‘ಆರೋಕ್ಯಾ’ದಲ್ಲಿತ್ತು ಗೋಮಾಂಸ ! 20 ಲಕ್ಷ ಡೀಲ್ ಮಾಡಲು ಹೋಗಿ ಸಿಕ್ಕಿತ್ತು ಐನಾತಿ ಡ್ರಿಲ್ !

04-02-21 09:27 pm       Mangaluru Crime Correspondent   ಕರಾವಳಿ

ಮಂಗಳೂರಿನಲ್ಲಿದ್ದ ಕಾಸ್ಕುಮಾರ್, ಕೇಡಿ ರಾಜ್ ಮಾಡಿಟ್ಟ ಭಾನಗಡಿಗಳು ಒಂದೆರಡಲ್ಲ. ಇಂದು ಮತ್ತೆರಡು ಸ್ಯಾಂಪಲನ್ನ ಮುಂದಿಡುತ್ತಿದ್ದೇವೆ ನೋಡಿ. ಒಂದು ವೆನ್ಝ್ ಅಬ್ದುಲ್ಲ ಪ್ರಕರಣ ಮತ್ತೊಂದು ಆರೋಕ್ಯಾ ಹಾಲಿನ ಟೆಂಪೋದಲ್ಲಿ ಗೋಮಾಂಸ ಪತ್ತೆ ಪ್ರಕರಣ.

ಮಂಗಳೂರು, ಫೆ.4: ಮಂಗಳೂರಿನಲ್ಲಿದ್ದ ಕಾಸ್ಕುಮಾರ್, ಕೇಡಿ ರಾಜ್ ಮಾಡಿಟ್ಟ ಭಾನಗಡಿಗಳು ಒಂದೆರಡಲ್ಲ. ಇಂದು ಮತ್ತೆರಡು ಸ್ಯಾಂಪಲನ್ನ ಮುಂದಿಡುತ್ತಿದ್ದೇವೆ ನೋಡಿ. ಒಂದು ವೆನ್ಝ್ ಅಬ್ದುಲ್ಲ ಪ್ರಕರಣ ಮತ್ತೊಂದು ಆರೋಕ್ಯಾ ಹಾಲಿನ ಟೆಂಪೋದಲ್ಲಿ ಗೋಮಾಂಸ ಪತ್ತೆ ಪ್ರಕರಣ. ಎರಡು ಕಡೆಯೂ ಭಾರೀ ಡೀಲಿಂಗ್ ಆಗಿತ್ತು. ಒಂದರಲ್ಲಂತೂ ಮುಖಕ್ಕೆ ಮಂಗಳಾರತಿಯೂ ಆಗಿತ್ತು.

ವೆನ್ಝ್ ಅಬ್ದುಲ್ಲ ಪ್ರಕರಣ ನಿಮಗೆಲ್ಲ ಗೊತ್ತೇ ಇದೆ. ಬಜ್ಪೆ ಠಾಣೆ ವ್ಯಾಪ್ತಿಯ ಕೈಕಂಬದಲ್ಲಿ ಎಸ್ಸೆಸ್ಸೆಫ್ ಸಂಘಟನೆಯಲ್ಲಿದ್ದು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದ 65ರ ವಯಸ್ಸಿನ ಮಾಗಿದ ವ್ಯಕ್ತಿ. ಅಂಥ ವ್ಯಕ್ತಿಯ ಮೇಲೆ ಕಳೆದ ನ.18ರಂದು ಕಂದಾವರ ಮಸೀದಿಯ ಹೊರಭಾಗದಲ್ಲಿ ರಾತ್ರಿ ಹತ್ತು ಗಂಟೆ ಸುಮಾರಿಗೆ ತಲವಾರು ದಾಳಿ ನಡೆದಿತ್ತು. ತಲೆಗೆ, ಕೈಗೆ ಗಾಯಗೊಂಡಿದ್ದ ಅಬ್ದುಲ್ಲಾ ಪ್ರಕರಣದಲ್ಲಿ ಸಂಶಯಿತ ವ್ಯಕ್ತಿಗಳ ವಿರುದ್ಧ ಬಜ್ಪೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಬಳಿಕ ಪೊಲೀಸರು ವಿಚಾರಣೆಯ ನೆಪದಲ್ಲಿ ತನಿಖೆಯನ್ನೂ ಮಾಡಿದ್ದರು. ಪ್ರಕರಣದಲ್ಲಿ ಭಾರೀ ಗೋಜಲು ಕಂಡಿದ್ದರಿಂದ ಹಾಗೇ ಇಟ್ಟುಬಿಟ್ಟಿದ್ದರು. ಯಾಕಂದ್ರೆ, ಎದುರಾಳಿ ಝಕರಿಯಾ ಪಾರ್ಟಿ ಬಲವಾಗಿತ್ತು.

