ಬ್ರೇಕಿಂಗ್ ನ್ಯೂಸ್
26-02-21 03:58 pm Mangalore Correspondent ಕರಾವಳಿ
ಮಂಗಳೂರು, ಫೆ.26: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ್ದ ಆರೋಪ ಮತ್ತು ಅದಕ್ಕೆ ಕಾರಣವಾದ ಹಣ ಡಬ್ಲಿಂಗ್ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ವಹಿಸಿದೆ. ಮಂಗಳೂರಿನ ಸಿಸಿಬಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾದ ಕಾರು ಮಾರಾಟ ಪ್ರಕರಣದ ಬಗ್ಗೆ ಡಿಸಿಪಿ ವಿನಯ ಗಾಂವ್ಕರ್ ರಾಜ್ಯದ ಡಿಜಿಪಿಗೆ ವರದಿ ನೀಡಿದ್ದರು. ವರದಿಯಲ್ಲಿ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಡಿಜಿಪಿ ಪ್ರವೀಣ್ ಮಸೂದ್, ಇಡೀ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ.
ಇದರಂತೆ ಮಂಗಳೂರಿನ ಪಾಂಡೇಶ್ವರದ ಇಕೊನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಯಲ್ಲಿ ದಾಖಲಾಗಿದ್ದ 30 ಕೋಟಿ ವಂಚನೆ ಪ್ರಕರಣ ಈಗ ಸಿಐಡಿಗೆ ಹಸ್ತಾಂತರವಾಗಿದೆ. ಕೇರಳ ಮೂಲದ ಟೋಮಿ ಮ್ಯಾಥ್ಯು ಮತ್ತು ಟಿ.ರಾಜನ್ ಎಂಬಿಬ್ಬರು ಸೇರಿ ಗುಂಡ್ಯದ ಉದನೆಯಲ್ಲಿ ಎಲಿಯ ಕನ್ ಸ್ಟ್ರಕ್ಷನ್ ಹೆಸರಲ್ಲಿ ಹಣ ದ್ವಿಗುಣಗೊಳಿಸುವ ಮನಿ ಡಬ್ಲಿಂಗ್ ಜಾಲ ನಡೆಸುತ್ತಿದ್ದರು. ಉಪ್ಪಿನಂಗಡಿ, ಪುತ್ತೂರು ಭಾಗದಲ್ಲಿ ಹಲವರನ್ನು ವಂಚಿಸಿದ ಬಳಿಕ ಮಂಗಳೂರಿನಲ್ಲಿ ಕಚೇರಿ ತೆರೆದು ಮತ್ತಷ್ಟು ಮಂದಿಯನ್ನು ತಮ್ಮ ಜಾಲದಲ್ಲಿ ಸಿಲುಕಿಸಿದ್ದರು. ಹೀಗೆ ಹಣ ಕಳಕೊಂಡಿದ್ದ ಶಕ್ತಿನಗರದ ಮಹಿಳೆಯೊಬ್ಬರು ಅಕ್ಟೋಬರ್ 16ರಂದು ಮಂಗಳೂರಿನಲ್ಲಿ ದೂರು ದಾಖಲಿಸಿದ್ದು, ಹಲವರಿಗೆ ವಂಚಿಸಿದ್ದರಿಂದ 30 ಕೋಟಿ ವಂಚನೆ ಆಗಿರುವ ಬಗ್ಗೆ ಎಫ್ಐಆರ್ ದಾಖಲಾಗಿತ್ತು.
ಈ ವೇಳೆ, ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಸದ್ರಿ ಪ್ರಕರಣದಲ್ಲಿ ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ನಮ್ಮಲ್ಲಿ ಸ್ಟಾಫ್ ಇಲ್ಲವೆಂದು ಕಮಿಷನರ್ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಅಂದಿನ ಕಮಿಷನರ್ ವಿಕಾಸ್ ಕುಮಾರ್, ಸಿಸಿಬಿ ತಂಡಕ್ಕೆ ಆರೋಪಿಗಳನ್ನು ಪತ್ತೆ ಮಾಡುವಂತೆ ಸೂಚಿಸಿದ್ದರು. ತನಿಖೆ ಆರಂಭಿಸಿದ ಅಂದಿನ ಸಿಸಿಬಿ ತಂಡ, ಕೇರಳದಲ್ಲಿದ್ದ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದರು. ಜೊತೆಗೆ, ಅವರ ಬಳಿಯಿದ್ದ ಐಷಾರಾಮಿ ಕಾರುಗಳಾದ ಪೋರ್ಷ್, ಜಾಗ್ವಾರ್ ಮತ್ತು ಬಿಎಂಡಬ್ಲ್ಯುಗಳನ್ನು ವಶಕ್ಕೆ ಪಡೆದಿದ್ದರು. ಬಂಧಿತ ಆರೋಪಿಗಳು 15 ದಿನಗಳ ಬಳಿಕ ಜಾಮೀನಿನಲ್ಲಿ ಹೊರಬಂದಾಗ, ಸಿಸಿಬಿಯಲ್ಲಿದ್ದ ತಮ್ಮ ಕಾರುಗಳು ಮಾಯವಾಗಿದ್ದವು. ಈ ನಡುವೆ, ಮಂಗಳೂರು ಕಮಿಷನರ್ ಮತ್ತು ಸಿಸಿಬಿ ತಂಡದ ಉಸ್ತುವಾರಿಗಳು ವರ್ಗಾವಣೆಗೊಂಡು ಹೊಸಬರು ಬಂದು ಕುಳಿತಿದ್ದರು.
