್ರೀ ಹೇಳಿದ್ದು ಬಂದ್ ಮಾಡಿಸೋಕೆ? ನಿಮ್ ಸೆಕ್ಯುರಿಟಿ ಯಾರಿಗೆ ಬೇಕ್ರೀ? ಸಸ್ಪೆಂಡ್ ಮಾಡ್ರೀ..!

19-09-26 10:11 am       HK News Staffer   ಕರಾವಳಿ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಳ್ಳಂಬೆಳಗ್ಗೆ ಮಂಗಳೂರಿನ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ್ದಾರೆ. ಆದರೆ ಸಿಎಂ ಬರುತ್ತಾರೆಂದು ಭದ್ರತೆ ದೃಷ್ಟಿಯಿಂದ ಪೊಲೀಸರು ಮೀನು ವ್ಯಾಪಾರ ಬಂದ್ ಮಾಡಿಸಿದ್ದನ್ನು ತಿಳಿದು ಡಿಕೆಶಿ ಗರಂ ಆಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ಮಂಗಳೂರು, ಸೆ.19: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಳ್ಳಂಬೆಳಗ್ಗೆ ಮಂಗಳೂರಿನ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ್ದಾರೆ. ಆದರೆ ಸಿಎಂ ಬರುತ್ತಾರೆಂದು ಭದ್ರತೆ ದೃಷ್ಟಿಯಿಂದ ಪೊಲೀಸರು ಮೀನು ವ್ಯಾಪಾರ ಬಂದ್ ಮಾಡಿಸಿದ್ದನ್ನು ತಿಳಿದು ಡಿಕೆಶಿ ಗರಂ ಆಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. 

ನಾನು ಮೀನುಗಾರರ ಕಷ್ಟ ಕೇಳಲು ಬಂದಿರೋದು. ಅವರ ವ್ಯಾಪಾರ ಬಂದ್ ಮಾಡಲು ಹೇಳಿದ್ದು ಯಾರು ? ನೀವು ಬಂದ್ ಮಾಡೋಕೆ ಯಾರು? ನಿಮ್ಮ ಸೆಕ್ಯುರಿಟಿ ಯಾವನಿಗೆ ಬೇಕ್ರೀ..? ಯಾರು ಬಂದ್ ಮಾಡಿಸಿದ್ದೆಂದು ಚೆಕ್ ಮಾಡ್ರೀ ಡೀಸಿ.. ಅವರನ್ನು ಸಸ್ಪೆಂಡ್ ಮಾಡಿಸುತ್ತೇನೆ ಎಂದು ಸಿಎಂ ಡಿಕೆಶಿ ಗರಂ ಆಗಿದ್ದಾರೆ. 

ಮೀನುಗಾರಿಕಾ ದಕ್ಕೆಯಲ್ಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಜೋರು ಮಾಡಿದ್ದಾರೆ. ನಿಮ್ಮ ಸೆಕ್ಯೂರಿಟಿ ಯಾವನಿಗೆ ಬೇಕು? ಎಂದು ಸಮಜಾಯಿಷಿ ಹೇಳಲು ಬಂದ ಮಂಗಳೂರು ಡಿಸಿಪಿಗೆ  ಮುಖ್ಯಮಂತ್ರಿ ಕ್ಲಾನ್ ತೆಗೆದಿದ್ದಾರೆ. ಇಂದು ಮೀನುಗಾರರ ಸಮಸ್ಯೆ ಆಲಿಸಲು ಮತ್ತು ಅವರ ವ್ಯಾಪಾರ ವೀಕ್ಷಿಸಲು ಬಂದರಿಗೆ ಬಂದಿದ್ದೇನೆ. ಆದರೆ ವ್ಯಾಪಾರವನ್ನೇ ಬಂದ್ ಮಾಡಿಸಿ ಅವರಿಗೆ ತೊಂದರೆ ಕೊಟ್ಟಿದ್ದೀರಲ್ವಾ.. ಮೀನು ವ್ಯಾಪಾರ ಬಂದ್ ಮಾಡಿಸೋಕೆ ಯಾರು ಹೇಳಿದ್ದು ಎಂದು ಗದರಿದ್ದಾರೆ. 

ಸಿಎಂ ಆಗಮನದ ಹಿನ್ನಲೆ ಧಕ್ಕೆಯಲ್ಲಿ ಮೀನು ವ್ಯಾಪಾರವನ್ನೇ ಪೊಲೀಸರು ಬಂದ್ ಮಾಡಿಸಿದ್ದರು. ಇದರಿಂದಾಗಿ ಎಂದಿನಂತೆ ಮೀನು ವ್ಯಾಪಾರದ ರಂಪ್ ಇರಲಿಲ್ಲ ‌ ಈ ಬಗ್ಗೆ ಸ್ವತಃ ಮೀನು ವ್ಯಾಪಾರಿಗಳೇ ಸಿಎಂ ಬಳಿ ದೂರು ಹೇಳಿಕೊಂಡಿದ್ದು ಡಿಕೆಶಿ ಸಿಟ್ಟಾಗಿದ್ದಾರೆ.‌ ನಾನು ಯಾರಿಗೂ ವ್ಯಾಪಾರ ಬಂದ್ ಮಾಡಲು ಹೇಳಿಲ್ಲ. ನಿಮಗೆ ಮೀನು ವ್ಯಾಪಾರ ಬಂದ್ ಮಾಡಿಸೋಕೆ ಯಾರು ಹೇಳಿದ್ದು. ಯಾವನಾದ್ರು ಆರ್ಡರ್ ಮಾಡಿದ್ರೆ 
ಅವನನ್ನ ಸಸ್ಪೆಂಡ್ ಮಾಡಿ. ಇವರ ಸೆಕ್ಯೂರಿಟಿ ಯಾವನಿಗೆ ಬೇಕ್ರೀ ಎಂದು ಸ್ಥಳದಲ್ಲಿದ್ಸ ಜಿಲ್ಲಾಧಿಕಾರಿ ದರ್ಶನ್ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ. ಸಿಎಂ ಡಿಕೆಶಿಗೆ ಉಸ್ತುವಾರಿ ಸಚಿವ ಯುಟಿ ಖಾದರ್ ಸಾಥ್ ನೀಡಿದ್ದರು.