ಇದಾಗಿ ನಾಲ್ಕು ದಿನಗಳಲ್ಲಿ ವೆನ್ಝ್ ಅಬ್ದುಲ್ಲಾ ದಾಖಲಾಗಿದ್ದ ಮಂಗಳೂರಿನ ಯೂನಿಟಿ ಆಸ್ಪತ್ರೆಯ ಆವರಣದಲ್ಲಿ ತಲವಾರು ದಾಳಿ ನಡೆದಿತ್ತು. ಎಂಟು ಗಂಟೆ ಸುಮಾರಿಗೆ ನಾಲ್ವರು ತಲವಾರು ಹಿಡಿದು ಅಬ್ದುಲ್ಲಾರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದ ಅಳಿಯನ ಮೇಲೆ ತಲವಾರು ಬೀಸಿದ್ದರು. ತೀವ್ರ ಗಾಯಗೊಂಡ ಯುವಕನನ್ನು ಅದೇ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಪ್ರಕರಣದಲ್ಲಿ ಎರಡೇ ದಿನದೊಳಗೆ ಕದ್ರಿ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದರು. ಆದರೆ, ಹೀಗೆ ಬಂಧಿಸಿದ್ದ ವಿಷ್ಯವನ್ನು ಪೊಲೀಸರು ಹೊರಗೆ ಬಿಟ್ಟು ಕೊಟ್ಟಿರಲಿಲ್ಲ. ಇದೇ ಹೊತ್ತಿಗೆ ಮುಸ್ಲಿಂ ದಲ್ಲಾಳಿಯೊಬ್ಬ ಸಿಸಿಬಿ ಮೂಲಕ ತೂರಿ ಬಂದು ಡೀಲಿಂಗ್ ಮಾಡಿದ್ದ. ಒಬ್ಬೊಬ್ಬನಿಗೆ ತಲಾ ಎರಡೂವರೆ ಲಕ್ಷ ರೂ. ತೆಗೆದಿಟ್ಟು ಪೊಲೀಸರಿಂದ ಬಿಡಿಸ್ಕೊಂಡು ಒಯ್ದಿದ್ದ. ಅದರಲ್ಲಿ ಕಾಸರಗೋಡು ಮೂಲದ ಕಾಲೇಜು ಹುಡುಗರು ಕೂಡ ಇದ್ದರು ಎನ್ನಲಾಗಿತ್ತು. ಆರೋಪಿತರನ್ನು ಬಿಟ್ಟುಕೊಂಡ ಬಳಿಕ ಇಡೀ ಪ್ರಕರಣವನ್ನು ಡಿಪಾರ್ಟ್ಮೆಂಟಲ್ಲಿ ಒಂದಿಷ್ಟು ಸಾಚಾತನ ಉಳಿಸ್ಕೊಂಡಿರುವ ಎಸಿಪಿ ಒಬ್ಬರ ತಲೆಗೆ ಕಟ್ಟಿ ಮೇಲಧಿಕಾರಿ ಜಾಗ ಖಾಲಿ ಮಾಡಿದ್ದರು. ಈಗ ಎಸಿಪಿ ದರ್ಜೆಯ ಅಧಿಕಾರಿ ಮಾತ್ರ ಆ ಕೇಸನ್ನು ಮುಂದಿಟ್ಟು ತಲೆ ಪರಚುತ್ತಿದ್ದಾರೆ.

ಡೀಲ್ ಮಾಡಲು ಹೋಗಿ ಡ್ರಿಲ್ ಮಾಡಿಸ್ಕಂಡಿದ್ರು !

ಅದಕ್ಕೂ ಮುನ್ನ ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರು ಹಾಸನ ಮೂಲದ ಆರೋಕ್ಯಾ ಹೆಸರಿನ ಹಾಲಿನ ಟೆಂಪೋದಲ್ಲಿ ಹತ್ತು ಟನ್ ಗೋಮಾಂಸ ಪತ್ತೆ ಮಾಡಿದ್ದರು. ಬೆಳ್ಳಂಬೆಳಗ್ಗೆ ಪಂಪ್ವೆಲ್ ನಿಂದ ಅಟ್ಟಿಸಿಕೊಂಡು ಬಂದು ಹಂಪನಕಟ್ಟೆ ಜಂಕ್ಷನ್ ಬಳಿ ಅಡ್ಡಹಾಕಿ ಪೊಲೀಸರ ಕೈಗೆ ಒಪ್ಪಿಸಿದ್ದರು. ಈ ಪ್ರಕರಣದಲ್ಲಿ ಭಾರೀ ಡೀಲಿಂಗ್ ಮಾಡೋಕೆ ಪ್ರಯತ್ನ ನಡೆದಿತ್ತು ಎನ್ನೋ ವಿಚಾರ ಹೊರಬರುತ್ತಿದೆ.

ಹಾಸನ ಮೂಲದ ಆರೋಕ್ಯಾ ಹೆಸರಿನ ಹಾಲಿನ ಕಂಪನಿಯ ಓನರ್ ತಮಿಳ್ನಾಡು ಮೂಲದ ವ್ಯಕ್ತಿ. ಆರೋಕ್ಯಾ ಕಂಪನಿಗೆ ಸೇರಿದ ಟೆಂಪೋದಲ್ಲಿ ಅಕ್ರಮ ಗೋಮಾಂಸ ಪತ್ತೆಯಾಗಿದ್ದರಿಂದ ಕಂಪನಿ ವಿರುದ್ಧವೂ ಕೇಸು ದಾಖಲಿಸಲು ಮಂಗಳೂರಿನ ಪೊಲೀಸರು ಮುಂದಾಗಿದ್ದರು. ಕೇಸ್ ಜಡಿಯುವ ವಿಚಾರ ತಿಳಿದ ಕಂಪನಿಯ ತಮಿಳು ಮಾಲೀಕ ಪೊಲೀಸರನ್ನು ಪರಿ ಪರಿಯಾಗಿ ಬೇಡಿಕೊಳ್ಳುತ್ತಾರೆ. ವಾಹನ ಕಂಟ್ರಾಕ್ಟ್ ಆಗಿ ಕೊಡುತ್ತೇವೆ, ಅದರ ಚಾಲಕ, ಮಾಲಕನೇ ಈ ತಪ್ಪಿಗೆ ಹೊಣೆ. ನೀವ್ಯಾಕೆ ನಮ್ಮ ಮೇಲೆ ಕೇಸು ಹಾಕುತ್ತೀರಿ ಎಂದಿದ್ದಾನೆ. ಕಾಸ್ಕು ಮತ್ತು ಕೇಡಿ ರಾಜ್, ಅಷ್ಟಕ್ಕೇ ಆರೋಕ್ಯಾ ಮಾಲಕನಲ್ಲಿ 20 ಲಕ್ಷ ಡೀಲ್ ಮಾಡಲು ಒಪ್ಪಿಸುತ್ತಾರೆ. ಇಷ್ಟು ಕೊಟ್ಟರೆ ಕೇಸ್ ಚುಕ್ತಾ ಮಾಡ್ತೀವಿ ಎನ್ನುತ್ತಾರೆ.

ಇಷ್ಟಾಗುತ್ತಿದ್ದಂತೆ ಆ ತಂಗಚ್ಚಿ ತಮಿಳುವಾನ್, ಕರಾವಳಿ ಬಿಜೆಪಿಯ ಪ್ರಭಾವಿ ವ್ಯಕ್ತಿಯನ್ನು ಸಂಪರ್ಕ ಮಾಡುತ್ತಾರೆ. ಮೊದಲೇ ಹೈಲೆವಲ್ ಕ್ಯಾಂಟಾಕ್ಟ್ ಇಟ್ಟುಕೊಂಡಿದ್ದ ತಂಗಚ್ಚಿ ನೇರವಾಗಿ ಮಂಗಳೂರು ಬಂದು ಪೊಲೀಸರ ಡೀಲಿಂಗ್ ವಿಚಾರವನ್ನು ಬಿಜೆಪಿ ಮುಖಂಡನ ಮುಂದಿಡುತ್ತಾರೆ. ನಿಮ್ ಸರಕಾರದಲ್ಲಿ ಇದೇನಾ ನಡೀತಿರೋದು ಅಂತಾ ವ್ಯಂಗ್ಯ ಮಾಡುತ್ತಾರೆ. ಕೂಡಲೇ ಎಚ್ಚೆತ್ತ ಬಿಜೆಪಿ ಚೇರ್ ಪರ್ಸನ್ ಸಿಸಿಬಿ ಉಸ್ತುವಾರಿ, ಎಸಿಪಿ ಜಗದೇಕ ವೀರ, ಕೇಡಿ ರಾಜ್ ನನ್ನು ಕರೆಸ್ಕೊಂಡು ಫುಲ್ ಡ್ರಿಲ್ ಮಾಡುತ್ತಾರೆ. ಉಸ್ತುವಾರಿ ಹೊತ್ತಿದ್ದ ಮನುಷ್ಯ ಇಂಗು ತಿಂದ ಮಂಗನಂತಾಗಿದ್ದ. ಯಾಕಂದ್ರೆ, ಆ ಪಾರ್ಟಿಗೆ ಈ ಡೀಲ್ ವಿಷ್ಯಾನೇ ಗೊತ್ತಿರ್ಲಿಲ್ಲ. ಕೇಡಿ, ಕಾಸ್ಕು ಮತ್ತು ಜಗದೇಕ ಸೇರ್ಕೊಂಡು ಡೀಲ್ ಮುಗಿಸ್ಕೊಂಡಿದ್ದರು.

