ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೊನೆಕ್ಷಣದಲ್ಲಿ ವಿಫಲವಾಗಿದ್ದೇಕೆ ನಲಪಾಡ್ ?!

05-02-21 05:59 pm       Mangalore Correspondent   ಕರಾವಳಿ

ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ಯುವ ಕಾಂಗ್ರೆಸ್ ಗಾದಿಗೇರಲು ಕಂಟಕವಾಗಿ ಪರಿಣಮಿಸಿದೆ.

ಬೆಂಗಳೂರು, ಫೆ.5: ಈ ಬಾರಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ತನಗೇ ಖಾತ್ರಿ ಎಂದು ಬೀಗುತ್ತಿದ್ದ ಮೊಹಮ್ಮದ್ ನಲಪಾಡ್ ಅದೃಷ್ಟ ಕೊನೆಕ್ಷಣದಲ್ಲಿ ಕೈಕೊಟ್ಟಿದ್ದಲ್ಲ, ಆತನ ಕ್ರಿಮಿನಲ್ ಹಿನ್ನೆಲೆಯೇ ಪದವಿ ಗಾದಿಗೆ ಅಡ್ಡಗಾಲಾಗಿತ್ತು ಎನ್ನುವ ಅಂಶ ಬಯಲಾಗಿದೆ. ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದೇ ಆತ ಯುವ ಕಾಂಗ್ರೆಸ್ ಗಾದಿಗೇರಲು ಕಂಟಕವಾಗಿ ಪರಿಣಮಿಸಿದೆ.

ಕಳೆದ ಜನವರಿ 11, 12, 13ರಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ನಡೆದಿದ್ದ ಆನ್ ಲೈನ್ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಅತಿ ಹೆಚ್ಚು ಮತಗಳನ್ನು ಪಡೆದಿದ್ದರು. ಹೀಗಿದ್ದರೂ, ಕೇಂದ್ರ ಚುನಾವಣಾ ಸಮಿತಿ ಆತನ ಆಯ್ಕೆಯನ್ನು ಪರಿಗಣಿಸಲಿಲ್ಲ. ಚುನಾವಣೆ ಬಳಿಕ ರಾಜ್ಯಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದವರನ್ನು ದೆಹಲಿಗೆ ಕರೆಸಲಾಗುತ್ತೆ. ಈ ವೇಳೆ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ವಿವರಣೆ ನೀಡಬೇಕು. ರಾಜಕೀಯ ಕಾರಣಕ್ಕೆ ಪ್ರಕರಣ ದಾಖಲಾಗಿದ್ದರೆ ವಿನಾಯ್ತಿ ಇರುತ್ತದೆ. ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರಿಂದ ಈ ಬಗ್ಗೆ ನಿರ್ಣಯ ಮಾಡುವ ಫೇಮ್ ಎನ್ನುವ ಕಮಿಟಿ ಶಿಫಾರಸು ಪತ್ರ ಕೊಟ್ಟಿರಲಿಲ್ಲ.

ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಡಿಯಲ್ಲಿ ಫೇಮ್ ಎನ್ನುವ ಕಮಿಟಿ ಇದೆ. ಈ ಕಮಿಟಿಯಲ್ಲಿ ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಇರುತ್ತಾರೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರನ್ನು ಆಯ್ಕೆ ಮಾಡುವಲ್ಲಿ ಇವರ ವರದಿ ಪ್ರಮುಖವಾಗಿರುತ್ತೆ. ನಿಷ್ಪಕ್ಷಪಾತವಾಗಿ ವರದಿ ನೀಡಿದ್ದರಿಂದ ನಲಪಾಡ್ ಆಯ್ಕೆ ಅಸಾಧ್ಯವಾಗಿದೆ ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೀಗಾಗಿ ಎರಡನೇ ಅತಿ ಹೆಚ್ಚು ಮತ ಪಡೆದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮಾಲೀಕರ ಕುಟುಂಬಸ್ಥ, ಮಾಜಿ ಸಚಿವ ಎಂ.ಆರ್. ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ. ನಲಪಾಡ್ 64203 ಮತಗಳನ್ನು ಪಡೆದಿದ್ದರೆ, ರಕ್ಷಾ ರಾಮಯ್ಯ 57271, ಮಂಜುನಾಥ್ 18137, ಮಿಥುನ್ ರೈ 3104 ಮತಗಳನ್ನು ಪಡೆದಿದ್ದಾರೆ.

ಹಾಲಿ ಎನ್ ಎಸ್ ಯುಐ ರಾಜ್ಯಾಧ್ಯಕ್ಷರಾಗಿರುವ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಪೈಪೋಟಿ ನೀಡಿದ್ದ ಎಚ್.ಎಸ್.ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಮಿಥುನ್ ರೈ ನಾಮಪತ್ರವನ್ನೂ ಅಸಿಂಧು ಎಂದು ಘೋಷಿಸಲಾಗಿದೆ. ಚುನಾವಣೆಗೆ ಎರಡು ದಿನ ಇರುವಾಗ ಹಿಂದೆ ಸರಿದಿದ್ದರೂ. ಚುನಾವಣಾ ಕಣದಲ್ಲಿ ಮಿಥುನ್ ರೈ ಹೆಸರಿತ್ತು. ಆದರೆ, ದೆಹಲಿಗೆ ಫೇಮ್ ಕಮಿಟಿ ಎದುರು ಕರೆದಿದ್ದಾಗ ಮಿಥುನ್ ಕಣದಿಂದ ಹಿಂದೆ ಸರಿದಿದ್ದ ಕಾರಣ ಅಲ್ಲಿ ಹೋಗಿರಲಿಲ್ಲ. ಹಾಗಾಗಿ ಮಿಥುನ್ ನಾಮಪತ್ರವನ್ನೂ ಫಲಿತಾಂಶ ಘೋಷಣೆ ವೇಳೆ ಅಸಿಂಧು ಮಾಡಲಾಗಿತ್ತು.  

ಮಹಮ್ಮದ್ ನಲಪಾಡ್ ವಿರುದ್ಧ ಬೆಂಗಳೂರಿನಲ್ಲಿ ಹಲವು ಕೇಸುಗಳಿವೆ. 2018ರಲ್ಲಿ ಯುಬಿ ಸಿಟಿಯ ಪಬ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ನಲಪಾಡ್ ಬಂಧನ ಕೂಡ ಆಗಿತ್ತು. 2020ರ ಮಾರ್ಚ್ ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ ಮತ್ತು 2020ರ ಫೆಬ್ರವರಿ ತಿಂಗಳಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಆರು ಮಂದಿಯ ಮೇಲೆ ಡಿಕ್ಕಿಯಾಗಿ ಹಿಟ್ ಅಂಟ್ ರನ್ ಪ್ರಕರಣ ದಾಖಲಾಗಿತ್ತು. 

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗಾದಿ ; ಡಿಕೆಶಿ ಅತ್ಯಾಪ್ತ ಮಿಥುನ್ ರೈಯನ್ನು ಕೊನೆ ಕ್ಷಣದಲ್ಲಿ ಕಣದಿಂದ ಹೊರಕ್ಕಟ್ಟಿದ್ದು ಯಾರು ?

Nalpad Haris lost the Youth  congress president post due to his past criminal cases. A detailed report by Headline Karnataka.