ಭದ್ರಕೋಟೆ ಸುಳ್ಯ ಬಿಜೆಪಿ ಎರಡು ಹೋಳು ! ಸಂಘ ಪರಿವಾರದಲ್ಲೇ ಭಾರೀ ಒಡಕು ; ನಾಲ್ವರ ಉಚ್ಚಾಟನೆ !!

27-02-21 06:12 pm       Mangalore Correspondent   ಕರಾವಳಿ

ಬಿಜೆಪಿ ಪಾಲಿಗೆ ಭದ್ರಕೋಟೆಯೇ ಆಗಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾಯಕರ ನಡುವಿನ ಕತ್ತಿ ವರಸೆ ಮೇರೆ ಮೀರಿದೆ.

ಮಂಗಳೂರು, ಫೆ.27: ಬಿಜೆಪಿ ಪಾಲಿಗೆ ಭದ್ರಕೋಟೆಯೇ ಆಗಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾಯಕರ ನಡುವಿನ ಕತ್ತಿ ವರಸೆ ಮೇರೆ ಮೀರಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಮಧ್ಯೆ ಎರಡು ಬಣ ಸೃಷ್ಟಿಯಾಗಿದ್ದು, ಕಳೆದ ಹಲವು ಸಮಯದಿಂದ ಶೀತಲ ಸಮರ ಏರ್ಪಟ್ಟಿತ್ತು. ಅದೀಗ ಸ್ಫೋಟಗೊಂಡಿದ್ದು, ಬಹಿರಂಗ ಸಮರಕ್ಕೆ ನಾಂದಿ ಹಾಡಿದೆ. ಇದಕ್ಕೆ ಉಪ್ಪು ಸುರಿಯುವ ಕೆಲಸ ಬಿಜೆಪಿ ಜಿಲ್ಲಾ ಮಟ್ಟದ ನಾಯಕರಿಂದ ನಡೆದಿದ್ದು, ನಾಲ್ಕು ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆ ನೆಲೆಯಲ್ಲಿ ಉಚ್ಚಾಟನೆ ಮಾಡಲಾಗಿದೆ.

ಈ ಹಿಂದೆ ಬಿಜೆಪಿ ಸರಕಾರದ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ರಾಜ್ಯ ನಾಯಕರಾಗಿ ಹೆಸರು ಮಾಡಿದ್ದ ಮತ್ತು ಈಗ ಜಿಪಂ ಸದಸ್ಯರಾಗಿರುವ ಎಸ್.ಎನ್. ಮನ್ಮಥ, ದಶಕಗಳಿಂದಲೂ ಬಜರಂಗದಳ, ವಿಶ್ವ ಹಿಂದು ಪರಿಷತ್ ಹೆಸರಲ್ಲಿ ಮುಂಚೂಣಿ ನಾಯಕನಾಗಿ ಬೆಳೆದು ಬಂದು ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಶೈಲೇಶ್ ಅಂಬೆಕಲ್ಲು, ಆರೆಸ್ಸೆಸ್ ನಾಯಕರ ಆಪ್ತನಾಗಿ ಗುರುತಿಸಿದ್ದ ನೆಲ್ಲೂರು ಕೆಮ್ರಾಜೆ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮತ್ತು ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ನಿಜಕ್ಕಾದರೆ, ಈ ಒಳ ಜಗಳದ ಮೂಲ ಹುಟ್ಟಿಕೊಂಡಿದ್ದೇ ಎರಡು ವರ್ಷಗಳ ಹಿಂದಿನ ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸುಳ್ಯದಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಸ್ಪಷ್ಟವಾಗಿ ಗೆಲ್ಲಬಹುದಾಗಿದ್ದರೂ, ಬಿಜೆಪಿ ಸದಸ್ಯರೇ ಹಣ ಪಡೆದು ಅಡ್ಡ ಮತದಾನ ಮಾಡಿದ್ದರೆಂಬ ಗಂಭೀರ ಆರೋಪ ಕೇಳಿಬಂದಿತ್ತು. ಆಬಳಿಕ ಸಹಕಾರ ಭಾರತಿಯ ಎಲ್ಲ ನಿರ್ದೇಶಕರನ್ನೂ ರಾಜಿನಾಮೆ ನೀಡಲು ಸೂಚಿಸಲಾಗಿತ್ತು. ಅಲ್ಲದೆ, ಕಾನತ್ತೂರಿಗೆ ತೆರಳಿ ಆಣೆ ಪ್ರಮಾಣವನ್ನೂ ಮಾಡಿಸಲಾಗಿತ್ತು. ಇದೆಲ್ಲ ನಡೆದರೂ, ರಾಜಿನಾಮೆ ಪ್ರಹಸನಕ್ಕೆ ಮುಗಿದಿತ್ತು. ಈ ವಿಚಾರ ಒಳಗೊಳಗೇ ಕುದಿಯುತ್ತಲೇ ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿತ್ತು.

ಸುಳ್ಯದಲ್ಲಿ ಹಿಂದಿನಿಂದಲೂ ಆರೆಸ್ಸೆಸ್ ನಾಯಕರಲ್ಲಿ ಮೂವರು ಪ್ರಭಾವಿಗಳಿದ್ದಾರೆ. ತಲ್ಲೂರು ಚಂದ್ರಶೇಖರ್ ಭಟ್, ನ. ಸೀತಾರಾಮ ಮತ್ತು ಶ್ರೀನಿವಾಸ ಭಟ್ ಉಬರಡ್ಕ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣ ಪಡೆದ ವಿಚಾರ ಈ ಮೂವರೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಮೂವರಿಗೂ ನಿಷ್ಠರಾದ ಬಹಳಷ್ಟು ಮಂದಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತ್ಯೇಕವಾಗಿ ಗುರುತಿಸಿಕೊಂಡರು. ಬಳಿಕ ತಲ್ಲೂರು – ಸೀತಾರಾಮ ಬಣ ಮತ್ತು ಶ್ರೀನಿವಾಸ ಭಟ್ ಹೀಗೆ ಎರಡು ಬಣಗಳಾಗಿ ಒಡೆದಿದ್ದವು. ಎರಡು ಕಡೆಯಿಂದಲೂ ತಾವು ನೈಜ ಬಿಜೆಪಿ, ನೈಜ ಸಂಘ ಪರಿವಾರ ಎನ್ನುವಷ್ಟರ ಮಟ್ಟಿಗೆ ದ್ವೇಷ ಬೆಳೆದಿತ್ತು.

ಇಂಥ ಸಂದರ್ಭದಲ್ಲೇ ಕಳೆದ ಬಾರಿ ಪಂಚಾಯತ್ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಬಹಳಷ್ಟು ಕಡೆ ಬಿಜೆಪಿ ಒಳಗಿನವರೇ ಪ್ರತ್ಯೇಕವಾಗಿ ಗುರುತಿಸ್ಕೊಂಡು ಸ್ವಾಭಿಮಾನಿ ಬಳಗ ಹೆಸರಲ್ಲಿ ಸ್ಪರ್ಧಿಸಿದ್ದರು. ನಾಲ್ಕು ಪಂಚಾಯತ್ ಗಳಲ್ಲಿ ಈ ಬಣ ಆಡಳಿತ ವಹಿಸುವಷ್ಟರ ಮಟ್ಟಿಗೆ ಪ್ರಭಾವಿಯಾಗಿ ಬೆಳೆದಿದೆ. ಇದರಲ್ಲಿ ದೇವಚಳ್ಳ ಗ್ರಾಪಂನಲ್ಲಿ ಶೈಲೇಶ್ ಅಂಬೆಕಲ್ಲು ಮತ್ತು ತಂಡ, ಐವರ್ನಾಡಿನಲ್ಲಿ ಎಸ್.ಎನ್ ಮನ್ಮಥ ಸ್ವಾಭಿಮಾನಿ ಬಳಗದಲ್ಲಿ ಪ್ರಮುಖವಾಗಿ ಗುರುತಿಸಿದ್ದರು. ಇಂಥ ಬೆಳವಣಿಗೆ ಬಿಜೆಪಿ ಜಿಲ್ಲಾ ನಾಯಕರಿಗೂ ನುಂಗಲಾರದ ತುತ್ತಾಗಿತ್ತು.

ಪಂಚಾಯತ್ ಚುನಾವಣೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಸುಳ್ಯಕ್ಕೆ ಬಂದು ಅಸಮಾಧಾನಿತ ಗುಂಪನ್ನು ಭೇಟಿಯಾಗಿ ಸಮಾಧಾನಿಸುವ ಕೆಲಸ ಮಾಡಿದ್ದರು. ಆದರೆ, ಜಿಲ್ಲೆ ಮತ್ತು ರಾಜ್ಯ ನಾಯಕರ ಸಲಹೆಗೆ ವಿರೋಧಿ ಗುಂಪು ಸೊಪ್ಪು ಹಾಕಿರಲಿಲ್ಲ. ಈ ರೀತಿಯ ಶೀತಲ ಸಮರ ಬಿಜೆಪಿಯಿಂದಲೇ ಪ್ರಭಾವಿ ನಾಯಕರನ್ನು ಉಚ್ಛಾಟನೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಎಸ್.ಎನ್. ಮನ್ಮಥ ಮತ್ತು ಶೈಲೇಶ್ ಅಂಬೆಕಲ್ಲು ಸುಳ್ಯದಲ್ಲಿ ಪ್ರಭಾವಿಯಾಗಿರುವ ಮತ್ತು ಅತಿ ಹೆಚ್ಚು ಮತಗಳನ್ನು ಹೊಂದಿರುವ ಗೌಡ ಜನಾಂಗಕ್ಕೆ ಸೇರಿದವರಾಗಿದ್ದು ಭವಿಷ್ಯದಲ್ಲಿ ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆ ಇಲ್ಲದಿಲ್ಲ. ಅಂಗಾರ ಸತತ ಆರು ಬಾರಿ ಗೆದ್ದಿದ್ದರೂ, ಅಲ್ಲಿನ ಪ್ರಭಾವಿ ಗೌಡ ಸಮುದಾಯ ನಿರಂತರವಾಗಿ ಬಿಜೆಪಿ ಪರವಾಗಿದ್ದರಿಂದ ಇದು ಸಾಧ್ಯವಾಗಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕೇಂದ್ರ ಸಚಿವ ಸದಾನಂದ ಗೌಡ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಎಸ್. ಅಂಗಾರ ಇವರೆಲ್ಲರ ತವರೂರು ಆಗಿರುವ ಸುಳ್ಯ ವಿಧಾನಸಭಾ ಕ್ಷೇತ್ರ, ಸೊಸೈಟಿ, ಪಂಚಾಯತ್ ಸ್ಥಾನಗಳಿಂದ ತೊಡಗಿ ಶಾಸಕ, ಜಿಪಂ, ತಾಲೂಕು ಪಂಚಾಯತ್ ಹೀಗೆ ಎಲ್ಲದರಲ್ಲೂ ಬಿಜೆಪಿಯದ್ದೇ ಪ್ರಭಾವ. ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಸುಳ್ಯ ಕ್ಷೇತ್ರದ ಬಿಜೆಪಿ ಮತ್ತು ಸಂಘ ಪರಿವಾರದಲ್ಲೇ ಈಗ ಒಡಕುಂಟಾಗಿದ್ದು, ರಾಜ್ಯ ನಾಯಕರ ಪಾಲಿಗೆ ಮುಜುಗರವೇ ಸರಿ.