ಆಬಳಿಕ ಜನವರಿ ತಿಂಗಳ ಕೊನೆಯಲ್ಲಿ ಸಿಸಿಬಿ ತಂಡ ತೊಕ್ಕೊಟ್ಟಿನಲ್ಲಿ ಎಣ್ಣೆ ಪಾರ್ಟಿ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಪೊಲೀಸರ ಮಧ್ಯೆ ಸಂಚಲನ ಮೂಡಿಸುತ್ತಿದ್ದಂತೆ ಸಿಸಿಬಿ ಒಳಗಿನ ಹಳೆ ರಹಸ್ಯಗಳು ಬಿಚ್ಚಿಕೊಂಡಿದ್ದವು. ಆರೋಪಿಗಳನ್ನು ಬಚಾವ್ ಮಾಡಲು ಕಾರು ಮಾರಾಟ ಮಾಡಿದ್ದು, ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳ ನಡುವೆ ಡೀಲ್ ಆಗಿದ್ದು ಹೀಗೆ ಹುದುಗಿಹೋಗಿದ್ದ ರಹಸ್ಯ ಲೀಕ್ ಆಗಿ ಮಾಧ್ಯಮಗಳಿಗೆ ಆಹಾರವಾಗಿದ್ದವು. ಆರೋಪಿಗಳ ಜೊತೆ ಸೇರಿ ಅಧಿಕಾರಿಗಳೇ ಕಾರು ಮಾರಾಟ ಮಾಡಿದ್ದಾರೆಂಬುದನ್ನು ಗಂಭೀರವಾಗಿ ಪರಿಗಣಿಸಿದ ಎಡಿಜಿಪಿ ಪ್ರತಾಪ್ ರೆಡ್ಡಿ ಮಂಗಳೂರು ಕಮಿಷನರ್ ಬಳಿ ವರದಿ ಕೇಳಿದ್ದರು. ಹೀಗಾಗಿ ವರದಿ ತಯಾರಿಸಲು ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ಗೆ ಹೊಣೆ ನೀಡಲಾಗಿತ್ತು.
ಮತ್ತೊಂದು ಎಫ್ಐಆರ್ ಮಾಡಬೇಕಿತ್ತು !
ಕಾರು ಮಾರಾಟ ಪ್ರಕರಣದ ಬಗ್ಗೆ ಡಿಸಿಪಿ ವರದಿ ನೀಡಿರುವುದರಿಂದ ಘಟನೆ ಬಗ್ಗೆ ಮತ್ತೊಂದು ಎಫ್ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕಿತ್ತು. ಇಲ್ಲದಿದ್ದರೆ ಸಿಐಡಿಗೆ ವಹಿಸಿದರೂ, ತನಿಖೆ ನಡೆಸುವುದಕ್ಕೆ ಬೇಸ್ ಇರುವುದಿಲ್ಲ. ಇದೀಗ ಡಿಜಿಪಿಯವರು, ಮೂಲ ಪ್ರಕರಣವನ್ನೇ ಸಿಐಡಿಗೆ ವಹಿಸಿದ್ದು, ಅದರಡಿಯಲ್ಲೇ ಪೊಲೀಸರ ವಿರುದ್ಧದ ಆರೋಪವನ್ನೂ ತನಿಖೆ ನಡೆಸಲು ಸೂಚಿಸಿದ್ದಾರೆ. ಹೀಗಾಗಿ ಪಾಂಡೇಶ್ವರ ಠಾಣೆಯಲ್ಲಿದ್ದ ಹಣ ಡಬ್ಲಿಂಗ್ ಪ್ರಕರಣದ ಇಡೀ ಫೈಲ್ ಸಿಐಡಿಗೆ ಹಸ್ತಾಂತರ ಆಗುತ್ತಿದೆ. ಕಾರು ಮಾರಾಟ ಪ್ರಕರಣ ಅದರದ್ದೇ ಭಾಗ ಆಗಿರುವುದರಿಂದ ಮತ್ತು ಆರೋಪಿಗಳು ಅಂತಾರಾಜ್ಯ ನೆಲೆಯಲ್ಲಿ ಚಟುವಟಿಕೆ ನಡೆಸಿದ್ದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ಕೊಟ್ಟಿದ್ದಾರೆ.
