ತಲಪಾಡಿ: ಹಠಾತ್ತನೇ ನಿಂತ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿ, ಸವಾರ ಗಂಭೀರ 

11-07-21 02:24 pm       Mangaluru Correspondent   ಕರಾವಳಿ

ಬ್ರೇಕ್ ಹೊಡೆದು ಹಠಾತ್ತನೆ ನಿಂತ ಸಿಟಿ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿಯಾಗಿದ್ದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾ.ಹೆ. 66 ರ ಉಚ್ಚಿಲದಲ್ಲಿ ನಡೆದಿದೆ. 

ಉಳ್ಳಾಲ, ಜು.11: ಧಾರಾಕಾರ ಮಳೆಯ ನಡುವೆ ಹೆದ್ದಾರಿಯಲ್ಲಿ ಬ್ರೇಕ್ ಹೊಡೆದು ಹಠಾತ್ತನೆ ನಿಂತ ಸಿಟಿ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿಯಾಗಿದ್ದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾ.ಹೆ. 66 ರ ಉಚ್ಚಿಲದಲ್ಲಿ ನಡೆದಿದೆ. 

ಬೈಕ್ ಸವಾರ ಆಂಧ್ರ ಪ್ರದೇಶದ ಮೂಲದ ಶಶಿಧರ್ ರೆಡ್ಡಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಮೂಲದ ಶಶಿಧರ್ ರೆಡ್ಡಿ (27) ಮತ್ತು ಶಾನು ಭಾಝ್ (31) ಎಂಬವರು ತಲಪಾಡಿ ಟೋಲ್ ಪ್ಲಾಝಾದ ಸಿಬ್ಬಂದಿಗಳಾಗಿದ್ದು ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಉಚ್ಚಿಲದಲ್ಲಿ ಖಾಸಗಿ ಸಿಟಿ ಬಸ್ಸೊಂದು ಹಠಾತ್ತಾಗಿ ಬ್ರೇಕ್ ಹೊಡೆದ ಕಾರಣ ಹಿಂದಿನಿಂದ ಧಾವಿಸುತ್ತಿದ್ದ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ಸಿನ ಒಳಗೆ ನುಗ್ಗಿದೆ. ಬೈಕ್ ಸವಾರ ಶಶಿಧರ್ ತಲೆಗೆ ಗಂಭೀರ ಗಾಯಗಳಾಗಿದ್ದು   ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ ಸವಾರ ಶಾನು ಭಾಝ್ ಕೂಡ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಉಚ್ಚಿಲ ಹೆದ್ದಾರಿಯಲ್ಲಿ ರಸ್ತೆಯಲ್ಲೇ ಅವೈಜ್ಞಾನಿಕವಾಗಿ ಬಸ್ಸುಗಳನ್ನು ನಿಲುಗಡೆ ಮಾಡುವುದರಿಂದ ಇಲ್ಲಿ ಅಪಘಾತಗಳಾಗುತ್ತಿವೆ. ಈ ಹಿಂದೆಯೂ ಇದೇ ರೀತಿ ಅಪಘಾತ ಆಗಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Rider Critical after Bike rams Speeding Bus after sudden brake at Uchila Near Talapady.