ಆವತ್ತೇ ತಾನು ಮಾಡದ ತಪ್ಪಿಗೆ ಕ್ರೈಂ ಉಸ್ತುವಾರಿ ಎತ್ತಂಗಡಿ ಆಗಿದ್ದರು. ಮೊದಲೇ ಆ ಸೀಟಿಗೆ ಬರಲು ಹಾತೊರೆಯುತ್ತಿದ್ದ ಮನುಷ್ಯ ಚೇರ್ ಪರ್ಸನ್ ಮೂಲಕ ಅಲ್ಲಿ ಬಂದು ಕೂತಿದ್ದ. ಆನಂತ್ರ ಕೆಲವೇ ದಿನಗಳಲ್ಲಿ ಕಾಸ್ಕು ಮತ್ತು ಕೇಡಿಯೂ ಎತ್ತಂಗಡಿ ಆದ್ರು ಬಿಡಿ. ಆದರೆ, ಇದೆಲ್ಲ ನಡೆದು ತಿಂಗಳು ಕಳೆಯುವಷ್ಟರಲ್ಲಿ ಎಲ್ಲದಕ್ಕೂ ಸಾಕ್ಷಿಯಾಗಿದ್ದ ಒಳಗಿನ ಮಂದಿಯೇ ಗುಟ್ಟು ರಟ್ಟು ಮಾಡಿದ್ದಾರೆ. ಏನೇ ಮಾಡಿದ್ದರೂ, ಮೇಲೆ ಕುಳಿತು ಕಾಸು ಎಣಿಸಿದ್ದವರ ಹಣೆಬರಹ ಕೆಳಗೆ ಕುಂತವನ ಕಣ್ಣಿಗೆ ಬೀಳದಿರುತ್ತದೆಯೇ ? ಅದ್ಯಾವತ್ತಾದರೂ ಹೊರಗೆ ಬಂದೇ ಬರುತ್ತೆ ಬಿಡ್ರೀ..

ಮೊನ್ನೆ ವಂಚಕ ಉದ್ಯಮಪತಿಗಳ ಐಷಾರಾಮಿ ಕಾರುಗಳನ್ನೇ ಗಿರವಿಟ್ಟುಕೊಂಡಿದ್ದ ಕತೆ ಹೊರಬಿದ್ದಿತ್ತು. ಈವತ್ತು ಮತ್ತೊಂದಷ್ಟು ಕತೆಗಳು ಹೊರಬಿದ್ದಿವೆ. ಇಂಥ ತಿರುಬೋಕಿ, ಐನಾತಿ ಕತೆಗಳು ಬಂದರಿಗೆ ಆತುಕೊಂಡಿರುವ ಆ ಭೂತ ಬಂಗಲೆಯಲ್ಲಿ ಇನ್ನೂ ಅದೆಷ್ಟು ಹುದುಗಿ ಹೋಗಿದ್ಯೋ ಏನೋ..? 

Also Read: ಕೇಡಿ ರಾಜ್, ಕಾಸ್ಕುಮಾರ್, ಜಗದೇಕ ವೀರ ; ವಂಚಕ ಉದ್ಯಮಪತಿಗಳನ್ನೇ ಬೋಳಿಸಿದ ಪೊಲೀಸ್ ಜೋಡಿ !!

Mangalore prominent Police officers involved in illegal dealings with accused of Beef transportation and Stabbing of Businessmen in Kandavara, Mangalore has been exposed. A detailed crime report by Headline Karnataka Special Crime Correspondent.