ಭಿಕ್ಷೆ ಎತ್ತುವ ಈಕೆಯೂ ದಾನಶೂರ ಕರ್ಣೆ ! ಲಕ್ಷಾಂತರ ರೂ. ದೇವಸ್ಥಾನಗಳಿಗೆ ದೇಣಿಗೆ !

05-02-21 03:21 pm       Udupi Correspondent   ಕರಾವಳಿ

ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯತೆ ಕಂಡು ಜನ ಬೆಕ್ಕಸ ಬೆರಗಾಗಿದ್ದಾರೆ.

ಉಡುಪಿ, ಫೆ.5 : ಕರಾವಳಿಯ ದೇವಸ್ಥಾನ, ಮಂದಿರಗಳಲ್ಲಿ ಅಯ್ಯಪ್ಪ ವ್ರತಧಾರಿಯಾಗಿ ಕಪ್ಪು ಬಟ್ಟೆಯಲ್ಲಿ ಬೀದಿ ಸುತ್ತುವ ವೃದ್ಧ ಮಹಿಳೆಯನ್ನು ಅಯ್ಯಪ್ಪ ಮಾಲಾಧಾರಿಗಳಂತೂ ನೋಡಿಯೇ ಇರುತ್ತಾರೆ. ಬೀದಿ ಸುತ್ತಿ ಭಿಕ್ಷೆ ಎತ್ತಿ ಹಣ ಸಂಪಾದನೆ ಮಾಡುವ ಈ ಮಹಿಳೆಯ ಹೃದಯ ಶ್ರೀಮಂತಿಕೆ ನೋಡಿದರೆ ಅದು ಅಂಬಾನಿಗಿಂತಲೂ ಮಿಗಿಲು. 

ಹೌದು.. ಈಕೆ ತನ್ನಲ್ಲಿ ಸಂಪಾದನೆಯಾಗುವ ಹಣವನ್ನು ಕೂಡಿಡದೆ ದೇವಸ್ಥಾನಗಳಿಗೆ ದಾನ ಮಾಡುವುದನ್ನು ರೂಢಿ ಮಾಡಿದ್ದಾರೆ. ಇತ್ತೀಚೆಗೆ ಸಾಲಿಗ್ರಾಮದ ಗುರುನರಸಿಂಹ ದೇವರ ಸನ್ನಿಧಾನಕ್ಕೆ ಈ ಮಹಿಳೆ ಬರೋಬ್ಬರಿ ಒಂದು ಲಕ್ಷ ದೇಣಿಗೆ ನೀಡಿದ್ದು ಅಲ್ಲಿನ ಮಂದಿಯನ್ನೇ ಹುಬ್ಬೇರಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ದೇವಸ್ಥಾನದ ಅನ್ನಸಂತರ್ಪಣೆಗೆ ಈ ಹಣವನ್ನು ಬಳಸಿಕೊಳ್ಳುವಂತೆ ಕೋರಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯತೆ ಕಂಡು ಜನ ಬೆಕ್ಕಸ ಬೆರಗಾಗಿದ್ದಾರೆ.

ಅಯ್ಯಪ್ಪ ಭಕ್ತೆಯಾದ ಈ ವೃದ್ಧೆಯ ಹೆಸರು ಅಶ್ವತ್ಥಮ್ಮ. ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಇವರು, ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಟೋಲ್​ ಗೇಟ್​ ಪರಿಸರದಲ್ಲಿ ಜನರಿಂದ ಹಣ ಭಿಕ್ಷೆ ಎತ್ತಿ ಜೀವನ ನಡೆಸುತ್ತಾರೆ. ಆದರೆ, ಹೀಗೆ ಸಂಗ್ರಹವಾದ ಹಣವನ್ನು ಕೂಡಿಡುವುದಿಲ್ಲ. ಬಚ್ಚಿಟ್ಟದ್ದು ಪರರಿಗೆ ಎನ್ನುವ ಬಸವಣ್ಣರ ವಚನದಂತೆ ಎಲ್ಲೂ ಕೂಡಿಡುವ ಅಭ್ಯಾಸ ಮಾಡಿಕೊಳ್ಳದೆ ಸಂಗ್ರಹವಾದ ಹಣವನ್ನು ಆಯಾ ಪರಿಸರದಲ್ಲೇ ಇರುವ ದೇವಸ್ಥಾನಗಳಿಗೆ ದಾನ ಕೊಡುತ್ತಾರೆ. ಈವರೆಗೆ ಅಜ್ಜಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಹಣವನ್ನು ವಿವಿಧ ದೇವಾಲಯಗಳಿಗೆ ದಾನವಾಗಿ ಕೊಟ್ಟಿದ್ದಾರೆ.

ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5 ಲಕ್ಷ ರೂ. ದೇಣಿಗೆ ನೀಡಿದ್ದರಂತೆ. ನಂತರ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ನಡೆಸಿದ್ದಾರೆ. ಬಳಿಕ ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳವಾದ ಪಂದಳ ಕ್ಷೇತ್ರದಲ್ಲಿ 30 ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ ಕಾಣಿಕೆ ಸಮರ್ಪಿಸಿದ್ದಾರೆ.

ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ ಒಂದು ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನು ದಾನ ಮಾಡುತ್ತಾ ಬಂದಿರುವ ಈಕೆ ಮಹಾನ್ ದೈವಭಕ್ತೆ. ಕೊರೊನಾದಿಂದ ದೇಶ ಮುಕ್ತವಾಗಲಿ, ಶಬರಿಮಲೆಗೆ ಕವಿದಿರುವ ಕತ್ತಲು ದೂರವಾಗಲಿ ಎಂದು ಹರಕೆಯನ್ನೂ ಹೊತ್ತಿದ್ದಾರೆ.

ಪತಿ ಹಾಗೂ ಪುತ್ರ ತೀರಿಕೊಂಡ ನಂತರ ಇವರು ಈ ಹಣ ಸಂಗ್ರಹ ಕೆಲಸ ಆರಂಭಿಸಿದ್ದಾರೆ. ಈ ಅಜ್ಜಿಗೆ ಆರು ಮಂದಿ ಮೊಮ್ಮಕ್ಕಳೂ ಇದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Udupi Grandmother donates one lakhs to temple by begging for money on street.