ಯಕ್ಷಗಾನದ ಹೆಸರಾಂತ ಕಿರೀಟ ವೇಷಧಾರಿ ಸಂಪಾಜೆ ಶೀನಪ್ಪ ರೈ ಇನ್ನಿಲ್ಲ

13-07-21 04:01 pm       Mangalore Correspondent   ಕರಾವಳಿ

ತೆಂಕುತಿಟ್ಟು ಯಕ್ಷಗಾನದ ಹೆಸರಾಂತ ಹಿರಿಯ ಕಲಾವಿದ, ಅಗ್ರಮಾನ್ಯ ಕಿರೀಟ ವೇಷಧಾರಿಯಾಗಿ ಗುರುತಿಸಲ್ಪಟ್ಟಿದ್ದ ಸಂಪಾಜೆ ಶೀನಪ್ಪ ರೈ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. 

ಮಂಗಳೂರು, ಜುಲೈ 13 : ತೆಂಕುತಿಟ್ಟು ಯಕ್ಷಗಾನದ ಹೆಸರಾಂತ ಹಿರಿಯ ಕಲಾವಿದ, ಅಗ್ರಮಾನ್ಯ ಕಿರೀಟ ವೇಷಧಾರಿಯಾಗಿ ಗುರುತಿಸಲ್ಪಟ್ಟಿದ್ದ ಸಂಪಾಜೆ ಶೀನಪ್ಪ ರೈ(81) ಇಂದು ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಸಂಪಾಜೆಯ ಕೀಲಾರಿನ ಮಾದೇಪಾಲು ಎಂಬಲ್ಲಿ 1940ರ ಜೂನ್ 07ರಂದು ಜನಿಸಿದ್ದ ಸಂಪಾಜೆ ಶೀನಪ್ಪ ರೈಯವರು ನಾಲ್ಕನೇ ತರಗತಿ ವರೆಗೆ ಶಾಲೆಗೆ ತೆರಳಿ, ಬಳಿಕ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. 

ಪ್ರಸ್ತುತ ಸುರತ್ಕಲ್​ನ ಕಾಟಿಪಳ್ಳದಲ್ಲಿ ಪುತ್ರನ ಮನೆಯಲ್ಲಿ ನೆಲೆಸಿದ್ದರು. ಯಕ್ಷಗಾನದ ಗತ್ತಿನ ಕಿರೀಟ ವೇಷಗಳಿಗೆ ಹೆಸರಾಗಿದ್ದ ಶೀನಪ್ಪ ರೈಯವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ರಕ್ತಬೀಜ ಪಾತ್ರ. ಕಟೀಲು ಮೇಳದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಸೇವೆಯಾಟ ಮಾಡಿದ್ದ ಶೀನಪ್ಪ ರೈಯವರು ಸುದೀರ್ಘ ಕಾಲದಿಂದ ರಕ್ತಬೀಜ ಪಾತ್ರ ಮಾಡಿಕೊಂಡೇ ಬಂದಿದ್ದರು. ದೇವಿ ಮಹಾತ್ಮೆ ಯಕ್ಷಗಾನ ಅಂದರೆ, ಶೀನಪ್ಪ ರೈ ಇದ್ದಾರಾ ಎನ್ನುವಷ್ಟರ ಮಟ್ಟಿಗೆ ಅವರ ಖದರ್ ಇತ್ತು. 

ಇದಲ್ಲದೆ, ಹಿರಣ್ಯಾಕ್ಷ, ಶಿಶುಪಾಲ, ಸತ್ಯವ್ರತ, ಕೌರವ, ದೇವೇಂದ್ರ, ಇಂದ್ರಜಿತು ವೇಷಗಳಿಂದಲೂ ಅವರು ಪ್ರಸಿದ್ಧರಾಗಿದ್ದರು. 

ಕಟೀಲು ಮೇಳದಲ್ಲಿ ಹಲವು ದಶಕಗಳ ತಿರುಗಾಟದ ಬಳಿಕ ಶೀನಪ್ಪ ರೈಯವರು ಕುಂಡಾವು, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಮೂರು ವರ್ಷಗಳ ಹಿಂದೆ ಅನಾರೋಗ್ಯದಿಂದಾಗಿ ತಿರುಗಾಟ ನಿಲ್ಲಿಸಿದ್ದರು. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಸಂಪಾಜೆ ಶೀನಪ್ಪ ರೈಗಳು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Mangalore Yakshagana artiste Sampaje Shinappa (81) no more. He also was awarded with Karnataka Rajyotsava Prashasti and many more prestigious awards.