ಹೀಗಾಗಿ ಮಂಗಳೂರು ಪೊಲೀಸರ ವಿರುದ್ಧದ ಆರೋಪ ಸದ್ಯದಲ್ಲಿ ಮುಗಿದು ಹೋಗಲ್ಲ. ಹಣ ಡಬ್ಲಿಂಗ್ ಜಾಲದ ತನಿಖೆ ನಡೆದು, ಅದರ ಜೊತೆಗೇ ಪೊಲೀಸರ ವಿರುದ್ಧದ ಆರೋಪದ ಬಗ್ಗೆಯೂ ತನಿಖೆ ನಡೆಸಿದ ಬಳಿಕವೇ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿದೆ. ಅದಕ್ಕೆಂದು ಡಿಎಸ್ಪಿ ಅಥವಾ ಎಸ್ಪಿ ದರ್ಜೆಯ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಬೇಕು. ಇನ್ನು ಕೂಡ, ಯಾರು ತನಿಖಾಧಿಕಾರಿ ಅನ್ನೋದು ಸಿಐಡಿ ಐಜಿ ಕಡೆಯಿಂದ ತಿಳಿದುಬಂದಿಲ್ಲ.
ಕಾರು ಜಪ್ತಿ ಬಗ್ಗೆ ದಾಖಲೆಯೇ ಇಲ್ಲ !
ಇವೆಲ್ಲದಕ್ಕಿಂತಲೂ ಮಜಾ ನೀಡೋ ವಿಚಾರ ಅಂದ್ರೆ, ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಂದ ಮೂರು ಕಾರುಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಕೋರ್ಟಿಗೇ ಫೈಲ್ ಮಾಡಿಲ್ಲ ಎನ್ನಲಾಗುತ್ತಿದೆ. ಆರೋಪಿಗಳನ್ನು ಬಂಧಿಸಿ ವರದಿ ನೀಡುವ ವೇಳೆಯಲ್ಲೇ ಕಾರುಗಳನ್ನು ಜಪ್ತಿ ಮಾಡಿರುವ ಕೋರ್ಟಿಗೆ ಸೊತ್ತು ರಿಕವರಿ ಬಗ್ಗೆ ಹೇಳಬೇಕಿತ್ತು. ಆದರೆ, ಮೂಲಗಳ ಪ್ರಕಾರ, ಆರೋಪಿಗಳ ಜೊತೆ ಯಾವುದೇ ಸೊತ್ತು ರಿಕವರಿಯನ್ನು ತೋರಿಸಿಲ್ಲ. ಇತ್ತ ಆರೋಪಿಗಳು ಕೂಡ ತಮ್ಮ ಕಾರಿನ ಬಗ್ಗೆ ಪ್ರಶ್ನೆ ಮಾಡಿಕೊಂಡು ಪೊಲೀಸರ ಬಳಿಗೆ ಬಂದಿಲ್ಲ. ನಾಪತ್ತೆಯಾಗಿರುವ ಬಗ್ಗೆ ಕೇಸು ದಾಖಲಿಸಲು ಅವಕಾಶ ಇದ್ದರೂ, ಅದನ್ನು ಮಾಡಿಲ್ಲ. ಈ ನಡುವೆ, ಸೊತ್ತು ರಿಕವರಿಯನ್ನೇ ತೋರಿಸಿರದ ಪಕ್ಷದಲ್ಲಿ ಆರೋಪಿಗಳ ಕಾರು ಮಾರಾಟ ಆಗಿರುವುದನ್ನು ಪ್ರೂವ್ ಮಾಡುವುದು ಸುಲಭದ ವಿಚಾರ ಅಲ್ಲ. ಇದೇ ವೇಳೆ, ಜಾಗ್ವಾರ್ ಬಿಟ್ಟು ಉಳಿದೆರಡು ಕಾರುಗಳು ಕಮಿಷನರ್ ಕಚೇರಿ ಬಳಿ ಬಂದು ನಿಂತಿದೆ. ಮಾರಾಟ ಆಗಿರುವ ಜಾಗ್ವಾರ್ ಹೈದರಾಬಾದ್ ನಲ್ಲಿದೆ ಎನ್ನಲಾಗುತ್ತಿದ್ದು, ಕಾರು ಖರೀದಿಸಿದ ವ್ಯಕ್ತಿಯೂ ಈಗ ಪೊಲೀಸರ ತನಿಖೆಗೆ ಒಳಪಡ ಬೇಕಾಗುತ್ತದೆ. ಒಟ್ಟಿನಲ್ಲಿ ಕಾರು ಮಾರಾಟ ಪ್ರಕರಣ ಮುಂದೆ ಬರುವ ತನಿಖಾಧಿಕಾರಿಗಳಿಗೂ ಪೀಕಲಾಟ ತಂದಿಡುವುದಂತೂ ಸತ್ಯ.
The CID, crime investigation department will now probe into the case of a Luxury car missing in CCB police custody in Mangalore. A detailed report by Headline Karnataka.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 12:24 pm
Mangalore Correspondent
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm