ನೋಂದಣಿ ಮಾಡಿದರೂ ಸಿಗದ ಆಹಾರ ಕಿಟ್ ; ಸಮಸ್ಯೆ ಬಗ್ಗೆ ಖಾದರ್ ಬಳಿ ಕಾರ್ಮಿಕರ ಪ್ರಶ್ನೆ

05-07-21 04:20 pm       Mangalore Correspondent   ಕರಾವಳಿ

ಕೋವಿಡ್ ಸಂಕಷ್ಟ ಕಾಲದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೊಡಲಾಗುವ ಆಹಾರ ಕಿಟ್ ವಿತರಣಾ ಪಟ್ಟಿಯಲ್ಲಿ ಅನೇಕ ನೊಂದಾಯಿತ ಕಾರ್ಮಿಕರ ಹೆಸರನ್ನು ಕೈಬಿಡಲಾಗಿದೆ.ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕೆಂದು ಯು.ಟಿ ಖಾದರ್ ಹೇಳಿದ್ದಾರೆ. 

ಉಳ್ಳಾಲ, ಜು.5: ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಇಲಾಖೆಯಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೊಡಲಾಗುವ ಆಹಾರ ಕಿಟ್ ವಿತರಣಾ ಪಟ್ಟಿಯಲ್ಲಿ ಅನೇಕ ನೊಂದಾಯಿತ ಕಾರ್ಮಿಕರ ಹೆಸರನ್ನು ಕೈಬಿಡಲಾಗಿದೆ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಎಲ್ಲರಿಗೂ ಕಿಟ್ ದೊರಕುವಂತೆ ಮಾಡುತ್ತೇನೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. 

ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ವ್ಯಾಪ್ತಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇಂದು ಅವರು ಆಹಾರ ಕಿಟ್ ವಿತರಿಸಿದರು. ಕಾರ್ಮಿಕ ಇಲಾಖೆಗೆ ಹೆಸರು ನೋಂದಾಯಿಸಿದರೂ ಅನೇಕರ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಲ್ಲಿ ಕೈಬಿಡಲಾಗಿತ್ತು.  ನೋಂದಾಯಿತ ಅನೇಕ ಕಾರ್ಮಿಕರು ಆಹಾರ ಕಿಟ್ ಸಿಗುತ್ತದೆಂದು ಪಂಚಾಯತ್ ಕಚೇರಿಗೆ ಬಂದಿದ್ದರು. ಪಂಚಾಯತ್ ಪಿಡಿಓ ಅವರಲ್ಲಿ ತಮ್ಮ ಹೆಸರೇಕೆ ಕೈ ಬಿಡಲಾಗಿದೆ ಎಂದು ಕೇಳಿದರೆ ಅವರಲ್ಲೂ ಸಮರ್ಪಕ ಉತ್ತರ ದೊರೆತಿಲ್ಲ. ಹಾಗಾಗಿ ಕಾರ್ಮಿಕರು ನೇರ ಶಾಸಕರಲ್ಲೇ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯು.ಟಿ. ಖಾದರ್ ಅವರು ಫಲಾನುಭವಿಗಳ ಪಟ್ಟಿಯಲ್ಲಿ ಕೈಬಿಡಲಾದ ಕಾರ್ಮಿಕರ ಪಟ್ಟಿಯನ್ನ ನೀಡಿ, ಇಲಾಖೆಯಲ್ಲಿ ಆಗಿರುವ ಲೋಪಗಳನ್ನು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಪರಿಶೀಲಿಸಿ ಆದಷ್ಟು ಶೀಘ್ರ ಎಲ್ಲ ನೊಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್ ಸಿಗುವಂತೆ ಮಾಡುತ್ತೇನೆಂದರು.

ನೋಂದಣಿ ಮಾಡದ ಕಟ್ಟಡ ಕಾರ್ಮಿಕರು ಅತೀ ಶೀಘ್ರ ನೋಂದಣಿ ಮಾಡಿ ಇಲಾಖೆಯಿಂದ ತಮ್ಮ ಕುಟುಂಬಕ್ಕೆ ಸಿಗುವ ವಿವಿಧ ಸೌಲಭ್ಯಗಳನ್ನ ಬಳಸಿಕೊಳ್ಳಿ. ಕಾರ್ಮಿಕ ಇಲಾಖೆಗೆ ಹೆಸರು ನೋಂದಾಯಿಸಲು ಕಾರ್ಮಿಕರಿಗೆ ಅನುಕೂಲವಾಗುವಂತೆ ತಲಪಾಡಿಯಲ್ಲಿ ಪ್ರತ್ಯೇಕ ಶಿಬಿರವನ್ನೂ ಆಯೋಜಿಸುವುದಾಗಿ ಹೇಳಿದರು.

ತಲಪಾಡಿ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಉಪಾಧ್ಯಕ್ಷ ಫಯಾಝ್ ಪಿಲಿಕೂರ್ , ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ತಲಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಖಾದರ್, ಮುಖಂಡರಾದ ಸತೀಶ್ ಉಳ್ಳಾಲ್, ಪಿಡಿಓ ಕೇಶವ ಪೂಜಾರಿ, ತಾಪಂ ಮಾಜಿ ಸದಸ್ಯರಾದ ಸಿದ್ದೀಕ್ ಕೊಳಂಗೆರೆ, ಸುರೇಖಾ ಚಂದ್ರಹಾಸ್, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

Ullal Labourers registered for Food Kit supply go empty-handed workers slam MLA UT Khader.